ಮುತ್ತುಗ ಎಂದರೆ ನೆನಪಾಗುವುದೇ…,  

about muttuga

ಮುತ್ತುಗ ಎಂದರೆ ನೆನಪಾಗುವುದೇ…,  

ನೆನಪೇ ಜೀವ ದ್ರವ್ಯ

 

ಉಮಾದೇವಿ ಕೆ.ಎಸ್ ಗ್ಯಾರಳ್ಳ

 

ಮುತ್ತುಗ ಎಂದರೆ ನೆನಪಾಗುವುದೇ…,  

   ಅದರ ಹಸಿರು ಎಲೆಯ ಮೇಲೆ ಹೆಸರು ಬೇಳೆ ಹಾಕಿಕೊಂಡು ತಿನ್ನುತ್ತಿದ್ದ ಬಾಲ್ಯದ ದಿನಗಳು. ಆ ಹೆಸರು ಬೇಳೆ ಕೂಡಾ ಅಂಗಡಿಯ ಬೋಳು ಬೇಳೆಯಲ್ಲ. ಮನೆಯಲ್ಲೇ ಒಡೆದು ಮಾಡಿದ ಹಸಿರು ಬೇಳೆ. ಅವನ್ನು ನೀರಿನಲ್ಲಿ ನೆನೆ ಹಾಕಿ ಕಿವುಚಿ ತೊಳೆದರೂ ಚೂರು ಚೂರು ಅಂಟಿಕೊಂಡಿರುತ್ತಿದ್ದ ಸಿಪ್ಪೆ ರುಚಿ ಎನಿಸುತ್ತಿತ್ತು. ಅದಕ್ಕೆ ಜಜ್ಜಿದ ಹಸಿ ಮೆಣಸಿನಕಾಯಿ, ಉಪ್ಪು ಹಾಕಿದರೆ ಚೆಂದ ಅನಿಸಿದರೂ,ಏನೂ ಹಾಕದೆ ಬರೀ ತೆಂಗಿನ ತುರಿ ಬೆರೆಸಿದ ಹೆಸರು ಬೇಳೆಯನ್ನು ಅಗಿಯುವಾಗಿನ ರಸ ಒಸರುವ ಹಸೀ ಹಸೀ ನೆನಪು.

ಮೊದಲೆಲ್ಲಾ ಮದುವೆ ಮುಂತಾದ ಸಮಾರಂಭದಲ್ಲಿ ಊಟಕ್ಕೆ ಹಚ್ಚಿದ ಮುತ್ತುಗದ ಎಲೆಗಳನ್ನೇ ಬಳಸುತ್ತಿದ್ದರು.

ನಮ್ಮೂರಲ್ಲಿ ಎಷ್ಟೋ ಮನೆಗಳಲ್ಲಿ ಎಲೆ ಹಚ್ಚುತ್ತಿದ್ದರು. ನಮ್ಮ ಸಂಬಂಧಿಕರ ಮನೆಯಲ್ಲಿ ಯಾವಾಗಲೂ ಈ ಎಲೆಗಳ ಸರಗಳನ್ನು ಅಟ್ಟದ ಮೇಲೆ ನೇತು ಹಾಕಿರುತ್ತಿದ್ದರು. ಬಿಡುವಿನ ವೇಳೆಯಲ್ಲಿ ನೀರಿನಲ್ಲಿ ನೆನೆದ ಎಲೆಗಳನ್ನು ಸಣ್ಣಗೆ ಸೀಳಿದ ಹಂಚಿ ಕಡ್ಡಿಯಿಂದ ಹಚ್ಚಿ ಮಾರುತ್ತಿದ್ದರು.

ಊಟದ ಎಲೆಗಳಲ್ಲದೆ ಇದರಿಂದ ಮಾಡಿದ ದೊನ್ನೆಗಳು ನವಗ್ರಹ ಧಾನ್ಯಗಳನ್ನು ದಾನ ಕೊಡಲು ಬಳಕೆಯಾಗುತ್ತಿದ್ದವು.

ನಮ್ಮ ತೋಟದ ಮೂಲೆಯಲ್ಲಿದ್ದ ಈ ಗಿಡದ ಎಲೆಗಳಿಂದ ಕೊಟ್ಟೆ ಕಟ್ಟಿಕೊಂಡು ಅಪ್ಪ ಹೂವು ತುಂಬಿಕೊಂಡು ಬರುತ್ತಿದ್ದರು, ನಮ್ಮ ಹಿತ್ತಿಲಲ್ಲಿ ಅಪಾರವಾಗಿ ಬಿಡುತ್ತಿದ್ದ ದುಂಡು ಮಲ್ಲಿಗೆ ಮೊಗ್ಗುಗಳನ್ನು ಈ ಎಲೆಗಳಿಂದ ಕಟ್ಟಿದ ಕೊಟ್ಟೆಯೊಳಗೆ ಹಾಕಿ ಮಾರುತ್ತಿದ್ದೆವು. ಅಲ್ಲದೆ ನಮ್ಮ ಅಜ್ಜಿ ಇದರ ಎಲೆಗಳ ಮೇಲೆ ಹಲಸಿನ ಹಣ್ಣಿನ ಉಸಿರುಗಡುಬು ಮಾಡಿ ಕೊಡುತ್ತಿದ್ದರು.

ಇದರ ಎಲೆಗಳಿಗೆ ಶರೀರದ ವಿಷ ಕಾರಿ ಅಂಶಗಳನ್ನು ತೆಗೆದು ಹಾಕುವ ಸಾಮರ್ಥ್ಯ ಇದೆ ಎಂದು ದೃಢ ಪಟ್ಟಿದೆ. ಶಿವರಾತ್ರಿ ಹಬ್ಬದಲ್ಲಿ ಇದರ ಹೂವು ಇದ್ದೇ ಇರುತ್ತಿದ್ದವು. ಹೂವಿನ ಬಣ್ಣ, ರಚನೆ ನನಗೆ ತುಂಬಾ ಇಷ್ಟವಾಗುತ್ತಿತ್ತು. ( ಮೊನ್ನೆ ಜುಂಜಪ್ಪನ ಗುಡ್ಡೆಯಲ್ಲಿ ನಡೆದ ಶಿವೋತ್ಸವದಲ್ಲಿ ರಾಶಿ ರಾಶಿ ಮುತ್ತುಗದ ಹೂವುಗಳು ಮನ ಸೂರೆಗೊಂಡವು).

" ಮುಳ್ತುಗಮೆಂದು ಒಂದು ಮರಂ ". ಎಂಬ ಕೇಶಿರಾಜನ ಸಾಲಿನ ಜೊತೆಗೆ ನೆನಪಾಗುವುದು :

" ಕುಸುರಿದರಿದಡಗಿನಂತೆವೊಲೆಸೆದುವು ತದ್ವನ

ದೊಳುದಿರ್ದ ಮುತ್ತು ದ ಮುಗುಳ್ಗಳ್ " ಎಂಬ ಜನ್ನನ ಪ್ರಸಿದ್ಧ ಸಾಲುಗಳು.

ಛತ್ತೀಸ್ ಗಢ ದಲ್ಲಿ ನಾವು ಇದ್ದ ಊರು ಸರಾಯ್_ಪಾಲಿಯ ಹೆಸರು ಕನ್ನಡದಲ್ಲಿ ಮುತ್ತುಗಹಳ್ಳಿ ಎಂದು. ಒಮ್ಮೆ ಗಂಡನ ಜೊತೆ ಸರಾಯ್ ಪಾಲಿ ಯಿಂದ ರಾಯ್ ಪುರಕ್ಕೆ ಬಸ್ ನಲ್ಲಿ ಹೋಗುವಾಗ ರಸ್ತೆಯ ಎರಡೂ ಬದಿಗಳಲ್ಲಿ ಕಣ್ಣು ಹಾಸಿದಷ್ಟು ದೂರಕ್ಕೂ ಕೆಂಪಗೆ ಕೆಂಡ ಚೆಲ್ಲಿದಂತೆ ಈ ಮರ ಮತ್ತು ಹೂವು... ನಾನು ಅದೇ ಮೊದಲ ಬಾರಿ ಅಷ್ಟೊಂದು ಹೂಗಳನ್ನು ನೋಡಿದ್ದು.

ತುಮಕೂರು ತಿಪಟೂರು ನಡುವಿನ ರೈಲು ಪ್ರಯಾಣದಲ್ಲಿ ಉದ್ದಕ್ಕೂ ಆಗಾಗ್ಗೆ ಸಿಕ್ಕುವ ಮುತ್ತುಗದ ಹೂಗಳು ಮತ್ತೆ ಮತ್ತೆ ನೋಡುವಂತೆ ಮಾಡುತ್ತಿದ್ದವು. ( ಜೊತೆಗೆ ಗೊಂಚಲು ಗೊಂಚಲು ಗೊಬ್ಬರದ ಹೂವುಗಳೂ ಸಹಾ...).

ಚಿಕ್ಕಂದಿನಿಂದಲೂ ಇದರ ಗಿಡ, ಮರ, ಎಲೆ ಹೂ ನೋಡಿದ್ದರೂ.ಕಾಯಿ ನೋಡಿದ್ದು ಮಾತ್ರ ಬಸವ ಕಲ್ಯಾಣದಲ್ಲಿ. ಗಂಡ ಕೆಲಸ ಮಾಡುತ್ತಿದ್ದ ಶಾಲೆಯ ಎದುರಿಗೆ ರಸ್ತೆ ಪಕ್ಕದಲ್ಲಿ ಇದ್ದ ಮರದಲ್ಲಿ ಅಗಲವಾದ ಹಸಿರು ಕಾಯಿಗಳನ್ನು ನೋಡಿದ್ದೆ. ಇದರ ಬೀಜಗಳಿಂದ ಎಣ್ಣೆ ತೆಗೆಯುತ್ತಾರಲ್ಲದೆ, ಔಷಧಿಯಾಗಿಯೂ ಬಳಸುತ್ತಾರೆಂದು ಆಮೇಲೆ ತಿಳಿಯಿತು.

ಬೇರಿನಿಂದ ಹೂವಿನವರೆಗೆ ಔಷಧೀಯ ಗುಣ ಹೊಂದಿರುವ ಮುತ್ತುಗ ಧಾರ್ಮಿಕ, ಆರ್ಥಿಕ ಸ್ಥಾನ ಮಾನವನ್ನೂ, ನೆಲದ ಫಲವತ್ತತೆ, ಪರಿಸರ ಸಮತೋಲನದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.

ಭಾರತ ಮೂಲದ ಮುತ್ತುಗ ವಿದೇಶಗಳಲ್ಲೂ ಕಂಡು ಬರುತ್ತಿರುವುದೂ ನಮ್ಮ ಹೆಮ್ಮೆ.

ಚಿತ್ರಗಳು : ಕಣ್ಣಾ ಮುಚ್ಚಾಲೆ ಮೇಡಂ. ಮತ್ತು ಅಂತರ್ಜಾಲ.

ಮೂರು ಬಣ್ಣದ ಮುತ್ತುಗಳಿವೆ

ಬ್ರಹ್ಮಪಾದ ಪಾಲಾಶ ಕಿಂಶುಕ ಕರ್ಮಿ ಯಾಜ್ಞಿಕ ಕ್ಷಾರ ಶ್ರೇಷ್ಠ ರಕ್ತ ಪುಷ್ಪ ಸಮಿತ ದ್ರುಮ ಕಿಂಶಕಮು ಪಾಲಶಮು ಬ್ರಹ್ಮವೃಕ್ಷ ಪುರಸ ಮರಮು ಮುತ್ತಲಮರ ಕೆಸುಡೋ ಧಾಕ್ ಚಮಠ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಾಡು ಮೇಡುಗಳು,ಬೆಟ್ಟ ಗುಡ್ಡಗಳು,ಕೆರೆ ಕಟ್ಟೆಗಳು,ಹೊಲ ಗದ್ದೆಗಳ ಬದಿಗಳ ಮೇಲೆ ಹಾಗೂ ನಾಡಿನಲ್ಲಿಯೂ ನೈಸರ್ಗಿಕವಾಗಿ ಬೆಳೆಯುತ್ತದೆ.

ಇದರಲ್ಲಿ ಮೂರು ಪ್ರಭೇದಗಳಿದ್ದು,ಕೆಂಪು ಹೂವು ಬಿಡುವ ಮುತ್ತುಗದ ಮರಗಳು ಎಲ್ಲೆಂದರಲ್ಲಿ ಕಾಣುತ್ತವೆ.ಹಳದಿ ಹೂವು ಬಿಡುವ ಮುತ್ತುಗದ ಮರಗಳು ಅಪರೂಪವಾದರೆ,ಇನ್ನು ಬಿಳಿ ಹೂವು ಬಿಡುವ ಮುತ್ತುಗದ ಮರಗಳು ಬಾರಿ ಅಪರೂಪ.ಮೂರು ವಿಧದ ಮುತ್ತುಗದ ವೃಕ್ಷಗಳಲ್ಲೂ ಔಷಧೀಯ ಭಂಡಾರವೇ ತುಂಬಿದೆ.


ಶಿವನಿಗೆ ಅರ್ಪಿಸುವ ದಶ ಪುಷ್ಪಗಳಲ್ಲಿ ಇದು ಸಹಾ ಒಂದು.ವಿಶೇಷ ಪೂಜೆಗಳಲ್ಲಿ ಈ ಹೂವುಗಳನ್ನು ತಪ್ಪದೆ ಮಹಾದೇವನಿಗೆ ಅರ್ಪಿಸುವುದು ವಾಡಿಕೆ.ಈ ವೃಕ್ಷ ಮಾನವನಿಗೆ ದೇವರು ಕೊಟ್ಟ ವರವೆಂದರೆ ತಪ್ಪಾಗಲಾರದು . ಸುಮಾರು 25 ರಿಂದ 45 ಅಡಿವರಿಗೂ ಬೆಳೆಯುವ ಮುತ್ತುಗದ ಮರಗಳಲ್ಲಿ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಹೂವುಗಳು ಬಿಟ್ಟಾಗ ಬಹು ದೂರದಿಂದಲೇ ತನ್ನ ಇರುವನ್ನು ತೋರುತ್ತೆ.ಇಡಿ ಮರವೆಲ್ಲ ಹೂವುಗಳು ತುಂಬಿ ನೋಡಲು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಇದು ವಗರು ಖಾರ ಕಹಿ ರಸಗಳಿಂದ ಕೂಡಿದ್ದು, ಎಲೆ ಅಂಟು ಹೂವು ಬೀಜ ಕಾಂಡ ಬೇರು, ಎಲ್ಲಾದರಲ್ಲೂ ಔಷಧೀಯ ಗುಣಗಳು ತುಂಬಿದ್ದು,ಅಗ್ನಿದೀಪಕ ವೀರ್ಯವರ್ಧಕ ಉದರಕ್ರಿಮಿನಾಶಕ ವಿಷಶಾಮಕವಾಗಿರುತ್ತದೆ.ಇದರ ಎಲೆಗಳಲ್ಲಿ ಊಟ ಮಾಡುವುದರಿಂದ ಈ ಎಲ್ಲಾ ಪ್ರಯೋಜನವನ್ನು ಪಡೆದುಕೊಳ್ಳಬಹುದು.


ಇದರ ಬೀಜಗಳಿಂದ ತಯಾರಿಸಿರುವ “ಚೀನಪೋಡಿಯ”ಎಂಬ ಜಂತು ನಾಶಕ ಬಳಕೆಯಿಂದ ಉದರದಲ್ಲಿರುವ ಜಂತುಹುಳು ಕಿಲುಮೆಹುಳುಗಳು ನಾಶವಾಗುತ್ತವೆ. ಮುತ್ತುಗದ ಹೂವುಗಳನ್ನು ಒಣಗಿಸಿ ಚೂರ್ಣ ಮಾಡಿ ಜೇನುತುಪ್ಪದಲ್ಲಿ ರಂಗಳಿಸಿ ನೆಕ್ಕಿದಾಗ ಚರ್ಮದ ಬಣ್ಣ ಸುಕ್ಕುಗಟ್ಟದೆ, ಚರ್ಮದ ಬಣ್ಣ ಬದಲಾಗದೆ ಉಳಿಯುತ್ತೆ.(ಅಂದರೆ ಚರ್ಮ ಕಪ್ಪಾಗುವಿಕೆ,ಮುಖದ ಮೇಲಿನ ಮಂಗು ಇತ್ಯಾದಿ ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತೆ) ಅಷ್ಟೇ ಅಲ್ಲದೆ ತುಟಿಗಳು ಕೆಂಪಾಗಿ,ಸುಂದರವಾಗಿ ಉಳಿಯುತ್ತವೆ.


ಮುತ್ತುಗ ಮರದ ಸಮೂಲದ ಚೂರ್ಣ 1 ಚಮಚ 1ಚಮಚ ಜೇನುತುಪ್ಪ ರಂಗಳಿಸಿ ಸೇವಿಸಿದರೆ ಕಫ ಪಿತ್ತ ಮೂತ್ರದ ಉರಿ ಮೂಲವ್ಯಾಧಿ ಕೃಮಿಜನಿತವಾದ ಎಲ್ಲಾ ತರಹದ ಹುಣ್ಣುಗಳು ಅತ್ಯಂತ ಶೀಘ್ರವಾಗಿ ವಾಸಿಯಾಗುತ್ತವೆ.ಇದೆ ಮುತ್ತುಗದ ಮರದ ಯಾವ ಭಾಗವನ್ನಾದರೂ ತೆಗೆದುಕೊಂಡು ಪುಡಿ ಮಾಡಿ ಗಾಯಕ್ಕೆ ಲೇಪನ ಮಾಡಿದರೆ,ಗಾಯವು ಬೇಗನೆ ಮಾಯುವುದು.

ಮುತ್ತುಗದ ತೊಗಟೆಯ ಚೂರ್ಣದ ಕಷಾಯ ನಿಯಮಿತವಾಗಿ ಸೇವಿಸುವುದರಿಂದ ಥೈರಾಯ್ಡ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.


52 ಮಿಲೀ ಮುತ್ತುಗದ ಬೇರಿನ ಕಷಾಯಕ್ಕೆ 1 ಚಮಚ ಜೇನುತುಪ್ಪ ಅಥವಾ ಕೆಂಪು ಕಲ್ಲುಸಕ್ಕರೆ ಕಲಸಿ ಸೇವಿಸಿದರೆ ಲೈಂಗಿಕ ಶಕ್ತಿ ಹೆಚ್ಚುತ್ತೆ. ಹೂವುಗಳನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು 1 ಲೋಟ ನಾಟಿ ಹಸುವಿನ ಹಾಲಿನಲ್ಲಿ 1/2 ಚಮಚ ಹೂವಿನ ಚೂರ್ಣ 1 ಚಮಚ ಕಲ್ಲುಸಕ್ಕರೆ ಬೆರಸಿ ಸೇವಿಸಿದರೆ ಚರ್ಮವ್ಯಾಧಿಗಳು ಗುಣವಾಗುತ್ತವೆ. ಮುತ್ತುಗದ ಬೀಜಿನ ಚೂರ್ಣವನ್ನು ಸೇವಿಸುತ್ತಾ ಬಂದರೆ ಮೂತ್ರ ವಾಧಿಗಳು,ಪೈಲ್ಸ್ ಗುಣವಾಗುತ್ತೆ.ಅಂಟು ಅಥವಾ ಹೂವಿನ ಚೂರ್ಣ ಸೇವಿಸಿದರೆ ರಕ್ತಪಿತ್ತ ಗುಣವಾಗುತ್ತೆ. ವೀರ್ಯಕಣಗಳು ಕಡಿಮೆ ಇರುವಂತವರು, ಮುತ್ತುಗದ ಬೀಜಗಳು ಹಾಗೂ ಹುಣಸೆ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು, ಹೊಟ್ಟು ಸುಲಿದು ನೆರಳಲ್ಲಿ ಒಣಗಿಸಿ ಚೂರ್ಣಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ 6 ಗ್ರಾಂ 1 ಚಮಚ ಜೇನುತುಪ್ಪ 1 ಲೋಟ ಹಸುವಿನ ಹಾಲಿನಲ್ಲಿ ಕಲಸಿ ಸೇವಿಸುತ್ತಾ ಬಂದರೆ ಅಪಾರವಾದ ವೀರ್ಯಾಣುಗಳು ವೃದ್ಧಿಯಾಗುತ್ತವೆ. ಮುತ್ತುಗದ ಚಿಗರೆಲೆಗಳನ್ನು ನೆರಳಲ್ಲಿ ಒಣಗಿಸಿ ಚೂರ್ಣಮಾಡಿಟ್ಟುಕೊಂಡು,1ಲೋಟ ನೀರಿನಲ್ಲಿ 1 ಚಮಚದಂತೆ ದಿನವು ಸೇವಿಸುತ್ತಾ ಬಂದರೆ ಮಧುಮೇಹ ಅತೋಟಿಗೆ ಬರುತ್ತೆ.ಇದರ ಉಪಯೋಗಗಳು ಅಪರಿಮಿತವಾದದ್ದು.

(ಕೃಪೆ: ಜನತಾ ಲೋಕವಾಣಿ ನ್ಯೂಸ್)