ರಾಜಕೀಯ ವೈಫಲ್ಯದ ಪರಾಕಾಷ್ಟೆ

    ಮನಶ್ಶಾಸ್ತ್ರೀಯ ನೆಲೆಯಲ್ಲಿ ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಶೋಧಿಸುವುದು ಒಂದು ವಿಧಾನ. ಆದರೆ ಸಮಾಜಶಾಸ್ತ್ರೀಯ ನೆಲೆಯಲ್ಲಿ ಯೋಚಿಸಿದಾಗ, ಈ ಕ್ರೌರ್ಯಾವಸ್ಥೆಗೆ ನಮ್ಮ ಸಮಾಜವೇ ಕಾರಣ ಎನ್ನುವುದು ಸ್ಪಷ್ಟವಾಗುತ್ತದೆ. ಇದನ್ನು ವಿಸ್ತರಿಸಿ ನೋಡಿದಾಗ ಸುಹಾಸ್ ಶೆಟ್ಟಿ , ಪ್ರವೀಣ್ ನೆಟ್ಟಾರು, ಫಾಝಿಲ್ ಅವರ ಹತ್ಯೆ ಪ್ರಕರಣಗಳವರೆಗೂ ನಮ್ಮ ಆಲೋಚನೆ ಹರಿಯಬೇಕಿದೆ.

ರಾಜಕೀಯ ವೈಫಲ್ಯದ ಪರಾಕಾಷ್ಟೆ

 

ಸಂಪಾದಕೀಯ

   ಇತ್ತೀಚಿನ ಕೆಲವು ಘಟನೆಗಳು ನಮ್ಮೊಳಗಿನ ಸೂಕ್ಷ್ಮತೆಯನ್ನಷ್ಟೇ ಅಲ್ಲದೆ ಮನುಜ ಪ್ರಜ್ಞೆಯನ್ನೇ ಬಡಿದೆಬ್ಬಿಸಬೇಕಿದೆ. 


    ಹುಬ್ಬಳ್ಳಿ ನಗರದ ಶಾಲೆಯೊಂದರಲ್ಲಿ, 15 ವರ್ಷದ ಬಾಲಕನೊಬ್ಬ ತನ್ನ ಸಹಪಾಠಿಯೊಡನೆ ಜಗಳ ಆಡಿಕೊಂಡು, 16 ವರ್ಷದ ಆ ಗೆಳೆಯನಿಗೆ ಚೂರಿಯಿಂದ ಇರಿದು ಕೊಲೆ ಮಾಡಿರುವುದು ವರದಿಯಾಗಿದೆ. ಹರೆಯದ ಬಾಲಕನೊಬ್ಬನಿಗೆ ಈ ಬಾಲಕನ ಹಂತಕ ಮನಸ್ಥಿತಿಯ ಬಗ್ಗೆ ಯೋಚಿಸಬೇಕಿದೆ. ಇನ್ನೂ ಪ್ರಪಂಚಕ್ಕೆ ಕಣ್ತೆರೆಯದ ಮಕ್ಕಳ ಮನಸ್ಸಿನಲ್ಲಿ ಇಂತಹ ಕ್ರೌರ್ಯ ಹೇಗೆ ಸಾಧ್ಯ ? 


    ಮನಶ್ಶಾಸ್ತ್ರೀಯ ನೆಲೆಯಲ್ಲಿ ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಶೋಧಿಸುವುದು ಒಂದು ವಿಧಾನ. ಆದರೆ ಸಮಾಜಶಾಸ್ತ್ರೀಯ ನೆಲೆಯಲ್ಲಿ ಯೋಚಿಸಿದಾಗ, ಈ ಕ್ರೌರ್ಯಾವಸ್ಥೆಗೆ ನಮ್ಮ ಸಮಾಜವೇ ಕಾರಣ ಎನ್ನುವುದು ಸ್ಪಷ್ಟವಾಗುತ್ತದೆ. ಇದನ್ನು ವಿಸ್ತರಿಸಿ ನೋಡಿದಾಗ ಸುಹಾಸ್ ಶೆಟ್ಟಿ , ಪ್ರವೀಣ್ ನೆಟ್ಟಾರು, ಫಾಝಿಲ್ ಅವರ ಹತ್ಯೆ ಪ್ರಕರಣಗಳವರೆಗೂ ನಮ್ಮ ಆಲೋಚನೆ ಹರಿಯಬೇಕಿದೆ.


    ಮತ್ತೊಂದು ಭಯಾನಕ ಘಟನೆಯಲ್ಲಿ ಬೆಂಗಳೂರು ಸಮೀಪದ ಬಿಡದಿ ಬಳಿ, 14 ವರ್ಷದ ಮಾತು ಬಾರದ, ಕಿವಿ ಕೇಳದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಆಕೆಯನ್ನು ಹತ್ಯೆ ಮಾಡಿರುವುದು ವರದಿಯಾಗಿದೆ. ಹಕ್ಕಿ ಪಿಕ್ಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಬಾಲಕಿಯ ಮೇಲೆ ನಡೆದ ಅಮಾನುಷ ದೌರ್ಜನ್ಯ ಮತ್ತೊಮ್ಮೆ ನಮ್ಮ ನಡುವಿನ ಸಾಮಾಜಿಕ ವ್ಯಾಧಿ, ಮಹಿಳಾ ದೌರ್ಜನ್ಯವನ್ನು ಹೊರಗೆಡಹಿದೆ. ಸಾಮಾನ್ಯವಾಗಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯ ಉಡುಪು, ನಡವಳಿಕೆ ಇತ್ಯಾದಿಗಳನ್ನು ಪ್ರಶ್ನಿಸುವ ಒಂದು ಮೇಲ್ಪದರದ ಕಲಿತ ಸಮಾಜ ಈ ಘಟನೆಯ ಬಗ್ಗೆ ಏನು ಹೇಳುತ್ತದೆ ? 


     ಈ ನಡುವೆ ಮಂಡ್ಯದ ಪಾಂಡವಪುರ ತಾಲ್ಲೂಕಿನ ಮಾಣಿಕ್ಯನಹಳ್ಳಿಯಲ್ಲಿ ಕೆಲವು ದಿನಗಳ ಹಿಂದೆ ನಡೆದ ತನ್ನ ಮಗಳ ಹತ್ಯೆಗೆ ಕಾರಣನಾದ ವ್ಯಕ್ತಿಯ ವಯಸ್ಸಾದ ತಂದೆಯನ್ನು ಹತ್ಯೆ ಮಾಡಿರುವುದು ವರದಿಯಾಗಿದೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಸಹಮಾನವನನ್ನು ಕೊಲ್ಲುವುದು ಕೇವಲ ಸೇಡಿನ ಕ್ರಮ ಮಾತ್ರವೇ ಆಗಿರದೆ, ಪ್ರತೀಕಾರದ ಪ್ರಧಾನ ಮಾರ್ಗವಾಗಿ ಪರಿಣಮಿಸಿರುವುದು ಸಮಾಜವನ್ನು ಬಾಧಿಸಬೇಕಾದ ವಿಚಾರ. ಕಳೆದ ಹತ್ತು ವರ್ಷಗಳಲ್ಲಿ ಕರಾವಳಿ ಕರ್ನಾಟಕ ಅತ್ಯಾಚಾರ-ಗುಂಪುಹಲ್ಲೆ-ಹತ್ಯೆಗಳ ಬೀಡಾಗಿದ್ದು, ಪರಸ್ಪರ ಸೇಡು, ದ್ವೇಷ ಮತ್ತು ಪ್ರತೀಕಾರದ ಕಾರಣ ಹತ್ಯೆಗಳು ನಡೆಯುತ್ತಲೇ ಇವೆ. 2012ರಲ್ಲಿ ಧರ್ಮಸ್ಥಳದ ಉಜಿರೆಯಲ್ಲಿ ಸಾಮೂಹಿಕ ಅತ್ಯಾಚಾರ-ಹತ್ಯೆಗೊಳಗಾದ ಸೌಜನ್ಯಾ ಅವಳಂತಹ ಅಸ್ಮಿತೆ ಇಲ್ಲದ ಹೆಣ್ಣುಮಕ್ಕಳು ನ್ಯಾಯವಂಚಿತರಾಗಿರುವುದು ಈ ಸಮಾಜದ ಮತ್ತೊಂದು ಕರಾಳ ಮುಖದ ಪರಿಚಯ ಮಾಡಿಸುತ್ತದೆ. 


   ಈ ಹಂತಕ ಮನಸ್ಥಿತಿಗೆ ಕಾರಣಗಳೇನು ಎಂಬ ಗಂಭೀರ ಪ್ರಶ್ನೆಗೆ ನಾವು ಉತ್ತರ ಶೋಧಿಸಬೇಕಿದೆ. ಪೆಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ನಡೆದ ಕ್ಷಿಪ್ರ ಕಾಳಗವು ಯುದ್ಧ ಎನಿಸಿಕೊಳ್ಳದೆ ಕದನವಿರಾಮದಲ್ಲಿ ಅಂತ್ಯವಾಗಿರುವುದನ್ನು ದೇಶದ ಪ್ರಜ್ಞಾವಂತ ಸಮುದಾಯ ಸ್ವಾಗತಿಸುತ್ತಿರುವ ಹೊತ್ತಿನಲ್ಲಿ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ಅವರ ಹೇಳಿಕೆ ನಮ್ಮ ದೇಶದ ಚುನಾಯಿತ/ಪರಾಜಿತ ಪ್ರಜಾತಂತ್ರ ಪ್ರತಿನಿಧಿಗಳು ಹೇಗೆ ಜನಮಾನಸದಲ್ಲಿ ದ್ವೇಷ ಭಾವನೆಯನ್ನು ಬಿತ್ತುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. 


    ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವ ಪ್ರೇರಣೆಯಿಂದ ವಿಚಾರಣೆ ನಡೆಸುತ್ತಿದ್ದರೂ ಸಹ ಮಧ್ಯಪ್ರದೇಶ ಪೊಲೀಸರು ಎಫ್‌ಐಆರ್‌ನಲ್ಲಿ ಸಚಿವರ ಹೇಳಿಕೆಯನ್ನೇ ಉಲ್ಲೇಖಿಸದೆ ಇರುವುದನ್ನು ನ್ಯಾಯಾಲಯ ಆಕ್ಷೇಪಿಸಿದೆ. ವಿಜಯ್ ಶಾ ತಮ್ಮ ತಪ್ಪಿಗಾಗಿ ಕ್ಷಮೆ ಕೋರಿದ್ದರೂ, ಬಿಜೆಪಿ ಹೈಕಮಾಂಡ್ ಈತನ ಬಗ್ಗೆ ಯಾವುದೇ ಶಿಸ್ತಿನ ಕ್ರಮ ಕೈಗೊಳ್ಳದೆ ಇರುವುದು ರಾಜಕೀಯ ಸೂಕ್ಷ್ಮತೆಯ ಕೊರತೆಯನ್ನು ಸೂಚಿಸುತ್ತದೆ. 
ಪತಿಯನ್ನು ಭಯೋತ್ಪಾದಕರ ದಾಳಿಯಲ್ಲಿ ಕಳೆದುಕೊಂಡ ಹಿಮಾಂಶಿ ನರ್ವಾಲ್ ಮತ್ತೋರ್ವ ಮಹಿಳೆ ಭಯೋತ್ಪಾದಕ ದಾಳಿಯ ನಂತರ ತಮ್ಮ ರಕ್ಷಣೆಗೆ ಧಾವಿಸಿದ ಕಾಶ್ಮೀರದ ಮುಸ್ಲಿಂ ಬಾಂಧವರ ಬಗ್ಗೆ ಸಹೃದಯದ ಮಾತುಗಳನ್ನಾಡಿರುವುದೇ ದೊಡ್ಡ ಪ್ರಮಾದದಂತೆ ಕಾಣುವ ಸಮಾಜವೂ ನಮ್ಮ ನಡುವೆ ಉಸಿರಾಡುತ್ತಿರುವುದು, ಈ ಮಹಿಳೆಯರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕಂಡAತಹ ಟ್ರೋಲ್ ಪಡೆಗಳ ಪ್ರತಿಕ್ರಿಯೆಗಳ ಮೂಲಕ ಸ್ಪಷ್ಟವಾಗಿವೆ.


    ಯುದ್ಧೋನ್ಮಾದವೊಂದನ್ನೇ ಕಾರಣ ಎನ್ನುವುದಕ್ಕಿಂತಲೂ, ತಮ್ಮದೇ ರಾಜಕೀಯ, ಔದ್ಯಮಿಕ ಹಿತಾಸಕ್ತಿಗಳಿಗಾಗಿ ಸಮಾಜದ ಯುವ ಸಮುದಾಯದ ನಡುವೆ ದ್ವೇಷದ ಭಾವನೆಗಳನ್ನು ಬಿತ್ತುವ ಪ್ರಕ್ರಿಯೆಯಲ್ಲಿ ಅಧಿಕಾರ ರಾಜಕಾರಣದ ಪ್ರತಿನಿಧಿಗಳು , ವಿದ್ಯುನ್ಮಾನ-ಸಾಮಾಜಿಕ ಮಾಧ್ಯಮಗಳು ನಿರ್ಭೀತಿಯಿಂದ ಮುಂದುವರೆಯುತ್ತಿವೆ. ರಾಜಕೀಯ ಪಕ್ಷಗಳು ಸಮಾಜದ ವಿಘಟನೆಗೆ ಕಾರಣವಾಗುವ ದ್ವೇಷ ಭಾಷಣಗಳನ್ನು ʼ ಅಂತರ ಕಾಯ್ದುಕೊಳ್ಳುವ ʼ ಮೂಲಕ ಅಲಕ್ಷಿಸುವುದು ಇತ್ತೀಚಿನ ಪರಂಪರೆ. ಆದರೆ ಇದು ಬೀರುವ ಪರಿಣಾಮ ಭೀಕರವಾದದ್ದು. 


    ಈ ಎಲ್ಲ ಸಾಮಾಜಿಕ ವ್ಯಾಧಿಗಳನ್ನು ಸರಿಪಡಿಸುವ ಯಾವುದೇ ಪ್ರಯತ್ನಗಳು ನಡೆಯದಿರುವುದು, ಭಾರತದ ರಾಜಕೀಯ ವೈಫಲ್ಯದ ಪರಾಕಾಷ್ಟೆ ಎನ್ನಬಹುದು. ನಿರಂತರ ಜನಪರ ಹೋರಾಟಗಳಲ್ಲಿ ತೊಡಗಿರುವ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಪ್ರೀತಿಸುವ ಸಂಘಟನೆಗಳು ಈ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರಯತ್ನಗಳೂ ಸಹ ಎಲ್ಲೋ ಒಂದು ಕಡೆ ತಾರ್ಕಿಕ ಅಂತ್ಯ ತಲುಪಲು ವಿಫಲವಾಗುತ್ತಿವೆ. ಇದಕ್ಕೆ ಅಸ್ಮಿತೆ ಆಧಾರಿತ ಅಥವಾ ಅಸ್ತಿತ್ವವಾದಿ ಸಾಂಘಿಕ ನೆಲೆಗಳೂ ಕಾರಣ ಎಂದರೆ ತಪ್ಪಾಗಲಾರದು. ಹುಬ್ಬಳ್ಳಿ ಮತ್ತು ಬಿಡದಿ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ, ಹಾಗೆಯೇ ಸೌಜನ್ಯ ಮತ್ತು ನೇಹಾ ಹಿರೇಮಠ್ ಅಥವಾ ಅಂಜಲಿಯನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಲು ಸಮಾಜ ಸಿದ್ಧವಾಗಿಲ್ಲ. ಈ ಅಸ್ಮಿತೆಯ ಬೇಲಿಗಳೇ ಸಮಾಜವನ್ನು ಮತ್ತಷ್ಟು ವಿಘಟನೆಯತ್ತ ಕೊಂಡೊಯ್ಯುತ್ತಿರುವ ದುರಂತ ವಾಸ್ತವವನ್ನು ನಾವು ಎದುರಿಸುತ್ತಿದ್ದೇವೆ. 

-ಕುಚ್ಚಂಗಿ ಪ್ರಸನ್ನ


-