ʼತುಮಕೂರ್ʼ ಹೋಗಿ ʼಬೆಂಗಳೂರ್ ನಾರ್ತ್ʼ ಬರುತ್ತಾ ಡುಂ ಡುಂ !?
“ಇದೇನು ಇದ್ದಕ್ಕಿದ್ದಂತೆ ತುಮಕೂರು ಬಗ್ಗೆ ಪ್ರೀತಿ ಉಕ್ಕಿ ಹರೀತಾ ಇದೆ, ಅಲ್ಲಾ ತುಮಕೂರು ರೈಲ್ವೆ ಸ್ಟೇಷನ್ ಹೆಸರನ್ನು ಬದಲಾಯಿಸಿ ಶ್ರೀ ಶಿವಕುಮಾರ ಸ್ವಾಮೀಜಿ ರೈಲ್ವೆ ಸ್ಟೇಷನ್ ಅಂತ ಹೆಸರು ಬದಲಿಸುವಾಗ ಸುಮ್ಮನಿದ್ರಿ, ಈಗ ಯಾಕೆ ವಿರೋಧ” ಅಂತ ಲೇಖಕಿ, ಸಂಘಟಕಿ ಬಾ.ಹ.ರಮಾಕುಮಾರಿ ಕೇಳ್ತಾರೆ. ಏನು ಹೇಳ್ತೀರಾ ಹೇಳಿ.

99% ಲೋಕಲ್
ಕುಚ್ಚಂಗಿ ಪ್ರಸನ್ನ
ಇವತ್ತು ಭಾನುವಾರ ಅಲ್ವಾ, ನಾಳೆ ಸೋಮವಾರ, ಹೋದ ಸೋಮವಾರ ಬೆಳಿಗ್ಗೇನೇ ನಮ್ಮ ಜಿಲ್ಲೆಯ ಉಸ್ತುವಾರಿ ಹಾಗೂ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ, ನಮ್ಮ ಜಿಲ್ಲೆಯ ಎಂಪಿ ಕೂಡಾ ಆಗಿರುವ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಮಂತ್ರಿ ಸೋಮಣ್ಣನವರ ಮನೆಗೆ ಹೋಗಿದ್ದರು. “ತುಮಕೂರು ಬೆಂಗಳೂರಿಗೆ ಕೇವಲ 70 ಕಿಲೋಮೀಟರ್ಗಳಷ್ಟು ಹತ್ತಿರದಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಬರುವವರಿಗೆ ಇಲ್ಲಿ ತುಮಕೂರು ಇದೆ ಅಂತ ಗೊತ್ತಾಗುವುದೇ ಇಲ್ಲ. ಅದಕ್ಕೇ ಈ ನ್ಯಾಶನಲ್ ಹೈವೇಯಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಬೃಹತ್ ಸ್ವಾಗತ ಕಮಾನು ನಿರ್ಮಿಸಬೇಕು, ಸ್ಮಾರ್ಟ್ ಸಿಟಿ ಫಂಡ್ ಇದೆ , ನ್ಯಾಶನಲ್ ಹೈ ವೇ ಕೇಂದ್ರ ಸರ್ಕಾರದಲ್ಲವಾ, ಸ್ವಾಗತ ಕಮಾನು ನಿರ್ಮಾಣ ಮಾಡಕ್ಕೆ ಅನುಮತಿ ಕೊಡಿಸಿ ಅಂತ ಸೋಮಣ್ಣನವರನ್ನ ಕೇಳಲು ಬಂದಿದ್ದೆ” ಅಂತ ಪರಮೇಶ್ವರ ತಮ್ಮ ಮುಂದೆ ಟಿವಿ ಚಾನೆಲ್ಗಳ ಲೊಗೊ ಹಿಡಿದ ಸುದ್ದಿಗಾರರಿಗೆ ಸ್ಪಷ್ಟನೆ ಕೊಟ್ರು.
“ತುಮಕೂರು ಅತಿ ವೇಗವಾಗಿ ಬೆಳೀತಾ ಇದೆ, ಈಗಾಗಲೇ 20 ಸಾವಿರ ಎಕರೆನ ಇಂಡಸ್ಟ್ರಿಯಲ್ ಕಾರಿಡಾರ್ ಮಾಡಕ್ಕೆ ಸ್ವಾಧೀನ ಮಾಡಿಕೊಳ್ಳಲಾಗಿದೆ. ರಾಮನಗರ ಜಿಲ್ಲೆಯನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮಾಡಲಾಗಿದೆ. ಅದೇ ತರ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ತುಮಕೂರು ಜಿಲ್ಲೆಯನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸೋ ಪ್ರಸ್ತಾವನೆ ಇದೆ” ಅಂತ ಹೇಳಿದರು ಪರಮೇಶ್ವರ.
ಅದೇ ದಿನ ಕೆಲ ಟಿವಿ ಚಾನೆಲ್ಗಳಲ್ಲಿ ಹಾಗೂ ಮರು ದಿನ ಬೆಳಿಗ್ಗೆ ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾಯಿತು. ಮರುದಿನ ತುಮಕೂರಿನ ಬಿಸಿಎಂ ಹಾಸ್ಟೆಲ್ಗಳಿಗೆ ಭೇಟಿ ಕೊಟ್ಟ ಪರಮೇಶ್ವರ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತ, “ ತುಮಕೂರು ಜಿಲ್ಲೆಯನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸಿ, ತುಮಕೂರು ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಅಂತ ನಾಮಕರಣ ಮಾಡಲಾಗುತ್ತೆ. ತುಮಕೂರು ಅಂದ್ರೆ ಎಷ್ಟು ಜನಕ್ಕೆ ಗೊತ್ತು , ನ್ಯೂಯಾರ್ಕ್ನಲ್ಲಿರೋರಿಗೆ ಬೆಂಗಳೂರು ಅಂದ್ರೆ ತಕ್ಷಣ ಗೊತ್ತಾಗಿಬಿಡುತ್ತೆ, ತುಮಕೂರು ಅಂದರೆ ಇದೆಲ್ಲಿ ಇದೆಯಪ್ಪಾ ಅಂತ ಕೇಳ್ತಾರೆ. ಅದಕ್ಕೇ ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಅಂತ ನಾಮಕರಣ ಮಾಡಿದರೆ ಹೆಚ್ಚು ವೇಗವಾಗಿ ತುಮಕೂರು ಜಿಲ್ಲೆ ಬೆಳೆಯುತ್ತೆ ಅಂತ” ವಿವರಿಸಿದರು.
ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಅಂತ ಹೆಸರು ಬದಲಾವಣೆ ಮಾಡುವ ಮಂತ್ರಿ ಪರಮೇಶ್ವರ ಅವರ ಪ್ರಸ್ತಾವನೆ ಕುರಿತಂತೆ ಬೆರಳೆಣಿಕೆಯಷ್ಟು ಪರವಾದ ಹೇಳಿಕೆಗಳು ಬಂದರೆ, ವಿರೋಧವಾಗಿ ಹೆಚ್ಚಿನ ಪ್ರಮಾಣದ ಹೇಳಿಕೆಗಳು ದಾಖಲಾಗತೊಡಗಿವೆ. ಸಾಮಾನ್ಯ ಜನರಿಂದ ಹಿಡಿದು ಆಡಳಿತ ಹಾಗೂ ವಿರೋಧ ಪಕ್ಷದ ಸಚಿವರು, ಶಾಸಕರೂ ಸಹ ತುಮಕೂರು ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಅಂತ ಬದಲಾಯಿಸುವ ಹೇಳಿಕೆಯನ್ನು ಖಂಡಿಸತೊಡಗಿದ್ದಾರೆ. ಪರಮೇಶ್ವರ ಅವರು ಈ ತರ ಆಲೋಚನೆ ಮಾಡುವುದೇ ತಪ್ಪು ಎಂಬುದು ಜಿಲ್ಲೆಯ ಜನರ ಮೆಜಾರಿಟಿ ಅಭಿಪ್ರಾಯವಾಗಿದೆ.
ಕೇಂದ್ರ ಸಚಿವ ವಿ.ಸೋಮಣ್ಣ, ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ, ಕೆಎಸ್ಆರ್ಟಿಸಿ ಅಧ್ಯಕ್ಷರೂ ಆಗಿರುವ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ಲೋಕಸಭೆಯ ಮಾಜಿ ಸದಸ್ಯ ಜಿ.ಎಸ್.ಬಸವರಾಜು, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಧನಿಯಕುಮಾರ್ ಮೊದಲಾದವರು ತುಮಕೂರು ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಅಂತ ಬದಲಿಸುವ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಶಾಸಕ ಜ್ಯೋತಿ ಗಣೇಶ್ , ಮಾಜಿ ಎಂ ಎಲ್ ಸಿ ಹಾಗೂ ಶ್ರೀದೇವಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ. ಎಂ.ಆರ್.ಹುಲಿನಾಯ್ಕರ್ ಹಾಗೂ ಶಿರಾ ಶಾಸಕ ಮಾಜಿ ಸಚಿವ ಟಿ.ಬಿ.ಜಯಚಂದ್ರ ಪರಮೇಶ್ವರ ಅವರ ಪ್ರಸ್ತಾವನೆಯ ಪರವಾಗಿದ್ದಾರೆ. ತುಮಕೂರು ನಗರದ ಅಭಿವೃದ್ದಿಗೆ ಅನುದಾನ ತಂದು ಕೊಟ್ಟು ಯಾವ ಹೆಸರು ಬೇಕಾದರೂ ಇಟ್ಟುಕೊಳ್ಳಿ ಅನ್ನುವುದು ಒಂದು ಸಾವಿರ ಕೋಟಿ ಮೊತ್ತದ ಸ್ಮಾರ್ಟ್ ಸಿಟಿ ಕಾಮಗಾರಿ ಮಾಡಿಸಿದ ತುಮಕೂರು ಶಾಸಕರ ಸ್ಪಷ್ಟ ಅಭಿಪ್ರಾಯ. ತುಮಕೂರು ಅಂತ ಕರೆದರೆ ಏನು, ಬೆಂಗಳೂರು ಉತ್ತರ ಅಂತ ಕರೆದರೆ ಏನು ಒಟ್ಟಿನಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯಬೇಕು ಅಷ್ಟೇ.
ತುಮಕೂರಿಗೆ ತನ್ನದೇ ಆದ ಐತಿಹ್ಯ, ಇತಿಹಾಸ, ನಾಗರಿಕತೆ, ಸಂಸ್ಖೃತಿ, ಕಲೆ, ಕೃಷಿ ಎಲ್ಲ ಇದೆ. ಏಕೆ ಅದನ್ನು ಇದ್ದಕಿದ್ದಂತೆ ಬೆಂಗಳೂರು ಉತ್ತರ ಅಂತ ಹೆಸರು ಬದಲಿಸಬೇಕು. ಅಭಿವೃದ್ದಿ ತಾನೇ ತುಮಕೂರಿನ ಹೆಸರಲ್ಲೇ ಮಾಡಲು ಏನಡ್ಡಿ ಅಂತಾನೇ ಎಲ್ಲರೂ ಕೇಳ್ತಾ ಇದ್ದಾರೆ.
“ಇದೇನು ಇದ್ದಕ್ಕಿದ್ದಂತೆ ತುಮಕೂರು ಬಗ್ಗೆ ಪ್ರೀತಿ ಉಕ್ಕಿ ಹರೀತಾ ಇದೆ, ಅಲ್ಲಾ ತುಮಕೂರು ರೈಲ್ವೆ ಸ್ಟೇಷನ್ ಹೆಸರನ್ನು ಬದಲಾಯಿಸಿ ಶ್ರೀ ಶಿವಕುಮಾರ ಸ್ವಾಮೀಜಿ ರೈಲ್ವೆ ಸ್ಟೇಷನ್ ಅಂತ ಹೆಸರು ಬದಲಿಸುವಾಗ ಸುಮ್ಮನಿದ್ರಿ, ಈಗ ಯಾಕೆ ವಿರೋಧ” ಅಂತ ಲೇಖಕಿ, ಸಂಘಟಕಿ ಬಾ.ಹ.ರಮಾಕುಮಾರಿ ಕೇಳ್ತಾರೆ. ಏನು ಹೇಳ್ತೀರಾ ಹೇಳಿ.
ಇಂದಿಗೆ 163 ವರ್ಷಗಳ ಮೊದಲು ತುಮಕೂರು ಪಕ್ಕದ ಚಿತ್ರದುರ್ಗ ವಿಭಾಗಕ್ಕೆ ಸೇರಿತ್ತು. 1862ರಲ್ಲಿ ಚಿತ್ರದುರ್ಗ ವಿಭಾಗವನ್ನು ರದ್ದು ಪಡಿಸಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ರಚಿಸಿ ಅಸ್ತಿತ್ವಕ್ಕೆ ತರಲಾಯಿತು. ಆಗ ಚಿತ್ರದುರ್ಗವನ್ನು ಚಿತ್ತಾಲ್ ಡ್ರೂಗ್ ಅಂತ ಕರೆಯಲಾಗುತ್ತಿತ್ತು. ಹೊಸದಾಗಿ ಸೃಷ್ಟಿಯಾದ ತುಮಕೂರು ಜಿಲ್ಲೆಯನ್ನು ಈಗಿನ ಬೆಂಗಳೂರು ಮತ್ತು ಆಗಿನ ನಂದಿ ದುರ್ಗ ವಿಭಾಗಕ್ಕೆ ಸೇರಿಸಲಾಯಿತು.
ನಾಲ್ಕು ವರ್ಷಗಳ ಬಳಿಕ 1866ರಲ್ಲಿ ಶಿರಾ ತಾಲೂಕನ್ನು ಚಿತ್ರದುರ್ಗ ಜಿಲ್ಲೆಯಿಂದ ತುಮಕೂರು ಜಿಲ್ಲೆಗೆ ಸೇರ್ಪಡೆ ಮಾಡಲಾಯಿತು. ಆದೇಕೋ ಏನೋ ಗೊತ್ತಿಲ್ಲ, 1882ರಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ತುಮಕೂರು ಜಿಲ್ಲೆಯ ಉಪವಿಭಾಗವನ್ನಾಗಿ ಮಾಡಿ ಆದೇಶ ಹೊರಡಿಸಲಾಯಿತು. ಆದರೆ ನಾಲ್ಕೇ ವರ್ಷಗಳಲ್ಲಿ 1886ರಲ್ಲಿ ಚಿತ್ರದುರ್ಗವನ್ನು ಮತ್ತೆ ಜಿಲ್ಲೆ ಅಂತ ಮಾಡಲಾಯಿತಾದರೂ ಪಾವಗಡ ತಾಲೂಕನ್ನು ತುಮಕೂರು ಜಿಲ್ಲೆಗೇ ಉಳಿಸಿಕೊಳ್ಳಲಾಯಿತು. ಬ್ರಿಟಿಷರು ತುಮಕೂರನ್ನು ಇಂಗ್ಲಿಷ್ನಲ್ಲಿ ಟುಮ್ಕೂರ್ ಅಂತ ಕರೀತಾ ಇದ್ರು, ಬರೀತಾ ಇದ್ರು ಅಂತ 2014ರ ಅಕ್ಟೋಬರ್ ತಿಂಗಳಲ್ಲಿ ತುಮಕೂರಿನ ಹೆಸರನ್ನು ಇಂಗ್ಲಿಷಿನಲ್ಲಿ ತುಮಕೂರು ಅಂತಾನೇ ( ಖಿUಒಂಏUಖU) ಬರೆಯಲು ಭಾರತ ಸರ್ಕಾರ ಅದೇಶ ಹೊರಡಿಸಿದೆ. ಆದರೆ ಹನ್ನೊಂದು ವರ್ಷಗಳಾದರೂ ಈಗಲೂ ಬಹುಪಾಲು ನಾವೆಲ್ಲ ಇಂಗ್ಲಿಷಿನಲ್ಲಿ ತುಮಕೂರು ಎನ್ನುವುದನ್ನು ಖಿUಒಏUಖ ಅಂತಾನೇ ಬಳಸುತ್ತಾ ಇದ್ದೀವಿ.
ಈ ಇತಿಹಾಸ ನೋಡಿದಾಗ ತುಮಕೂರು ಜಿಲ್ಲೆ ಅಸ್ತಿತ್ವಕ್ಕೆ ಬಂದು 163 ವರ್ಷಗಳಾಗಿವೆ ಎಂಬುದು ಅರಿವಾಗುತ್ತದೆ.
1884ರಲ್ಲೇ ತುಮಕೂರಿಗೆ ರೈಲ್ವೆ ನಿಲ್ದಾಣವನ್ನು ನಿರ್ಮಿಸಲಾಯಿತು, ಬೆಂಗಳೂರಿನಿಂದ ಮೊದಲ ರೈಲು 1884ರ ಆಗಸ್ಟ್ 11ರಂದು ತುಮಕೂರು ರೈಲ್ವೆ ನಿಲ್ದಾಣವನ್ನು ತಲುಪಿತು. ಈ ಮಾರ್ಗ ಲಾಭದಾಯಕವಾಗಿ ಕಂಡಿದ್ದರಿಂದ ಈ ರೈಲು ಮಾರ್ಗವನ್ನು ಗುಬ್ಬಿವರೆಗೆ ವಿಸ್ತರಿಸಲಾಯಿತು ಎನ್ನುತ್ತದೆ ಇತಿಹಾಸ. ತುಮಕೂರು ಎಂಬ ಹೆಸರು ಹೇಗೆ ಬಂತು, ತುಂಬೆ ಊರು, ತುಮ್ಮೆಗೂರು, ಟುಮಕಿ ಊರು ಮೊದಲಾದ ದಂತ ಕತೆಗಳೂ ಬೇರೆ ಇವೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮರುನಾಮಕರಣ ಮಾಡ್ತಾ ಇಲ್ವಾ, ಹಂಗೇ ತುಮಕೂರನ್ನು ಯಾಕೆ ಬೆಂಗಳೂರು ಉತ್ತರ ಮಾಡಬಾರದು ಅಂತ ಕೇಳೋರೂ ಇದ್ದಾರೆ. ರಾಮನಗರದ ಇತಿಹಾಸ ಇನ್ನೂ ಸ್ವಾರಸ್ಯಕರವಾಗಿದೆ, ಟಿಪ್ಪು ಆಳ್ವಿಕೆಯಲ್ಲಿ ಈ ಊರನ್ನು ಶಂಶೇರಾಬಾದ್ ಅಂತ , ರಹೀಮ್ ನಗರ ಅಂತ, ರಾಮಸೇರಪುರಂ ಅಂತ ಕರೀತಾ ಇದ್ರಂತೆ, ಅಲ್ಲಿಗೆ ಬ್ರಿಟಿಷರ ಆಳ್ವಿಕೆಯಲ್ಲಿ ಅದನ್ನು ಕ್ಲೋಸ್ ಪೇಟ್ ಅಂತ ಕರೆಯೋಕೆ ಶುರು ಮಾಡಿದ್ರಂತೆ. ಈ ಕ್ಲೋಸ್ ಅನ್ನೋದು ಈಸ್ಟ್ ಇಂಡಿಯಾ ಕಂಪನಿಯ ಸೇನಾಧಿಕಾರಿ ಸರ್ ಬ್ಯಾರಿ ಕ್ಲೋಸ್ನ ಕೊನೆಯ ಅರ್ಧ ಹೆಸರು. ಈತ ಶ್ರೀರಂಗಪಟ್ಟಣವನ್ನು ವಶ ಪಡಿಸಿಕೊಳ್ಳುವ ಯುದ್ದದಲ್ಲಿ ಸಕ್ರಿಯವಾಗಿದ್ದ ಅಂತ ಇವನ ಹೆಸರನ್ನು ಈಗಿನ ರಾಮನಗರಕ್ಕೆ ಇಟ್ಟು ಬಿಟ್ಟಿದ್ದರು. ರಾಮನಗರ ಅವಿಭಜಿತ ಬೆಂಗಳೂರು ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿತ್ತು ಮಾತ್ರ.
ಸನ್ಮಾನ್ಯ ಕುಮಾರಣ್ಣನವರು ಮುಖ್ಯಮಂತ್ರಿಯಾದ ಬಳಿಕ 2007ರಲ್ಲಿ ರಾಮನಗರ ಜಿಲ್ಲೆ ಸೃಷ್ಟಿ ಮಾಡಿ, ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಯಿತು. ಇದೀಗ ಅದೇ ರಾಮನಗರ ಜಿಲ್ಲೆಯ ಕನಕಪುರ ವಿಧಾನ ಸಭಾ ಕ್ಷೇತ್ರದ ಸದಸ್ಯರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಣ್ಣನವರು ರಾಮನಗರವನ್ನು ಬೆಂಗಳೂರು ಸೌತ್ ಅಂತ ಹೆಸರು ಬದಲಿಸುವಲ್ಲಿ ಸಕ್ಸೆಸ್ ಆಗಿದ್ದಾರೆ. ಇದೇ ಶಿವಕುಮಾರಣ್ಣನವರು ತುಮಕೂರು ಜಿಲ್ಲೆಯಲ್ಲಿ ಹರಿಯುತ್ತಿರುವ ಹೇಮಾವತಿಯನ್ನು ಗುಬ್ಬಿ ತಾಲೂಕಿನಿಂದಲೇ ಬೈಪಾಸ್ ಮಾಡಿ ನೇರ ಅವರ ರಕ್ತ ಸಂಬAಧಿ ಶಾಸಕರಾಗಿರುವ ಕುಣಿಗಲ್ ತಾಲೂಕಿಗೆ ಹರಿಸಿಕೊಂಡು ಹೋಗುವುದನ್ನು ಪ್ರತಿಷ್ಟೆಯ ಸಂಗತಿಯನ್ನಾಗಿ ಮಾಡಿಕೊಂಡು, ಭಾರೀ ಜನ ವಿರೋಧ ಎದುರಿಸುತ್ತಿದ್ದಾರೆ.
ಹಿಮಾಲಯ ಪರ್ವತ ಶ್ರೇಣಿಯಿಂದ ಕೆಳಕ್ಕೆ ಅರಬಿ ಸಮುದ್ರ , ಬಂಗಾಳ ಕೊಲ್ಲಿ ಸಮುದ್ರಗಳಿಂದ ಸುತ್ತುವರೆದು ಪರ್ಯಾಯ ದ್ವೀಪ ಎಂದಾಗಿರುವ ಈ ಭಾರತ ಉಪಖಂಡವನ್ನು ಸುಮಾರು ಐನೂರು ವರ್ಷ ಯಾರು ಯಾರೋ ಆಳಿ ಹೋಗಿದ್ದಾರೆ. ಅವರವರಿಗೆ ಬೇಕಾದ ಹೆಸರುಗಳನ್ನು ಕೊಟ್ಟು ಹೋಗಿದ್ದಾರೆ. ಮೊಘಲರು ಮತ್ತು ಅವರ ನಂತರ ಬ್ರಿಟಿಷರು ಹೆಚ್ಚು ಪ್ರದೇಶದಲ್ಲಿ ಆಳ್ವಿಕೆ ಮಾಡಿದರೆ, ಫ್ರೆಂಚರು, ಡಚ್ಚರು, ಪೋರ್ಚುಗೀಸರೂ ಕೆಲ ಪ್ರದೇಶಗಳನ್ನು ಆಳಿದರು. ಹಾಗಾಗಿ ಅಲ್ಲೆಲ್ಲ ಅವರ ಭಾಷೆ ಮತ್ತು ಸಂಸ್ಖೃತಿಯ ಪ್ರಭಾವ ಇನ್ನೂ ಇದೆ. ಅವರಿಟ್ಟ ಹೆಸರುಗಳೂ ಇನ್ನೂ ಬಳಕೆಯಲ್ಲಿವೆ. 1947ರ ಆಗಸ್ಟ್ 15ರವರೆಗೆ ಬ್ರಿಟಿಷರ ಪಾಲಿನ ಇಂಡಿಯಾ ಆಗಿದ್ದ ಈ ನೆಲವು ನಂತರ ಭಾರತ ಅಂತಲೂ ಕರೆಸಿಕೊಳ್ಳುತ್ತಿದೆ. ಆ ದಿನದಿಂದಲೇ ಕೆಲವು ಪ್ರದೇಶಗಳ ಹೆಸರನ್ನು ಬದಲಿಸಲಾಯಿತು. ಇಂಗ್ಲಿಷ್ ಉಚ್ಚಾರಣೆಗಳನ್ನು ದೇಶಿ ಭಾಷೆಯ ಉಚ್ಚಾರಣೆಗೆ ಬದಲಿಸಿಕೊಳ್ಳಲಾಯಿತು.
2014ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ದಿಲ್ಲಿಯಲ್ಲಿ ಈ ದೇಶದ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಬ್ರಿಟಿಷ್ ವಸಾಹತು ಶಾಹಿ ಕಾಲದ ಸ್ಥಳ ನಾಮಗಳಿಗಿಂತ ಮುಸ್ಲಿಮ್ ಆಡಳಿತದಲ್ಲಿ ಇಡಲಾಗಿರುವ ನಗರ ಹಾಗೂ ಪ್ರದೇಶಗಳ ಹೆಸರುಗಳನ್ನು ಮರುನಾಮಕರಣ ಮಾಡಲಾಯಿತು.
ಮೊದಲಿಗೆ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿವಾಸವಿರುವ ರಸ್ತೆಯ ಹೆಸರನ್ನು ನಂಬರ್ 7 ರೇಸ್ ಕೋರ್ಸ್ ರೋಡ್ ಎಂದು ಇದ್ದುದನ್ನು ಲೋಕ ಕಲ್ಯಾಣ ಮಾರ್ಗ್ ಅಂತ ಬದಲಿಸಲಾಯಿತು. ಬಿಜೆಪಿ ಎಂಪಿ ಮೀನಾಕ್ಷಿ ಲೇಖಿ ಅವರು ಈ ರಸ್ತೆಗೆ ರೇಸ್ ಕೋರ್ಸ್ ರೋಡ್ ಬದಲಿಗೆ ಜನಸಂಘದ ಗುರು ದೀನದಯಾಳ ಉಪಾಧ್ಯಾಯ ಅವರ ಸಿದ್ದಾಂತ ಏಕಾತ್ಮ ಮಾನವ ವಾದದ ನೆನಪಿಗೆ “ಏಕಾತ್ಮ ಮಾರ್ಗ್” ಅಂತ ಇಡಬೇಕು ಅಂತ ಬಯಸಿದ್ದರಂತೆ ಆದರೆ ಅವತ್ತು ದಿಲ್ಲಿ ಸಿಎಂ ಆಗಿದ್ದ ಅರವಿಂದ ಕೇಜ್ರಿವಾಲ್ ಆ ರೋಡನ್ನು ಗುರು ಗೋವಿಂದ ಸಿಂಗ್ ಮಾರ್ಗ ಅಂತ ಬದಲಿಸಿ ಅಂತ ಪಟ್ಟು ಹಿಡಿದಿದ್ರಂತೆ, ಕಡೆಗೆ ಮೋದಿಯವರು ಇಬ್ಬರಿಗೂ ಬೇಡ ಅಂತ ಲೋಕ ಕಲ್ಯಾಣ ಮಾರ್ಗವನ್ನಾಗಿ ಮಾಡಿಬಿಟ್ಟರಂತೆ. ಹಿಂಗೇ ಪೂರ್ವ ದಿಲ್ಲಿ ಎಂಪಿ ಮಹೀಶ ಗಿರ್ರಿ ಕೋರಿಕೆಯಂತೆ ಔರಂಗಜೇಬ್ ಮಾರ್ಗ್ ಎಪಿಜೆ ಅಬ್ದುಲ್ ಕಲಾಂ ಮಾರ್ಗ್ ಆಗಿ ಮರುನಾಮಕರಣ ಆಯಿತು.
2017ರಲ್ಲಿ ಉತ್ತರ ಪ್ರದೇಶದಲ್ಲಿ ಭಾರೀ ಬಹುಮತದೊಂದಿಗೆ ಮುಖ್ಯಮಂತ್ರಿಯಾದ ಅಜಯ್ ಮೋಹನ್ ಬಿಶ್ತ್ ( ಯಾರಿದು ಅಂತ ಕೇಳಬೇಡಿ) ಅಲಿಯಾಸ್ ಯೋಗಿ ಆದಿತ್ಯನಾಥ್ ಇಡೀ ತಮ್ಮ ಸಾಮ್ರಾಜ್ಯದಲ್ಲಿ ಮುಸ್ಲಿಮ್ ಹಿನ್ನೆಲೆಯ ಯಾವ ಹೆಸರುಗಳೂ ಕಣ್ಣಿಗೆ ಬೀಳಬಾರದು , ಕಿವಿಗೆ ಕೇಳಬಾರದು ಅಂತ ಬುಲ್ ಡೋಜರ್ ಹೊರಡಿಸಿದರಲ್ಲ, ಆಗ ಮೊಘಲ್ ಸರಾಯಿ ರೈಲ್ವೆ ಜಂಕ್ಷನ್ ದೀನ ದಯಾಳ್ ಉಪಾಧ್ಯಾಯ ಜಂಕ್ಷನ್ ಆಗಿ ಬಿಟ್ಟಿತು. ಈ ಹೆಸರು ಬದಲಾವಣೆಗೂ ಒಂದು ಐತಿಹಾಸಿಕ ಕಾರಣ ಇತ್ತು. ಜನಸಂಘದ ಅಧ್ಯಕ್ಷರಾಗಿದ್ದ ದೀನ ದಯಾಳ ಉಪಾಧ್ಯಾಯರು 1968ರಲ್ಲಿ ಈ ರೈಲ್ವೆ ನಿಲ್ದಾಣದ ಸಿಗ್ನಲ್ ಕಂಬದ ಬಳಿ ಶವವಾಗಿ ಪತ್ತೆಯಾಗುತ್ತಾರೆ. ಅವರು ಲಕ್ನೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರನ್ನು ದೋಚಲು ಬಂದ ಕಳ್ಳನೊಬ್ಬ ಅವರು ಹಣ ಕೊಡದ ಕಾರಣ ಹಾಗೂ ಅವನನ್ನು ಪೊಲೀಸರಿಗೆ ಹಿಡಿದುಕೊಡುವುದಾಗಿ ಹೆದರಿಸಿದ ಕಾರಣಕ್ಕೆ ಭಯಪಟ್ಟು ಅವರನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿ ಬಿಟ್ಟಿರುತ್ತಾನೆ. ದೀನ ದಯಾಳ ಉಪಾಧ್ಯಾಯರ ಬಳಿ ಅವತ್ತು ಕೇವಲ ಐದು ರೂಪಾಯಿ ಇತ್ತು ಅಂತ ನಂತರ ಪೊಲೀಸ್ ಮಹಜರಿನಿಂದ ತಿಳಿದು ಬರುತ್ತದೆ , ಪಾಪ ಆ ಐದು ರೂಪಾಯಿಯನ್ನು ಆ ಕಳ್ಳನಿಗೆ ಕೊಟ್ಟು ಸುಮ್ಮನಿದ್ದು ಬಿಟ್ಟಿದ್ದರೆ ಅಷ್ಟು ದೊಡ್ಡ ವ್ಯಕ್ತಿ ಪ್ರಾಣವಾದರೂ ಉಳಿದುಕೊಳ್ಳುತ್ತಿತ್ತು ಅಲ್ವಾ. ಈ ನೆನಪಿಗೆ 156 ವರ್ಷಗಳ ಇತಿಹಾಸವಿದ್ದ ಮೊಘಲ್ ಸರಾಯ್ ರೈಲ್ವೆ ಜಂಕ್ಷನ್ ಈಗ ದೀನ ದಯಾಳ ಉಪಾಧ್ಯಾಯ ರೈಲ್ವೆ ಜಂಕ್ಷನ್ ಆಗಿದೆ ನೆನಪಿರಲಿ.
ಅಲಹಾಬಾದ್ ಅಂತ ಒಂದು ನಗರ ಇತ್ತಲ್ವ ಅದನ್ನು ಇದೇ ಸಿಎಂ ಅಜಯ್ ಮೋಹನ್ ಬಿಶ್ತ್ ಪ್ರಯಾಗ್ ರಾಜ್ ಅಂತ ಹೆಸರು ಬದಲಿಸಿದರು, ಅದರ ಪಕ್ಕ ಇದ್ದ ಫೈಜಾ ಬಾದ್ ಅಯೋಧ್ಯೆ ಆಗಿಬಿಟ್ಟಿತು. ಉತ್ತರ ಪ್ರದೇಶದವರು ಮಾತ್ರವೇ ನಗರಗಳ ಹೆಸರು ಬದಲಿಸಿದರೆ ಹೇಗೆ ನಾನೇಕೆ ಸುಮ್ಮನಿರಬೇಕು ಅಂತಾನೋ ಏನೋ ಪಕ್ಕದ ಹರಿಯಾಣ ರಾಜ್ಯದ ಸಿಎಂ ಮನೋಹರಲಾಲ್ ಖಟ್ಟರ್ ಗುಡ್ಗಾವ್ನ ಹೆಸರನ್ನು ಗುರುಗ್ರಾಮ ಅಂತ ಬದಲಿಸಿದರು. ಅವರ ತರ್ಕ ಏನಪ್ಪಾ ಅಂದ್ರೆ ಹರಿಯಾಣದಲ್ಲಿ ಕುರುಕ್ಷೇತ್ರ ಅಂತ ಊರಿದೆ. ಆ ಲೆಕ್ಕದಲ್ಲಿ ಗುಡ್ ಗಾವ್ ಹಿಂದೊಮ್ಮೆ ಪಾಂಡವರ ಬಿಲ್ವಿದ್ಯೆ ಗುರು ದ್ರೋಣಾಚಾರ್ಯನ ನೆನಪಿಗೆ ಗುರುಗ್ರಾಮವೇ ಆಗಿತ್ತು. ಜನಬಳಕೆಯಲ್ಲಿ ಗುಡ್ಗಾವ್ ಆಗಿಬಿಟ್ಟಿತ್ತಂತೆ, ಅದಕ್ಕೇ ಅದನ್ನು ಗುರುಗ್ರಾಮ ಮಾಡಿದರಂತೆ.
ಈ ಚೇಂಜ್ ಆಫ್ ನೇಮ್ ವ್ಯವಹಾರವೆಲ್ಲ , ಕಾಂಗ್ರೆಸ್ ಮುಸ್ಲಿಮರನ್ನು ಓಟ್ ಬ್ಯಾಂಕ್ ಮಾಡಿಕೊಂಡಿರುವ ಕಾರಣಕ್ಕೇ ಹಿಂದೂಗಳು ಅವರನ್ನು ದ್ವೇಷಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುವ ಆರ್ಎಸ್ಎಸ್ನ ರಾಜಕೀಯ ವಿಭಾಗ ಬಿಜೆಪಿಯ ಗುತ್ತಿಗೆ ಹೌದಾ. ಆರ್ಎಸ್ಎಸ್ನವರು ಮಾತ್ರವೇ ಹಿಂದೂಗಳಲ್ಲ ನಾವೇನು ಅವರಿಗಿಂತ ಕಡಿಮೆ ಅಲ್ಲ ಎನ್ನುವ ಕಾಂಗ್ರೆಸ್ ನಾಯಕರಲ್ಲಿ ಸನ್ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ ಅವರ ನಡುವೆ ಅರೋಗ್ಯಕರ ಪೈಪೋಟಿ ಇದೆ. ಧರ್ಮ ,ದೇವರು ಹಾಗೂ ಧಾರ್ಮಿಕ ಆಚರಣೆಗಳೆಲ್ಲ ವೈಯಕ್ತಿಕ ನಂಬಿಕೆ, ನಾನು ದೇವರನ್ನು ನಂಬುತ್ತೇನೆ, ಗುರುಗಳ ಮಾತನ್ನು ಪಾಲಿಸುತ್ತೇನೆ ಎನ್ನುವ ಡಿ.ಕೆ.ಶಿವಕುಮಾರ್ ಅವರ ಮಾತನ್ನು ಸಂವಿಧಾನವನ್ನು ಅನುಸರಿಸುವ ಯಾರೂ ವಿರೋಧಿಸುವಂತಿಲ್ಲ. ಹಾಗೇ ಪರಮೇಶ್ವರ ಅವರ ವೈಯಕ್ತಿಕ ನಂಬಿಕೆ ಆಚರಣೆಗಳನ್ನೂ ಕೂಡಾ. ದಯಮಾಡಿ ಅವರವರ ನಂಬಿಕೆ ಅವರಿಗಿರಲಿ. ಯಾರದೇನೂ ಆಕ್ಷೇಪವಿಲ್ಲ. ಆದರೆ ಅಧಿಕಾರದಲ್ಲಿರುವ ಇವರ ಈ ನಂಬಿಕೆಗಳೇ ರಾಜ್ಯದ ಆಡಳಿತವನ್ನು ದಿಕ್ಕು ತಪ್ಪಿಸುವಂತಾಗಬಾರದು. ತುಮಕೂರಿನ ವಾಸ್ತು ಮತ್ತು ಹೆಸರು ಬಲ ಸರಿ ಇಲ್ಲ, ಅದೂ ನಿಮ್ಮ ಹೆಸರಿಗೆ ಆಗಿ ಬರಲ್ಲ, ಅದಕ್ಕೇ ನೀವು ಇನ್ನೂ ಮುಖ್ಯಮಂತ್ರಿ ಆಗಲು ಆಗಿಲ್ಲ ಅಂತ ಯಾವುದೋ ಗುರೂಜಿ ಹೇಳಿಬಿಟ್ಟಿದ್ದರೆ, ಇನ್ನೇನಿಲ್ಲ, ಆ ಲೆಕ್ಕಾಚಾರದಲ್ಲೇನಾದರೂ ತುಮಕೂರು ಬೆಂಗಳೂರು ಉತ್ತರ ಜಿಲ್ಲೆ ಅಂತ ಮರುನಾಮಕರಣ ಆಗಿ ಬಿಡುತ್ತಾ ಅಂತಾ ಅಂತ ಎಲ್ಲರ ಆತಂಕ ಅಷ್ಟೇ!
ಈಗ ಡಾ.ಜಿ.ಪರಮೇಶ್ವರ ಅವರ ತಂದೆ ದಿವಂಗತ ಹೆಚ್.ಎಂ. ಗಂಗಾಧರಯ್ಯನವರು ತುಮಕೂರು ನಗರದಿಂದ ಎಂಟು ಕಿಲೋಮೀಟರ್ ದೂರದ ಗೊಲ್ಲಹಳ್ಳಿಯಲ್ಲಿ ಜಮೀನು ಖರೀದಿ ಮಾಡಿ, ಸಂತ ವಿನೋಬಾ ಭಾವೆ ಅವರ ಆಶೀರ್ವಾದಂತೆ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಕಾಲಾನುಕ್ರಮದಲ್ಲಿ ಆ ಗೊಲ್ಲಹಳ್ಳಿಯ ಹೆಸರು ಮರೆಯಾಗಿ ಆ ಊರೀಗ ಸಿದ್ದಾರ್ಥ ನಗರ ಆಗಿ ಬಿಟ್ಟಿದೆ.
ಇದೀಗ ತುಮಕೂರು ಜಿಲ್ಲೆ ವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ಬೆಂಗಳೂರು ನೆಲಮಂಗಲವನ್ನು ದಾಟಿ ದಾಬಸ್ ಪೇಟೆ ಕಡೆ ದಾಪುಗಾಲಿಡುತ್ತಿದೆ. ತುಮಕೂರು ಕ್ಯಾತಸಂದ್ರ ದಾಟಿ ಹಿರೇಹಳ್ಳಿಯನ್ನು ಎಟುಕಿಸಿಕೊಂಡಿದೆ. ಹಿರೇಹಳ್ಳಿ ದಾಟಿದ ಜಿಲ್ಲೆಯ ಗಡಿ ನಂದಿಹಳ್ಳಿ ಸಮೀಪ ಮತ್ತೊಬ್ಬ ಎಂಪಿ ಟಿಕೆಟ್ ಆಕಾಂಕ್ಷಿ ಸಭ್ಯ ರಿಯಲ್ ಎಸ್ಟೇಟ್ ಉದ್ಯಮಿ ಸ್ಪೂರ್ತಿ ಚಿದಾನಂದ್ ಸ್ಪೂರ್ತಿ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಮೆಟ್ರೋ ರೈಲು ಮಾರ್ಗ ಮಾದಾವರ ದಾಟಿ ನೆಲಮಂಗಲದತ್ತ ಹರಿಯುತ್ತಿದೆ. ತುಮಕೂರು ಜಿಲ್ಲೆಯ ಜನರ ಅದೃಷ್ಟವೋ ಎಂಬಂತೆ ಕೇಂದ್ರ ರೈಲ್ವೆ ಮಂತ್ರಿಯಾಗಿರುವ ಎಂಪಿ ಸೋಮಣ್ಣನವರು ಮೆಟ್ರೋ ರೈಲು ಟಿಕೆಟ್ ದರ ಜಾಸ್ತಿ, ಜನ ಸಾಮಾನ್ಯರಿಗೆ ಉಪನಗರ ರೈಲು ಸಾಕಲ್ವಾ ಅಂತಿದ್ದಾರೆ. ಇದೇ ಸೋಮಣ್ಣನವರನ್ನು ಸೋಮವಾರ ಭೇಟಿ ಮಾಡಿ ಹೊರಬಂದ ಡಾಕ್ಟರ್ ಪರಮಣ್ಣನವರು ಅದೂ ಇರಲಿ ಇದೂ ಇರಲಿ ಅಂತAದ್ರು.
ನೋಡ್ರೀ ಸ್ಮಾರ್ಟ್ ಸಿಟಿ ಫಂಡಲ್ಲಿ ಕಟ್ಟಿರೋ ತುಮಕೂರು ಬಸ್ ಸ್ಟಾಂಡ್ ಒಳ್ಳೇ ಏರ್ ಪೋರ್ಟ್ ಕಂಡAಗೆ ಕಾಣಲ್ವಾ ಅಂತ ಪ್ರೆಸ್ ಮೀಟ್ ಒಂದರಲ್ಲಿ ಉಸ್ತುವಾರಿ ಮಂತ್ರಿ ಪರಮೇಶ್ವರ ಖುಷಿ ಪಟ್ಟರು. ಬಸ್ ಸ್ಟಾಂಡೇ ಏರ್ ಪೋರ್ಟ್ ತರಾ ಇರೋವಾಗ, 2028ರ ಹೊತ್ತಿಗೆ ಸೋರೆಕುಂಟೆ ಹತ್ರ ರೆಡಿ ಆಗೋ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂಗೆ ಬರೋ ಕ್ರಿಕೆಟ್ ಸ್ಟಾರ್ಗಳು ಬಂದಿಳಿಯೋಕೆ ಶಿರಾ ಪಕ್ಕದಲ್ಲೇ ಏರ್ ಪೋರ್ಟ್ ಆಗಬೇಡ್ವಾ ಅಂತಿರೋರು ನಮ್ಮ ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು. ಇಂತಾ ಸನ್ನಿವೇಶದಲ್ಲಿ ತುಮಕೂರು ಜಿಲ್ಲೆ ತುಮಕೂರು ಆಗೇ ಉಳಿಯಲಿ ಎನ್ನುವ ಬಹುಜನರ ಅಭಿಪ್ರಾಯಕ್ಕೆ ಈ ಪ್ರಜಾಪ್ರಭುತ್ವದ ಆಶಯಗಳನ್ನು ಅಣಕಿಸುವ ಜನಪ್ರತಿನಿಧಿಗಳ ಪ್ರಭುತ್ವ ವ್ಯವಸ್ಥೆಯಲ್ಲಿ ಮನ್ನಣೆ ಸಿಕ್ಕೀತೆ ?