ನಾ.ದಿವಾಕರ - ಕದನ-ವಿರಾಮದ ನಡುವೆ ಬುದ್ಧನೊಡನೆ ಕೆಲಕ್ಷಣ
ಬುದ್ಧನನ್ನು ಶಾಂತಿ-ಸಹನೆ-ಸಹಬಾಳ್ವೆಯ ಚಾರಿತ್ರಿಕ ಹರಿಕಾರನಾಗಿ ಆರಾಧಿಸುವ ಮುನ್ನ ಈ ಹೊಸ ಚಿಂತನೆಗಳು ನಮ್ಮ ನಡುವೆ ಹರಿದಾಡಬೇಕಿದೆ. ವರ್ತಮಾನ ಭಾರತದ ಸಕಲ ಸಮಸ್ಯೆಗಳಿಗೂ ಬುದ್ಧನಲ್ಲಿ ಪರಿಹಾರ ಕಾಣಲಾಗುವುದಿಲ್ಲ ಎನ್ನುವ ವಾಸ್ತವವನ್ನು ಅರಿತೇ, ಎರಡು ಸಹಸ್ರ ವರ್ಷಗಳ ಹಿಂದೆ ಬುದ್ಧ ನೀಡಿದ ಸಂದೇಶಗಳನ್ನು ಸಮಾಜಕ್ಕೆ ರವಾನಿಸಲು ನಾವು ಅಂಬೇಡ್ಕರ್, ಠಾಗೋರ್, ಗಾಂಧಿ, ಪೆರಿಯಾರ್, ಪುಲೆ ಮೊದಲಾದ ಮಹಾನ್ ಚಿಂತಕರನ್ನು ನಮ್ಮ ನಡುವೆ ಸ್ಥಾಪಿಸಿಕೊಂಡು, ಅವರ ವಿಚಾರಧಾರೆಗಳನ್ನು ಅಂತರ್ಗತ ಮಾಡಿಕೊಳ್ಳಬೇಕಿದೆ.

1974 ರಲ್ಲಿ ಪುನಃ 1998ರಲ್ಲಿ ಎರಡು ಬಾರಿ ಬುದ್ಧ ನಕ್ಕಾಗ ಭಾರತೀಯ ಸಮಾಜದ ಒಂದು ವರ್ಗ ಸಂಭ್ರಮಿಸಿದ್ದರೆ ಮತ್ತೊಂದು ವರ್ಗ ವಸ್ತುನಿಷ್ಠ ನೆಲೆಯಲ್ಲಿ ಪರಾಮರ್ಶೆಯಲ್ಲಿ ತೊಡಗಿತ್ತು. ಎರಡೂ ಸಂದರ್ಭಗಳಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಾಗ, ದೇಶದ ಭೌಗೋಳಿಕ ಅಖಂಡತೆಯನ್ನು ಸಂರಕ್ಷಿಸುವ ಒಂದು ಪ್ರಬಲ ಶಸ್ತ್ರಾಸ್ತ್ರವನ್ನು ಭಾರತವೂ ಹೊಂದಿದೆ ಎಂಬ ಹೆಮ್ಮೆ ಒಂದೆಡೆಯಾದರೆ, ಹಿರೋಷಿಮಾ-ನಾಗಸಾಕಿ ಇನ್ನೂ ಇತಿಹಾಸದ ವಿಸ್ಮೃತಿಗೆ ಜಾರದಿರುವ ಕಾರಣ, ವಿಶ್ವದ ಪ್ರಬಲ ರಾಷ್ಟ್ರಗಳ ನಡುವೆ ಅಣ್ವಸ್ತ್ರ ಪೈಪೋಟಿ ಹೆಚ್ಚಾಗುವುದೆಂಬ ಅತಂಕ ಮತ್ತೊಂದೆಡೆ ಕಾಡಿತ್ತು. ಈ ಪರ-ವಿರೋಧದ ನಡುವೆಯೇ ಆಪರೇಶನ್ ಸ್ಮೈಲಿಂಗ್ ಬುದ್ಧ ಎಂಬ ಸಂಕೇತ ನುಡಿಯ ಕಾರ್ಯಾಚರಣೆಯಲ್ಲಿ ಬುದ್ಧನ ನಗುವನ್ನು ಕಾಣುವುದರಲ್ಲಿ ಭಾರತ ಸಮಾಧಾನ ಪಟ್ಟುಕೊಂಡಿತ್ತು.
ಏಪ್ರಿಲ್ 22ರಂದು ಕಾಶ್ಮೀರ ಕಣಿವೆಯ ಪೆಹಲ್ಗಾಂ ಎಂಬ ಸುಂದರ ಪ್ರವಾಸಿ ತಾಣದಲ್ಲಿ ಭಯೋತ್ಪಾದಕರಿಂದ ನಡೆದ ಭೀಕರ ಹತ್ಯೆ ಮತ್ತು ಅಮಾನುಷ ಕೃತ್ಯ ಮತ್ತೊಮ್ಮೆ ದೇಶವನ್ನು ನೆರೆ ರಾಷ್ಟ್ರ ಪಾಕಿಸ್ತಾನದೊಡನೆ ಸಂಘರ್ಷಕ್ಕೆ ದೂಡಿದೆ. ಈ ಭೀಕರ-ಅಮಾನುಷ ಕೃತ್ಯಕ್ಕೆ ಬಲಿಯಾದ ಅಮಾಯಕರಿಗಾಗಿ ಇಡೀ ಭಾರತವೇ ಮರುಗಿದೆ, ಸ್ವತಃ ಕಾಶ್ಮೀರದ ಜನತೆಯೇ ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವ ಮೂಲಕ, ಇಂತಹ ಕ್ರೌರ್ಯ ಮತ್ತು ಹಿಂಸೆಯನ್ನು ಭಾರತ ಸಹಿಸುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿದೆ. ಅಣ್ವಸ್ತ್ರ ಪರೀಕ್ಷೆಯ ಅಂಗಳದಲ್ಲಿ ನಗುವ ಬುದ್ಧನಿಗಿಂತಲೂ, ಸಾಮಾನ್ಯ ಜನತೆಯ ನಡುವೆ ನಾವು ಕಾಣಬಹುದಾದ ಈ ಮಾನವೀಯ ಸ್ಪಂದನೆ ಮತ್ತು ಅಂತಃಕರಣದ ವಾತಾವರಣ ನವ ಭಾರತದ ನಿರ್ಮಾಣಕ್ಕೆ ಪೂರಕವಾಗಿ ಪರಿಣಮಿಸಬೇಕಿದೆ.
ಕದನ-ವಿರಾಮ ಮತ್ತು ಶಾಂತಿ
ಈ ನಡುವೆ ಭಯೋತ್ಪಾದಕ ಕೃತ್ಯಗಳ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಭಾರತ-ಪಾಕಿಸ್ತಾನ ನಡುವಿನ ಯುದ್ಧ ಸದ್ಯಕ್ಕೆ ಸ್ಥಗಿತವಾಗಿದ್ದು, ಉಭಯ ದೇಶಗಳು ಕದನ ವಿರಾಮ ಘೋಷಿಸುವ ಮೂಲಕ ಎರಡೂ ದೇಶಗಳ ಜನತೆಯಲ್ಲಿ ನೆಮ್ಮದಿಯ ವಾತಾವರಣವನ್ನು ಮೂಡಿಸಿವೆ. ಇದು ಸ್ವಾಗತಾರ್ಹ ಬೆಳವಣಿಗೆ. ಭಯೋತ್ಪಾದನೆಯನ್ನು ಬುಡಸಮೇತ ನಿರ್ನಾಮ ಮಾಡುವ ಭಾರತದ ಸಂಕಲ್ಪಕ್ಕೆ ಪೂರಕವಾಗಿ , ಪಾಕಿಸ್ತಾನದ ವಿರುದ್ಧ ನಡೆದ ಅಲ್ಪಾವಧಿಯ ಸಮರದಲ್ಲಿ ತಮ್ಮ ಶಕ್ತಿ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಭಾರತೀಯ ಸೇನೆ ಮತ್ತು ಯೋಧರು, ದೇಶದ ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದು ವಾಸ್ತವ. ಭಾರತದ ಭೌಗೋಳಿಕ ಸುರಕ್ಷತೆ ಮತ್ತು ಅಖಂಡತೆಯ ಸಂರಕ್ಷಣೆಗಾಗಿ ಜೀವತೆತ್ತು ಹೋರಾಡುವ ಯೋಧರನ್ನು ಸಮ್ಮಾನಿಸುತ್ತಲೇ, ಶಾಂತಿ, ಸಹಬಾಳ್ವೆ ಮತ್ತು ನೆಮ್ಮದಿಯ ಬದುಕಿಗಾಗಿ ದೇಶ ಹಂಬಲಿಸುತ್ತಿದೆ.
ಈ ನಡುವೆ, ಮೇ 12ರಂದು ಭಾರತ ಬುದ್ಧ ಜಯಂತಿಯನ್ನು ಆಚರಿಸಿದೆ. ಬುದ್ಧನ ನಾಡು ಎಂದೇ ಚಾರಿತ್ರಿಕವಾಗಿ ಗುರುತಿಸಲ್ಪಡುವ ಭಾರತ ಯುದ್ಧದ ಬೀಡು ಆಗದಿರಲಿ ಎಂಬ ಆಶಯದೊಂದಿಗೆ ಇಂದು ಬುದ್ಧಪೂರ್ಣಿಮೆಯನ್ನು ದೇಶ ಆಚರಿಸಿದೆ. ಏಕೆಂದರೆ ಯುದ್ಧ ಎಂದರೆ ಅಲ್ಲಿ ಸೋಲು-ಗೆಲುವು ಇರುವುದಿಲ್ಲ. ನಾಶ, ವಿನಾಶ ಮತ್ತು ಸರ್ವನಾಶ ಅಷ್ಟೇ ಇರುತ್ತದೆ . “ ಯುದ್ಧವು ರೋಮ್ಯಾಂಟಿಕ್ ಅಲ್ಲ. ಅದು ನಿಮ್ಮ ಬಾಲಿವುಡ್ ಸಿನಿಮಾ ಅಲ್ಲ. ಅದು ತುಂಬಾ ಗಂಭೀರವಾದ ವ್ಯವಹಾರ... ಅವಿವೇಕದ ಜನರು ಯುದ್ಧವನ್ನು ನಮ್ಮ ಮೇಲೆ ಬಲವಂತವಾಗಿ ಹೇರಿದರೂ, ನಾವು ಅದಕ್ಕೆ ಉತ್ಸುಕರಾಗಬಾರದು" ಎಂಬ ನಿವೃತ್ತ ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ನರಾವಣೆ ಅವರ ಮಾತುಗಳಿಗೆ ನಾವು ಕಿವಿಗೊಡಬೇಕಿದೆ. ನವ ಭಾರತ ತನ್ನೆಲ್ಲಾ ಆಂತರಿಕ ಸಾಮಾಜಿಕ-ಸಾಂಸ್ಕೃತಿಕ ಸಿಕ್ಕುಗಳು, ರಾಜಕೀಯ ಸವಾಲುಗಳು ಮತ್ತು ಆರ್ಥಿಕ ಏಳುಬೀಳುಗಳ ನಡುವೆಯೂ, ಸೌಹಾರ್ದತೆ, ಶಾಂತಿ, ಸಹಬಾಳ್ವೆ ಮತ್ತು ಸಮಾನತೆಯ ಸಮಾಜವೊಂದನ್ನು ಕಟ್ಟಲು ಮುನ್ನಡೆಯಬೇಕಿದೆ. ಈ ಹಾದಿಯಲ್ಲಿ ಬುದ್ಧನ ಶಾಂತಿ ಮತ್ತು ಅಹಿಂಸೆಯ ಬೋಧನೆಗಳು, ಸಮಚಿತ್ತದ ಭಾವನೆಗಳು ಹಾಗೂ ಸಾರ್ವತ್ರಿಕ ಸಮಾನತೆಯ ಸಂದೇಶಗಳು ಭಾರತೀಯ ಸಮಾಜವನ್ನು ಕೈಹಿಡಿದು ಮುನ್ನಡೆಸಬೇಕಿದೆ.
ಭಾರತದ ವಿಶಾಲ ಸಮಾಜ ಇಂದು ಎದುರಿಸುತ್ತಿರುವ ಹಲವಾರು ಜಟಿಲ ಸಮಸ್ಯೆಗಳಲ್ಲಿ ಭಯೋತ್ಪಾದನೆಯೂ ಒಂದು, ಆದರೆ ಪ್ರಧಾನವಾದುದು. ಏಕೆಂದರೆ ಇದು ಶೂನ್ಯದಲ್ಲಿ ಸೃಷ್ಟಿಯಾಗುವ ವಿದ್ಯಮಾನವಲ್ಲ. ಕಾಶ್ಮೀರದ ಪೆಹಲ್ಗಾಂ ಘಟನೆ ಇತ್ತೀಚಿನದಾದರೂ, ಕಳೆದ ನಾಲ್ಕು ದಶಕಗಳಲ್ಲಿ ಭಾರತ ಈ ಜಾಗತಿಕ ಪಿಡುಗಿನ ಅಪಾಯಗಳನ್ನು ಎದುರಿಸುತ್ತಲೇ ಇದೆ. ನೆರೆ ರಾಷ್ಟ್ರಗಳ ಸ್ವಾರ್ಥ ಹಿತಾಸಕ್ತಿಗಳು, ಅಮೆರಿಕದಂತಹ ಸಾಮ್ರಾಜ್ಯಶಾಹಿಗಳ ಮಹತ್ವಾಕಾಂಕ್ಷೆಗಳು ಹಾಗೂ ಮನುಷ್ಯ ಜೀವಿಯನ್ನು, ಸಹಜ ಜೈವಿಕ ವಸ್ತು ಎಂದು ಪರಿಗಣಿಸದೆ, ನಾವೇ ಸೃಷ್ಟಿಸಿಕೊಂಡ ಜಾತಿ, ಮತ, ಧರ್ಮ ಮತ್ತು ಭೌಗೋಳಿಕ-ಪ್ರಾದೇಶಿಕ ಅಸ್ಮಿತೆಗಳ Prism ಮೂಲಕ ನೋಡುವ ಒಂದು ವಿಧಾನವನ್ನು ಆಧುನಿಕ ನಾಗರಿಕತೆ ರೂಢಿಸಿಕೊಂಡಿದೆ. ಸಮಾಜದ ತಳಮಟ್ಟದಿಂದಲೇ ಬಿತ್ತಲಾಗುತ್ತಿರುವ ದ್ವೇಷಾಸೂಯೆಯ ಬೀಜಗಳು ಹೆಮ್ಮರಗಳಾಗಿ ಇಂದು, ವಿಭಿನ್ನ ರೂಪಗಳನ್ನು ಪಡೆದುಕೊಂಡಿದೆ. ಈ ಕಣ್ಣೋಟದಲ್ಲಿ ನೋಡಿದಾಗ, ಭಯೋತ್ಪಾದಕ ಮನಸ್ಥಿತಿಯನ್ನು ರೂಪಿಸುವ ಮೂಲ ಚಿಂತನಾವಾಹಿನಿಗಳು ನಮಗೆ ಕಾಣುತ್ತದೆ. ಇದನ್ನು ಹೋಗಲಾಡಿಸುವ ಜವಾಬ್ದಾರಿ ಸಮಾಜದ ಮೇಲಿದೆ.
ಈ Prism ನಲ್ಲಿ ನೋಡುವಾಗ ಅಥವಾ ನಮ್ಮದೇ ಆಯ್ಕೆಯ ಮಸೂರಗಳನ್ನು ಧರಿಸಿ ಸಮಾಜದ ಕಡೆ ನೋಡುವಾಗ, ಅಲ್ಲಿ ಈ ಜೈವಿಕ ಚಿಂತನಾವಿಧಾನವು ಹಲವು ಅಸ್ಮಿತೆಗಳಲ್ಲಿ, ಬಣ್ಣಗಳಲ್ಲಿ, ಚಿಹ್ನೆ-ಲಾಂಛನಗಳಲ್ಲಿ ಕಾಣತೊಡಗುತ್ತದೆ. ಆಧುನಿಕ ಸಮಾಜವೂ ಸಹ, ವಿಜ್ಞಾನ ತಂತ್ರಜ್ಞಾನದಲ್ಲಿ ಅಪಾರದ ಸಾಧನೆ-ಮುನ್ನಡೆ ಸಾಧಿಸಿದ್ದರೂ, ತನ್ನದೇ ಆದ ಪತ್ಯೇಕತೆಯ ಗೋಡೆಗಳನ್ನು, ದಾಟಲಾಗದ ಬೇಲಿಗಳನ್ನು, ಭೇದಿಸಲಾಗದ ಭದ್ರ ಕೋಟೆಗಳನ್ನು ನಿರ್ಮಿಸಿಕೊಳ್ಳುತ್ತಿದೆ. ಈ ಸ್ಥಾವರಗಳಿಗೆ ಮತ ಅಥವಾ ಧಾರ್ಮಿಕ ಸಂಹಿತೆಗಳ ಕವಚವನ್ನು ಹೊದಿಸುವುದು ಅಂತಾರಾ಼ಷ್ಟ್ರೀಯ ವಿದ್ಯಮಾನವಾದರೆ, ಜಾತಿ-ಮತ-ಕೋಮು ಮತ್ತು ಜಾತಿಶ್ರೇಷ್ಠತೆಯ ಹೊದಿಕೆಯನ್ನು ತೊಡಿಸುವುದು ಭಾರತೀಯ ಸಮಾಜದ ವಿಶಿಷ್ಟ ವಿದ್ಯಮಾನ. ಈ ಎರಡೂ ಪ್ರಕ್ರಿಯೆಗಳಲ್ಲಿ ವಿಭಜನೆಗೊಳಗಾಗುವ ಮಾನವ ಸಮಾಜ ತನ್ನ ಸ್ವಂತಿಕೆಯನ್ನೂ ಕಳೆದುಕೊಂಡು, ಭಾವಾವೇಶದ ಮನಸ್ಥಿತಿಗೆ ದಾಸನಾಗುತ್ತದೆ.
ಬುದ್ಧನೆಡೆಗೆ ನಡೆಯುವಾಗ
ಈ ದಾಸ್ಯದ ಸಂಕೋಲೆಗಳನ್ನು ಭೇದಿಸುವ ಹಾದಿಯಲ್ಲಿ ಭಾರತೀಯ ಸಮಾಜಕ್ಕೆ ಬುದ್ಧ ಮತ್ತು ಆತನ ಚಿಂತನಾಧಾರೆಗಳು ಬೇಕಾಗುತ್ತವೆ. ಭಾರತೀಯ ಸಮಾಜಕ್ಕೆ , ವಿಶೇಷವಾಗಿ ಶತಮಾನಗಳ ಶೋಷಣೆ, ದಬ್ಬಾಳಿಕೆ ಮತ್ತು ದೌರ್ಜನ್ಯಗಳಿಗೆ ಒಳಗಾಗುತ್ತಿರುವ ಶೋಷಿತ ತಳಸಮುದಾಯಗಳಿಗೆ, ಬುದ್ಧ ಹಾಗೂ ಆತನ ನಂತರದ ಮತ್ತು ಬಸವಾದಿ ಶರಣರಿಂದ ಸಮಕಾಲೀನ ಭಾರತದ ಗಾಂಧಿ-ಅಂಬೇಡ್ಕರ್ವರೆಗೂ ವಿಸ್ತರಿಸುವ ಚಿಂತನಾ ಧಾರೆಗಳು ಅವಶ್ಯವಾಗಿ ಬೇಕಾಗುತ್ತವೆ. ಡಾ. ಬಿ. ಆರ್. ಅಂಬೇಡ್ಕರ್ ಸಾಂವಿಧಾನಿಕ ಮೌಲ್ಯಗಳ ನೆಲೆಯಲ್ಲಿ ಈ ಶಾಂತಿ-ಸಹಬಾಳ್ವೆಯ ಸಂದೇಶವನ್ನು ದೇಶದ ಆಡಳಿತದ ಒಂದು ಭಾಗವಾಗಿ ಮಾಡಿದ್ದಾರೆ. ಈ ಬೌದ್ಧ ಸಂದೇಶವನ್ನು ಆಡಳಿತಾತ್ಮಕವಾಗಿ ಹಾಗೂ ಸಾಮಾಜಿಕವಾಗಿ, ಸಮಾನತೆ-ಬಂಧುತ್ವ -ಜಾತ್ಯತೀತತೆ (ಸೆಕ್ಯುಲರಿಸಂ) ಮತ್ತು ಶತಮಾನಗಳ ಚರಿತ್ರೆಯುಳ್ಳ ಬಹುತ್ವ ಸಂಸ್ಕೃತಿಯ ನೆಲೆಯಲ್ಲಿ ನಾವು ಪರಾಮರ್ಶಿಸಬೇಕಿದೆ. ಆದರೆ 21ನೇ ಶತಮಾನದ ಮೂರನೇ ದಶಕದಲ್ಲಿ ಭಾರತೀಯ ಸಮಾಜ ಈ ಹಾದಿಯಲ್ಲಿದೆಯೇ ? ಈ ಪ್ರಶ್ನೆಗೆ ನಾವೇ ವಸ್ತುನಿಷ್ಠವಾಗಿ ಉತ್ತರ ಕಂಡುಕೊಳ್ಳಬೇಕಿದೆ.
ಭಾರತದ ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು ಹಾಗೂ ಸಾಮಾಜಿಕ ತಾಣಗಳು ಕಳೆದ ಹಲವು ದಿನಗಳಲ್ಲಿ ಸೃಷ್ಟಿಸಿರುವ ಯುದ್ಧೋನ್ಮಾದ, ಗಡಿಯಲ್ಲಿ ಜೀವ ಪಣಕ್ಕಿಟ್ಟು ಹೋರಾಡಲು ಸಜ್ಜಾಗಿರುವ ಯೋಧರನ್ನೂ ಯೋಚಿಸುವಂತೆ ಮಾಡಿದೆ. ಭಾರತೀಯ ಸೈನ್ಯ ಮತ್ತು ಭಾರತ ಸರ್ಕಾರ ತನ್ನ ಕರ್ತವ್ಯವನ್ನು ನಿಭಾಯಿಸುತ್ತಿದೆ. ಆದರೆ ಟಿವಿ ಮಾಧ್ಯಮಗಳ ಬೇಜವಾಬ್ದಾರಿಯುತ ವರದಿಗಾರಿಕೆ ಸಮಾಜದಲ್ಲಿ ಸೃಷ್ಟಿಸಿರುವ ತಲ್ಲಣ ಮತ್ತು ಸೇಡಿನ ವಾತಾವರಣವನ್ನು ಗಂಭೀರವಾಗಿ ಪರಾಮರ್ಶಿಸಬೇಕಿದೆ. ಭಯೋತ್ಪಾದನೆಯ ವಿರುದ್ಧ ಸಮರದಲ್ಲಿ ಇಡೀ ದೇಶವೇ ಆಳ್ವಿಕೆಯೊಂದಿಗಿದೆ ಎನ್ನಬಹುದಾದರೂ, ಈ ಸನ್ನಿವೇಶದಲ್ಲಿ ತಳಮಟ್ಟದ ಸಮಾಜದಲ್ಲಿ ಸೃಷ್ಟಿಸಲಾಗುತ್ತಿರುವ ಯುದ್ಧೋನ್ಮಾದದ ಹಿಂಸಾತ್ಮಕ ಮನಸ್ಥಿತಿಯನ್ನು ರೂಢಿಸುವ ಪ್ರಯತ್ನಗಳ ವಿರುದ್ಧ ನಾಗರಿಕ ಭಾರತ ಎಚ್ಚರದಿಂದಿರಬೇಕಿದೆ.
ಒಂದು ಕಾಲದ ಭಾರತದಲ್ಲಿ ಯುದ್ಧವನ್ನು ವಿರೋಧಿಸುವುದು ಹೆಮ್ಮೆಯ ವಿಚಾರವಾಗಿತ್ತು. ಪ್ರಧಾನಿ ಮೋದಿಯವರೂ 2022ರ ಒಂದು ಖಾಸಗಿ ಸಮಾರಂಭದಲ್ಲಿ “ ಜಗತ್ತಿಗೆ ಭಾರತ ಬುದ್ಧನನ್ನು ಕೊಟ್ಟಿದೆ ಯುದ್ಧವನ್ನಲ್ಲ ” ಎಂದು ಹೇಳಿದ್ದುದನ್ನು ಸ್ಮರಿಸಬಹುದು. ಆದರೆ ಪ್ರಸ್ತುತ ಸಂದರ್ಭದಲ್ಲಿ ಪಾಕಿಸ್ತಾನದ ದುಸ್ಸಾಹಸ ಮತ್ತು ಭಯೋತ್ಪಾದಕರ ಅಮಾನುಷ ಕ್ರೌರ್ಯ ಭಾರತವನ್ನು ಯುದ್ಧದ ಅಂಚಿಗೆ ದೂಡಿದೆ. ಇಲ್ಲಿ ಗಮನಿಸಬೇಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಟ್ರೋಲ್ ಪಡೆಗಳು ಮತ್ತು ಅಲ್ಲಿ ವ್ಯಕ್ತವಾಗುವ ಯುದ್ಧೋನ್ಮಾನದ ಭಾವನೆಗಳು. ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಜವಾಬ್ದಾರಿಯುತವಾಗಿ, ಕದನ ವಿರಾಮದ ಸುದ್ದಿಯನ್ನು ನೀಡಿದ ವಿಕ್ರಮ್ ಮಿಸ್ರಿ ಮತ್ತು ಅವರ ಕುಟುಂಬದವರನ್ನು, ಪುತ್ರಿ ಹಿಮಾನ್ಷಿಯನ್ನು ಮತ್ತು ಪೆಹಲ್ಗಾಮ್ನಲ್ಲಿ ಹುತಾತ್ಮರಾದ ವ್ಯಕ್ತಿಗಳ ಪತ್ನಿಯರನ್ನು ಈ ಟ್ರೊಲ್ ಪಡೆಗಳು ಅವಹೇಳನ ಮಾಡಿರುವುದು, ಅಪಮಾನಿಸಿರುವುದು, ಮಿಲೆನಿಯಂ ಸಮಾಜದ ನೈತಿಕ ಅವನತಿಯ ಸಂಕೇತವಾಗಿ ಕಾಣುತ್ತದೆ. ಈ ಬೃಹತ್ ಸಂಖ್ಯೆಯ ನವ ತಲೆಮಾರಿನ ಮನಸ್ಸುಗಳು ಯುದ್ಧೋನ್ಮಾದಕ್ಕೊಳಗಾಗಿ, ವಿವೇಚನೆಯನ್ನೂ ಕಳೆದುಕೊಂಡು ಹುತಾತ್ಮ ಯೋಧರ ಸಂತ್ರಸ್ತ ಪತ್ನಿಯರನ್ನು ಕೀಳಾಗಿ ಕಾಣುವ ಮನಸ್ಥಿತಿಗೆ ತಲುಪಿರುವುದಕ್ಕೆ ನಮ್ಮ ದೃಶ್ಯ ಮಾಧ್ಯಮಗಳೂ ಜವಾಬ್ದಾರಿ ಹೊರಬೇಕಿದೆ.
ಸಾಂವಿಧಾನಿಕ ಮೌಲ್ಯಗಳ ನೆಲೆಯಲ್ಲಿ
ಈ ಸಂದಿಗ್ಧ ಸನ್ನಿವೇಶದ ಹೊರತಾಗಿಯೂ, ಭಾರತ ಡಾ. ಬಿ. ಆರ್. ಅಂಬೇಡ್ಕರ್ ಅವರ ಹಾದಿಯಲ್ಲೇ ನಡೆಯುವುದಾದರೆ, ನವ ಭಾರತದಲ್ಲಿ ಬುದ್ಧ ಸ್ಥಾವರ ಬಂದಿಯಾಗಲು ಸಾಧ್ಯವಿಲ್ಲ. ಹಾಗೆಯೇ ಆರಾಧನೆಯ ಮೂರ್ತಿಯೂ ಆಗುವುದು ಅಪೇಕ್ಷಣೀಯವಲ್ಲ. ಆದರೆ ಮಿಲೆನಿಯಂ ಸಮಾಜದಲ್ಲೂ ತಳಮಟ್ಟದ ಸಮಾಜದಲ್ಲಿ ಕಾಣುತ್ತಿರುವ ಅಸ್ಪೃಶ್ಯತೆ, ಅಸಮಾನತೆ ಮತ್ತು ದೌರ್ಜನ್ಯಗಳ ದೃಷ್ಟಿಯಿಂದ ನೋಡಿದಾಗ, ಶೋಷಿತ ಸಮುದಾಯಗಳಿಗೆ ಈ ಆಚರಣೆಗಳು ಒಂದು ಸಾಂತ್ವನದ ನೆಲೆಯಾಗಿ ಕಾಣಬಹುದು. ಹಾಗಾಗಿ ಒಂದು ಹಂತದವರೆಗೆ ಸಹನೀಯವೂ ಆಗಬಹುದು. ಅತಿರೇಕದ ಭಾವಾವೇಶದ ಆರಾಧನಾ ಸಂಸ್ಕೃತಿಯ ಅಪಾಯಗಳ ಬಗ್ಗೆ ಅಂಬೇಡ್ಕರ್ ಪದೇಪದೇ ಎಚ್ಚರಿಸಿದ್ದಾರೆ. ಇದು ಬುದ್ಧನಿಗೂ ಅನ್ವಯಿಸುತ್ತದೆ ಎನ್ನುವುದನ್ನು ಸಮಕಾಲೀನ ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಹಾಗಾಗಿ ವೈಚಾರಿಕ ನೆಲೆಯಲ್ಲಿ, ಆಧುನಿಕ ತಂತ್ರಜ್ಞಾನದ ನಡುವೆ ವೈಜ್ಞಾನಿಕ ಮನೋಭಾವವನ್ನು ಸಾರ್ವತ್ರೀಕರಿಸಬೇಕಾದ ಅನಿವಾರ್ಯತೆಯನ್ನು ನವ ಭಾರತ ಎದುರಿಸುತ್ತಿರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ.
ಕಳೆದ ಹಲವು ದಶಕಗಳ ಸಾಂಸ್ಕೃತಿಕ ರಾಜಕಾರಣ ಮತ್ತು ಮತೀಯವಾದಿ ಸಾಂಘಿಕ ನೆಲೆಗಳು ಸಮಾಜದ ತಳಮಟ್ಟದವರೆಗೂ ವಿಸ್ತರಿಸಿರುವ ದ್ವೇಷಾಸೂಯೆಗಳು ಇಂದು ಮಿಲೆನಿಯಂ ಜನಸಂಖ್ಯೆಯನ್ನು ಮತ್ತು 20ನೇ ಶತಮಾನದ ಉತ್ತರಾರ್ಧದ ಒಂದು ವರ್ಗವನ್ನೂ ಭ್ರಷ್ಟಗೊಳಿಸಿವೆ. ಈ ಬೆಳವಣಿಗೆಯನ್ನು ಪುನಃ ನಿರ್ದಿಷ್ಟ ಮತ-ಧರ್ಮದ ಚೌಕಟ್ಟಿನಲ್ಲಿ ನೋಡುವುದಕ್ಕಿಂತಲೂ, ವಿಶಾಲ ಸಾಮಾಜಿಕ ನೆಲೆಯಲ್ಲಿ ನೋಡಿದಾಗ, ಸಮಾಜಘಾತುಕತೆ ಎನ್ನುವುದು ಭೌತಿಕ ಮಿತಿಗಳನ್ನೂ ದಾಟಿ, ಬೌದ್ಧಿಕ ಚಿಂತನೆಗಳಲ್ಲಿ ನೆಲೆ ಕಂಡುಕೊಂಡಿದೆ. ಹಾಗಾಗಿಯೇ ಹಿಂಸೆ ಮತ್ತು ಕ್ರೌರ್ಯವನ್ನು ಸಹಿಸಿಕೊಳ್ಳುವ ಮನಸ್ಥಿತಿ ಸಮಾಜದ ಉದ್ದಗಲಕ್ಕೂ, ತಳಮಟ್ಟದವರೆಗೂ ವ್ಯಾಪಿಸಿದೆ. ಈ ಮನಸ್ಸುಗಳನ್ನು ತಯಾರಿಸಿದ ಮೇಲ್ವರ್ಗದ ಶಕ್ತಿಗಳು ಇದಕ್ಕೆ ಉತ್ತರದಾಯಿತ್ವ ಹೊರುವುದಿಲ್ಲ. ಆದರೆ ಸಮಕಾಲೀನ ಸಮಾಜ ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ.
ಏಕೆಂದರೆ ಸಮಾಜದ ಒಂದು ವರ್ಗ ತನ್ನ ಜಾತಿ ಶ್ರೇಷ್ಠತೆ ಮತ್ತು ಯಜಮಾನಿಕೆಯ ನೆಲೆಗಳನ್ನು ಮರುಸ್ಥಾಪಿಸಲು ಪ್ರಯತ್ನಿಸುವುದರೊಂದಿಗೇ, ಧಾರ್ಮಿಕ ಚಿಂತನೆಗಳು ಸಮಾಜದ ತಳಮಟ್ಟದ ಕಟ್ಟಕಡೆಯ ವ್ಯಕ್ತಿಯನ್ನೂ ಆವರಿಸಿಕೊಳ್ಳುತ್ತಿದ್ದು, ಜಾತಿ-ಮತಗಳನ್ನು ಮೀರಿ, ಪ್ರಾಚೀನ-ಮಧ್ಯಕಾಲೀನ ಸಮಾಜದ ಜೀವ ವಿರೋಧಿ ಚಿಂತನೆಗಳನ್ನು ಮರುಸ್ಥಾಪಿಸುವುದನ್ನು ಕಾಣುತ್ತಿದ್ದೇವೆ. ಹಾಗಾಗಿಯೇ ಮಹಿಳೆಯರ ಮೇಲಿನ ಅತ್ಯಾಚಾರ-ದೌರ್ಜನ್ಯಗಳು, ಶೋಷಿತ ದಲಿತ ಸಮುದಾಯದ ವಿರುದ್ಧ ಅಸ್ಪೃಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರ, ಬಡತನ ಮತ್ತು ಹಸಿವೆಯನ್ನು ಸ್ವೀಕೃತವಾಗಿಸುವ ಸಾಮಾಜಿಕ-ಆರ್ಥಿಕ ಅಸಮಾನತೆಗಳ ಸಮರ್ಥನೆ ಇವೆಲ್ಲವೂ, ಮುಂದುವರೆದ ಸಮಾಜದಲ್ಲೂ ಗೋಚರಿಸಲಾರಂಭಿಸಿವೆ. ಇದಕ್ಕೆ ಪೂರಕವಾಗಿ ಅವೈಜ್ಞಾನಿಕ ಮೂಢ ನಂಬಿಕೆಗಳು ಮತ್ತು ಮೌಢ್ಯಾಚರಣೆಯ ನೆಲೆಗಳು ಸಮಾಜದ ಉದ್ದಗಲಕ್ಕೂ ವಿಸ್ತರಿಸುತ್ತಿವೆ.
ಮೌಢ್ಯ ಎನ್ನುವ ಬೌದ್ಧಿಕ ಲಕ್ಷಣವನ್ನು ಪುರಾತನ ಶ್ರದ್ಧಾನಂಬಿಕೆಗಳಿಗೆ ಸೀಮಿತಗೊಳಿಸದೆ, ಸಮಕಾಲೀನ ನೆಲೆಯಲ್ಲಿ ನೋಡಿದಾಗ, ರಾಜಕೀಯ-ಆರ್ಥಿಕ ಮೌಢ್ಯವೂ ಸಮಾಜವನ್ನು ನೈತಿಕ ಅಧಃಪತನದತ್ತ ಕೊಂಡೊಯ್ಯುತ್ತಿರುವುದನ್ನು ನಾವು ಗಮನಿಸಬಹುದು. ಈ ನವ ಉದಾರವಾದಿ ಮೌಢ್ಯವೇ ಭಾರತದ ಮೇಲ್ಪದರದ ಸಮಾಜವನ್ನು (Elite Society) ಮತ್ತು ಅದನ್ನು ಪ್ರತಿನಿಧಿಸುವ ಸಾಹಿತ್ಯ-ಸಂಸ್ಕೃತಿ-ಮಾಧ್ಯಮ ಮತ್ತು ಶೈಕ್ಷಣಿಕ ವಲಯವನ್ನು, ಅಸಮಾನತೆಯನ್ನು ಒಪ್ಪಿ ನಡೆಯುವ ಮನಸ್ಥಿತಿಗೆ ದೂಡಿದೆ. ಹಿಂಸೆ ಮತ್ತು ಕ್ರೌರ್ಯವನ್ನು ಜಾತಿ-ಮತ ಮತ್ತು ವರ್ಗ ಅಸ್ಮಿತೆಗಳ ಸಾಪೇಕ್ಷ ನೆಲೆಗಳಲ್ಲಿ ಒಪ್ಪಿಕೊಳ್ಳುವ ಅಥವಾ ಮೌನವಾಗಿ ಸಮ್ಮತಿಸುವ, ರಾಜಕೀಯವಾಗಿ ಸಂಭ್ರಮಿಸುವ ಒಂದು ಮನಸ್ಥಿತಿಯನ್ನು ಈ ವಾತಾವರಣ ಸೃಷ್ಟಿಸಿದ್ದು, ಇದು ಭವಿಷ್ಯ ಭಾರತದ ನಿರ್ಮಾತೃಗಳಾಗಬೇಕಾದ ಮಿಲೆನಿಯಂ ಜನಸಂಖ್ಯೆಯನ್ನು ಬಹುಮಟ್ಟಿಗೆ ಆವರಿಸಿದೆ. ಈ ನೈತಿಕ ಅವನತಿ ಮತ್ತು ಸಾಮಾಜಿಕ ಅಧಃಪತನವನ್ನು ತಡೆಗಟ್ಟುವ ವಿಧಾನಗಳ ಬಗ್ಗೆ, ಪ್ರಜ್ಞಾವಂತ ಸಮಾಜ ಯೋಚಿಸಬೇಕಿದೆ. ನೈತಿಕತೆಯ ಈ ಪಾತಾಳ ಕುಸಿತಕ್ಕೆ ಯಾವ ಜಾತಿ-ಮತ-ಸಮುದಾಯ-ವರ್ಗವೂ ಹೊರತಾಗಿಲ್ಲ ಎನ್ನುವ ಕಟು ಸತ್ಯವನ್ನು ಒಪ್ಪಿಯೇ ಮುನ್ನಡೆಯಬೇಕಿದೆ.
ಕೊನೆಯದಾಗಿ
ಬುದ್ಧನನ್ನು ಶಾಂತಿ-ಸಹನೆ-ಸಹಬಾಳ್ವೆಯ ಚಾರಿತ್ರಿಕ ಹರಿಕಾರನಾಗಿ ಆರಾಧಿಸುವ ಮುನ್ನ ಈ ಹೊಸ ಚಿಂತನೆಗಳು ನಮ್ಮ ನಡುವೆ ಹರಿದಾಡಬೇಕಿದೆ. ವರ್ತಮಾನ ಭಾರತದ ಸಕಲ ಸಮಸ್ಯೆಗಳಿಗೂ ಬುದ್ಧನಲ್ಲಿ ಪರಿಹಾರ ಕಾಣಲಾಗುವುದಿಲ್ಲ ಎನ್ನುವ ವಾಸ್ತವವನ್ನು ಅರಿತೇ, ಎರಡು ಸಹಸ್ರ ವರ್ಷಗಳ ಹಿಂದೆ ಬುದ್ಧ ನೀಡಿದ ಸಂದೇಶಗಳನ್ನು ಸಮಾಜಕ್ಕೆ ರವಾನಿಸಲು ನಾವು ಅಂಬೇಡ್ಕರ್, ಠಾಗೋರ್, ಗಾಂಧಿ, ಪೆರಿಯಾರ್, ಪುಲೆ ಮೊದಲಾದ ಮಹಾನ್ ಚಿಂತಕರನ್ನು ನಮ್ಮ ನಡುವೆ ಸ್ಥಾಪಿಸಿಕೊಂಡು, ಅವರ ವಿಚಾರಧಾರೆಗಳನ್ನು ಅಂತರ್ಗತ ಮಾಡಿಕೊಳ್ಳಬೇಕಿದೆ. ಇದು ಭವಿಷ್ಯ ಭಾರತವನ್ನು ಪ್ರಜಾಸತ್ತಾತ್ಮಕ ಹಾದಿಯಲ್ಲಿ, ಸಮಾನತೆ ಮತ್ತು ಬಹುತ್ವದ ಮಾದರಿಯಲ್ಲಿ, ಸಹಬಾಳ್ವೆ ಮತ್ತು ಸಹಿಷ್ಣುತೆಯ ನೆಲೆಗಳಲ್ಲಿ ಕಟ್ಟಲು ಬಯಸುವ ಪ್ರತಿ ವ್ಯಕ್ತಿ/ಸಂಘಟನೆ/ಸಂಸ್ಥೆಯ ಪ್ರಧಾನ ಆದ್ಯತೆಯಾಗಬೇಕಿದೆ.
ಆಗಲೇ ನಮಗೆ ಬುದ್ಧ ಜಯಂತಿಯನ್ನು ಆಚರಿಸುವ ನೈತಿಕ ಹಕ್ಕು ಇದೆ ಎಂದು ಬೆನ್ನುತಟ್ಟಿಕೊಳ್ಳಬಹುದು.
-೦-೦-೦-