ಸೂತ್ರ ಹರಿದ ಗಾಳಿಪಟವಾಯಿತು ನಮ್ಮ ಜೀವನ  ನೇತ್ರಾವತಿ.ಕೆ.ಬಿ

 “ಯಾಕೆ ಕೊಡಬಾರದು ನಿನ್ನ ಮಗ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಕೊಡುತ್ತಿಯಾ? ಅಂದೆ.

ಸೂತ್ರ ಹರಿದ ಗಾಳಿಪಟವಾಯಿತು ನಮ್ಮ ಜೀವನ                                                                                                                       ನೇತ್ರಾವತಿ.ಕೆ.ಬಿ

ಜೀವದ ಕತೆ


ಕೆ.ಬಿ.ನೇತ್ರಾವತಿ

 


     ಮಧುಗಿರಿಯವಳು ಈ  ಎಲ್ಲ ಘಟನೆಗಳನ್ನೂ ತನ್ನ ಅಡ್ವಾಂಟೇಜ್‌ಗೆ ಬಳಸಿಕೊಂಡು  ನಮ್ಮ  ಮೇಲೆ ದೂರುಗಳನ್ನೇ ಹೇಳಿ ನಂಬಿಸಿ  ನಮ್ಮ ಅಪ್ಪನ ಮೇಲೆ ಪೂರ್ಣ ಹಿಡಿತ ಸಾಧಿಸಿ ಮಾನಸಿಕವಾಗಿ ನಮ್ಮ ಅಪ್ಪ ನಮ್ಮಿಂದ ದೂರವಾಗುವಂತೆ ಮಾಡುವಲ್ಲಿ  ಯಶಸ್ವಿಯಾದಳು.


      ಅಲ್ಲೀವರೆಗೂ ಸಂಬಳವನ್ನ ಪ್ರತಿ ತಿಂಗಳು ಅಮ್ಮನ  ಕೈಗೆ  ಕೊಡುತಿದ್ದ  ಅಪ್ಪ  ತಾನೇ  ತೆಗೆದುಕೊಂಡು  ಹೋಗಿ ಅವಳ ಕೈಗೆ ಕೊಡುವುದು, ನಮಗೆ ಹಣ ಬೇಕಾದಲ್ಲಿ  ಅವಳನ್ನ  ಕೇಳಬೇಕು. ಅಂಥ ಪರಿಸ್ಥಿತಿ ಸೃಷ್ಟಿಯಾಯಿತು. ನಮ್ಮ ಕೈಗೆ ಯಾವುದೇ ಹಣ ಸಿಗುತ್ತಿರಲಿಲ್ಲ. ರೇಷನ್ ಅಂಗಡಿಗೆ ಸಾಲ ಹೇಳಿತ್ತು.   ಓಡಾಟ  ಏನೂ  ಇಲ್ಲ  ಅನ್ನುವಂತೆ  ಯಾವ  ದುಡ್ಡೂ ಕೊಡುತ್ತಿರಲಿಲ್ಲ. ದುಡ್ಡು ಬೇಕೆಂದ್ರೆ ಅವಳನ್ನ ಕೇಳಬೇಕಿತ್ತು, ಹಬ್ಬಗಳಿಗೆ ಬಟ್ಟೆಯನ್ನ ಅವಳು ತೆಗೆದು ನಮ್ಮನ್ನ ಕರೆಯುತ್ತಿದ್ದಳು ನಾವು ಹೋಗಿ ತೆಗೆದುಕೊಂಡು ಬರಬೇಕಿತ್ತು. ಡ್ಯೂಟಿಗೆ ಬಂದಾಗ ನನ್ನ ಬಲವಂತಕ್ಕೆ ದಿನವೂ ಊಟಕ್ಕೆ ಕರೆದಾಗ ಊಟಕ್ಕೆ ಮನೆಗೆ ಬರುತ್ತಿದ್ದ ಅಪ್ಪ ಡ್ಯೂಟಿ ಮುಗಿಸಿ ಮಧುಗಿರಿಗೆ ಹೋಗುತ್ತಿತ್ತು.  ನನ್ನ ಕೆಲಸದ ಹುಡುಕಾಟ ಬೆಂಗಳೂರಿಗೇ ನಿಂತು ಹೋಗಿತ್ತು. ನಮ್ಮ ಅಸ್ತಿತ್ವ ಜೀವಂತವಾಗಿ ಇರುವುದಕ್ಕೆ ನಮ್ಮ ಹೋರಾಟ ನಡೆಯುತ್ತಿತ್ತು.  ಅವಳಿಗೆ ಬೇಕಾಗಿದ್ದದ್ದು ನಮ್ಮ ಅಪ್ಪನ ಹಣ ಆಸ್ತಿಯೇ ಹೊರತು ನಮ್ಮ ಅಪ್ಪನ ಮೇಲೆ ಯಾವ ಪ್ರೀತಿನೂ ಇರಲಿಲ್ಲ. ಇದನ್ನ ನಮ್ಮ ಅಪ್ಪನಿಗೆ ಅರ್ಥ ಮಾಡಿಸುವಲ್ಲಿ   ಈ ಎಲ್ಲಾ  ಘಟನೆಗಳಿಂದಾಗಿ ನಾವು ಸೋತಿದ್ದೆವು. ಅಷ್ಟಕ್ಕೂ  ಆಕೆ ನಮ್ಮ  ಅಪ್ಪನಿಗೆ  ಗಂಟು  ಬಿದ್ದದ್ದು ಆಕೆಯ ಗಂಡ ಲೈನ್ ಮೆನ್ ಸಾವಿನಿಂದ . ಅವಳಿಗೆ ಅನುಕಂಪ  ಆಧಾರಿತ  ನೌಕರಿ  ಕೊಡಿಸಲೆಂದು ಸಂಘದ ಅಧ್ಯಕ್ಷನಾಗಿದ್ದ ನಮ್ಮ ಅಪ್ಪ ಅವರ ಮನೆಗೆ ಎಡತಾಕುತ್ತಿದ್ದ ವೇಳೆ. ಆನಂತರದ್ದು ಇತಿಹಾಸ. ಅಪ್ಪನ ಒಳ್ಳೆತನ ಉರುಫ್ ಪೆದ್ದುತನ  ಜಗಜ್ಜಾಹೀರು  ಹೇಗೆ  ಎಂದರೆ  ಒಮ್ಮೆ  ಒಂದು ದಂಪತಿಗೆ ತಿಪಟೂರಿನಲ್ಲಿ ಇದ್ದಾಗ ಹೋಟೆಲ್ ತೆರೆಯಲೆಂದು  ಬ್ಯಾಂಕಿನಿಂದ  ಸಾಲ ಪಡೆಯಲು ಶೂರಿಟಿ ಹಾಕಿತ್ತು ಅವರು ಎರಡು ದಿನ ಹೋಟೆಲ್ ನಡೆಸಿದಂತೆ  ಮಾಡಿ  ಊರು ಬಿಟ್ಟು ಓಡಿ ಹೋದರು ಬ್ಯಾಂಕ್ ನವರು ನಮ್ಮ ಅಪ್ಪನ ಸಂಬಳದಿಂದ ಆ ದುಡ್ಡು  ಅಟ್ಯಾಚ್  ಮಾಡಿ  ತೀರಿಸಿಕೊಂಡರು  ಸುಮಾರು  ಆರು ಸಾವಿರ  ನಾನಾಗ ೪  ಅಥವಾ  ೫ ನೇ ತರಗತಿ.


      ಈ ರೀತಿ ಊರು ತುಂಬೆಲ್ಲಾ ಹರಡಿದ ವಿಷಯದಿಂದ ನಮ್ಮ ಅಪ್ಪನ ಹತ್ತಿರ ದುಡ್ಡು ಪಡೆದು ವಾಪಸ್ಸು ಕೊಡದವರೇ ಜಾಸ್ತಿ. ಅದೇಕೋ ಚೆಕ್ ಬೌನ್ಸ್ ಕೇಸು ಹಾಕಲು  ಹೋದರೆ ಪೊಲೀಸರೇ  ಅಪ್ಪನ ವಿರುದ್ಧ ಮಾತಾಡಿ ಕಳಿಸುತ್ತಿದ್ದರು. ಬಹುಶಃ ಅಪ್ಪನಿಂದ ಪಡೆದ ಹಣದಲ್ಲಿ ಸ್ವಲ್ಪ ಹಣ ಪೊಲೀಸರಿಗೆ ಖರ್ಚುಮಾಡಿರುತ್ತಿದ್ದರೇನೋ? ಈಕೆಯೂ  ಹಣದ ಹಿಂದೆ ಬಿದ್ದದ್ದು.


    ಇದೇ ಸಂದರ್ಭದಲ್ಲಿ ನಾವು  ಜೀವನ  ನಿರ್ವಹಣೆಗೆ  ಅಮ್ಮನ  ಹೆಸರಲ್ಲಿ  ಇದ್ದ  ಐದು ಎಕರೆ ಹೊಲ ಮಾರಾಟ ಮಾಡಲು ಹೊರಟಾಗ , ತಾತ ನನ್ನ ತಮ್ಮನ ಹೆಸರಿಗೆ ಬರೆಸಿದ್ದ  10  ತೆಂಗಿನ ಗಿಡ ವನ್ನ  ವಾಪಸ್ ಬರೆದು ಕೊಡುವ ತನಕ ರಿಜಿಸ್ಟರ್ ಮಾಡಿಕೊಡಬೇಡಿ ಎಂದು ಸಬ್ ರಿಜಿಸ್ಟ್ರಾರ್ ಅವರಿಗೆ ಶಾಸಕರ ಮೂಲಕ ಒತ್ತಡ ಹಾಕಿ ಬ್ಲಾಕ್ ಮೇಲ್ ಮಾಡಿ ಬರೆಸಿಕೊಂಡರು ಅಮ್ಮನ ತಮ್ಮಂದಿರು..


   ಹೊಲ ಮಾರಿ ಬಂದ ಹಣವನ್ನು ನನಗೆ ಕೊಡು ನಾನು ಸೀರಿಯಲ್ ತೆಗೆದು  ನಿಮ್ಮನ್ನು  ಚೆನ್ನಾಗಿ  ಸಾಕುತ್ತೇನೆ ಅಂತ ನನ್ನ ತಮ್ಮ   ದುಂಬಾಲು ಬಿದ್ದು ೮೦ ಸಾವಿರ ಪಡೆದ, ಸೀರಿಯಲ್ ತೆಗೆದ ,  ಅದು ಲಾಭವೂ ಮಾಡಿತು. ಆದರೆ  ಜಾಹಿರಾತಿನಿಂದ  ಬಂದ  ಹಣವನ್ನ  ವಾಪಸ್ಸು  ನಮಗೆ  ಕೊಡದೆ ಆ ಸೀರಿಯಲ್ ಹೀರೋಯಿನ್ ಮೇಲೆ, ಬೇರೆ  ಬೇರೆ  ಹುಡುಗಿಯರಿಗೆ  ಉಡುಗೊರೆ ಹೋಟೆಲ್  ಅಂತ ಖರ್ಚು ಮಾಡಿ ಮಜಾ ಮಾಡಿದ. ಆತನಿಗೆ ಹಣ ಕೊಟ್ಟಿದ್ದು ನಾನು ಜೀವನದಲ್ಲಿ ಮಾಡಿದ ಮತ್ತೊಂದು  ತಪ್ಪು. ನಾವು ಪುನಃ ಹಣವಿಲ್ಲದವರಾದೆವು. 


    ಯಾರ ಮಾತನ್ನೂ ಕೇಳದೆ ಮದುವೆಯಾಗಿ, ಕೆಲವೇ ದಿನಗಳಲ್ಲಿ ತನ್ನ ತಪ್ಪಿನಿಂದಲೇ  ಹೆಂಡತಿಯನ್ನು ಕಳೆದುಕೊಂಡಿದ್ದ ನನ್ನ ತಮ್ಮ ನಾನು ಆ ಹುಡುಗಿಯನ್ನ ಮರೆಯಬೇಕು, ನಾನು ಬೇರೆ ಮದುವೆಯಾಗಬೇಕು ಅಂತ ತಾನೇ ಹೋಗಿ ಹುಡುಗಿ ನೋಡಿ ಬಂದ. ಅಪ್ಪ “ನಿನಗೂ ಕೆಲಸ ಇಲ್ಲ ಆ ಹುಡುಗಿಗೂ ಕೆಲಸ ಇಲ್ಲ ಬೇಡ ನಿನಗೆ ಕೆಲಸದಲ್ಲಿ  ಇರೋ ಹುಡುಗಿಯನ್ನ ಹುಡುಕಿ ಮದುವೆ ಮಾಡುವೆ” ಅಂದರೂ ಕೇಳಲಿಲ್ಲ. ವಿರೋಧಿಸಿದ ಅಪ್ಪನ ಮೇಲೆ ಡ್ಯೂಟಿ ಮೇಲೆ ಇದ್ದಾಗಲೇ ತಲೆಗೆ ಹೊಡೆದ. ಜ್ಞಾನ ತಪ್ಪಿದ ಅಪ್ಪನನ್ನ ಆಫೀಸ್ ನವರು ಆಸ್ಪತ್ರೆಗೆ ಸೇರಿಸಿದರು. ಅಂದು ಬಂದ್ ಇತ್ತು ನಾವು ಆಸ್ಪತ್ರೆಗೆ ಹೋಗಲು ಸಾಧ್ಯವಾಗಲಿಲ್ಲ. ಮಾರನೆ ದಿನ ಕೂಡ ಬಂದ್ ಇತ್ತು ಟ್ರೈನ್ ಹತ್ತಿ ಆಸ್ಪತ್ರೆಗೆ ಹೋದಾಗ ಅಪ್ಪ ಅಲ್ಲಿ ಇರಲಿಲ್ಲ, ಮಧುಗಿರಿಯವಳು ಬಂದು ಕರೆದುಕೊಂಡು ಹೋಗಿದ್ದಳು ಅಪ್ಪ, ತಮ್ಮನ ಜೊತೆಗೆ ನಮ್ಮೆಲ್ಲರ ಹೆಸರನ್ನೂ ಸೇರಿಸಿ ದೂರು ಕೊಡಲು ಹೋದಾಗ ಎಲ್ಲರೂ ಬೈದು ಆ ಹೆಣ್ಣುಮಕ್ಕಳು ಏನು ಮಾಡಿದಾರೆ ತೆಗೆ ಅವರ ಹೆಸರನ್ನು ಅಂದು ಹೆಸರು ತೆಗೆಸಿದರಂತೆ ಕಡೆಗೆ ಅಪ್ಪ ನನ್ನ ತಮ್ಮನ ಮೇಲೆ ಮಾತ್ರ ದೂರು ಕೊಟ್ಟಿತ್ತು. ಅಂದಿನಿಂದ ನಮ್ಮ ಜೀವನ ಸೂತ್ರ ಹರಿದ ಗಾಳಿಪಟವಾಯಿತು,


    ನನ್ನ ತಮ್ಮ  ಅವನು ನೋಡಿಕೊಂಡು ಬಂದಿದ್ದ ಹುಡುಗಿಯನ್ನೇ ಮದುವೆಯಾದ,   ಅಪ್ಪನಿಗೆ  ಹುಶಾರಿಲ್ಲವೆಂದು ಸುಳ್ಳು  ಹೇಳಿದ್ದ, ಹುಡುಗಿ ಕಡೆಯವರು  ಹೇಳಿದ್ದಂತೆ ಇವನಿಗೆ 40 ಸಾವಿರ ರೂಪಾಯಿ ಕೊಡಲಿಲ್ಲ, ಹುಡುಗಿಗೆ ಅವಳ ಅಪ್ಪನ  ಕೆಲಸ  ಸಿಗಲಿಲ್ಲ,  ಮದುವೆಯನ್ನ  ಛತ್ರದ  ಬದಲಿಗೆ ಧರ್ಮಸ್ಥಳದಲ್ಲಿ ಮಾಡಿಕೊಟ್ಟಿದ್ದರು. ಅತಿ ಆಸೆ ಗತಿ ಕೇಡು ಅಂತ ಅವನ ದುರಾಸೆಗೆ  ಏನೂ ಸಿಕ್ಕಲಿಲ್ಲ, ಆಕೆಯಲ್ಲಿ ಒಳ್ಳೆ ಹೆಂಡತಿಯ ಅಥವಾ ಸೊಸೆಯ ಯಾವ ಗುಣವೂ ಇರಲಿಲ್ಲ, 


     ಅಮ್ಮ , ಮಕ್ಕಳು ಸೇರಿ ಮಗನ ಕೈಯಲ್ಲಿ ಹೊಡೆಸಿದರು ಅಂತ ನಂಬಿಕೊಂಡ ಅಪ್ಪ ನಾವು ವಾಸವಿದ್ದ ನಿಟ್ಟೂರು ಎಂಯುಎಸ್‌ಎಸ್ QUARTERS ನನಗೆ ಬೇಡ ಅಂತ ಬರೆದುಕೊಟ್ಟಿತಂತೆ ಆಫೀಸ್ ನವರು  ಬಂದು QUARTERS ಖಾಲಿ ಮಾಡಿ  ಅಂದರು.   ಸರಿ  ಅಷ್ಟು ಹೊತ್ತಿಗೆ ಪರಿಚಯವಾಗಿದ್ದ ಅಪ್ಪನ ಅಣ್ಣನ ಕಿರಿ ಮಗಳ ಗಂಡ ನಮಗೆ ಗುಬ್ಬಿಯಲ್ಲಿ 400 ರೂ ಬಾಡಿಗೆಗೆ ಮನೆ ನೋಡಿಕೊಟ್ಟರು. ಅರ್ಥಮಾಡಿಕೊಳ್ಳಿ ಇದೆಲ್ಲ ಖುಲಂ ಖುಲ್ಲ ಅಂದರೆ  ಅಪ್ಪನೇ ಮಕ್ಕಳಿಗೆ QUARTERS ಬೇಡ ಅಂತ ಬರೆದುಕೊಟ್ಟರೆ ಅದರರ್ಥ ಅಪ್ಪನಿಗೆ ನಾವು ಬೇಡವಾಗಿದ್ದೇವೆ  ಅಂತ. ನಮ್ಮ ಅಪ್ಪನಿಗೆ ತಾನು  ಸಂಬಂಧ  ಇಟ್ಟುಕೊಂಡಿದ್ದ  ಮಧುಗಿರಿಯವಳು  ಗ್ರೇಟ್ ಆಗಿಬಿಟಿದ್ದಳು.

 
     ನಾವು ಗುಬ್ಬಿಯ ಬಾಡಿಗೆ ಮನೆಗೆ   ಹೋದ  ನಂತರ  ಅಪ್ಪನ  ಅಣ್ಣನ  ಅಳಿಯನ  ಜೊತೆಗೂಡಿ ದುಡ್ಡು ಕೊಡು ಅಂತ ಅಪ್ಪನನ್ನು ಕೇಳಲು ಮಧುಗಿರಿಗೆ ಹೋದೆ. ನಮ್ಮ ಜನಾಂಗದವನೇ ಅಪ್ಪನ ಸ್ನೇಹಿತನ ಅದೇ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದ ಅಲ್ಲಿನ ಸ್ಥಳೀಕ ಕೃಷ್ಣಪ್ಪ ಎಂಬವನ ಜೊತೆ   ಮಧುಗಿರಿಯವಳ  ಮನೆಗೆ ಹೋದೆವು. ಅಲ್ಲಿ ನೋಡಿದರೆ  ಅಪ್ಪನ ಅಣ್ಣ ಅತ್ತಿಗೆ ಅಂದರೆ ನನ್ನ ಜೊತೆ  ಬಂದಿದ್ದ  ಅಣ್ಣನ   ಅತ್ತೆ ಮಾವ  ಅಲ್ಲಿ ಮನೆಯಲ್ಲಿ ಕುಳಿತಿದ್ದರು, ಅವರನ್ನ ನೋಡಿ ಆತ ಆಚೆ ಓಡಿದ. ಅವರನ್ನ ನಾನು ಅದೇ ಮೊದಲ ಬಾರಿ ನೋಡಿದ್ದು ಕಾರಣ ಅಪ್ಪ ಆಸ್ತಿ ವಿಷಯಕ್ಕೆ ಎಲ್ಲ ಅವರಿಗೆ ಬಿಟ್ಟು ಊರು ಬಿಟ್ಟು ಬಂದು ಚಿಕ್ಕ ನಾಯಕನಹಳ್ಳಿಯಲ್ಲಿ ಜಮೀನು ತೆಗೆದುಕೊಂಡು ಸೆಟಲ್ ಆಗಿದ್ದು ನಂತರ  ಎಂದೂ ಆ ಊರಿಗೆ ನಮ್ಮನ್ನು ಕಳಿಸಿರಲಿಲ್ಲ, ತಾನೂ ಹೋಗಿರಲಿಲ್ಲ. ಅವರು ಹೇಳಿದರು “ನೋಡಮ್ಮ ಮನೆಗೆ ಕರೆದುಕೊಂಡು ಹೋಗು ಹುಡುಗರನ್ನ ನೋಡಬೇಕು ಅಂದರೆ ಇಲ್ಲಿಗೆ ಕರೆದುಕೊಂಡು ಬಂದಿದಾನೆ ಅಂತ. ಅಪ್ಪ ಕೇಳಿತು ಏನು ಬಂದಿದ್ದು, ನಾವು ಯಾರೂ ದುಡೀತಿಲ್ಲ ನಾನು ಕೆಲಸಕ್ಕೆ ಸೇರುವವರೆಗಾದರೂ ಸ್ಪಲ್ಪ ದುಡ್ಡು ಕೊಡು” ಅಂದೆ.
“ಯಾಕೆ, ಯಾಕೆ ಕೊಡಲಿ ಊರೆಲ್ಲ ಹಾಳು ಮಾಡಿ ಬಂದಿದೀರಲ್ಲಾ ಹೋಗಿ ಹಾಳಾಗಿ ಹೋಗಿ ನನಗೇನಾಗಬೇಕು” ಅಂತು.


 “ಯಾಕೆ ಕೊಡಬಾರದು ನಿನ್ನ ಮಗ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಕೊಡುತ್ತಿಯಾ? ಅಂದೆ.
“ನಿಮ್ಮ ಅಮ್ಮ ಇದಾಳಲ್ಲ ಅವಳಿಗೆ ಕೇಳು” ಅಂದಾಗ  ನನಗೂ ಕೋಪ ಬಂದು, “ ಹೂಂ, ನೀನಿಲ್ಲಿ ಈ ಸೂಳೆ ಮನೇಲಿ ಇದ್ದುಕೊಂಡು ಇರುವ ದುಡ್ಡೆಲ್ಲಾ ಅವಳಿಗೆ  ಕೊಡುತ್ತಿದ್ದೀಯಲ್ಲಾ ನಾವು ಅಲ್ಲಿ ಅನ್ನ ನೀರಿಲ್ಲದೆ ಸಾಯಬೇಕಾ”  ಅಂತ ಮಾತು ಮುಗಿಸುವ ಮುನ್ನ ಅವಳನ್ನ ʼಸೂಳೆʼ ಅನ್ನುತ್ತೀಯಾ ಅಂತ ಉದ್ದಕ್ಕೆ ಇದ್ದ ನನ್ನ ಕೂದಲನ್ನು ಕೈ ತುಂಬಾ ಸುತ್ತಿಕೊಂಡು ಬಗ್ಗಿಸಿ ಹೊಡೆಯಲಾರಂಭಿಸಿತು. ಅಲ್ಲಿದ್ದವರೆಲ್ಲಾ ಒಟ್ಟಾಗಿ ನನ್ನ ಬಿಡಿಸಿಕೊಂಡು ಆಚೆ ಕರೆದುಕೊಂಡು ಬಂದರು. ಬಹುಶಃ ಅವಳು ಕೂಡ ಅಪ್ಪನ ಹಣ ಆಸ್ತಿ ಎಲ್ಲ ಪಡೆದು, ಕಡೆಗೆ ಬೀದಿ ಪಾಲು ಮಾಡುವಳೆಂದು ಅಪ್ಪನಿಗೆ ಊಹೆ ಇರಲಿಲ್ಲವೇನೋ. ಅವಳೇ  ಸರ್ವಸ್ವ ಎಂದು ನಂಬಿಕೊಂಡಿತ್ತು. ಅವಳು ತನ್ನೊಬ್ಬನೊಂದಿಗೆ ಇದ್ದಾಳೆ ಅಂತ ಅಪ್ಪ ಭಾವಿಸಿತ್ತು ಆದರೆ ಆಕೆಗೆ ನಮ್ಮಪ್ಪ ಅಲ್ಲದೇ ಸುಮಾರು ಜನರ ಜೊತೆ ಇದೇ ಥರದ ಸಂಬಂಧ ಇಟ್ಟುಕೊಂಡಿದ್ದಳು .ಅದನ್ನು ಹೇಳಿದರೆ ಅಪ್ಪ ನಂಬುವ ಸ್ಥಿತಿಯಲ್ಲಿರಲಿಲ್ಲ. 


  ಹಾಗೆಲ್ಲಾ ಯಾಕೆ ಮಾತನಾಡಿದೆ ಅಂತ ನನಗೇ ಬುದ್ಧಿ ಹೇಳಿದರು ಎಲ್ಲರೂ. ಅಲ್ಲಿ ಕೆಇಬಿ ಕ್ವಾರ್ಟಸ್ ಹತ್ತಿರ ಕೃಷ್ಣಪ್ಪನ ಮನೆಗೆ ಹೋಗುವಾಗ ಅವರ  ಮನೆಯ ಮೊದಲ ಮಹಡಿಯಿಂದ ಒಂದು ದಪ್ಪ ಧ್ವನಿ ಕೇಳಿ ಬಂತು  “ಯಾಕೋ ಹಿಂಗೆ ಅವರ ಜೊತೆ ಅಲಿತಿದಿಯಾ” ಅಂತ. (ಆತ ಕೃಷ್ಣಪ್ಪನ ಅಣ್ಣ, ಸುಪ್ರಸಿದ್ಧ ದಲಿತ ಮುಖಂಡ ಅಂತ ಆನಂತರ ನನಗೆ ತಿಳಿಯಿತು)


    “ ಇವರು ಬೈರಪ್ಪನ ಮಗಳು ಹೀಗೆ ದುಡ್ಡು ಕೇಳಲು ಬಂದಿದ್ದರು” ಅಂತ ಹೇಳಿದಾಗ ಆತ ಹೇಳಿದ “ನಿನಗೆ ಮಾಡಕ್ಕೆ ಬೇರೆ ಕೆಲಸ ಇಲ್ಲವಾ, ನಡಿ ಮನೆಗೆ. ಏನಮ್ಮಾ ಇಷ್ಟು ವಯಸ್ಸಾಗಿದೆ ದುಡಿದುಕೊಂಡು ತಿನ್ನುವ ಬದಲು  ಆಯಪ್ಪನ  ಪ್ರಾಣ  ತಿನ್ನಲು  ಬಂದಿದೀಯಾ”  ಅಂತ  ಅಂದಾಗ ಮೊದಲೇ ಅಳುತ್ತಿದ್ದ ನನಗೆ ಏಕೆ ಹೀಗೆ ಈ ಪ್ರಪಂಚ ಎಲ್ಲರೂ ನನಗೆ ಬುದ್ಧಿ ಹೇಳುತ್ತಾರೆ ಅಪ್ಪನನ್ನ ದುಡ್ಡು ಕೊಡು ಅಂತ ಕೇಳುವುದು ತಪ್ಪೇ ಛೇ ಇನ್ನೆಂದು ನಮ್ಮ ಮಾದಿಗ ಜನರ ಸಹವಾಸ ಮಾಡಬಾರದು. ಅವರಿಂದ ಯಾವ ಸಹಾಯ ಪಡೆಯಬಾರದು ನಾಲಾಯಕ್ ಗಳು ಆ ಲಾಯರ್ ಸರಿಯಾಗಿ ಕೇಸ್ ನಡೆಸದೆ  ಐಸೆಕ್‌ನಂತ  ಲಫಂಗಗನನ್ನ  ತಂದು ಗಂಟು  ಹಾಕಿದ, ಇವರೆಲ್ಲ ದಲಿತ ಮುಖಂಡರಂತೆ. ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸದ ಇವರು ಸಮಾಜಕ್ಕೆ ಏನು ನ್ಯಾಯ ಕೊಡಿಸುತ್ತಾರೆ ನಾನು ಮದುವೆ ಆಗುವುದಿಲ್ಲ ಆದರೆ ಖಂಡಿತ ನಮ್ಮ ಮಾದಿಗ ಗಂಡಸರನ್ನ ಮದುವೆಯಾಗುವುದಿಲ್ಲ ಅಂತ ಶಪಥವಾಡಿದೆ. ಕಣ್ಣ ನೀರು ಒರಸಿಕೊಂಡೆ ಅಣ್ಣನ  ಜೊತೆ ಗುಬ್ಬಿ ದಾರಿ ಹಿಡಿದೆ.


     ಆ ಅಣ್ಣ  ಗುಬ್ಬಿಯ ಒಂದು ಖಾಸಗಿ  ಶಾಲೆಯಲ್ಲಿ  1ನೇ ತರಗತಿ ಮಕ್ಕಳಿಗೆ ಕಂಪ್ಯೂಟರ್ ಹೇಳಿ ಕೊಡುವ ಕೆಲಸ ಕೊಡಿಸಿತು.. ಯಾಕೋ ಅವರಿಗೆ ನನ್ನ ಟೀಚಿಂಗ್ ಇಷ್ಟವಾಗಲಿಲ್ಲ.  ಅಲ್ಲಿ ಅದಾಗಲೇ ಇದ್ದ ಒಬ್ಬ ಟೀಚರ್ ಕಲಿಸುವ ರೀತಿ  ನನ್ನ ರೀತಿ  ಬೇರೆ ಇತ್ತು.  ಯಾವ  ಕೆಲಸಕ್ಕೆ  ಸೇರುವುದು ಅಮ್ಮ ಅಕ್ಕನನ್ನ ಹೇಗೆ ಸಾಕುವದು. ನನ್ನ ತಮ್ಮ ಅವನ ಹೆಂಡತಿ ನಮ್ಮ ಜೊತೆಯಲ್ಲೇ ಇದ್ದರೂ ಅವನ  ಅತ್ತೆ ಕೊಟ್ಟ  ದುಡ್ಡಲ್ಲಿ  ಹೊರಗಡೆ ಊಟ  ಸಿನಿಮಾ ಅಂತ  ಹಾಯಾಗಿದ್ದರು.  ಮನೆಯಲ್ಲಿ ರೇಷನ್ ಇದೆಯಾ ಬಾಡಿಗೆ ಕಟ್ಟಬೇಕಾ ಯಾವುದನ್ನು ತಲೆಗೆ ಹಾಕಿಕೊಂಡವರಲ್ಲ.


      ಜೀವನವೇ ಬೇಸರವಾಯಿತು. ಅನ್ನ ನೀರು ಬಿಟ್ಟು ಸಾಯಲೇ ಬೇಕು ಅಂತ ತೀರ್ಮಾನಿಸಿ ಉಪವಾಸ ಮಾಡಲಾರಂಭಿಸಿದೆ. ಎರಡು ದಿನ ಕಳೆಯಿತು. ಅಮ್ಮ ಹೇಳಿ ನೋಡಿತು. ಹೇಗಮ್ಮಾ ಬದುಕುವುದು? ನನ್ನ ಪ್ರಶ್ನೆಗೆ ಅಮ್ಮ ಅಳುವುದ ಬಿಟ್ಟು ಬೇರೇನೂ ಮಾಡಲು ತೋಚಲಿಲ್ಲ. ಅಮ್ಮ ಕಡೆಗೆ ತನ್ನ ಕಸಿನ್‌ನ ಮಗನ  ಮನೆಗೆ (ನಮ್ಮ  ತಾತನ ಮತ್ತೊಬ್ಬ  ಅಣ್ಣನ ಮಗಳ ಮಗ)  ತೆರಳಿ (ಆತ ಕೂಡ ದಲಿತ ಮುಖಂಡ) ಇರುವ ವಿಷಯ ಹೇಳಿತಂತೆ ಆತ ತುಮಕೂರಲ್ಲಿ ಒಂದು ಎನ್‌ಜಿಒ ಇದೆ  ಅಲ್ಲಿ ಕೆಲಸ  ಕೊಡಿಸುವೆ ಮೊದಲು  ಊಟ ಮಾಡು  ಅಂತ ಹೇಳು  ಹೋಗು  ಅಂತ ಅವರೇ ಬೆಳೆದಿದ್ದ ಸ್ವಲ್ಪ ರಾಗಿ ಹುರುಳಿಕಾಳು ಹುಣಸೆ ಹಣ್ಣು ಕೊಟ್ಟು ಕಳಿಸಿತ್ತು. ಏನೋ ಹೊಸ ಆಶಾ ಭಾವನೆ  ಮೂಡಿ  ಎದ್ದು ಕೂತೆ.


     ಮತ್ತೆರಡನೇ ದಿನಕ್ಕೆ ಬಂದು ತುಮಕೂರಿನ ಎನ್‌ಜಿಒದಲ್ಲಿ ಮಾತನಾಡಿದ್ದೀನಿ  ಹೋಗಿ  ಅವರನ್ನ ಕಾಣು ಅಂತ ಅಡ್ರೆಸ್ ಕೊಟ್ಟು  ಹೋಯಿತು.  ಸೋಮವಾರ  ಅಲ್ಲಿಗೆ ಹೋಗಿ  ಅವರನ್ನ ಕಂಡೆ ಅವರು ಪುನಃ ಗುರುವಾರ ಬರುವಂತೆ ಸೂಚಿಸಿದರು. ಗುರುವಾರ ಹೋದೆ, ಪುನಃ ಸೋಮವಾರ ಬರುವಂತೆ ತಿಳಿಸಿ ಅವರು ನನ್ನ ಇಂಟರ್ವ್ಯೂ ಮಾಡಿದರು. ನಂತರ ನನ್ನ ಇಂಜಿನಿಯರ್ ಡಿಗ್ರಿ ಮೇಲೆ ಮೇಲುಸ್ತುವಾರಿ ಜೊತೆಗೆ ಕಂಪ್ಯೂಟರ್ ಕೆಲಸ ಕೂಡ  ಕೊಟ್ಟರು.  ನನ್ನ ಮೇಲುಸ್ತುವಾರಿಯನ್ನ ಅಲ್ಲಿನ ಹಳೆ ತಲೆಗಳು ಒಪ್ಪಿಕೊಳ್ಳದೆ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಅದು ನನಗೆ ತಿಳಿದರೂ ಅವರ ವಿರುದ್ಧ ಗದರಿಸಿ ಮಾತನಾಡುವಷ್ಟು ಶಕ್ತಿ ಮನಸ್ಸಿನಲ್ಲಿ ಇರಲಿಲ್ಲ. ಅದನ್ನೆಲ್ಲ ಗಮನಿಸಿದ ಡೈರೆಕ್ಟರ್ ಸರಿ ನಿನಗೆ ಅವರು ಬಗ್ಗುವುದಿಲ್ಲ ನೀನು ಫುಲ್ ಟೈಮ್ ಕಂಪ್ಯೂಟರ್ ಕೆಲಸ  ಮಾಡು ನನಗೆ  ಪಿಎ ಥರ ಇರು  ಅಂದರು ಅಂತೂ  ಹೊಸ ಜರ್ನಿ ಶುರುವಾಯಿತು. 


     ಅಂತೆಯೇ ಎನ್‌ಜಿಒದಲ್ಲಿ ಕೆಲಸದಲ್ಲಿ ಬ್ಯುಸಿ ಇದ್ದ ನಾನು ಅಪ್ಪನ ರಿಟೈರ್ ಮೆಂಟ್ ಹಣ ಪಡೆಯುವುದನ್ನ ಸ್ವಲ್ಪ ದಿನ ಟ್ರಾಕ್ ಮಾಡಿದೆ. ಎಷ್ಟು ದಿನ ರಜೆ ಹಾಕಿ ಮಧುಗಿರಿಗೆ ಹೋಗುವುದು ಅಥವಾ ಫೋನ್ ಮಾಡುವುದು ಒಂದು ದಿನ ಫೋನ್ ಮಾಡಲಿಲ್ಲ. ಅಂದೇ ಆಕೆ ಅಪ್ಪನ ರಿಟೈರ್ ಮೆಂಟ್ ಹಣವನ್ನು ಆಫೀಸಿನಿಂದ ತೆಗೆಸಿ ಜಾಯಿಂಟ್ ಅಕೌಂಟ್ ನಲ್ಲಿ ಇರಿಸಿಕೊಂಡು  ಮಧುಗಿರಿಯಲ್ಲಿ 30X40 ಅಳತೆಯ 5 ಸೈಟು, 5ಎಕರೆ ಹೊಲ ಅದರಲ್ಲಿ ಬೋರ್ ವೆಲ್, ಮನೆ, 2 ಲಕ್ಷ ಕ್ಯಾಷ್ ಎಲ್ಲ ಪಡೆದಳು.  ನಮಗೆ ಒಂದು ಬಿಡಿಗಾಸೂ ಸೇರದಂತೆ ನೋಡಿ ಕೊಂಡಳು.


    ಎನ್‌ಜಿಒದಲ್ಲಿ ಕೂಡ ನಾನು ಒಳ್ಳೆ ಹೆಸರು ಪಡೆದೆ, ಜೊತೆಗೆ ಗಂಡಸರ ವಿರೋಧಿ ಅನ್ನುವ ಹೆಸರು ಕೂಡ ಪಡೆದೆ?!