ವಕೀಲರ ಸಂಘದ ಅಧ್ಯಕ್ಷರಾಗಿ ಮತ್ತೆ ಕೆಂಪರಾಜಯ್ಯ ರವಿಗೌಡ ಉಪಾಧ್ಯಕ್ಷ, ಮಹೇಶ್ ಪ್ರಧಾನ ಕಾರ್ಯದರ್ಶಿ
ವಕೀಲರ ಸಂಘದ ಚುನಾವಣೆ

‘ಬೆವರ ಹನಿ’
ತುಮಕೂರು: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಹೆಚ್.ಕೆಂಪರಾಜಯ್ಯ ಎರಡನೇ ಅವಧಿಗೂ ಪುನರ್ ಆಯ್ಕೆಯಾದರು. ಸಂಘದ ಅಧ್ಯಕ್ಷರು-ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಿತು. ತಡರಾತ್ರಿ 1 ಗಂಟೆವರೆಗೂ ಮತ ಎಣಿಕೆ ನಡೆದು ಹೆಚ್.ಕೆಂಪರಾಜಯ್ಯನವರು 514 ಮತಗಳನ್ನು ಪಡೆದು 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.
ಇದೇ ವೇಳೆ ಸಂಘದ ಉಪಾಧ್ಯಕ್ಷರಾಗಿ ಎಂ.ಎಲ್.ರವಿಗೌಡ 513 ಮತಗಳನ್ನು ಪಡೆದು ಆಯ್ಕೆಯಾದರು, ಪ್ರಧಾನ ಕಾರ್ಯದರ್ಶಿಯಾಗಿ ಹಿರೇಹಳ್ಳಿ ಮಹೇಶ್ 506 ಮತಗಳನ್ನು ಪಡೆದು ವಿಜೇತರಾದರು, ಜಂಟಿ ಕಾರ್ಯದರ್ಶಿಯಾಗಿ ಟಿ.ಎಂ.ಧನಂಜಯ 477 ಮತಗಳನ್ನು ಪಡೆದು ಜಯ ಗಳಿಸಿದರು. ಖಜಾಂಚಿಯಾಗಿ ಸಿಂಧು.ಬಿ.ಎ. 572 ಮತಗಳನ್ನು ಪಡೆದು ಆಯ್ಕೆಯಾದರು.
ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಗೋವಿಂದರಾಜು.ಪಿ 806 ಮತ, ಡಿ.ಎ.ಜಗದೀಶ್ 894 ಮತ, ಶ್ರೀನಿವಾಸಮೂರ್ತಿ.ಕೆ.ವಿ. 844 ಮತ, ಶ್ರೀನಿವಾಸಮೂರ್ತಿ ವಿ.ಕೆ.622, ಸುರೇಶ್.ಎಸ್.791, ಮಹಿಳಾ ಮೀಸಲು ಸ್ಥಾನಕ್ಕೆ ಪದ್ಮಶ್ರೀ.ಸಿ.ಆರ್.696, ಮತ್ತು ಸೇವಾಪ್ರಿಯ.ಜೆ.ಎಸ್.855 ಮತಗಳನ್ನು ಪಡದು ಆಯ್ಕೆಯಾದರು.
ಫಲಿತಾಂಶದ ಕುರಿತು ನೂತನ ಅಧ್ಯಕ್ಷ ಹೆಚ್.ಕೆಂಪರಾಜಯ್ಯ ಮಾತನಾಡಿ, ವಕೀಲ ಮಿತ್ರರ ಪ್ರೀತಿ, ವಿಶ್ವಾಸ, ನಂಬಿಕೆ, ಬೆಂಬಲದಿಂದ ಈ ಗೆಲುವು ಸಾಧ್ಯವಾಯಿತು. ಹಿಂದಿನ 2 ವರ್ಷದಲ್ಲಿ ನಾವು ಮಾಡಿದ ಉತ್ತಮ ಕೆಲಸಗಳನ್ನು ಗಮನಿಸಿ ನನ್ನನ್ನು 2ನೇ ಬಾರಿ ಆಯ್ಕೆ ಮಾಡಿದ್ದಾರೆ. ಮುಂದೆ ಮಾಡಬೇಕಾದ ಕೆಲಸ ಬಹಳಷ್ಟಿದೆ ಎಂದರು.
ಕೆಂಪರಾಜಯ್ಯ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ಅವರ ಸ್ನೇಹಿತರು ಅಭಿಮಾನಿಗಳು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.