ಬರೀ ನೋವಲ್ಲ, ಖುಷಿಯ ಕ್ಷಣಗಳೂ ಇದ್ದವು.., ನೇತ್ರಾವತಿ.ಕೆಬಿ

ಬರೀ ನೋವಲ್ಲ, ಖುಷಿಯ ಕ್ಷಣಗಳೂ ಇದ್ದವು..,                                                                                                                                                                             ನೇತ್ರಾವತಿ.ಕೆಬಿ

ಜೀವದ ಕತೆ-21

ಕೆ.ಬಿ.ನೇತ್ರಾವತಿ



       ಸುಮಾರು ಐದು ತಿಂಗಳಿಂದ 20 ಕಂತುಗಳಲ್ಲಿ ನನ್ನ ಜೀವನದ ಆಗಿ ಹೋದ ಘಟನೆಗಳನ್ನು ಕುರಿತ ಬರಹಗಳನ್ನು ಓದಿದ್ದೀರಿ. ಒಂದು ಪತ್ರಿಕೆಯಲ್ಲಿ ಪ್ರಕಟವಾಗುವ ಎಲ್ಲ ಬರಹಗಳನ್ನು ಎಲ್ಲರೂ ಓದುವುದಿಲ್ಲ , ಅದೇ ರೀತಿ ನನ್ನ ಪ್ರತಿ ವಾರದ ಎಲ್ಲ ಬರಹಗಳನ್ನು ಎಲ್ಲರೂ ಓದಿಲ್ಲ ಅಂತ ಭಾವಿಸುತ್ತೇನೆ. ಕೆಲವು ವಾರದ ಬರಹಗಳನ್ನು ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆ ಸಂಪಾದಕ ಕುಚ್ಚಂಗಿ ಪ್ರಸನ್ನ ಅವರ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ “ ಇಷ್ಟು ಕಷ್ಟ ಪಟ್ಟು ಏಕೆ ಬದುಕಿದ್ದೀರಾ, ಸಯನೈಡ್ ತೆಗೆದುಕೊಂಡು ಸಾಯಬಾರದಾ” ಎಂಬ ಹೆಡ್ಡಿಂಗ್ ಇದ್ದ ಕಂತನ್ನು ನಾಲ್ಕು ಲಕ್ಷದ ಎಪ್ಪತ್ಮೂರು ಸಾವಿರಕ್ಕೂ ಹೆಚ್ಚು ಮಂದಿ ಓದಿದ್ದಾರೆ  ( ಸ್ಕ್ರೀನ್ ಶಾಟ್ ನೋಡಿ) ಎಂದು ಫೇಸ್ ಬುಕ್ ಇನ್ಸೈಟ್ಸ್ ಹೇಳಿದೆ. ನಿಜಕ್ಕೂ ಇದು ನನಗೆ ಗಾಬರಿ ತಂದಿದೆ. 


    ನಮ್ಮ ಜೀವನದಲ್ಲಿ ನಡೆದ ಘಟನೆಗಳಿಗೆ ತಮ್ಮನ ತಪ್ಪುಗಳು ಎಷ್ಟು ಕಾರಣವೋ ಅದಕ್ಕಿಂತ ಹೆಚ್ಚು ಕಾರಣ ನಮ್ಮ ಜಾತಿ ಮತ್ತು ನಮ್ಮದೇ ಜಾತಿಯ ಜನರು. ಅವರ ಆಸೆಬುರುಕತನ, ಅಸೂಯೆ, ಪೀಡಕತನ ಇವುಗಳನ್ನು ಬಿಟ್ಟು ಸಹಕರಿಸಿದ್ದರೆ ನಮ್ಮ ಜೀವನ ಚೆನ್ನಾಗಿರುತ್ತಿತ್ತು. ತಮಗೆ ಒಳ್ಳೆಯದು ಮಾಡಲು ಸಾಧ್ಯವಾಗದಿದ್ದರೆ ಸುಮ್ಮನಿರಬೇಕೇ ಹೊರತು ಕೆಟ್ಟದ್ದು ಮಾಡಬಾರದು, ನಮ್ಮ ಜೀವನದುದ್ದಕ್ಕೂ ನಡೆದದ್ದು ಇದೇ. ಎಲ್ಲರೂ ಅವರಿಗೆ ಸಾಧ್ಯವಾದಷ್ಟು ಕೆಟ್ಟದ್ದೇ ಮಾಡಿದರು (ಬೆರಳೆಣಿಕೆಯಷ್ಟು ಒಳ್ಳೆ ಮನುಷ್ಯರನ್ನು ಹೊರತುಪಡಿಸಿ) 


    ನಮ್ಮ ಅಮ್ಮನ ತಮ್ಮಂದಿರು ನಾವು ತಿಪಟೂರಿನಲ್ಲಿ ವಾಸಕ್ಕೆ ಹೋದ ಮೇಲೆ ಕಾಡೇನಹಳ್ಳಿಯ ನಮ್ಮ ತೋಟವನ್ನ ಹಾಳು ಬಿಟ್ಟದ್ದು. ಮತ್ತು ನಮ್ಮ ಕಷ್ಟ ಕಾಲದಲ್ಲಿ ನಮ್ಮ ಕೈಹಿಡಿಯದೇ ಇದ್ದದ್ದು. ನನ್ನ ಅಮ್ಮನ ಅಣ್ಣ ಸುಮ್ಮನಿರುವುದು ಬಿಟ್ಟು ತಿಪಟೂರಿನಲ್ಲಿ ಹೌಸಿಂಗ್ ಬೋರ್ಡಿನಿಂದ ನಮಗೆ ಅಲಾಟ್ ಆಗಿದ್ದ , ನಾವು ಕೆಲವು ವರ್ಷ ವಾಸವಿದ್ದು ಬೆಂಗಳೂರಿಗೆ ಶಿಫ್ಟ್ ಆಗಿದ್ದಾಗ , ಖಾಲಿ ಬಿಟ್ಟಿದ್ದ ಆ ನಮ್ಮ ಮನೆಯನ್ನ ಬೇರೆಯವರಿಗೆ ಅಲಾಟ್ ಮಾಡಿಸಿಕೊಟ್ಟದ್ದು, ನಮ್ಮ ನೆಂಟರು ಕ್ಲುಲ್ಲಕ ಕಾರಣಕ್ಕೆ ನಮ್ಮ ಬಾಂಧವ್ಯ ಬೇಡ ಅಂತ ತೀರ್ಮಾನಿಸಿದ್ದು. ಅಪ್ಪನ ಸಹಾಯ ಗುಣವನ್ನ ಎಲ್ಲರೂ ದುಡ್ಡಿನಲ್ಲಿ ಎಕ್ಸ್ ಪ್ಲಾಯಿಟ್ ಮಾಡಲು ನೋಡಿದ್ದು, ಅಪ್ಪ ತನ್ನ ಬುದ್ಧಿಯನ್ನ ಬೇರೆಯವರ ಕೈಗೆ ಕೊಟ್ಟದ್ದು, ಹೀಗೇ ಪಟ್ಟಿ ಮುಂದುವರಿಯುತ್ತೆ. ಅಪ್ಪನ ಅಫೇರ್ ಗಳಲ್ಲಿ ಬಹಳ ಹೆಚ್ಚು ತೊಂದರೆ ಕೊಟ್ಟದ್ದು ಗೌಡರ ಜಾತಿಯ ಮಧುಗಿರಿಯವಳು ಹಾಗೂ ಹುಳಿಯಾರಿನ ಲಂಬಾಣಿ ಹೆಂಗಸರಿಗೆ., ಅವರ ಜಾತಿಯ ಜನ ಅವರ ತಪ್ಪುಗಳಿಗೆ ಕೂಡ ಅವರಿಗೆ ಕೊಟ್ಟಷ್ಟು ಸಹಕಾರವನ್ನು ನಮ್ಮ ಜನ ನಮ್ಮ ಒಳ್ಳೆ ಕೆಲಸಗಳಿಗೆ ಕೊಡಲಿಲ್ಲ. 


    ಇನ್ನು ಅಕ್ಕನನ್ನು ಮದುವೆಯಾಗಿದ್ದ ಐಸೆಕ್‌ನಾತ ನಾವು ವಾಸವಿದ್ದ ಕಡೆಗೆಲ್ಲ ನಮ್ಮ ವಿರುದ್ದ ಇಲ್ಲ ಸಲ್ಲದ್ದನ್ನು ಓಪನ್ ಲೆಟರ್ ಗಳಲ್ಲಿ ಬರೆಯುವುದ ಬಿಟ್ಟು ಅಪ್ಪನ ಜೊತೆ ಬಂದು ಮಾತಾಡಿ ಬಗೆಹರಿಸಿಕೊಳ್ಳಬಹುದಿತ್ತು. ನಮ್ಮ ಅಸಹಾಯಕತೆಯನ್ನು ಕೂಡ ಆತ ತನ್ನ ಪತ್ರಗಳಲ್ಲಿ ಬರೆದು ಅಣಕಿಸುತ್ತಿದ್ದದ್ದು ಇನ್ನಷ್ಟು ಜೀವನವನ್ನು ದುಸ್ತರಮಾಡುತ್ತಿತ್ತು. ಗುಬ್ಬಿ ಆಫೀಸ್ ಹತ್ರ ಅಪ್ಪನ ಸಂಬಳದ ದಿನಕ್ಕಾಗಿ ಕಾಯ್ದು ನಿಲ್ಲುತ್ತಿದ್ದ ಅಮ್ಮ ಅಥವಾ ತಮ್ಮನಿಗೆ ಸಿಗದಂತೆ ಯಾವುದೋ ಮಾಯದಲ್ಲಿ ಸಂಬಳ ಪಡೆದು ಹೋಗಿರುತ್ತಿದ್ದ ಅಪ್ಪನನ್ನ ಹೊಗಳಿ ನಿಮಗೆ ಹಂಗೇ ಆಗಬೇಕು ಅಂತ ಹಂಗಿಸುವುದರಲ್ಲಿ ಯಾವ ನ್ಯಾಯವಿದೆ. ಆತನೇ ಮದುವೆ ಪ್ರಪೋಸಲ್ ಇಟ್ಟು ಹಣಕ್ಕಾಗಿ ಪೀಡಿಸಿ, ಅಕ್ಕನನ್ನ ಮೆಡಿಕಲ್ ಮುಂದುವರಿಸಲು ಕಳಿಸದೆ ಅತಿಯಾಸೆ ಗತಿಕೇಡು ಅಂತ ನಡೆದಾತ ಇಂದು ಸಮಾಜದಲ್ಲಿ ಒಳ್ಳೆ ಮನುಷ್ಯ.


   ನನಗನ್ನಿಸುವಂತೆ ಯಾವ ತಪ್ಪೂ ಮಾಡದ ನಾನು ವಿನಾ ಕಾರಣ ಈ ಎಲ್ಲಾ ಕಷ್ಟಗಳನ್ನೂ ಅನುಭವಿಸಿದೆ. ಎಲ್ಲರೂ ಹೇಳುವುದು ಅಮ್ಮ, ಅಕ್ಕನನ್ನ ಅವರ ಪಾಡಿಗೆ ಬಿಟ್ಟು ನೀನು ಇಂಜಿನಿಯರ್ ಕೆಲಸಕ್ಕೆ ಸೇರಿ ದೂರ ಹೋಗಬೇಕಿತ್ತು ಅಂತ, 


ಆದರೆ ಹಂಗೆ ಮಾಡಲು ಸಾಧ್ಯವೇ? 


    ನನಗಂತೂ ಸರಿ ಅನ್ನಿಸಿಲ್ಲ. ನಿದರ್ಶನಕ್ಕೆ, ಆಗಿನ ಫೇಮಸ್ ಐಟಿ ಕಂಪನಿ ಎನ್ಐಐಟಿ, ಹೈಸ್ಕೂಲಿಗೆ ಕಂಪ್ಯೂಟರ್ ಶಿಕ್ಷಕರು ಬೇಕು ಅಂತ ಕಾಲ್ ಮಾಡಿ ಟೆಸ್ಟ್ ಇಟ್ಟಿತ್ತು ನಾನು ಎನ್ ಜಿಓದಲ್ಲಿ ಕೆಲಸ ಮಾಡುವಾಗ ಇರಲಿ ಅಂತ ಅದನ್ನು ಅಟೆಂಡ್ ಮಾಡಿದ್ದೆ, ಪೂರ್ಣ ಅಂಕ ಪಡೆದಿದ್ದ ನಾನು ಆಗ ಅವರು ಆಫರ್ ಮಾಡಿದ್ದ ತಿಂಗಳಿಗೆ 2500 ಕ್ಕೆ ಆಗಲ್ಲ ಅಂತ ಆ ಕೆಲಸಕ್ಕೆ ಹೋಗಲಿಲ್ಲ. ಆದರೆ ಅವರು ನಿಮ್ಮ ಐಕ್ಯೂ ಚೆನ್ನಾಗಿದೆ, ನೀವು ಕೆಲಸಕ್ಕೆ ಬರಲೇಬೇಕು, ನಿಮಗಾಗಿ 3500 ಸಂಬಳ ಕೊಡುತ್ತೇವೆ ಮತ್ತು ನಿಮ್ಮನ್ನು ಅಮೆರಿಕಾದಲ್ಲಿ ಇರುವ ನಮ್ಮ ಕಂಪನಿಗೆ ಕಳಿಸುವುದು ನಮ್ಮ ಜವಾಬ್ದಾರಿ, ನಾಲ್ಕು ತಿಂಗಳು ಇಲ್ಲಿ ಕೆಲಸ ಮಾಡುತ್ತಿರಿ ಅಂದರು. ಆದರೆ ಎನ್ ಜಿ ಓ ದಲ್ಲಿ ತಿಂಗಳಿಗೆ 4500/- ಪಡೆಯುತ್ತಿದ್ದ ನನಗೆ ಈ ಕೆಲಸ ಒಪ್ಪಿಕೊಂಡರೆ ಮನೆ ಸಂಬಾಳಿಸಲು ಒಂದು ಸಾವಿರದ ಕೊರತೆ ಇತ್ತು. ಅಪ್ಪನಿಗೆ ಫೋನ್ ಕರೆ ಮಾಡಿ ಹೀಗೆ ನಾನಿರುವ ಕೆಲಸ ಬಿಟ್ಟು ಈ ರೀತಿ ಸೇರಿಕೊಳ್ತೇನೆ. ಒಂದಷ್ಟು ತಿಂಗಳು ಒಂದು ಸಾವಿರ ಕೊಡು ಅಂದೆ, ಅಂದು ಅಪ್ಪನ ಮಾತು ಬಹಳ ಕೆಟ್ಟದಾಗಿತ್ತು. ನನ್ನ ಅಮ್ಮ, ಅಕ್ಕನನ್ನ ಜೀವನದ ನಡು ದಾರಿಯಲ್ಲಿ ಬಿಟ್ಟು ಹೋಗಲು ಮನಸ್ಸಿರಲಿಲ್ಲ ಅದಕ್ಕಾಗಿ ಇಂಜಿನಿಯರ್ ಕೆಲಸವನ್ನೇ ಬಿಟ್ಟೆ.


   ನಮ್ಮ ಜೀವನದಲ್ಲಿ ಖುಷಿ ಕ್ಷಣಗಳು ಇರಲೇ ಇಲ್ಲವೇ ಅಂತ ಅಲ್ಲ, ಖಂಡಿತಾ ಇದ್ದವು, ನಾನು ನಮ್ಮ ಜೀವನದ ಆಯ್ದ ಭಾಗಗಳನ್ನಷ್ಟೇ ಹೇಳಿದ್ದೇನೆ, ಇನ್ನೂ ಹಲವು ಕೆಟ್ಟ ಘಟನೆಗಳು, ಖುಷಿ ಕ್ಷಣಗಳೂ ಇವೆ.


    ನಾವು ಕಾಡೇನಹಳ್ಳಿ ತೋಟದಲ್ಲಿ ಇದ್ದಷ್ಟು ದಿನ ಸುಖವಾಗೇ ಇದ್ದೆವು, ತಿಪಟೂರಿಗೆ ಹೋದ ಮೇಲೆ ಕೂಡ ಹಲವಾರು ವರ್ಷ ಸಂತೋಷವಾಗೇ ಇದ್ದೆವು. ಮಾವಿನ ಹಣ್ಣಿನ ಕಾಲದಲ್ಲಿ ಒಂದು ಬುಟ್ಟಿಗೆ 20 ರೂ ಅಂತೆ 2 ರಿಂದ 3 ಬುಟ್ಟಿ ಹಣ್ಣು ಒಟ್ಟಿಗೇ ಕೊಡಿಸುತ್ತಿತ್ತು ಅಪ್ಪ. ಸಿನಿಮಾ ಅಂದರೆ ಬಾಲ್ಕನಿಗೇ ಹೋಗಬೇಕು ಅನ್ನುವ ಷರತ್ತು ಒಳ್ಳೆಯದೇ ಆಗಿತ್ತು. ಸಂಬಳದ ದಿನ ಬಂದರೆ ನಾನಂತೂ ಅಪ್ಪನ ದಾರಿ ಕಾಯುತ್ತಿದ್ದೆ. ಕಾರಣ ಅಪ್ಪ ಆಫೀಸಿನಿಂದ ಸೀದಾ ತಿಪಟೂರಿನ ಜನತಾ ಸ್ವೀಟ್ಸ್ ಗೆ ಹೋಗಿ ಮೈಸೂರು ಪಾಕ್ (ಡ್ರೈ ವೆರೈಟಿ), ಜಿಲೇಬಿ, ಜಾಂಗೀರ್, ಬಾದೂಷಾ, ಖಾರಾ ಮತ್ತು ಹಣ್ಣುಗಳನ್ನು ಬ್ಯಾಗ್ ತುಂಬಾ ಹೊತ್ತು ತರುತ್ತಿತ್ತು. ಹಾಗಂತ ಬೇರೆ ದಿನ ತರುತ್ತಿರಲಿಲ್ಲ ಅಂತಲ್ಲ ಆ ದಿನ ಜಾಸ್ತಿ ತರುತ್ತಿತ್ತು. ಚಪಾತಿ ಜೊತೆಗೆ ಕ್ಯಾರೆಟ್ ತುರಿದು ಅಮ್ಮ ಮಾಡುತ್ತಿದ್ದ ಪಲ್ಯ , ಟೀ ಅಪ್ಪನಿಗೂ ಬಹಳ ಅಚ್ಚು ಮೆಚ್ಚು. 


   ನಾನು ಇಂಜಿನಿಯರಿಂಗ್ ಓದುವಾಗ ಕೇಳಿದ ಎಲ್ಲ ಪುಸ್ತಕ ಕೊಂಡು ತಂದು ಕೊಡುತ್ತಿದ್ದ ಅಪ್ಪ, ನನಗೆ ಪಾಕೆಟ್ ಮನಿ ಅಂತ 2000 ಸಾವಿರ ಕೊಡುತ್ತಿತ್ತು. ಅದೇ ಮುಂದುವರಿದು ಅಪ್ಪ ನನಗೆ ನನ್ನ ಬರ್ತಡೇಗೆ 1000 ಕೊಟ್ಟು ಬಟ್ಟೆ ತಗೋ ಅನ್ನುತ್ತಿತ್ತು (ಇದೆಲ್ಲಾ 1986 ರಿಂದ 1994 ರವರೆಗೆ), ಜೀವನವೆಲ್ಲ ಬಹಳ ಖುಷಿಯಿಂದಲೇ ಇತ್ತು. ಹಾಗೇ ನನಗೆ ಜಿಆರ್ ಇ ಟೋಫೆಲ್ ಬರೆದ ಮೇಲೆ ವಿದೇಶಕ್ಕೆ ಹೋಗಲು ವೀಸಾಗೆ ಬೇಕಾಗುವ ಹಣ ಹೊಂದಿಸುವ ಭರವಸೆ ಕೂಡ ಕೊಟ್ಟಿತ್ತು. 


   ಇವೆಲ್ಲಾ ಮೀರಿ ನಮ್ಮ ಮನೆಯ ಮತ್ತೆರಡು ಮುದ್ದು ಜೀವಗಳು ಪಿಂಕಿ ಮತ್ತು ಬೆಕರ್ ಎಂಬ ಪೊಮೇರಿಯನ್ ಗಳು. ನಮ್ಮ ಸಂತೋಷದ ಕ್ಷಣಗಳಲ್ಲದೆ ಕಷ್ಟದ ದಿನಗಳಲ್ಲಿ ನೋವೆಲ್ಲಾ ಮರೆತು ನಗುವಂತೆ ಮಾಡುತ್ತಿದ್ದವು. ವೆಟ್ ಡಾಕ್ಟರನ ಅವಾಂತರದಿಂದ ಬೆಕರ್ ಸಾವಿನ ದಾರಿ ಹಿಡಿದ, ಆದರೆ ಪಿಂಕಿ ನಾವು ಜೀವನದಲ್ಲಿ ಒಂದು ನೆಲೆ ಕಂಡು ಕೊಂಡ ನಂತರವೂ ನಮ್ಮ ಜೊತೆ ಇದ್ದು ಪೂರ್ಣ ಆಯಸ್ಸು ಮುಗಿಸಿದಳು. ಈ ಬೆಕರ್ ಹೆಸರು ಯಾಕೆ ಎಂದರೆ ಆಗಿನ ನನ್ನ ಇಷ್ಟದ ಟೆನಿಸ್ ಆಟಗಾರರು ಸ್ಟೆಫಿ ಗ್ರಾಫ್ ಮತ್ತು ಬೋರಿಸ್ ಬೆಕರ್, ಅದಕ್ಕಾಗಿ ಅವನಿಗೆ ಬೆಕರ್ ಅಂತ ಹೆಸರು ಇಟ್ಟಿದ್ದೆ (ಅವನನ್ನ 10 ದಿನದ ಮಗುವಿನಿಂದ ತಂದು ಸಾಕಿದ್ದು), ಆದರೆ ಪಿಂಕಿ ನಮ್ಮ ಮನೆಗೆ ಬರುವಾಗಲೇ (ಆಗ ಅವಳಿಗೆ 4 ತಿಂಗಳು) ಅವಳಿಗೆ ಆ ಹೆಸರು ಇಟ್ಟಿದ್ದರು. ಎಲ್ಲರೂ ಕ್ರಿಕೆಟ್ ಅಂತ ಹುಚ್ಚು ಹಿಡಿಸಿಕೊಂಡಿದ್ದ ಕಾಲದಿಂದಲೂ ನಾನು ಟೆನಿಸ್ ಫ್ಯಾನ್, ಇಂದಿಗೂ ಯಾವ ಓಪನ್ ಪಂದ್ಯಗಳನ್ನೂ ಬಿಡದಂತೆ ನೋಡುತ್ತೇನೆ. ಈಗಿನ ಫೇವರಿಟ್ ಗಳಲ್ಲಿ ಎಲ್ಲರೂ ರಿಟೈರ್ ಆಗಿದ್ದಾರೆ, ಫೆಡರರ್, ನಡಾಲ್. ಜೋಕೋವಿಚ್ ಅದೇ ಹಾದಿಯಲ್ಲಿ ಇರುವಂತೆ ಕಾಣುತ್ತೆ. ನಾನು ನಮ್ಮ ಮಗಳನ್ನ ಟೆನಿಸ್ ಪ್ಲೇಯರ್ ಮಾಡಬೇಕು ಇಲ್ಲ ಡಾಕ್ಟರ್ ಮಾಡಬೇಕೆಂದಿದ್ದೆ . ಅವಳ ಅಪ್ಪ ತನ್ನ ಮುದ್ದು ಮಗಳು ಕಷ್ಟ ಪಡುತ್ತಾಳೇನೋ ಅಂತ ಹೆದರಿ ಒಪ್ಪಿಗೆ ಕೊಡಲಿಲ್ಲ. 

OUR KARNATAKA: DR. RAJKUMAR BEST PHOTOS

Ayush Nandurkar | Extracts from Dev Anand's diary. Part 1 Dev Anand talks  about his job in Military- My diary goes back to the days before I became a  film... | InstagramRajesh Khanna | SpotifyFaceOfTheWeek #ManojKumar in Admi (1968). One of the iconic personalities  of #Indian cinema, he is celebrating his birthday today. Manoj Kumar was  honoured with #DadasahebPhalke Award in 2015.Sanjeev Kumar - Highly talented with handsome smile , but couldn't win the  heart of Hema malini , remained a unmarried person , died young at the age  of 47.

     ನನ್ನ ಇಷ್ಟದ ನಟರಲ್ಲಿ ಕನ್ನಡದಲ್ಲಿ ಡಾ.ರಾಜ್ ಕುಮಾರ್, ಸಣ್ಣವಯಸ್ಸಿನಿಂದಲೂ ಹಿಂದಿ ಹಾಡುಗಳನ್ನು ಕೇಳುತ್ತಾ ಬೆಳೆದ ನನಗೆ ಹಿಂದಿಯಲ್ಲಿ 4 ಜನ ನನ್ನ ನೆಚ್ಚಿನ ನಟರು ಯಾರು ಶ್ರೇಷ್ಠ ಅಂತ ಒಂದೊಮ್ಮೆ ಯೋಚಿಸಿದರೂ ಎಲ್ಲರೂ ಸಮಾನವಾಗಿ ನಿಲ್ಲುತ್ತಾರೆ. ದೇವ್ ಆನಂದ್, ರಾಜೇಶ್ ಖನ್ನ, ಮನೋಜ್ ಕುಮಾರ್, ಸಂಜೀವ್ ಕುಮಾರ್. ಇವರ ಸಿನಿಮಾಗಳಲ್ಲಿ ಜೀವನದ ಹಲವು ಬಣ್ಣಗಳು ಚಿತ್ರಣವಾಗುತ್ತಿದ್ದವು ನಮ್ಮ ಜೀವನಕ್ಕೆ ಹತ್ತಿರವಾಗಿರುತ್ತಿದ್ದವು, ಹಾಗೇ ಇವರ ಸಿನಿಮಾಗಳಲ್ಲೇ ಶ್ರೇಷ್ಠ ಹಾಡುಗಳು ಮೂಡಿಬಂದದ್ದು. ಈಗಲೂ ನಾನು ಕೇಳುವ ಪ್ಲೇ ಲಿಸ್ಟ್ ನಲ್ಲಿ ಇವೇ ಹಾಡುಗಳು ತುಂಬಿಕೊಂಡಿವೆ. ಹಿರೋಯಿನ್ ಗಳಲ್ಲಿ ನಮ್ಮ ಕನ್ನಡದವರೇ ಇಷ್ಟ, ಜಯಂತಿ, ಲೀಲಾವತಿ, ಭಾರತಿ, ಆರತಿ, ಮಂಜುಳ.


(ಮುಂದಿನ ʼಕಿನ್ನರಿʼಗೆ)