“ಧೋಬಿ ಕಾ ಕುತ್ತಾ- ನಾ ಘರ್‌ ಕಾ, ನಾ ಘಾಟ್‌ ಕಾ”

90ರ ದಶಕದಲ್ಲೇ ಕಂಪ್ಯೂಟರ್‌ ಸೈನ್ಸ್‌ ನಲ್ಲಿ ಇಂಜಿನಿಯರಿಂಗ್‌ ಮಾಡಿದರೂ ಆ ವೃತ್ತಿಯಲ್ಲಿ ಏಳಿಗೆ ಕಾಣಲಾಗದೇ ಜಸ್ಟ್‌ ಎಸ್‌ ಎಸ್‌ ಎಲ್‌ ಸಿ ಓದಿದ ಲೆಕ್ಕದಲ್ಲಿ ಸೆಕೆಂಡ್‌ ಡಿವಿಷನ್‌ ಕ್ಲರ್ಕ್‌ ಅಗಿ ನರಳಬೇಕಾಗಿ ಬಂದ ನನ್ನ ಜೀವನಕ್ಕೆ ಯಾರು ಹೊಣೆ .

“ಧೋಬಿ ಕಾ ಕುತ್ತಾ- ನಾ ಘರ್‌ ಕಾ, ನಾ ಘಾಟ್‌ ಕಾ”

ಜೀವದ ಕತೆ-20

 

ಕೆ.ಬಿ.ನೇತ್ರಾವತಿ

  

     ನನ್ನ ತಮ್ಮ ಮತ್ತವನ ಎರಡನೇ ಹೆಂಡತಿ ಮನೆಯಲ್ಲಿ ಸದಾ ಕೂತು ತಿನ್ನಬೇಕು, ನಮ್ಮ  ಅಮ್ಮನ ಮೇಲೆ ದಬ್ಬಾಳಿಕೆ ಮಾಡಬೇಕು. ಅವರಿಗೆಂದೇ ರೂಮು ಕೊಟ್ಟಿದ್ದರೂ ನಮ್ಮಗಳ ಮಧ್ಯೆ ಕೂತು ಅಸಹ್ಯವಾಗಿ ನಡೆದುಕೊಳ್ಳುವುದು,  ಆಕೆ ಮನೆ ಕೆಲಸ ಏನೂ ಮಾಡಕೂಡದಂತೆ ? ಅದನ್ನ ಕಂಡು ನಾನು ಅವರನ್ನ ಆಚೆ ಕಳಿಸಿದೆ.

     ಎನ್‌ಜಿಓ ಆಫೀಸ್‌ನಲ್ಲಿ ಅಡ್ವಾನ್ಸ್‌ ಪಡೆದು ಮನೆಗೆ ಬೇಕಾದ ರೇಷನ್‌, ನನಗೆ ಓಡಾಡಲು ಬಸ್‌ ಪಾಸು ಮಾಡಿಸಿಕೊಂಡೆ. ಮೂರು ತಿಂಗಳ ನಂತರ ಮನೆಯನ್ನು ಗುಬ್ಬಿಯಿಂದ ತುಮಕೂರಿಗೆ ಶಿಫ್ಟ್‌ ಮಾಡಿದೆ. ಅಕ್ಕನಿಗೆ ಮೆಡಿಕಲ್‌ ಓದಿಸಲೆಂದು ಬೆಂಗಳೂರಿನಲ್ಲಿ ಹಾಸ್ಟೆಲ್‌ ಗೆ ಸೇರಿಸಿದೆ. ಅಲ್ಲೀವರೆಗೂ ನನ್ನ ತಮ್ಮನನ್ನು ಮದುವೆಯಾಗಿ ಬಿಟ್ಟು ಹೋದ ಅಕ್ಕನ ಗೆಳತಿ ಕಡೆಯವರು ಏನಾದರೊಂದು ನೆಪ ತೆಗೆದು ಅಕ್ಕನಿಗೆ ಮೆಡಿಕಲ್‌ನ ಎಕ್ಸಾಮ್‌ ಕಟ್ಟಲು ಬಿಟ್ಟಿರಲಿಲ್ಲ. ಅವಳು ಆ ಕಾಲೇಜಿನಿಂದ ಎಂಬಿಬಿಎಸ್‌ ಮುಗಿಸಿಕೊಂಡು ಹೋದ ನಂತರ ಸ್ವಲ್ಪ ಮಟ್ಟಿಗೆ ವಾತಾವರಣ ಓಡಾಡುವಂತಾಗಿತ್ತು. ಮನೆ ಹತ್ತಿರ ಹಬ್ಬಿಸಿದ್ದ ಸುಳ್ಳುಗಳನ್ನೇ ಇಲ್ಲೂ ಹಬ್ಬಿಸಿದ್ದರು. ಒಂದು ಕಡೆ ಆ ಐಸೆಕ್‌ನವನು ಮತ್ತೊಂದು ಕಡೆ ಇವಳ  ಕಡೆಯವರ ಕಾಟ. ಅಕ್ಕ  ತನ್ನ ಜೂನಿಯರ್‌ ಗಳು ಮಾಡುವ ಬಾಯಿ ಮಾತಿನ raggingಗೆ ಹೆದರಿ, ಕಾಲೇಜಿಗೆ  ಕಳಿಸಿದ ಒಂದು ತಿಂಗಳಲ್ಲೇ ತುಮಕೂರಿಗೆ ವಾಪಸ್ಸು ಬಂದಳು. ಮೆಡಿಕಲ್‌ ಮುಂದುವರೆಸಲೇ ಇಲ್ಲ. ಹೀಗೆ ಅವಳು ಎಂಬಿಬಿಎಸ್‌ ಪೂರ್ತಿ ಓದಿದ್ದರೂ ಹಿಂದಿನ ವರ್ಷದಲ್ಲಿ ಉಳಿದಿದ್ದ ಪೇಪರ್‌ ಗಳಿಗೆ ಪರೀಕ್ಷೆ ಬರೆಯದ ಕಾರಣ ಡಾಕ್ಟರ್‌ ಆಗಲಿಲ್ಲ,  ನಾನು ಕಂಪ್ಯೂಟರ್‌ ಸೈನ್ಸ್‌ ಇಂಜಿನಿಯರ್‌ ಪದವಿ ಪೂರೈಸಿದ್ದರೂ ಹೈಯರ್‌ ಸ್ಟಡೀಸ್‌ ಮಾಡಲಾಗಲಿಲ್ಲ, ಕಡೇ ಪಕ್ಷ ಸಾಫ್ಟ್‌ವೇರ್‌ ಇಂಜಿನಿಯರ್‌ ಕೂಡಾ ಆಗಲಿಲ್ಲ. ಜಸ್ಟ್‌ ಸೆಕೆಂಡ್‌ ಡಿವಿಷನ್‌ ಕ್ಲರ್ಕ್‌ ಆಗಿಬಿಟ್ಟೆ.

      ಅಷ್ಟರಲ್ಲಿ ನನ್ನ ತಮ್ಮ ಅವನ ಹೆಂಡತಿಯ ಆಸೆಗಳನ್ನ ಪೂರೈಸಲು ಹೋಗಿ ಅಪರಾಧ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ.ಅಷ್ಟು ದಿನ ನಮ್ಮ ಯೋಗ ಕ್ಷೇಮ ವಿಚಾರಿಸದ ನನ್ನ ತಮ್ಮನ ಅತ್ತೆ ನಮ್ಮ ಮನೆ ಹುಡುಕಲು ಇಡೀ ತುಮಕೂರು ಅಲೆದು ಕಡೆಗೂ ನಮ್ಮ ಮನೆ ಹುಡುಕಿ ಬಂದು ಅಮ್ಮನ ಕೈಕಾಲು ಹಿಡಿದಳು, “ ಇದೊಂದು ಬಾರಿ ಬಿಡಿಸಿಕೊಡಿ ನಾನೇ ಅವನನ್ನ ಸಾಕುತ್ತೇನೆ” ಅಂತ. ಅವರಿಗೆ ಒಂಚೂರು ಪಶ್ಚಾತಾಪ ಇರಲಿಲ್ಲ. ಅವರ ಮಗಳಿಂದ ಆತ ಜೈಲು ಸೇರಿದ್ದಾನೆ ಅಂತ ದುಡ್ಡು ಖರ್ಚು ಮಾಡಲು ತಯಾರಿರದೆ ಈಗ ಅಮ್ಮನ ಹತ್ತಿರ ಬಂದು ದುಂಬಾಲು ಬಿದ್ದಿದ್ದರು.

    ನಮ್ಮ ಮನೆಯಲ್ಲೇ ಇರಲು ಬಂದಿದ್ದ ಅಜ್ಜಿಯನ್ನ ಮಗನನ್ನು ಬಿಡಿಸಲು ಓಡಾಡುವ ಸಲುವಾಗಿ ಊರಿಗೆ ಬಿಟ್ಟು ಬಂತು. ಅತ್ತ ಮೂರೇ ದಿನಕ್ಕೆ ಅಜ್ಜಿ ಕಾಲು ಜಾರಿ ಬಿದ್ದು ಸತ್ತು ಹೋಯಿತು. ನಮ್ಮ ಜೊತೆಗೇ ಇದ್ದಿದ್ದರೆ ಇನ್ನೂ ಒಂದಷ್ಟು ವರ್ಷ ಇರುತ್ತಿತ್ತೇನೋ.

    ಅಂತೂ ಅಮ್ಮ ಮಗನ ಪ್ರೀತಿಗೆ ನನಗೆ ಹಗಲು ರಾತ್ರಿ ನಿದ್ದೆ ಕೊಡದೆ ಅವನ ಬಿಡಿಸಲು ದುಡ್ಡು ಕೊಡಲು ಪೀಡಿಸಿತು. ನಾನು ಎನ್‌ಜಿಒ ದಲ್ಲಿ ಇದ್ದ ನಮ್ಮ ಸೇವಿಂಗ್‌ ಫಂಡ್‌ ನಿಂದ ಸಾಲ ಪಡೆದು 10 ಸಾವಿರ ಅಮ್ಮನ ಕೈಗೆ ಕೊಟ್ಟೆ ಅದರಿಂದ ಏನೂ ಪ್ರಯೋಜನ ವಾಗಲಿಲ್ಲ. ಲಾಯರ್‌ ದುಡ್ಡು ನುಂಗಿದ, ಬೇಲ್‌  ಸಿಗಲಿಲ್ಲ. ಕಡೆಗೆ ಮತ್ತೊಬ್ಬ ಲಾಯರ್‌ ಹಿಡಿದು ಅವರಿಗೆ 2000 ದುಡ್ಡು ಕೊಟ್ಟು ಅವನಿಗೆ ಬೇಲ್‌  ಸಿಕ್ಕಿತು. ಅಕ್ಕನ ಡೈವೋರ್ಸ್‌ ಕೇಸ್‌ ಕೂಡ ಆ ವಕೀಲರಿಗೇ  ಕೊಟ್ಟೆವು ಒಂದೇ ಹಿಯರಿಂಗ್‌ ನಲ್ಲಿ ಮುಗಿಸಿಕೊಟ್ಟರು. ಆತನಿಂದ ಯಾವುದೇ ಅಲಿಮನಿ ಏನೂ ಇಲ್ಲದೆ. ಇಂದು ಆತ ಮಹಾನ್‌ ದಲಿತ ಬುದ್ದಿಜೀವಿ ಚಿಂತಕ ಮತ್ತು ಬರಹಗಾರ?!. ಆತ ಅಕ್ಕನನ್ನ ಮೆಡಿಕಲ್‌ ಮುಂದುವರಿಸಲು ಕಳಿಸಿ ಚೆನ್ನಾಗಿ ನೋಡಿಕೊಂಡಿದ್ದರೆ, ಅಥವಾ ಸ್ಯಾಡಿಸ್ಟ್‌ ನಂತೆ  ಓಪನ್‌ ಲೆಟರ್‌ ಗಳನ್ನು ಬರೆದು ನಮ್ಮ ಕುಟುಂಬದ ಎಲ್ಲರ ಮೇಲೆ ಇಲ್ಲದ ಸಲ್ಲದ ಸುಳ್ಳುಗಳನ್ನ ಹೊರಿಸದೆ ಇದ್ದಿದ್ದರೆ ಅಥವಾ ದಲಿತ ಲಾಯರ್‌ ಇವನನ್ನ ನಮಗೆ ಗಂಟು ಹಾಕದೆ ತಾನೇ ಕೇಸ್‌ ಮುಗಿಸಿ ಕೊಟ್ಟಿದ್ದರೆ, ನಮ್ಮ ಜೀವನ ಇದ್ದುದರಲ್ಲಿ ಚೆನ್ನಾಗಿ ಇರುತ್ತಿತ್ತು.

     ಇತ್ತ ಅಪ್ಪ ರಿಟೈರ್‌ ಆದಾಗ,  ಬಂದ ಹಣವನ್ನು ಕುಟುಂಬಕ್ಕೆ ಕೊಡು ಅಂತ  ನಾನು ಹಲವು ಬಾರಿ ನಾನು ಹೋಗಿ ಕೇಳಿದಾಗ ಇನ್ನೂ ದುಡ್ಡು ಪಡೆದಿಲ್ಲ ಅನ್ನುತಿತ್ತು. ನನಗೆ ಎನ್‌ ಜಿ ಒ ದಲ್ಲಿ ಎಷ್ಟು ರಜೆ ಕೊಡುತ್ತಾರೆ. ಒಂದು ದಿನ ಹೋಗಲಿಲ್ಲ ಅದೇ ದಿನ ಅಪ್ಪನ ಅಕೌಂಟ್‌ನಿಂದ ದುಡ್ಡು ತೆಗೆಸಿದ್ದ ಮಧುಗಿರಿಯವಳು ಜಾಯಿಂಟ್‌ ಅಕೌಂಟ್‌ ತೆರೆದು  ಅದರಲ್ಲಿರಿಸಿಕೊಂಡು  ತಾನೂ ಅದೇ ದಿನಾಂಕಕ್ಕೆ ಕೆಜಿಐಡಿ, ಜಿಪಿಎಫ್‌ ಸಾಲ ತೆಗೆದು, ಅದರಿಂದ ಆಸ್ತಿ ಪಡೆದೆ ಎನ್ನುವಂತೆ ಬಿಂಬಿಸಿ ನಮ್ಮ ಅಪ್ಪನ ರಿಟೈರ್‌ ಮೆಂಟ್‌ ಹಣದಲ್ಲಿ  5 ಎಕರೆ ಹೊಲ ಅದರಲ್ಲಿ ಮನೆ ಅದಕ್ಕೆ ಬೋರ್‌ವೆಲ್, ಮಧುಗಿರಿಯಲ್ಲಿ 6 ಸೈಟು, 2 ಲಕ್ಷ ಕ್ಯಾಷ್‌, ಎಲ್ಲ ಪಡೆದು ಅಪ್ಪನನ್ನ ಮನೆಯಿಂದ ಆಚೆ ತಳ್ಳಿದ್ದಳು. ಮಧುಗಿರಿಯವಳ ಹೆಸರಲ್ಲಿದ್ದ ಇದೇ ಆಸ್ತಿಯನ್ನ ನಮಗೆ ಕೊಡಿಸಿಕೊಡಿ ಅಂತ ಲಾಯರ್‌ಗಳ ಸಹಾಯವನ್ನ ನಾ ಕೇಳಲು ಹೋಗಿದ್ದುದು.

     ಅಂತೂ ಮಧುಗಿರಿಯವಳಿಂದ ಆಚೆ ಹಾಕಿಸಿಕೊಂಡ ನಂತರ ಮನೆಗೆ ಬರಲು ಮುಖವಿಲ್ಲದ ಅಪ್ಪ ಹುಳಿಯಾರಿನವಳ ಹತ್ತಿರ ಹೋಗಿ ಪೂರ್ತಿ ಪೆನ್ಷನ್‌ ಅವಳ ಕೈಗೆ ಕೊಟ್ಟು ಛೀ ಥೂ ಅನ್ನಿಸಿಕೊಂಡು ತುತ್ತು ಅನ್ನ ತಿನ್ನುತ್ತಿತ್ತು ನಾನು ಹೋಗಿ ಕರೆದರೆ ಬರಲ್ಲ ಅಂತು. ಆಗ ಪೆನ್ಷನ್‌ ಏನೂ  ಕಡಿಮೆ ಅಲ್ಲ ಸರಿಯಾಗಿ  6 ಸಾವಿರ ರೂಪಾಯಿ(1999).

    2023ರಲ್ಲಿ ಅಪ್ಪ ಸಾಯುವ ಹೊತ್ತಿಗೆ  ಪೆನ್ಷನ್‌ 45 ಸಾವಿರ ದಾಟಿತ್ತು. ಅಷ್ಟೊತ್ತಿಗೆ ಅಮ್ಮ ತೀರಿಕೊಂಡು ಬಿಟ್ಟಿತ್ತು. ಅಪ್ಪ ಸತ್ತಾಗ ಮಣ್ಣು ಮಾಡಲೂ ಬರದ ಅವಳು ಸಾಕಷ್ಟು ಮೊದಲೇ  ತಾನೇ ಅಪ್ಪನ ಹೆಂಡತಿ ಅಂತ ದಾಖಲೆ ಸೃಷ್ಟಿಸಿ ಇಟ್ಟುಕೊಂಡಿದ್ದು  ಅದು ಅಪ್ಪ ಸತ್ತಾಗ ನಮಗೆ ತಿಳಿಯಿತು. ಆ ಥರ ಸೃಷ್ಟಿಸಲು ಆಕೆಗೆ ಸಹಾಯ ಮಾಡಿದ್ದು ಅವರದೇ ಜಾತಿಯ ನ್ಯಾಯಾಧೀಶ, ವಕೀಲ, ಕೆಇಬಿ ಇಂಜಿನಿಯರ್‌, ಎಫ್‌ಡಿಎ ಹೀಗೆ ಎಲ್ಲರೂ ಒಂದು ಕೋಟರಿ ಮಾಡಿಕೊಂಡು ಯಾವುದೇ ಮದುವೆಯ ಫೋಟೋ ಇಲ್ಲದ ಅಪ್ಪನ ಸಹಿಯೇ ಅಲ್ಲದ ರಿಟನ್‌ ಡಾಕ್ಯುಮೆಂಟ್, ಈಗ ಅದರ ಅರ್ಧದಷ್ಟು ಫ್ಯಾಮಿಲಿ ಪೆನ್ಷನ್‌ ಡ್ರಾ ಮಾಡುತ್ತಿದ್ದಾಳೆ. “ಧೋಬಿ ಕಾ ಕುತ್ತಾ ನಾ ಘರ್‌ ಕಾ ನಾ ಘಾಟ್‌ ಕಾ” ಎಂಬ ಗಾದೆಯಂತೆ ಆಗಿ ಹೋಯ್ತು ಅಪ್ಪನ ಬದುಕು. ಆಪ್ಪನ ಈ ನಡವಳಿಕೆಯಿಂದ ನಮ್ಮ ಬದುಕೂ ಹೀಗೆ ದುಸ್ತರವಾಗಿಬಿಟ್ಟಿತು.

     ಅಪ್ಪ ತನ್ನ ಅಫೇರ್‌ಗಳಿಗೆ ಹೇರಳವಾಗಿ ಆಸ್ತಿ  ಮಾಡಿಕೊಟ್ಟಿತ್ತು. ಬೇವಿನಹಳ್ಳಿಯ ಲಿಂಗಾಯಿತ ಹೆಂಗಸು ಗಂಡನಿಗೆ ಗೊತ್ತಿರುವಂತೆಯೇ ಸಂಬಂಧ ಇಟ್ಟುಕೊಂಡಿದ್ದಳು.ಅವಳಿಗೆ ಒಂದು ಹೆಂಚಿನ ಮನೆ, ಅವಳ ಮಗಳ ಮದುವೆ ಖರ್ಚು, ಎರಡೆಳೆ ಚಿನ್ನದ ಸರ ಎಲ್ಲ ಮಾಡಿಸಿಕೊಟ್ಟಿತ್ತು. ಅದೇ ರೀತಿ ಮಧುಗಿರಿಯವಳಿಗೆ , ಇನ್ನು ಹುಳಿಯಾರಿನವಳಿಗೆ ಒಂದು ಹೆಂಚಿನ ಮನೆ, 5 ಎಕರೆ ತೋಟ ಬೆಂಗಳೂರಲ್ಲಿ ಒಂದು ಮನೆ. ಇಷ್ಟೊಂದು ಹಣ ಹೇಗೆ  ಎಂದರೆ ತನ್ನ ಪೆನ್ಷನ್‌ ಮೇಲೆ ಸಾಲ ಮತ್ತು ಚೀಟಿ ಹಾಕಿ ಹಣ ಕೂಡಿಸಿ ಮಾಡಿಕೊಟ್ಟಿತ್ತು.

      ಅದಕ್ಖೂ ಮೊದಲು ಕಾಡೇನಹಳ್ಳಿಯ ತೋಟವನ್ನ ಮಾರಿ ನನ್ನ ತಮ್ಮ ಸಿಟಿ ಬಸ್‌ನಿಂದ ನೇತಾಡಿಕೊಂಡು ಬರುವಾಗ ಬಿದ್ದು ಬಂದ ಅಂತ ಆತನಿಗೆ ಹೀರೋ ಪುಕ್‌ ಕೊಡಿಸಿ ಉಳಿದ ಹಣದಲ್ಲಿ ಸೈಟ್‌ ಮಾಡಿಕೊಳ್ಳುವಂತೆ ತಿಳಿಸಿತ್ತು. ಬೆಂಗಳೂರಿನಲ್ಲಿದ್ದ ನಾವು ಆಗ  ತ್ಯಾಗರಾಜ ನಗರದಲ್ಲಿ 60 ಸಾವಿರಕ್ಕೆ ಸೈಟು ಕೂಡ ನೋಡಿಯಾಗಿತ್ತು. ಕಮ್ಮಿ ಇದ್ದ ಇನ್ನೂ ಹತ್ತು ಸಾವಿರ ನನ್ನ ತಮ್ಮನನ್ನ ಕಳಿಸು ಕೊಡುವೆ ಎಂದು ಹೇಳಿತ್ತು. ಅವರ ಹೋಗಲು ನಿರಾಕರಿಸಿದ. ಅಮ್ಮ ತಾನೂ ಹೋಗಲಿಲ್ಲ. ತಿಂಗಳು ತಿಂಗಳು ಪಾಕೆಟ್‌ ಮನಿಗೆ, ಗಾಡಿ ಪೆಟ್ರೋಲ್‌ ಗೆ ಅಂತ ಅಮ್ಮನ ಪೀಡಿಸಿ ಹೊಡೆದು ಬಡಿದು ದುಡ್ಡು ಪಡೆಯುತ್ತಿದ್ದ ತಮ್ಮನ ವಿರುದ್ಧ ಅಪ್ಪನಿಗೆ ದೂರು ಹೇಳಿದಾಗ ಸಾರಿ ಕೇಳುತ್ತಿದ್ದ. ಅಪ್ಪ ಆ ಕಡೆ ಹೋದ ತಕ್ಷಣ ಮಚ್ಚು ಹಿಡಿದು ನಮ್ಮನ್ನ ಕೊಲೆ ಮಾಡುವ ಮಟ್ಟಕ್ಕೆ ನಿಲ್ಲುತ್ತಿದ್ದ. ಪೊಲೀಸರಿಗೆ ನೀಡಿದ ದೂರು ಕೂಡ ಫಲಿಸಲಿಲ್ಲ. ಹೀಗೆ ಅದರ ಬದಲಿಗೆ ಅವ ಕೇಳಿದಾಗಲೆಲ್ಲ ದುಡ್ಡು ಕೊಟ್ಟ ಅಮ್ಮ, ಆ ದುಡ್ಡು ಹಾಗೇ ಖಾಲಿಯಾಗಿಬಿಟ್ಟಿತು.

     ತಮ್ಮನ ಮೊದಲ  ಮದುವೆ ನಂತರ ಇನ್ನೂ ಹೆಚ್ಚು ಖರ್ಚಾಗಿ, ನನ್ನ ಅಕೌಂಟ್‌ ನಲ್ಲಿದ್ದ ದುಡ್ಡು ಕೂಡ ಅಪ್ಪ ಲಾಯರ್‌ ಫೀಜಿಗಾಗಿ ಪಡೆದುಕೊಂಡು ಬಿಟ್ಟಿತ್ತು.

     ಇನ್ನ ಚಿಕ್ಕನಾಯಕನಹಳ್ಳಿಯಲ್ಲಿ ಪಟ್ಟಣದಲ್ಲಿ ಅಪ್ಪ ದೊಡ್ಡ ಸೈಟಿನಲ್ಲಿ ನಮಗಾಗಿ ಎರಡು ಮನೆ ಕಟ್ಟಿಸಿತ್ತು, ಅದರಲ್ಲಿ 60/40 ಸೈಟು ಇನ್ನೂ ಖಾಲಿ ಇತ್ತು. ನನ್ನ ತಮ್ಮ  ಎರಡನೇ ಮದುವೆ ಮಾಡಿಕೊಂಡ ನಂತರ,  ನಾನು ಎನ್‌ಜಿಒ ದಲ್ಲಿ ಕೆಲಸಕ್ಕೆ ಸೇರಿ ಅವರನ್ನ ಮನೆಯಿಂದ ಆಚೆ ಹಾಕಿದ ನಂತರ  ಅವನು ಹೆಂಡತಿ ಊರಲ್ಲೇ ವಾಸವಿದ್ದರೂ ಆಗಾಗ ಬಂದು ಖರ್ಚಿಗೆ ಕಾಸು ಬೇಕೆಂದು ಚಿನಾಹಳ್ಳಿಯ ನಮ್ಮ ಮನೆಯ ಪಕ್ಕದಲ್ಲೇ ಇದ್ದ  ವೈನ್‌ ಶಾಪ್‌ ನವನ  ಹತ್ತಿರ  ಆಗಾಗ  ದುಡ್ಡು ಪಡೆದು, ಅದು ಕಡೆಗೆ ಮೂರು ಲಕ್ಷದಷ್ಟಾದಾಗ ಅವ ಅಪ್ಪನನ್ನ  ಕರೆದು ನೋಡಿ ನಿಮ್ಮ ಮಗ ಇಷ್ಟು ಸಾಲ ಮಾಡಿದಾನೆ, ನಮಗೆ ದುಡ್ಡು ಕೊಡಿ, ಇಲ್ಲ  ಪಕ್ಕದಲ್ಲೆ ಇರುವ ಮನೆ ಬರೆದು ಕೊಡಿ ಅಂದನಂತೆ. ಮದುವೆಯಾಗಿ ಹೆಂಡತಿ ಊರಲ್ಲಿ ತನ್ನ ಅತ್ತೆಯ ಖರ್ಚಲ್ಲಿ ಸಂಸಾರ ನಡೆಸುತ್ತಿದ್ದಾನೆ ಅಂದರೆ ಅವನು ನಮ್ಮ ಆಸ್ತಿಯನ್ನೇ ನುಂಗಿ ನೀರು ಕುಡಿದಿದ್ದ.

     ಅಪ್ಪ ಹೇಳಿತು “ನೀವು ಹೇಗೂ ಕೆಲಸದಲ್ಲಿದ್ದೀರಿ, ಅವನಿಗೆ ಕೆಲಸ ಇಲ್ಲ. ನಾನು ಮೂರು ಲಕ್ಷ ತಂದು ಕೊಡಲು ಈಗ ಆಗಲ್ಲ,ಅವ ಮಾರಿಕೊಳ್ಳಲಿ ಸಹಿ ಹಾಕಿ ಕೊಡಿ” ಅಂತ. ಅಂತೆಯೇ ನಾವು ಸಹಿ ಹಾಕಿ ಕೊಟ್ಟೆವು(2003). ಅದರ ಮೇಲೆ ಬಂದ ದುಡ್ಡು ತೆಗೆದುಕೊಂಡು ಹೋಗಿ ಹೆಂಡತಿ ಊರಲ್ಲಿ ಅವಳ ಹೆಸರಲ್ಲಿ ಮನೆ ಕಟ್ಟಿಸಿಕೊಂಡ.

    ಅಂತೂ ನಾವು ಯಾವುದೋ ಕಾರಣಗಳಿಗೆ ಯಾವುದೇ ಆಸ್ತಿ ಇರದ ಹಣ ಇರದ ಸ್ಥಿತಿಯಲ್ಲಿ ನಿಂತು ಜೀವನದ ದಾರಿ ಸವೆಸುತ್ತಿದ್ದೆವು.  ಇದರ ಮಧ್ಯೆಯೇ ಅಮ್ಮನಿಗೆ ಕ್ಯಾನ್ಸರ್‌ ಅಂತ ಗೊತ್ತಾದದ್ದು.

     ಹುಳಿಯಾರಿನವಳೇನು ಕಮ್ಮಿಯಲ್ಲ ಅವಳು ಕೂಡ ಮಧುಗಿರಿಯವಳ  ಥರವೇ ತಾನೂ  ನಮ್ಮಗಳ ಮೇಲೆ ಇಲ್ಲ ಸಲ್ಲದ ಘಟನೆಗಳನ್ನ ಹೇಳಿ ಹೇಳಿ ಎತ್ತಿಟ್ಟು ನಮ್ಮ ಮೇಲೆ  ನಮ್ಮ ಅಪ್ಪನ ಸಿಟ್ಟು ಹಾಗೇ ಇರುವಂತೆ ನೋಡಿಕೊಂಡಿದ್ದಳು. ನಮ್ಮ ಅಪ್ಪನ ಸ್ಥಿತಿಗೆ ನಾವೇ ಕಾರಣ ಅಂತ ನಂಬಿಸಿದ್ದಳು. ಆದ್ದರಿಂದಲೇ ಅಮ್ಮನಿಗೆ ಕ್ಯಾನ್ಸರ್‌ ಆದಾಗ ಅಪ್ಪ 10 ಸಾವಿರ ಕೊಟ್ಟು ಕೈತೊಳೆದುಕೊಂಡದ್ದು. ಬಂದು ನೋಡಲು ಕೂಡ ಹೋಗದಂತೆ ಅವಳು ತಡೆದಿದ್ದಳು. ಅಪ್ಪ ಸಾಯುವ ಮುನ್ನವೇ ಫ್ಯಾಮಿಲಿ ಪೆನ್ಷನ್‌ ಪಡೆಯಲು ಎಷ್ಟು ಚೆನ್ನಾಗಿ ಸಂಚು ರೂಪಿಸಿದ್ದಳು ಅಂದರೆ ಕೋರ್ಟಲ್ಲಿ ತಾನು ನಮ್ಮಪ್ಪನ ಎರಡನೇ ಹೆಂಡತಿಯೆಂದೂ, ನಮ್ಮ ಅಪ್ಪ ನಿವೃತ್ತಿ ನಂತರ ಅವಳನ್ನು ಮದುವೆಯಾದರೆಂದೂ. ಈಗ ಇದ್ದಕ್ಕಿದ್ದಂತೆ ಅಪ್ಪ ಅವಳನ್ನ ನೆಗೆಲೆಕ್ಟ್‌ ಮಾಡುತ್ತಿದೆ ಎಂದೂ ಜೀವನ ನಿರ್ವಹಣೆಗೆ ದುಡ್ಡು ಕೊಡಿಸಿಕೊಡುವಂತೆ ಅರ್ಜಿ ಹಾಕಿಬಿಟ್ಟಿದ್ದಳು. ಕೋರ್ಟಿಗೆ ಸಲ್ಲಿಸಿದ್ದ ಅವಳ ಮದುವೆ ಲಗ್ನಪತ್ರಿಕೆಯಲ್ಲಿ ನಮ್ಮ ಅಜ್ಜ, ಅಜ್ಜಿ ಅಂದರೆ ಅಪ್ಪನ ಅಪ್ಪ,ಅಮ್ಮ ಈಗಲೂ ಜೀವಂತ ಇದ್ದಾರೆಂಬಂತೆ ಹೆಸರು ಹಾಕಲಾಗಿತ್ತು. ನಮ್ಮ ಅಜ್ಜಿ ನಾನು ಹುಟ್ಟುವ ಮುನ್ನವೇ ಸತ್ತು ಹೋಗಿತ್ತು, ಅಜ್ಜ  ನಾನು ಒಂದನೇ ತರಗತಿಯಲ್ಲಿದ್ದಾಗ ಸತ್ತು ಹೋಗಿತ್ತು. ಹುಳಿಯಾರಿನಲ್ಲಿ ಮದುವೆ ನಡೆಯಿತು ಅಂತ. ಮದುವೆಯ ಬೇರೆ ಯಾವ ಫೋಟೋನೂ ಸಲ್ಲಿಸಿಲ್ಲ. ಸರಿ ಜಡ್ಜ್‌ ಹಿಯರಿಂಗ್‌ ಡೇಟ್‌ ನೀಡಿದಂತೆ ಅಪ್ಪ ಕೋರ್ಟಗೆ ಹಾಜರಾಗಲು ಸಾಧ್ಯವಿಲ್ಲವೆಂದು ವಕಾಲತ್ತಿನಲ್ಲಿ ಹೇಳಿಕೆ ಸಲ್ಲಿಸಿದಂತೆ ಅದನ್ನು ಕೋರ್ಟ್‌  ಒಪ್ಪಿ ತಿಂಗಳಿಗೆ ಇಷ್ಟು ದುಡ್ಡು ಕೊಡಬೇಕೆಂದು ಆದೇಶ. ಆ ಆದೇಶವನ್ನ ಅಪ್ಪ ಕೆಲಸ ಮಾಡುತ್ತಿದ್ದ ಕೆಪಿಟಿಸಿಎಲ್‌ ಪರಿಗಣಿಸಬೇಕೆಂದು ಕೋರ್ಟ್‌ ಎಲ್ಲೂ ಸೂಚಿಸಿಲ್ಲ. ಆದರೂ ಆದೇಶವನ್ನ ಕೆಪಿಟಿಸಿಎಲ್‌ಗೆ ನಿವೃತ್ತಿ ವೇತನದ ರಿಜಿಸ್ಟರ್‌ ನಲ್ಲಿ ಹೆಂಡತಿ ಅಂತ ನಮೂದು ಮಾಡಿಸಿದ್ದಳು, ಅಮ್ಮನ ಡೆತ್‌ ಸರ್ಟಿಫಿಕೇಟ್‌ ಅನ್ನು ಅಮ್ಮ ಹುಳಿಯಾರಿನಲ್ಲೇ ಸತ್ತದ್ದು ಎನ್ನುವಂತೆ ಅಲ್ಲೇ  ಹುಳಿಯಾರಿನಲ್ಲಿ ಮಾಡಿಸಿಕೊಟ್ಟಿದ್ದಳು. ಆದರೆ ಅಮ್ಮ ಸತ್ತದ್ದು ಬೆಂಗಳೂರಿನಲ್ಲಿ ಅಕ್ಕ ಕೆಲಸದಲ್ಲಿದ್ದ ಬೆಂಗಳೂರು ವಿವಿಯ  ಜ್ಞಾನ ಭಾರತಿ ಕ್ಯಾಂಪಸ್ನ ಕ್ವಾರ್ಟಸ್‌ ಮನೆಯಲ್ಲಿ.  ಹುಳಿಯಾರಿನವಳು ಪಕ್ಕಾ ಫ್ರಾಡ್.‌ ಅಲ್ಲದೇ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿದ್ದ ಸಹಿ ಅಪ್ಪನದೇ ಅಲ್ಲವೇ ಅಲ್ಲ. ಇದೆಲ್ಲ ನನಗೆ ತಿಳಿದದ್ದು ಅಪ್ಪ ಸತ್ತ ನಂತರವೇ.

     ಅಪ್ಪ ಸತ್ತಾಗ, ವಿಷಯ ತಿಳಿದು ಹುಳಿಯಾರಿಗೆ ಹೋಗಿ ಅವಳಿಗೆ ಹೆಣ ಸಿಗಬಾರದು ಎಂದೇ ತೋಟಕ್ಕೆ ತಂದು ಮಣ್ಣು ಮಾಡಿದೆವು. ಆಗ ಹುಳಿಯಾರು, ತಿಪಟೂರಿನ ಕೆಪಿಟಿಸಿಎಲ್‌ ನ ಕಛೇರಿಯಿಂದ ತಿಳಿದ ವಿಷಯಗಳು. ಆಕೆಯ ಹೆಸರು ಅಪ್ಪನ ಪೆನ್ಷನ್‌  ರೆಕಾರ್ಡಿನಲ್ಲಿದೆ ಎಂದು ಒಂದು ಮನವಿ ಕೊಟ್ಟೆ ಇವೆಲ್ಲಾ ಫ್ರಾಡ್‌ ಎಂದು. ಆದರೂ ಕೆಪಿಟಿಸಿಎಲ್‌ ನವರು ಅಷ್ಟು ಸೀರಿಯಸ್ಸಾಗಿ ಇದನ್ನು ಸ್ವೀಕರಿಸಲಿಲ್ಲ. ನಾನೂ ಸುಮ್ಮನಾದೆ ಅಪ್ಪನೇ ಇಲ್ಲದ ಮೇಲೆ , ಆ ದುಡ್ಡಿಗೆ ಹೋರಾಟ ಏಕೆ ಮಾಡಲಿ? ಆಫೀಸಿನ ದುಡ್ಡು ಸುಮ್ಮನೇ ಪೋಲಾಗುವುದ ತಡೆಯಲು ಅವರಿಗೇ ಮನಸ್ಸಿಲ್ಲದ ಮೇಲೆ ? ಅಂತೆಯೇ ಇಷ್ಟೆಲ್ಲಾ ಹುಳಿಯಾರಿನವಳು ಸಾಧಿಸಲು ಕಾರಣ ಒಂದು ಕೋಟ್ರಿ. ಆಕೆ ಅರ್ಜಿ ಸಲ್ಲಿಸಿದ್ದ ನ್ಯಾಯಾಲಯದ ನ್ಯಾಯಾಧೀಶ, ವಕೀಲ, ಕೆಪಿಟಿಸಿಎಲ್‌ ಇಂಜಿನಿಯರ್‌, ಕೇಸ್‌ ವರ್ಕರ್‌  ಗಳು ಎಲ್ಲರೂ ಅವಳ ಜಾತಿಯವರೇ !

    ಅಂತೂ ಅಮ್ಮನ ಅಂತ್ಯ ಅಪ್ಪನ ಅಂತ್ಯ. ಅವರ ಒಳ್ಳೆಯ ಜೀವನದ ಶುಭ ಗುರುತುಗಳು ನಾವು.
ನಮ್ಮ ಜೀವನದ ದುರಂತಗಳಿಗೆ ಯಾರು ಕಾರಣ , ಏನು ಕಾರಣ, ಈ ದೇಶದ ಬಹುಪಾಲು ಜನರು ನಂಬುವ ಕರ್ಮ ಸಿದ್ದಾಂತದ ಭಾಗವಾದ ವಿಧಿ ಬರಹವೇ, ಹಣೆ ಬರಹವೇ. ಹಿಂದಿನ ಜನ್ಮಗಳಲ್ಲಿ ಮಾಡಿದ ಕರ್ಮವೇ, ಅಲ್ಲ ಎನ್ನುವುದಾದರೆ ನಮ್ಮ ಮೇಲು ಕೀಳಿನ ಸಾಮಾಜಿಕ ವ್ಯವಸ್ಥೆಯೇ, ಶ್ರೇಣೀಕೃತ ಜಾತಿ ಪದ್ದತಿಯಲ್ಲಿಅತ್ಯಂತ ಕೀಳೆಂದು  ಪರಿಗಣಿಸಲಾದ ಅಸ್ಫೃಶ್ಯ ಜಾತಿಯಲ್ಲಿ ನಾವು ಹುಟ್ಟಿದ್ದು ಕಾರಣವೇ, ಹುಟ್ಟುವಾಗಲೇ  ಅಪ್ಪನಂತೆ ನಾನು ಕಪ್ಪಗೆ ಇರುವುದು ಕಾರಣವೇ, ಕಷ್ಟಗಳು ಎದುರಾದಾಗ ನಾವು ನೆರವು ಬಯಸಿದ ನಮ್ಮದೇ ಜಾತಿಯ ವಕೀಲರು, ದಲಿತ ನಾಯಕರು ನೆರವಾಗುವ ಬದಲು ನಮ್ಮಿಂದಲೇ ಹಣ ಪಡೆದು ನಮ್ಮನ್ನು ವಂಚಿಸಿದ್ದು ಕಾರಣವೇ, ಹೆಣ್ಣುಗಳ ಹಿಂದೆ ಅಲೆಯುತ್ತಲೇ ಇದ್ದ ನಮ್ಮ ಅಪ್ಪನೇ, ಜೀವನ ಪೂರ್ತಿ ಅಕ್ಕ ಅಂತಲೂ ನೋಡದೇ ವಂಚಿಸಿದ ತಮ್ಮನೇ ಆದರೂ ನಾನವನಿಗೆ ಅವನ 3 ಹೆಣ್ಣು ಮಕ್ಕಳ ಮುಖ ನೋಡಿ ವೈರ್‌ಲೆಸ್‌ ಪೊಲೀಸ್‌ ಕೆಲಸ ಕೊಡಿಸಿದ್ದೆ 2006 ರಲ್ಲಿ. ಆದರೂ ಆತನ ವಂಚನೆ ಬುದ್ಧಿ ಬದಲಾಗಿಲ್ಲ, ಮುಂದಾಗುವ ಅನಾಹುತಗಳನ್ನು ಊಹಿಸಿಕೊಳ್ಳದೇ ಸ್ಯಾಡಿಸ್ಟ್‌ ಜೊತೆ ಮದುವೆಗೆ ಮುಂದಾದ ಅಕ್ಕನೇ, 90ರ ದಶಕದಲ್ಲೇ ಕಂಪ್ಯೂಟರ್‌ ಸೈನ್ಸ್‌ ನಲ್ಲಿ ಇಂಜಿನಿಯರಿಂಗ್‌ ಮಾಡಿದರೂ ಆ ವೃತ್ತಿಯಲ್ಲಿ ಏಳಿಗೆ ಕಾಣಲಾಗದೇ ಜಸ್ಟ್‌ ಎಸ್‌ ಎಸ್‌ ಎಲ್‌ ಸಿ ಓದಿದ ಲೆಕ್ಕದಲ್ಲಿ ಸೆಕೆಂಡ್‌ ಡಿವಿಷನ್‌ ಕ್ಲರ್ಕ್‌ ಅಗಿ ನರಳಬೇಕಾಗಿ ಬಂದ ನನ್ನ ಜೀವನಕ್ಕೆ ಯಾರು ಹೊಣೆ .

*******