ಅದು ಅಂದು ನಾನು ಮಾಡಿದ ಜೀವನದ ಅತ್ಯಂತ ದೊಡ್ಡ ತಪ್ಪು

ಕಳೆದ ವಾರದ ಕಿನ್ನರಿಯಲ್ಲಿ ( ತಮ್ಮ ಮೆಚ್ಚಿ ಮದುವೆಯಾದ ಹುಡುಗಿ ಅವರ ಕುಟುಂಬದವರ ಮಾತು ಕೇಳಿ ಆವರೊಂದಿಗೆ ಹೋಗುವ ಜೊತೆಗೆ ತಮ್ಮನ ಮೇಲೆ ಕ್ರಿಮಿನಲ್ ಕೇಸು ಬೀಳುತ್ತದೆ. ಈ ಪ್ರಕರಣದಲ್ಲಿ ಸಹಾಯ ಮಾಡುವ ನೆಪದಲ್ಲಿ ನಮ್ಮವರೇ ಹಣ ಹೊಡೆಯುತ್ತಾರೆ. ಜೊತೆಗೆ ಅಕ್ಕನನ್ನು ಮದುವೆಯಾಗುವಂತೆ ದುಂಬಾಲು ಬೀಳುತ್ತಾರೆ. )

ಅದು ಅಂದು ನಾನು ಮಾಡಿದ ಜೀವನದ ಅತ್ಯಂತ ದೊಡ್ಡ ತಪ್ಪು

ಜೀವದ ಕತೆ -18

ಕೆ.ಬಿ.ನೇತ್ರಾವತಿ

      ಅಕ್ಕನನ್ನು ಮದುವೆಯಾಗುವುದಾಗಿ ಹೇಳಿದ್ದ ಆತ ತನ್ನ ಕಚೇರಿಗೆ ಹತ್ತಿರವಾಗಿ ನಾಗರಭಾವಿಯಲ್ಲಿ ಖಾಲಿ ಮನೆ ನೋಡಿದ್ದ. ಬನಶಂಕರಿಯ ಮನೆ ಅಡ್ವಾನ್ಸ್ ಪಡೆದು ನಾಗರಭಾವಿ  ಮನೆಗೆ ಅಡ್ವಾನ್ಸ್  ಕೊಟ್ಟು ಅಲ್ಲಿಗೆ ನಡೆದೆವು. ಅಪ್ಪ ದುಡ್ಡು ಕೊಟ್ಟ ನಂತರ ನನ್ನ ಕರ್ತವ್ಯ ಮುಗಿಯಿತು ಅಂತ ಪುನಃ ಬರಲೇ ಇಲ್ಲ. ಇನ್ನ ನನ್ನನ್ನು ಬಿಇಎಂಎಲ್ ಹುಡುಗ ನೋಡಿಯಾಗಿತ್ತು. ಮದುವೆ ದಿನಾಂಕ ಫಿಕ್ಸ್‌ ಮಾಡಲೆಂದು ಮನೆಗೆ ಬಂದ ದಲಿತ ಮುಖಂಡ ದಂಪತಿ ನಮ್ಮ ಮನೆಗೆ ಬಂದಾಗ ಅಕ್ಕನ ಅಸೂಯೆ ಕಂಡು ಹೆದರಿ ಸುಮ್ಮನೆ ಬಂದಿದ್ವಿ ಅಂತ ಹೇಳಿ ಮಾತು ಮುಂದುವರೆಸದೆ ಹೊರಟು ಹೋದರು.ನನ್ನ ಮದುವೆ ಮಾತು ಬಿದ್ದುಹೋಯ್ತು. ಹೀಗೇ ನನ್ನ ಮದುವೆ ಬಿದ್ದು ಹೋದ ಇನ್ನೊಂದು ಘಟನೆ ಅಂದರೆ ನಾನು ನನ್ನ ತಮ್ಮನ ಘಟನೆಯಿಂದಾಗಿ ಬೆಂಗಳೂರು ತೊರೆದು ಮಾಮನ ಮನೆಯಲ್ಲಿ ಇದ್ದಾಗ ಕೆಂಕೆರೆಯ ಒಬ್ಬಾತ ಬಂದು ನೋಡಿ “ನಿಮ್ಮ ಅಕ್ಕನ ಮಗಳು ಇಂಜಿನಿಯರ್, ನಮ್ಮ ಹುಡುಗ ಡಾಕ್ಟರ್ ನಮಗೆ ವರದಕ್ಷಿಣೆ ಏನೂ ಬೇಡ, ಮದುವೆ ಮಾಡಿಕೊಟ್ಟರೆ ಸಾಕು. ಅವರ ಅಪ್ಪ ಅಮ್ಮನನ್ನ ಕೇಳಿ ಮಾತುಕತೆ ಮುಗಿಸುವಾ” ಅಂತ ನನ್ನೆದುರಿಗೆ ಅವರು ಮಾತನಾಡಿದಾಗ, ಮಾಮ ಯಾವ ಮಾತೂ ಆಡದೆ ವಿಷಯಾಂತರ ಮಾಡಿದರು,ಆತ ಮೂರು ಬಾರಿ ವಿಷಯ ಎತ್ತಿದರೂ  ವಿಷಯ ಮುಂದುವರಿಸಲಿಲ್ಲ.  ಮಾಮ ಯಾಕೆ ಹಾಗೆ ಮಾಡಿದರು ಎಂಬುದು ಇಂದಿಗೂ ನನಗೆ ಆಶ್ಚರ್ಯ. ಮದುವೆ ಮಾತಿಗೆ ಬಂದಿದ್ದಾತ ಮತ್ತೆ ಮಾತು ಮುಂದುವರೆಸಲು ಕಾರಣ ಇಲ್ಲದೆ ಆತ ಎದ್ದು ಹೋದರು.

ಐಸೆಕ್‌ನಾತ ಅಕ್ಕನನ್ನು   ಮದುವೆಯಾಗುವ ಬಗ್ಗೆ ಪುನಃ ಪ್ರಪೋಸ್ ಮಾಡಿದಾಗ ಆಕೆ ತಕ್ಷಣವೇ ಒಪ್ಪಿಕೊಂಡಿದ್ದಳು. ನಾನು ಹೇಳಿದೆ “ಆತುರಪಡಬೇಡ” ಅಂದರೆ ಅವಳು “ಅಂದು ನಮ್ಮಪ್ಪ ನನ್ನ ಕೊಚ್ಚಿಹಾಕುತ್ತೇನೆ ಅಂತ ಮಚ್ಚು ಹಿಡಿದು ಬಂದಾಗ ನೀನೆಲ್ಲಿದ್ದೆ, ನನಗಾದ ಅವಮಾನ ನನಗೆ ಗೊತ್ತು ನಮ್ಮಪ್ಪನಿಂದ ನಾನು ದೂರಹೋಗಬೇಕಷ್ಟೆ ನಾನು ಮದುವೆ ಯಾಗೇ ಆಗುತ್ತೇನೆ ಅಪ್ಪನಿಗೆ ಹೇಳೀ ನೀನೇ ಒಪ್ಪಿಸು”  ಅಂದಳು. ಜೊತೆಗೆ ಅಕ್ಕನ ಜೊತೆ ಎಂಗೇಜ್ ಮೆಂಟ್ ಆದ ಮೇಲೆ ಕೇಸನ್ನು  ಬಿ ರಿಪೋರ್ಟ್‌  ಮಾಡಿಸುವೆ ಅಂತ ಬೇರೆ ಹೇಳಿ ಹೆದರಿಸಿದ್ದ.

     ಅಪ್ಪ ನನ್ನ ಅಭಿಪ್ರಾಯ ಕೇಳಿತು, “ಏನವ್ವ ಆತನನ್ನ ಮದುವೆಯಾಗುವೆ ಅನ್ನುತ್ತಾಳೆ ಆತ ಎಂಥವನೋ ಗೊತ್ತಿಲ್ಲ ಅಂತು, “ಅಪ್ಪ ಅವಳು ಒಪ್ಪಿದ್ದಾಳೆ ನಿನ್ನ ಒಪ್ಪಿಸು ಅಂದಳು, ಅವಳಿಷ್ಟ ಒಪ್ಪಿಕೋ” ಅಂದೆ. ಅದು ಅಂದು ನಾನು ಮಾಡಿದ ಜೀವನದ ಅತ್ಯಂತ ದೊಡ್ಡ ತಪ್ಪು ಅಂದು ನಾನು ಅಪ್ಪನಿಗೆ ಆ ಮಾತು ಹೇಳಿರದಿದ್ದರೆ ಅಪ್ಪ ಆ ಮದುವೆಗೆ ಒಪ್ಪುತ್ತಿರಲಿಲ್ಲ ಸ್ವಲ್ಪನಾದರೂ ನಮ್ಮ ಜೀವನ ಸಹ್ಯವಾಗಿರುತ್ತಿತ್ತು. ಅಂತೆಯೇ ಎಂಗೇಜ್ಮೆಂಟ್ ಆಯಿತು. ನನ್ನ ತಮ್ಮನ  ಕೇಸ್ ಬಿ ರಿಪೋರ್ಟೂ ಆಯಿತು. ಮೈಸೂರಿನಲ್ಲಿ ಮದುವೆ ಅಂತ ತೀರ್ಮಾನ ಆಯಿತು. ನಾವೆಲ್ಲ ಮದುವೆಗೆಂದು ಹೊರಟಾಗ ಅಪ್ಪ ತಾನು ನೇರವಾಗಿ ದುಡ್ಡು ತೆಗೆದುಕೊಂಡು ಮೈಸೂರಿನ ಛತ್ರಕ್ಕೆ ಬರುವುದಾಗಿ ತಿಳಿಸಿತ್ತು ಅಂತೆಯೇ ನಾವು ಟಿಟಿ ಮಾಡಿಕೊಂಡು ಮೈಸೂರಿಗೆ ಹೊರಟೆವು, ನಾವು ಛತ್ರಕ್ಕೆ ತಲುಪಿದ ತಕ್ಷಣ ತಿಳಿದ ವಿಷಯ ಅಪ್ಪ ನಾವು ಅಲ್ಲಿಗೆ ತಲುಪುವ ಮುನ್ನವೇ ಮೈಸೂರಿಗೆ ಬಂದು ಹೋಟೆಲ್ನಲ್ಲಿ ತಂಗಿತ್ತೆಂದೂ, ದುಡ್ಡಿನೊಂದಿಗೆ ಛತ್ರಕ್ಕೆ ಬಂದಿತ್ತೆಂದೂ, ಮದುವೆ ಗಂಡು ಅಪ್ಪನನ್ನ “ಏನೋ ಈಗ ಬಂದ್ಯಾ ಹೋಗು ಅಲ್ಲಿ ಸೌದೆ ಇದೆ ಎತ್ತಿ ಹಾಕೋಗು” ಅಂತ ಗೇಲಿ ಅಂದನಂತೆ.

    ಅದಕ್ಕೆ ಅಪ್ಪ ಯಾಕೋ ಹಾಗೆ ಮಾತನಾಡುತ್ತೀ ಸ್ವಲ್ಪ ನಾಲಗೆ ನೆಟ್ಟಗೆ ಇಟ್ಟುಕೋ” ಅಂದರೆ “ನಿನ್ನಂಥವನಿಗೇನು ಗೌರವ ಕೊಡುವುದು” ಅಂದನಂತೆ. ಇದರಿಂದ ಅಪ್ಪ ಸಿಟ್ಟಿನಿಂದ ಹೊರಟುಹೋಯಿತಂತೆ. ಮದುವೆ ಗಂಡಿನ ಆ ನಡವಳಿಕೆ ನನಗೆ ಇಂದಿಗೂ ಅರ್ಥವಾಗಿಲ್ಲ. ಆದರೆ ನಮಗೆ ಟಿಟಿಗೆ ದುಡ್ಡು ಕೊಡಲು ಇರಲಿಲ್ಲ. ಅಪ್ಪ ಅಲ್ಲಿ ಬಂದಿರುತ್ತೆ ಅಂತ ನಾವು ಟಿಟಿ ಮಾಡಿಕೊಂಡು ಬಂದಿದ್ದೆವು. ಹೇಗೆ ದುಡ್ಡು ಕೊಡುವುದು. ಅಕ್ಕ  , “ನೀವು ಹೀಗೇಕೆ ಬೈದಿರಿ ಅಪ್ಪನನ್ನ ಈಗ ನಮ್ಮ ಹತ್ತಿರ ದುಡ್ಡಿಲ್ಲ ನೀವೆ ಟಿಟಿಗೆ ದುಡ್ಡು ಕೊಡಿ” ಅಂತ ಆತನನ್ನು ಕೇಳಿದಳು. ಆತನೇ ದುಡ್ಡು ಕೊಟ್ಟ ಅಕ್ಕ  ಮದುವೆ ಬಗ್ಗೆ ಪುನಃ ಯೋಚನೆ ಮಾಡುವೆ ಅಂದಳು ಆತನ ಸ್ನೇಹಿತರೆಲ್ಲ ಸೇರಿ ನೋಡಿ ಅವನೇನೋ ಟೆನ್ಷನ್‌ ನಲ್ಲಿ ಹಾಗಂದಿದ್ದಾನೆ. ಅವ ಅಂಥವನಲ್ಲ ದಯವಿಟ್ಟು ಮದುವೆ ನಿಲ್ಲಿಸಿ ಹೋಗಬೇಡಿ ಅಂತ 7-8 ಜನ ಅವಳನ್ನ ಬೇಡಿಕೊಂಡರು. ಅವಳು ನನ್ನ ಹತ್ತಿರ ಹೇಳಿದಳು “ಸರಿ ಕಣೆ ಮದುವೆಯಾಗ್ತೀನಿ, ಆತನಿಂದ ಮುಂದೆಯೂ ಹೀಗೇ ತೊಂದರೆ ಆದರೆ ಡೈವೋರ್ಸ್‌  ತಗೋತೀನಿ” ಅಂತ. ಯಾರಿಗೆ ಬುದ್ಧಿ ಹೇಳುವುದು ಅವಳ ಮಾತು ನನಗೆ ಸರಿ ಕಾಣಿಸಲಿಲ್ಲ . ಆದರೆ ನಮ್ಮ ನೆಂಟರು ಕೂಡ ಎಲ್ಲರೂ ಮದುವೆಗೆ ಬಂದಿದ್ದಾಗಿತ್ತು.  ನಾನು ಏನು ಹೇಳಲೂ  ತೋಚದೆ ಸ್ಥಿತಪ್ರಜ್ಞಳಾಗಿದ್ದೆ. ಆಗುವುದನ್ನೆಲ್ಲ ಸುಮ್ಮನೆ ನೋಡುತ್ತಿದ್ದ ನನ್ನ ತಲೆ ಸುಮ್ಮನೆ ತಿರುಗುತ್ತಿತ್ತು, ಎಲ್ಲವೂ ಅಸ್ಪಷ್ಟ ಅನ್ನಿಸುತ್ತಿತ್ತು ಯಾವುದೋ ಕೆಟ್ಟ ಕನಸು ನನ್ನ ಸುತ್ತ ನಡೆಯುತ್ತಿದೆ ಅನಿಸುತ್ತಿತ್ತು ಮದುವೆ ಮುಗಿಯಿತು ಅಜ್ಜಿ ಹೇಳಿತು ಏನೋ ಕಣವ್ವ ಅವರ ʼಬೆಡಗಿಗೆʼ ನಮ್ಮ ಕಡೆ ಹೆಣ್ಣು ಕೊಡಲ್ಲ ಮದುವೆಗೆ ಮುಂಚೆ ಅದನ್ನ ನೋಡಬಾರದಿತ್ತ ಅಂತ, ಅದೆಲ್ಲ ನನಗೆ ತಿಳಿಯದ ವಿಷಯ.

   ಅವರ ಊರಿಗೆ ಹೋಗಿ ಶಾಸ್ತ್ರಗಳನ್ನು ಮುಗಿಸಿ ಬೆಂಗಳೂರಿಗೆ ವಾಪಸ್ಸು ಬಂದಾಗ ಮನೆ ಬಾಡಿಗೆ, ರೇಷನ್, ಕರೆಂಟ್ ಬಿಲ್‌ ಹೇಗೆ ಕಟ್ಟುವುದು. ನನ್ನ ಹೊಸ ಭಾವ ತಾನೇನೋ ಮಹದುಪಕಾರ ಮಾಡುವವನ ಹಾಗೆ ಮನೆಗೆ ಬಂದು ನನ್ನ ತಮ್ಮನನ್ನ  “ನೋಡು ಆ ರೇಷನ್ ಅಂಗಡಿಲಿ ಸಾಲ ಹೇಳಿದ್ದೇನೆ, ಹೋಗು ರೇಷನ್ ತಗೊಂಬಾ” ಅಂತ ಅಂದ, ಅಂದರೆ  ನಮ್ಮನ್ನು ಹೀಯಾಳಿಸಿ ಕೈಯಾಳು ಮಾಡಿಕೊಳ್ಳುವುದು ಆತನ ಉದ್ದೇಶವಿದ್ದಿರಬಹುದು, ಅತ್ತ ಒಂದು ವಾರಕ್ಕೆ ಆತನ ಐಸೆಕ್ ಕ್ವಾರ್ಟರ್ಸ್‌  ಮನೆಗೆ ಆತನ ತಂಗಿ, ತಂಗಿ ಮಕ್ಕಳು, ಗಂಡ, ಅವರಮ್ಮ ಅಪ್ಪ ಎಲ್ಲ ಬಂದರು . ಅಕ್ಕ  ಕೂಡ ಆ ಮನೆಯಲ್ಲಿ ಹೋಗಿ ಇದ್ದಳು. ಆತನ ಸತ್ತು ಹೋಗಿದ್ದ ಒಬ್ಬ ತಂಗಿಯ ಮಗಳನ್ನು ತಾನೇ ಸಾಕುವುದಾಗಿ ತಿಳಿಸಿದ ನಂತರ ಹಾಗೂ ಮತ್ತೊಬ್ಬ ತಂಗಿ ಮಕ್ಕಳು ಇಲ್ಲೇ ಇರುವುದಾಗಿ ತಿಳಿಸಿದ, ಅಕ್ಕ ಆ ಎಲ್ಲರ ಬಟ್ಟೆ ಒಗೆದು ಅಡುಗೆ ಕೆಲಸ ಮಾಡಬೇಕಿತ್ತು. , ನೀರು ಚೆಲ್ಲಿದ್ದನ್ನು ಕಾಲಲ್ಲಿ ಬಟ್ಟೆ ಎಳೆದು ಒರೆಸಿದಳು ಅಂತ , ಊಟ ಮಾಡುವಾಗ ತರಕಾರಿ ಸಿಪ್ಪೆ ಮೆಣಸಿನಕಾಯಿ ತಟ್ಟೆಯಲ್ಲಿ ಒಂದು ಕಡೆ ಇಟ್ಟಳು ಎಂದು, ತನ್ನ ಸ್ನಾನಕ್ಕೆ ಮುಂಚೆ ಬಚ್ಚಲು ತೊಳೆದುಕೊಂಡಳು ಎಂದು, ಮಕ್ಕಳು ಬರುವ ಮುಂಚೆ ಅಡುಗೆ ಮಾಡಬೇಕು, ಆದರೆ ಹಸಿವಾದರೆ ಅವಳು ಆಗಲೇ ಊಟ ಮಾಡುವ ಹಾಗಿಲ್ಲ ಮೆಡಿಕಲ್ ಓದಲು ಕಳಿಸುವುದಿಲ್ಲ ಹೀಗೆ ಅವರ ಕೋಟಲೆ ಜಾಸ್ತಿ ಇತ್ತು. ಇದೆಲ್ಲದರ ಜೊತೆಗೆ ಆತನ  ಕೆಎಎಸ್ ಪಾಸು ಆಗಿದ್ದು ಲಂಚಕ್ಕೆಂದು 20 ಸಾವಿರ ದುಡ್ಡು ಕೊಡುವಂತೆ ಬೇಡಿಕೆ ಇಟ್ಟ, “ದುಡ್ಡು ಕೊಟ್ಟರೂ ಆತ ಚೆನ್ನಾಗಿ ನೋಡಿಕೊಳ್ಳುತ್ತಾನೆ ಅಂತ ಏನು ಗ್ಯಾರಂಟಿ” ಅಂತು ಅಪ್ಪ, ಅದು ಹೇಗೆ ಅಪ್ಪನನ್ನ ಅವಮಾನ ಮಾಡಿ ಕಳಿಸಿ ಈಗ ಹಣಕ್ಕೆ ಬೇಡಿಕೆ ಇಟ್ಟ ಅಂತ ನನಗರ್ಥವಾಗುವುದಿಲ್ಲ. ಅಕ್ಕ ಹೇಳಿದಳಂತೆ ಅಮ್ಮ ಇಲ್ಲದ ಹುಡುಗಿ ಇರಲಿ, ಆದರೆ ನಿನ್ನ ತಂಗಿ, ಮತ್ತವಳ ಮಗಳು ಏಕೆ ಇಲ್ಲಿರಬೇಕು,  ನಾನು ಎಂಬಿಬಿಎಸ್ ಮುಂದುವರಿಸಬೇಕು, ಓದಬೇಕು,  ನಿನ್ನ ತಂಗಿ ಒಂಚೂರು ಮನೆ ಕೆಲಸ ಮಾಡಲ್ಲ” ಅಂತ ಹೇಳಿ ಮಾತು ಮುಗಿಸುವ ಮುನ್ನವೇ, ಆತ “ಏಯ್ ನೀನು ನನ್ನ ಅನ್ನ ತಿಂದುಕೊಂಡು ಬಿದ್ದಿದೀಯಾ ಹೇಳಿದಂಗೆ ಕೇಳಬೇಕಷ್ಟೆ, ಏನ್ ನಿಮ್ಮ ಅಪ್ಪ ತಂದು ಬಿಟ್ಟಿರುವುದು ಇಲ್ಲಿ ನೋಡು ನಿಮ್ಮಪ್ಪನ ಹತ್ತಿರ ಇಪ್ಪತ್ತು ಸಾವಿರ ಕೊಡಿಸು ಆಮೇಲೆ ಮುಂದಿನ ಮಾತು”ಅಂತನಂತೆ. ಇದೇ ದೊಡ್ಡ ಜಗಳವಾಗಿ ಅಳುತ್ತಾ ಮನೆಗೆ ಬಂದಳು. ಅಪ್ಪ, “ 20 ಸಾವಿರ ಕೊಡುವುದು ದೊಡ್ಡದಲ್ಲ, ಆದಾದ ಮೇಲೆ ಅವನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಅಂತ ಏನು ಗ್ಯಾರಂಟಿ, ನಾನು ಕೊಡಲ್ಲ” ಅಂತು, ಮದುವೆಗೆ ಅಪ್ಪನನ್ನ ಒಪ್ಪಿಸಿ ದೊಡ್ಡ ತಪ್ಪು ಮಾಡಿದ್ದ ನಾನು ಈ ಬಾರಿ ಏನೂ ಮಾತನಾಡಲಿಲ್ಲ. ಅದರಿಂದ ಆತ ಮತ್ತಷ್ಟು ಸಿಟ್ಟಿಗೆದ್ದ.

      ಅಪ್ಪ ಇಲ್ಲಿ  ನಿನಗೆ ಕೆಲಸ ಇಲ್ಲ, ನನ್ನ ತಮ್ಮ  ಕಾಲೇಜಿಗೆ ಹೋಗುತ್ತಿಲ್ಲ, ಮನೆ ಖಾಲಿ ಮಾಡಿ ಎಲ್ಲ ನಡೀರಿ, ನಿಟ್ಟೂರಲ್ಲಿ ಕ್ವಾರ್ಟರ್ಸ್‌ ಗೆ  ಅಪ್ಲೈ ಮಾಡಿದ್ದೀನಿ, ಅಲ್ಲಿ ಬಂದಿರಿ” ಅಂತ ಅಂತು. ನನಗೂ ಅದು ಸರಿ ಅನ್ನಿಸಿತ್ತು. ಇವೆಲ್ಲದರ ನಡುವೆ ನಾನು ಪಿಎಸ್ಯುಗಳಿಗೆ ಬರೆದಿದ್ದ ಪರೀಕ್ಷೆಗಳಲ್ಲಿ ಯಾವುದರಲ್ಲಿ ನನಗೆ ಕೆಲಸ ಸಿಕ್ಕಿತೋ ಬನಶಂಕರಿ ಮನೆ ಅಡ್ರೆಸ್‌ ಕೊಟ್ಟಿದ್ದರಿಂದ ಗೊತ್ತಾಗಲಿಲ್ಲ,  SAIL ಬಗ್ಗೆ ಬಹಳ ಆಸೆ ಇಟ್ಟುಕೊಂಡಿದ್ದ ನಾನು ಆ ಮನೆ ಬಿಡುವ ಮುನ್ನ ಓನರ್ ನ ಕೇಳಿದ್ದೆ “ನಾವು ಇಲ್ಲಿ ಇರದಿದ್ದಾಗ ಯಾವುದಾದರೂ ಪತ್ರಗಳು ಬಂದಿದ್ವಾ” ಅಂತ ಅವರು ನಿಷ್ಠುರವಾಗಿ “ಇಲ್ಲ” ಅಂದರು. ಹೇಗೆ ಹೂಂ ಅಂತ ಹೇಳಿಯಾರು, ತೇಜಸ್ವಿನಿ ಅಪ್ಪ ನಮ್ಮ ಓನರ್, ನನ್ನ ತಮ್ಮನ ಸ್ನೇಹಿತರು, ಪೊಲೀಸ್ ಸ್ಟೇಷನ್, ಇನ್ಸ್ಪೆಕ್ಟರ್ ಅಕ್ಕ ಪಕ್ಕದ ಮನೆಯವರು ಹೀಗೆ ಎಲ್ಲರನ್ನು ಪರಿಚಯಿಸಿಕೊಂಡು ನಮಗೆ ಸಹಾಯ ಮಾಡದಂತೆ ನಮ್ಮನ್ನು ಮನೆ ಬಿಡಿಸುವಂತೆ ಸ್ಟೇಷನ್ ನಲ್ಲಿ ಇಲ್ಲ ಸಲ್ಲದ ಆರೋಪ ವಹಿಸಿ ನಮ್ಮ ಚಾರಿತ್ರ್ಯ ವಧೆ ಮಾಡಿಸಲು  ನೀರಿನಂತೆ ದುಡ್ಡು ಚೆಲ್ಲಿದ್ದರಂತೆ. ಹಾಗಾಗಿಯೇ ಅದು ಇಷ್ಟು ಮಟ್ಟದಲ್ಲಿ ನಡೆದದ್ದು.

   ಅಷ್ಟರಲ್ಲಿ ಭಾವ  ಅಮ್ಮನ  ಹೆಸರಲ್ಲಿ ಇದ್ದ 5 ಎಕ್ರೆ ಹೊಲವನ್ನು ಕೋಆಪರೇಟೀವ್ ಬ್ಯಾಂಕ್ ನಲ್ಲಿ ಅಡ ಇರಿಸಿ ನನಗೆ ಮದುವೆಗೆ  20 ಸಾವಿರ ಖರ್ಚಾಗಿದೆ,  ಅದನ್ನು ಕೊಡಿ ಅಂತ ಸಾಲ ಮಾಡಿಸಿ ಈಸಿಕೊಂಡಿದ್ದ, ಇದು ಅಪ್ಪನಿಗೆ ತಿಳಿಯದು. ಇದು ಮೀರಿ ಆತ ಮತ್ತೆ 20 ಸಾವಿರ ಕೇಳುತ್ತಿದ್ದುದು. ಅಮ್ಮ ಅಕ್ಕನನ್ನ ಅಲ್ಲೆ ಬಿಟ್ಟು ಹೊರಡಲು ರೆಡಿ ಇರಲಿಲ್ಲ. ಆದರೆ ನಾನು ಅದರ ವಿರುದ್ಧ ಇದ್ದೆ.ನಾವು ಅಲ್ಲಿಂದ ಹೋದ ಮೇಲೆ ಅವಳೇ ಅವಳ ಜೀವನವನ್ನ ಸರಿ ಮಾಡಿಕೊಳ್ಳಲಿ ಅಥವಾ ಸರಿ ಹೋಗುತ್ತೆ, ಮದುವೆ ಬೇಡ ಅಂದರೂ  ಅವಳೇ ತಾನೆ ಒಪ್ಪಿಕೊಂಡದ್ದು ಎಂಬುದು ನನ್ನ  ವಾದ, ಅಮ್ಮನಿಗೆ ವಾಂಚಲ್ಯ. ಹಾಗಾಗಿ ಅಮ್ಮ ನಾವು ನಿಟ್ಟೂರಿಗೆ ಹೊರಡುವ ಮುನ್ನ ಅಕ್ಕನ್ನ ಅಲ್ಲಿಂದ ಕರೆದುಕೊಂಡು ಹೋಗಿ ನಮ್ಮಪ್ಪನ ಅಣ್ಣಂದಿರ ಊರು ಶ್ರೀರಾಂಪುರದಲ್ಲಿ ಊರಲ್ಲಿ ಬಿಟ್ಟು ಬಂದಿತ್ತು, ನಾವು ಗಾಡಿಗೆ ಸಾಮಾನು ತುಂಬುವ ಸಮಯದಲ್ಲಿ ಅಲ್ಲಿಗೆ ಬಂದ ಅಕ್ಕನ ಗಂಡನಿಗೆ ಶಾಕ್. ಒಂದು ನಾವು ಅಲ್ಲಿಂದ ಹೊರಡುವ ಸುಳಿವು ಆತನಿಗೆ ಇರಲಿಲ್ಲ ಮತ್ತು ಅಕ್ಕ ಕೂಡ ಅಲ್ಲಿಲ್ಲ .ಜಗಳವಾಡಲು ಅಪ್ಪ ಕೂಡ ಅಲ್ಲಿರಲಿಲ್ಲ ಅದಾಗಲೇ ನಾವು ಮನೆ ಅಡ್ವಾನ್ಸ್ ಪಡೆದುಕೊಂಡಾಗಿತ್ತು ಓನರ್ ಹತ್ತಿರ ಹೋಗಿ, “ಅವರಿಗೆ ಅದು ಹೇಗೆ ದುಡ್ಡು ಕೊಟ್ಟಿರಿ ನೀವು ನನ್ನ ಕೈಗೆ ದುಡ್ಡು ಕೊಡಬೇಕಿತ್ತು” ಅಂತ ಕೇಳಿದ.  ಅವರು ಹೇಳಿದರು “ನೋಡಿ ಅವರೇ ನಮ್ಮ ಕೈಗೆ ಹಣ ಕೊಟ್ಟಿದ್ದು ಅವರಿಗೆ ಕೊಟ್ಟಿದ್ದೇವೆ” ಅಂತ .ಆತ ಸುಮ್ಮನಾದ ಬೂದಿ ಮುಚ್ಚಿದ ಕೆಂಡದಂತೆ. ನಾವು ನಿಟ್ಟುರಿಗೆ ಬಂದ ಮಾರನೆ ದಿನವೇ ಪೊಲೀಸ್ ಹಾಜರು ಆತನ ಹೆಂಡತಿಯನ್ನು ನೀವು ಕಿಡ್ನಾಪ್ ಮಾಡಿದೀರಿ ಅಂತ ಕಂಪ್ಲೇಂಟ್ ಬಂದಿದೆ ಅಂತ. ಪೊಲೀಸ್ ಅಕ್ಕನ ಸ್ಟೇಟ್ ಮೆಂಟ್ ಪಡೆದು ತೆರಳಿದ.

ಅದಾದ ನಂತರ  ಮಾರನೇ ದಿನವೇ ಓಪನ್ ಲೆಟರ್ ಒಂದು ಬಂತು. ನಮ್ಮ ಮೇಲೆ ಇಲ್ಲ ಸಲ್ಲದ ಹಸಿ ಸುಳ್ಳು ಆರೋಪ ಮಾಡಿ ಅಪ್ಪನಿಗೆ ಮರ್ಯಾದೆ ಕಳೆಯುವ ಹಾಗೆ ಬರೆದಿದ್ದ, ಸರಿ ಸುಮಾರು ತೇಜಸ್ವಿನಿ ಮಾಡಿದ ಆರೋಪಗಳ ಥರನೇ ಆ ಕೇಸ್ ವಿಷಯ ಸಂಪೂರ್ಣ ಅರಿವಿದ್ದ  ಈತ  ವಿಷಯವೆಲ್ಲ ಗೊತ್ತಿದ್ದನ್ನ ಬ್ಲಾಕ್ ಮೇಲ್ ಥರ ಬಳಸಿಕೊಂಡಿದ್ದ.  ಆ ಲೆಟರ್ ನಿಟ್ಟೂರಿನ ಎಲ್ಲ ಜನ ಓದಿ, ಊರಾಚೆ ಇದ್ದ ಎಂಯುಎಸ್ಎಸ್ ಗೆ ಬಂದು ತಲುಪುವ ಹೊತ್ತಿಗೆ ಎಲ್ಲರೂ ಓದಿ ಮುಸಿ ಮುಸಿ ನಗುವವರೇ ಅಪ್ಪ ಹೇಗೋ ನಮ್ಮ ಜೊತೆ ರೀ ಕಂಸೈಲ್ ಆದಾಗಲೆಲ್ಲ ಏನೋ ಒಂದು ಕಾರಣಕ್ಕೆ ಪುನಃ ಕೋಪಗೊಂಡು ಹೊರಟುಹೋಗುವಂತಹ ಘಟನೆಗಳೇ ನಡೆಯುತ್ತಿತ್ತು.

   ಅಪ್ಪ ಪುನಃ ಕೋಪಗೊಂಡು ಮಧುಗಿರಿಗೆ ಹೊರಟುಹೋದರು. ಕ್ವಾಟ್ರಸ್ ನಲ್ಲಿ ಮನೆ ಇದ್ದರೂ  ಅಪ್ಪ ಡ್ಯೂಟಿ ಮುಗಿಸಿ ಮಧುಗಿರಿಗೆ ಹೋಗುತ್ತಿತ್ತು, ಅಲ್ಲಿ ಅಪ್ಪನ ಅಫೇರ್‌ ನಡೆದಿತ್ತು.  ಐಸೆಕ್ ನ ಸೋ ಕಾಲ್ಡ್‌  ಭಾವ ಓಪನ್ ಲೆಟರ್ ಬರೆಯುವುದು  ದಿನ ನಿತ್ಯದ ಕಾಯಕ ಆಯಿತು, ಯಾವಾಗ ಯಾವ ಪತ್ರ ಬರುವುದೋ ದುಃಸ್ವಪ್ನವಾಯಿತು. ಅದು ಮೀರಿ ಆತ ಒಂದು ದಿನ ನಮ್ಮ ಚಿಕ್ಕ ತಾತ, ಆತನ ಕೆಲವು ಸ್ನೇಹಿತರು ಅದೇ ಬಿಇಎಲ್ ಇಂಜಿನಯರ್ ಜೊತೆಗೆ ಮದುವೆ ಮಾತಾಡಿದ್ದ ದಲಿತ ಮುಖಂಡ ಎಲ್ಲರೂ ಬಂದರು.  “ಎಲ್ಲಮ್ಮಾ ಅಪ್ಪ” ಅಂತ ಕೇಳಿದರು.  ಅಪ್ಪ ಮಧುಗಿರಿಗೆ ಹೋಗಿದ್ದನ್ನು ಹೇಳಿದೆವು. ನಾವು ಬರುವ ಬಗ್ಗೆ ಪತ್ರ ಬರೆದಿತ್ತಂತಲ್ಲಾ ಆದರೂ ಅವರು ಮನೆಯಲ್ಲಿ ಇರಬಾರದಾ” ಅಂದರು. ಯಾವ ಪತ್ರವೂ ಬಂದಿಲ್ಲ ಅಂದೆ.  ಅವರು ಅಲ್ಲಿರುವಾಗಲೇ ಆ ಪತ್ರ ಬಂತು. ಅಂದರೆ ಪತ್ರ ಮೊದಲೇ ತಲುಪಿದರೆ ಅಪ್ಪ ಮನೆಯಲ್ಲಿ ಇರುತ್ತಾರೆ ಅಂತ ತಿಳಿದೇ ಲೇಟಾಗಿ ಪತ್ರ ಪೋಸ್ಟ್‌  ಮಾಡಿ ಜನರಿಗೆ ಪತ್ರ ಬರೆದಿದ್ದೇನೆ ಅಂತ ಸುಳ್ಳು ಹೇಳಿ ಕರೆಸಿಕೊಂಡು ಬಂದಿದ್ದ ಆತ. ಚಿಕ್ಕ ತಾತ ಹೇಳಿದರು “ನೋಡಮ್ಮಾ ನೀವು ನನ್ನ ಹೆಸರು ಹೇಳಿದ್ದಿರಂತೆ, ಅದಕ್ಕೆ ಆತ ನಿಮ್ಮ ಹುಡುಗಿನ ಮದುವೆಯಾಗಿದ್ದಂತೆ ಅದಕ್ಕೆ ನಾನೂ ಬಂದೆ” ಅಂತು.” ಇಲ್ಲ ಚಿಕ್ಕಪ್ಪ ನಾವು ನಿಮ್ಮ ಹೆಸರು ಹೇಳಿಲ್ಲ”ಅಂತ ಅಮ್ಮ ಹೇಳಿತು, ಅಪ್ಪನಿಗೆ ಮಧುಗಿರಿಗೆ ಫೋನ್ ಮಾಡಿ ತಿಳಿಸಿದೆವು ಅಪ್ಪ ಒಂದರ್ಧ ಘಂಟೆಯಲ್ಲಿ ಬರುವುದಾಗಿ ತಿಳಿಸಿತು. ಅಷ್ಟರಲ್ಲಿ ನಾವು ಮನೆ ಒಳಗಡೆ ಮಾತಾಡುತ್ತಿದ್ದರೆ ಐಸೆಕ್‌ನಾತ   ಮನೆ ಹೊರಗಡೆ ಕ್ವಾರ್ಟರ್ಸ್‌  ಜನಗಳನ್ನ ಸೇರಿಸಿ ಇಲ್ಲ ಸಲ್ಲದ ದೂರುಗಳನ್ನು ಹೇಳುತ್ತಿದ್ದ. ಅವರೆಲ್ಲ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ನನ್ನ ತಮ್ಮ  ಹೋಗಿ ಅವನನ್ನು ಹೊಡೆಯಲು ಹೋದಾಗಲೇ ಅವನು ಮಾತು ನಿಲ್ಲಿಸಿದ್ದು. ಬಂದಿದ್ದ ಜನಕ್ಕೆ ಅವನು ಓಪನ್ ಲೆಟರ್ ಬರೆಯುತ್ತಿರುವ ಬಗ್ಗೆ ಹೇಳಿದರೆ ನಗಾಡಿ ಸುಮ್ಮನಾದರು. ಅಂದರೆ ಅವನಿಗೆ ಕೋಪ ಇದೆ ಹಾಗೆ ಬರೆದಿದಾನೆ ಅಂತ ಇರಬಹುದು ಅವರು ಅಷ್ಟು ಗಂಭೀರವಾಗಿ ಅದನ್ನು ತೆಗೆದುಕೊಳ್ಳಲೇ ಇಲ್ಲ. ನೀವು ಕೂಡ ಬರೆದಿದೀರಲ್ಲಾ ಅಂದರು. ನಾವು ಬರೆದಿದ್ದು ಒಂದೇ ಒಂದು ಕಾರ್ಡ್‌ ,ಅದರಲ್ಲಿ ಬಸವಣ್ಣನವರ ವಚನ ಅಷ್ಟೆ  ಬರೆದದ್ದು? ಆದರೆ ಆತ ಹೊರಿಸಿದ್ದು ಆರೋಪಗಳನ್ನು. ಗಂಡಸರೆಲ್ಲ ಒಂದೇ, ಅವರು ಹೆಣ್ಣಿನ ಪರ ಮಾತನಾಡುವುದೇ ಇಲ್ಲ ಅವರೆಂದೂ ಗಂಡಸಿನ ಪರ ಅನ್ನಿಸಿತು.

       ಅಪ್ಪ ಬರುವುದು ಸ್ವಲ್ಪ ತಡವಾಯಿತು ಅಷ್ಟರಲ್ಲಿ ಊಟ ಮುಗಿಸಿ ಹೊರಟೇ ಬಿಟ್ಟರು. ಅಪ್ಪ ಬರುತ್ತಿದ್ದಾರೆ ನಿಲ್ಲಿ ಅಂದರೂ ನಿಲ್ಲದೇ ಹೊರಟು ಹೋದರು? ಅವರು ಆ ಕಡೆ ಹೋಗುವುದಕ್ಕೂ ಅಪ್ಪ ಬರುವುದಕ್ಕು ಒಂದೇ ಆಯಿತು. ಅಪ್ಪ ಕೆಲವು ಸ್ನೇಹಿತರನ್ನು ಕರೆದುಕೊಂಡು ಬಂದಿತ್ತು .ಪೊಲೀಸ್ ಹತ್ತಿರ ಹೋದರೆ ಅಷ್ಟು ಸಮಂಜಸ ಉತ್ತರ ಸಿಗಲಿಲ್ಲ. ಅಪ್ಪ ಸರಿ ಡೈವೋರ್ಸ್‌ ಗೆ  ಅಪ್ಲೈ ಮಾಡು ಮುಂದಿನದು ಆಮೇಲೆ ನೋಡುವಾ ಅಂತು. ಸರಿ ನನ್ನ ತಮ್ಮನಿಗೆ  ಬೇಲ್‌  ಕೊಡಿಸಿದ್ದ ಬೆಂಗಳೂರಿನ ಅದೇ ಲಾಯರ್ ಗೆ ಕೇಸ್ ಕೊಟ್ಟೆವು ಆತ ಡೇಟ್ ಮೇಲೆ ಡೇಟ್ ಪಡೆದನೇ ಹೊರತು ಕೇಸ್ ಮುಂದೆ ಹೋಗಲೇ ಇಲ್ಲ. ವಕೀಲರನ್ನು ಬದಲಿಸಿದ ಮೇಲೆ ಅಕ್ಕನಿಗೆ ಬಿಡುಗಡೆ ಸಿಕ್ಕಿತು.