ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರ ವಿರೋಧ  “ ಅಲ್ಲಾಹು ಅಕ್ಬರ್ “- ವಿ ವಾಂಟ್ ಜಸ್ಟೀಸ್” ಘೋಷಣೆ-ಮೆರವಣಿಗೆ

hijab-students-protest

ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರ ವಿರೋಧ  “ ಅಲ್ಲಾಹು ಅಕ್ಬರ್ “- ವಿ ವಾಂಟ್ ಜಸ್ಟೀಸ್” ಘೋಷಣೆ-ಮೆರವಣಿಗೆ

 

ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರ ವಿರೋಧ
 “ ಅಲ್ಲಾಹು ಅಕ್ಬರ್ “- ವಿ ವಾಂಟ್ ಜಸ್ಟೀಸ್” ಘೋಷಣೆ-ಮೆರವಣಿಗೆ

ತುಮಕೂರು:  ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ನಗರದಲ್ಲೂ ಬುಧವಾರ ಆರಂಭಿಸಲಾಯಿತಾದರೂ, ಶಾಲೆ ಆರಂಭದ ಸಮಯದಲ್ಲಿ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಮುಂಭಾಗ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್‌ಗೆ ಅನುಮತಿ ನೀಡುವಂತೆ ಪಟ್ಟು ಹಿಡಿದು, ಪ್ರಾಚರ‍್ಯರು ಒಪ್ಪದ ಕಾರಣ ಮನೆಗೆ ಹಿಂದಿರುಗಿದರು.


ನಗರದ ಟೌನ್‌ಹಾಲ್ ಸಮೀಪ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜಿಗೆ ಸುಮಾರು 30ಕ್ಕೂ ಹೆಚ್ಚು  ವಿದ್ಯಾರ್ಥಿನಿಯರು ಬುರ್ಕಾ ಹಾಗೂ ಹಿಜಾಬ್ ಧರಿಸಿ ಬಂದಿದ್ದು, ಕಾಲೇಜಿನ ಮುಂಭಾಗದಲ್ಲೇ ಭದ್ರತಾ ಕಾರ್ಯದಲ್ಲಿ ತೊಡಗಿದ್ದ ಪೊಲೀಸರು ವಿದ್ಯಾರ್ಥಿನಿಯರನ್ನು ತಡೆದು ಹಿಜಾಬ್ ತೆಗೆದು ಕಾಲೇಜು ಒಳಗೆ ಹೋಗುವಂತೆ ಸೂಚಿಸಿದರು.


ಆದರೆ ವಿದ್ಯಾರ್ಥಿನಿಯರು ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ. ನಮಗೆ ಹಿಜಾಬ್ ಧರಿಸಿಯೇ ತರಗತಿ ಒಳಗೆ ಹೋಗಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದರು.
ಆಗ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸರು ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜುಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ರೀತಿ ಗಲಾಟೆ ಮಾಡಬಾರದು. ಪಾಠ ಕೇಳುವುದಾದರೆ ಮೊದಲಿನಂತೆ ಕಾಲೇಜು ಗೇಟ್ ಹೊರಗೆ ಹಿಜಾಬ್ ತೆಗೆದು ಒಳ ಪ್ರವೇಶಿಸಬಹುದು ಎಂದು ತಿಳಿ ಹೇಳಿದರು.ವಿದ್ಯಾರ್ಥಿನಿಯರು ಒಪ್ಪಲಿಲ್ಲ.


ಸ್ಥಳಕ್ಕೆ ಬಂದ ಕಾಲೇಜಿನ ಪ್ರಾಚಾರ್ಯರು  ಹೈಕೋರ್ಟ್ ಆದೇಶವಿದೆ, ಎಂದಿನAತೆ ಕಾಲೇಜಿನ ಗೇಟ್ ಒಳ ಭಾಗದಲ್ಲೇ ಹಿಜಾಬ್ ತೆಗೆದು ತರಗತಿಗಳಿಗೆ ಬಂದು ಪಾಠ ಕೇಳಿ, ಇಲ್ಲವಾದರೆ ಹಿಂದಿರುಗಿ ಎಂದರು.


ಆದರೆ ವಿದ್ಯಾರ್ಥಿನಿಯರು ನಮಗೆ ಪಾಠವೂ ಬೇಕು, ಹಿಜಾಬ್ ಕೂಡಾ ಇರಬೇಕು ಎಂದು  ಹೇಳಿ, ಹಿಜಾಬ್ ಇಲ್ಲದೆ ನಾವು ಒಳಗೆ ಬರುವುದಿಲ್ಲ ಎಂದು ಪಟ್ಟು ಹಿಡಿದರು. 


ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕಾಲೇಜು ಮುಂಭಾಗ ರೀತಿ ಸೇರಬಾರದು. ದೂರ ಹೋಗುವಂತೆ ಪೊಲೀಸರು ಸೂಚಿಸಿದಾಗ ವಿದ್ಯಾರ್ಥಿನಿಯರು ಟೌನ್‌ಹಾಲ್ ಕಡೆ ನಡೆಯುತ್ತಾ  ಅಲ್ಲಾ ಹು ಅಕ್ಬರ್, ವಿ ವಾಂಟ್ ಜಸ್ಟೀಸ್ ಅಂತ ಘೋಷಣೆ ಕೂಗಿದರು. ಟೌನ್‌ಹಾಲ್ ಸಮೀಪ ಜಮಾಯಿಸಿದರು. ವಿದ್ಯಾರ್ಥಿನಿಯರು ಹಿಜಾಬ್‌ಗೆ ಅನುಮತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು.


ಇದಾದ ಬಳಿಕ ತಹಶೀಲ್ದಾರ್ ಮೋಹನ್‌ಕುಮಾರ್ ಮತ್ತು ಪಾಲಿಕೆ ಸದಸ್ಯ ನಯಾಜ್ ಅಹಮದ್ ಅವರು ಕಾಲೇಜು ಬಳಿ ಆಗಮಿಸಿ ವಿದ್ಯಾರ್ಥಿನಿಯರ ಮನವೊಲಿಸಲು ಯತ್ನಿಸಿದರು. ಐವರು ವಿದ್ಯಾರ್ಥಿನಿಯರ ಪೋಷಕರು ಕಾಲೇಜು ಬಳಿ ಬಂದು ತಮ್ಮ ಮಕ್ಕಳಿಗೆ ತರಗತಿಗೆ ಹಾಜರಾಗುವಂತೆ ಹೇಳಿದರು. ಆಗ ಐವರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಹಾಜರಾದರು.


ಇದೇ ರೀತಿ ನಗರದ ವಿವಿಧ ಖಾಸಗಿ ಕಾಲೇಜುಗಳ ಬಳಿಯೂ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ತರಗತಿ ಪ್ರವೇಶಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ತರಗತಿಗೆ ಹಾಜರಾಗದೆ ಮನೆಗಳತ್ತ ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು.
ನಗರದ ವಿವಿಧ ಕಾಲೇಜುಗಳ ಮುಂದೆ ಮುನ್ನೆಚ್ಚರಿಕೆ ಕ್ರಮವಾಗಿ ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.