“ಗುಡ್. ಹೆಣ್ಣು ಮಕ್ಕಳೆಂದರೆ ಹೀಗೇ ಇರಬೇಕು, ಸಬಲರಾಗಿರಬೇಕು, ಧೈರ್ಯವಂತರಾಗಿರಬೇಕು”
“ಹೆಣ್ಣು ಮಕ್ಕಳು ಓದಬೇಕು ಸ್ವಾವಲಂಬಿಗಳಾಗಬೇಕು, ಹಾಗಂತ ಗಂಡು ಮಕ್ಕಳು ಎಲ್ಲ ಅವಕಾಶಗಳನ್ನು ಹೆಣ್ಣು ಮಕ್ಕಳಿಗೆ ಬಿಟ್ಟು ಕೊಟ್ಟು ಕಡೆಗೆ ಅವರು ಹಕ್ಕಿಗೆ ಹೋರಾಡುವಂತಾಗಬಾರದು” ಎಂದು ನಕ್ಕಿದ್ದರು ಲಂಕೇಶ್ .

ಜೀವದ ಕತೆ-8
ಕೆ.ಬಿ.ನೇತ್ರಾವತಿ
ಲಂಕೇಶ್ ಎಂಬ ಹೆಸರು ನನಗೆ ಪರಿಚಯವಾದದ್ದು ಬಹಳ ಕುತೂಹಲದೊಂದಿಗೆ. ನಾನು ಐದನೇ ತರಗತಿ ಇರಬಹುದು, ನಮ್ಮ ಶಾಲೆಯ ಟೀಚರ್ಗಳು ಮಾತಾಡುತ್ತಿದ್ದರು, “ಲಂಕೇಶ್ ಪತ್ರಿಕೆಯಲ್ಲಿ ವರದಿಯಾಗಿದೆ, ಅಬ್ಬಾ ಎಂತಹ ಲೇಖನ, ಎಷ್ಟು ಬೋಲ್ಡ್, ...!?” ಮತ್ತೊಬ್ಬ ಟೀಚರ್ “ಅದೆಲ್ಲ ಹಾಗಿರಲಿ ಈ ಪೇಪರ್ನ ಮಕ್ಕಳು ಓದಿದರೆ ಹೇಗೆ, ಹಾಗೆಲ್ಲ ಬರೆಯಬಾರದು..,” ಮನಸ್ಸಿನ ಮೂಲೆಯಲ್ಲಿ ಯಾವುದರ ಬಗ್ಗೆ ಆ ವರದಿ, ಯಾರದು ಲಂಕೇಶ್ ಎಂಬ ಕುತೂಹಲ. ಪ್ರಶ್ನೆಗೆ ಉತ್ತರಗಳು ಸಿಗಲಿಲ್ಲ. ಕಾರಣ ನನ್ನ ಲೋಕ ಮನೆ, ಶಾಲೆ, ಆಟ ಪಾಠ.
ನಾನು ಐದನೇ ತರಗತಿಯಲ್ಲಿ ಓದುವಾಗ ಅಪ್ಪ ಮೊದಲಿಗೆ ಆ ಪತ್ರಿಕೆಯನ್ನು ಮನೆಯಲ್ಲಿ ತಂದಾಗ ಅದನ್ನು ಓದಲು ಶುರುಮಾಡಿದ್ದು, ಅಪ್ಪ ಪೇಪರ್ ಓದಿ ಮುಗಿಸಿದ ತಕ್ಷಣ ಕುತೂಹಲದಿಂದ ನಾನೂ ಕುಳಿತು ಆ ಪೇಪರನ್ನ ಒಂದಕ್ಷರವನ್ನೂ ಬಿಡದೆ ಓದಿದ್ದೆ, ನಂತರ ಲಂಕೇಶ್ ಪತ್ರಿಕೆ ನಮ್ಮ ಮನೆಯ ‘ಅವಿಭಾಜ್ಯ ಅಂಗ’ವಾಗಿಬಿಟ್ಟಿತು ಅವರ ಆಶಯ ಜನಪರ ಕಾಳಜಿ ಅಪ್ಪನಿಗೆ ಬಹಳವೇ ಇಷ್ಟವಾಗುತ್ತಿತ್ತು. ನಾನು ಇಂಜಿನಿಯರಿಂಗ್ ಓದುವಾಗ ಅಕ್ಕ ಬಿಎಸ್ಸಿ ಓದುತ್ತಿದ್ದಳು. ಆಗ ಪ್ರಗತಿ ರಂಗದ ಕಾಲ. ಅಕ್ಕ ಎಷ್ಟು ಸೋಷಿಯಲ್ ಅಷ್ಟೇ ನಾನು ಮೌನಿ. ಯಾರನ್ನೂ ಸುಮ್ಮನೆ ಮಾತಾಡಿಸುತ್ತಿರಲಿಲ್ಲ. ಅವರಾಗೇ ಮಾತನಾಡಿಸಿದರೆ ಮಾತ್ರ ಮಾತನಾಡುತ್ತಿದ್ದೆ.
ಅಂತೆಯೇ ಅಕ್ಕ ಹೆಚ್ಚು ಹೆಚ್ಚು ಸೋಷಿಯಲ್ ಆಕ್ಟಿವಿಟೀಸ್ ನಲ್ಲಿ ಭಾಗವಹಿಸುತ್ತಿದ್ದಳು. ಅದರಲ್ಲಿ ಲಂಕೇಶರ ರಾಜಕೀಯ ಕನಸಿನ ಕೂಸು ʼಪ್ರಗತಿ ರಂಗʼ ಕೂಡಾ ಒಂದು.
ಅಂತೆಯೇ ಒಂದು ವರದಕ್ಷಿಣೆ ಕಿರುಕುಳದ ಸಾವಿನ ಬಗ್ಗೆ ಬರೆದ ಲೇಖನದಿಂದ ಲಂಕೇಶರ ಪರಿಚಯವಾಗಿ ಲೋಕಲ್ ಆಗಿ ಅವಳಿಗೆ ಬೆದರಿಕೆಗಳು ಬಂದಾಗ ಧೈರ್ಯ ತುಂಬಿದ್ದರು ಲಂಕೇಶರು.
ಹಾಗಾಗಿಯೇ ಅವರು ಪ್ರಗತಿ ರಂಗ ಸಭೆಗೆ ತಿಪಟೂರಿಗೆ ಬಂದಾಗ ನಮ್ಮ ಹೌಸಿಂಗ್ ಬೋರ್ಡ್ ಮನೆಗೆ ಕೂಡ ಬಂದಿದ್ದರು ಅದು ನಮಗೆ ಬಹಳ ಹೆಮ್ಮೆಯ ವಿಷಯವಾಗಿತ್ತು. ಅಪ್ಪನಿಗೋ ಎಲ್ಲಿಲ್ಲದ ಖುಷಿ. ಅವರಿಗೆ ಎಳನೀರು ತಂದು ಬಿಸ್ಕೆಟ್ ತಂದು ಉಪಚರಿಸಿದ್ದರಂತೆ. ನಾನು ಆಗ ದಾವಣಗೆರೆಯಲ್ಲಿ ಓದುತ್ತಿದ್ದೆ. ಇದೇ ಅಕ್ಕ ಅನುಪಮ ಎಂಬ ಹೆಸರಿನಲ್ಲಿ ಲಂಕೇಶ್ ಪತ್ರಿಕೆಗೆ ಲೇಖನ, ಕತೆಗಳನ್ನು ಬರೆಯಲು ಲಂಕೇಶ್ ಪತ್ರಿಕೆ ನೆರವಾಯಿತು. ಪ್ರಗತಿತಂಗದ ಅದೇ ಸಮಾವೇಶದಲ್ಲಿ ಲಂಕೇಶರ ಭಾಷಣವನ್ನು ನನಗೆ ಕೇಳಿಸಲೆಂದೇ ಅಕ್ಕ ನಮ್ಮ ಮನೆಯ ಟೇಪ್ ರೆಕಾರ್ಡರ್ ತೆಗೆದುಕೊಂಡು ಹೋಗಿ ಭಾಷಣವನ್ನು ರೆಕಾರ್ಡ್ ಮಾಡಿಕೊಂಡು ಬಂದಿದ್ದಳಂತೆ.
ಆಗಿನ್ನೂ ನಾನು ರಜೆಗೆ ಮನೆಗೆ ಬಂದಿರಲಿಲ್ಲ. ಭಾಷಣ ರೆಕಾರ್ಡ್ ಮಾಡಿದ್ದ ವಿಷಯ ತಿಳಿದಿದ್ದ ಲೋಕಲ್ ಒಬ್ಬಾತ ಲಂಕೇಶ್ ಪತ್ರಿಕೆ ಏಜೆನ್ಸಿ ಪಡೆದಿದ್ದವನು ಆ ಕ್ಯಾಸೆಟ್ ಕೇಳಿ ಕೊಡುವೆನೆಂದು ಪಡೆದು ಹೋದವನು ವಾಪಸ್ಸು ಕೊಡದೆ ಅದು ಗಲಾಟೆಯಲ್ಲಿ ಕೊನೆಯಾಗಿ ಕಡೆಗೆ ಲಂಕೇಶ್ ಅವರು ಸ್ಥಳೀಯ ಪ್ರಗತಿರಂಗದ ಜನರಿಗೆ ತಿಳಿಸಿ ಕ್ಯಾಸೆಟ್ ವಾಪಸ್ಸುಕೊಡಿಸಿ ಆತನ ಏಜೆನ್ಸಿ ಕ್ಯಾನ್ಸಲ್ ಮಾಡಿದರಂತೆ. ನಾನು ಅದೇ ಭಾನುವಾರ ಮನೆಗೆ ಬಂದಾಗ ಎಲ್ಲಾ ವಿಷಯ ತಿಳಿಸಿದ ಅಕ್ಕ ಅವರ ಭಾಷಣ ನನಗೆ ಕೇಳಿಸಿದ್ದಳು.
ಆ ಭಾಷಣದಲ್ಲಿ ಲಂಕೇಶ್ ಅವರು ರಾಜಕೀಯ, ಸಾಮಾಜಿಕ ಸನ್ನಿವೇಶದ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತಾಡಿದ್ದರು. ಯಾಕೆ ಹೊಸ ರಾಜಕೀಯ ಪಕ್ಷ ಬೇಕು ಎನ್ನುವ ಬಗ್ಗೆ ಅರ್ಥವಾಗುವಂತೆ ಹೇಳಿದ್ದರು. ಅವರ ಲೇಖನಗಳು, ಟೀಕೆ ಟಿಪ್ಪಣಿ, ಮರೆಯುವ ಮುನ್ನ, ನೀಲು ಕವನ, ಕತೆೆಗಳು ಸಮಾಜದ ಎಲ್ಲ ಮಜಲುಗಳಿಗೆ ಕನ್ನಡಿ ಹಿಡಿಯುತ್ತಿದ್ದವು. ಜನರ ತಿಳುವಳಿಕೆ ಹೆಚ್ಚಿಸಲು ಅವಕಾಶವಾಗುತ್ತಿತ್ತು. ಹೀಗೆ ನಮ್ಮ ಕುಟುಂಬದ ಜೊತೆ ಲಂಕೇಶರ ಪಯಣ ಶುರುವಾದದ್ದು.
ಪಿಯು ಮುಗಿಸಿ ಓದಿನ ಸಲುವಾಗಿ ದಾವಣೆಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜು ಸೇರಿದ ನನಗೆ ಮೊದಲ ವರ್ಷದ ಅಂತ್ಯದಲ್ಲಿ ಮೈಸೂರು ವಿವಿಯಿಂದ ನಮ್ಮ ಕಾಲೇಜನ್ನು ಹೊಸದಾಗಿ ಪ್ರಾರಂಭ ಮಾಡಿದ್ದ ಕುವೆಂಪು ವಿವಿಗೆ ವರ್ಗಾಯಿಸುವ ಪ್ರಸ್ತಾಪ ಓದಿ ಮನಸ್ಸಿಗೆ ನೋವಾಯಿತು. ಯಾರನ್ನು ಕೇಳಿದರೂ ಇಲ್ಲ ನಿಮ್ಮ ಬ್ಯಾಚ್ ಕೂಡ ಕುವೆಂಪು ವಿವಿಗೆ ಸೇರಿಸುತ್ತಾರೆ ಅಂತ ಸರಿಯಾದ ಉತ್ತರ ಸಿಗದ ನಾನು ಲಂಕೇಶರಿಗೆ ಪತ್ರ ಬರೆದು ನನ್ನ ದುಗುಡ ಹೇಳಿಕೊಂಡೆ. ಮರು ವಾರವೇ ಅವರಿಂದ ಉತ್ತರ ಬಂದಾಗ ಖುಷಿಯಿಂದ ಕುಣಿದಾಡಿದ್ದೆ, ಅದರಲ್ಲಿ ಅವರು ವಾಸ್ತವಗಳ ಬಗ್ಗೆ ತಿಳಿ ಹೇಳಿ ಧೈರ್ಯ ತುಂಬಿದ್ದರು, ಅವರಂದಂತೆಯೇ ಮುಂದೆ ನಮ್ಮ ಕಾಲೇಜನ್ನು ಕುವೆಂಪು ವಿವಿಗೆ ಸೇರಿಸಿದರೂ ನಾವಾಗಲೇ ಮೈಸೂರು ವಿವಿಗೆ ಪ್ರವೇಶ ಪಡೆದಿದ್ದರಿಂದ ನಮಗೆ ಮೈಸೂರು ವಿವಿಯಿಂದಲೇ ಅಂಕ ಪಟ್ಟಿ ಪದವಿ ಪತ್ರ ದೊರೆಯುವುದಾಗಿ ಘೋಷಿಸಿದರು.
ಇದನ್ನೆಲ್ಲ ಯಾಕೆ ಹೇಳಿದೆ ಎಂದರೆ ಲಂಕೇಶ್ ಅವರ ಬಿಡುವಿಲ್ಲದ ಸಮಯದಲ್ಲಿ ಕೂಡ ಎಲ್ಲರ ಅಹವಾಲುಗಳಿಗೆ ಸ್ಪಂದಿಸುತ್ತಿದ್ದ ರೀತಿ ನನಗೆ ಬಹಳ ಮೆಚ್ಚುಗೆಯಾಗಿತ್ತು, ಅದೇ ರೀತಿ ಅವರು ಮತ್ತೊಬ್ಬರಿಗೆ ತುಂಬುತ್ತಿದ್ದ ಧೈರ್ಯ ಕೂಡ.
ನಂತರದ ವರ್ಷಗಳಲ್ಲಿ ಅಕ್ಕನ ಹೆಚ್ಚು ಹೆಚ್ಚು ಲೇಖನಗಳು, ಕತೆಗಳು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗತೊಡಗಿದವು. ಹೆಣ್ಣು ಮಕ್ಕಳ ತೊಂದರೆಗಳು, ಅವುಗಳನ್ನು ನಿಭಾಯಿಸುವ ಬಗ್ಗೆ ಕಳಕಳಿ ತುಂಬಿ ಬರೆಯುತ್ತಿದ್ದಳು, ಅದೇ ರೀತಿ ಹೆಚ್ಚು ಹೆಚ್ಚು ಹೆಣ್ಣು ಮಕ್ಕಳ ಕಥೆ, ಲೇಖನ, ಕವಿತೆಗಳನ್ನು ಲೇಖನಗಳನ್ನು ಯಾರಿಗೂ ಹೆದರದೆ ಪ್ರಕಟಿಸುವ ಮುಖಾಂತರ ತಮಗೆ ಹೆಣ್ಣು ಮಕ್ಕಳ ಬಗ್ಗೆ ಇದ್ದ ಕಾಳಜಿಯನ್ನು ಸಾಮಾಜಿಕ ಜವಾಬ್ದಾರಿಯನ್ನು ಲಂಕೇಶ್ ಎತ್ತಿ ಹಿಡಿದಿದ್ದರು. ಅದೇ ರೀತಿ ಎಲ್ಲರಿಗೂ ಬರೆಯಲು ಹುರಿದುಂಬಿಸುತ್ತಿದ್ದರು ಕೂಡಾ.
ನಾನು ಹೆಚ್ಚು ಜನರೊಂದಿಗೆ ಬೆರೆಯಲು ಬಯಸುತ್ತಿರಲಿಲ್ಲ. ಲಂಕೇಶರನ್ನು ಭೇಟಿ ಮಾಡಿಸುವ ಸಲುವಾಗಿಯೇ ನನ್ನನ್ನು ಅವರ ಕಚೇರಿಗೆ ಕರೆದೊಯ್ದ ಅಕ್ಕನ ಜೊತೆ ಬಾಗಿಲು ತೆಗೆದು ಒಳಹೋಗುವಾಗ ನನಗೆ ಭಯದಿಂದ ಮುಖದಲ್ಲಿ ಬೆವರಿಳಿದಿತ್ತು, ಅಕ್ಕ ಸಲೀಸಾಗಿ ನಮಸ್ತೆ ಹೇಳಿ ನನ್ನ ಪರಿಚಯಿಸಲು ಹಿಂದೆ ತಿರುಗಿದಳು, ಅವಳ ಹಿಂದೆ ಅವಿತಂತೆ ನಿಂತಿದ್ದ ನಾನು ಪಕ್ಕಕ್ಕೆ ಬಂದು ನಮಸ್ತೆ ಹೇಳಿದೆ. ಬಾಯ್ತುಂಬ ನಗುತ್ತಾ ನಮಸ್ತೆ ಹೇಳಿ ಕುಳಿತುಕೊಳ್ಳಲು ಹೇಳಿದರು. ಅವರ ಮುಖದಲ್ಲಿನ ಮನಸ್ಪೂರ್ತಿ ನಗು ನನ್ನ ಭಯವನ್ನೆಲ್ಲ ಮಾಯ ಮಾಡಿತ್ತು. ಅವರೊಂದಿಗೆ ನಡೆದ ಕುಶಲೋಪರಿ ರಾಜಕೀಯ ಸಾಹಿತ್ಯದ ಮಾತುಕತೆ ಮಧ್ಯೆ ಅವರು ನನ್ನ ಅಭಿಪ್ರಾಯ ಕೇಳಿದಾಗ ಅಲ್ಲೊಂದು ಇಲ್ಲೊಂದು ಪ್ರಶ್ನೆಗೆ ಉತ್ತರಿಸಿದೆ. ಉಳಿದ ಪ್ರಶ್ನೆಗಳಿಗೆ ಬರಿ ನಗು ಉತ್ತರವಾಗಿತ್ತು. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಅವರ ಮಗಳು ಕವಿತಾಳಿಗೆ ನಮ್ಮನ್ನು ಪರಿಚಯಿಸಿದರು ಅವರೂ ಕೂಡ ನಮಸ್ತೆ ಹೇಳಿದರು. ಅವರು ಏನೋ ಮಾತಾಡಲು ಬಂದಿದ್ದವರು ನಮ್ಮನ್ನು ನೋಡಿ ಹೆಚ್ಚೇನು ಮಾತನಾಡದೆ ಹೊರಡಲು ಅನುವಾದಾಗ, “ಕವಿತಾ ಗಿರಿ ಕಾಣ್ತಾ ಇಲ್ಲ, ಹಾಗೇ ಜೂಸ್ ಅಂಗಡಿಯವನಿಗೆ ಎರಡು ಪೈನ್ಆಪಲ್ ಜೂಸ್ ಕಳಿಸಲು ಹೇಳು” ಅಂದರು. ಕವಿತಾ ಮುಖದಲ್ಲಿ ಯಾವ ಭಾವವೂ ವ್ಯಕ್ತವಾಗದೇ ಆಯ್ತು ಅಂತ ಹೇಳಿ ಅಲ್ಲಿಂದ ತೆರಳಿದರು.
ನನಗಾದ ಆಶ್ಚರ್ಯ ಅಪ್ಪ ಮಗಳಿಗೆ ಈ ರೀತಿ ಹೇಳಬಹುದಾ, ಅವರಿಗೆ ಬೇಜಾರು ಆಗುವುದಿಲ್ಲವಾ. ಅವರಿಗೆ ಅಂತಸ್ತಿನ ಹಮ್ಮು ಇಲ್ಲವಾ, ನಾವು ಅವರಿಗೆ ಹೊಸಬರು ಬೇರೆ ಅಥವಾ ಎಲ್ಲರೂ ಸಮಾನರು ಎಂಬ ಮಾತನ್ನು ಅಕ್ಷರಶಹ ಮಾಡಿ ತೋರಿಸಿದರಾ ಎಂದು ಹೀಗೆ ಯೋಚನಾ ಲಹರಿಯಲ್ಲಿದ್ದಾಗ ಪೈನ್ಆಪಲ್ ಜೂಸ್ ಬಂತು. ಹುಂ, ಅದನ್ನು ಕುಡಿದು ಹೊರಡಲು ಅನುವಾದಾಗ ಮನಸ್ಸು ಖುಷಿಯಿಂದ ಹೆಮ್ಮೆಯಿಂದ ತುಂಬಿತ್ತು.
ಆದರೂ ಲಂಕೇಶರನ್ನು ನಾನು ಮುಖತಃ ಭೇಟಿ ಮಾಡಿದ್ದನ್ನ ಯಾರಲ್ಲೂ ಎಲ್ಲೂ ಹೇಳಿಕೊಂಡಿರಲಿಲ್ಲ, ಕಾರಣ ಇವೆಲ್ಲ ನಮ್ಮ ಅನುಭವಗಳನ್ನ ಹೆಚ್ಚಿಸಿಕೊಳ್ಳಲು ಸದಾವಕಾಶಗಳು ಅದರ ಲಾಭ ಪಡೆಯುವ ಮನಸ್ಸು ಮಾಡಬಾರದು ಎನ್ನುವುದು ನನ್ನ ಅನಿಸಿಕೆ.
ಅಕ್ಕ ಬಿಎಸ್ಸಿ ಮುಗಿಸಿ ಎಂಎಸ್ಸಿ ಸೇರಿದ್ದಾಗ ಬೆಂಗಳೂರು ಮೆಡಿಕಲ್ ಕಾಲೇಜಲ್ಲಿ ಮೆಡಿಕಲ್ ಸೀಟು ಸಿಕ್ಕಿತೆಂದು ಎಂಎಸ್ಸಿ ಅರ್ಧಕ್ಕೆ ನಿಲ್ಲಿಸಿ ಮೆಡಿಕಲ್ ಸೇರಿ, ಹಾಸ್ಟೆಲ್ ಸೇರಿ ಅಲ್ಲಿ ಹೊಂದಾಣಿಕೆ ಆಗಲಿಲ್ಲ, ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆಗಳೆಂದು ಅಪ್ಪ ಬೆಂಗಳೂರಲ್ಲಿ ಮನೆ ಮಾಡಿಕೊಟ್ಟಿತ್ತು. ತಮ್ಮನನ್ನ ಬಿಎಸ್ಸಿ ಓದಲು ಬಸವನಗುಡಿಯ ನ್ಯಾಷನಲ್ ಕಾಲೇಜಿಗೆ ಸೇರಿಸಿತ್ತು, ಅಮ್ಮ ಅಕ್ಕ ತಮ್ಮ ಬೆಂಗಳೂರು, ನಾನು ದಾವಣಗೆರೆ. ಅಪ್ಪ ತಾನು ಎಲ್ಲಿ ಕೆಲಸಕ್ಕೆ ಇರುತ್ತದೋ ಅಲ್ಲಿ ರೂಮು ಮಾಡಿಕೊಂಡಿತ್ತು.
ಅದು 1993ರ ಒಂದು ದಿನ, ನನ್ನ ಇಂಜಿನಿಯರಿಂಗ್ ಪದವಿ ಮುಗಿದಿತ್ತು. ನಾವು ಬೆಂಗಳೂರಿನ ಬನಶಂಕರಿಯಲ್ಲಿದ್ದೆವು, ನಾನು ಇಂಜಿನಿಯರಿಂಗ್ ಮುಗಿಸಿ ಕೆಲಸದ ಬೇಟೆಯಲ್ಲಿದ್ದ ಕಾಲವದು. ನಾನು ಮನೆ ಕೆಲಸದಲ್ಲಿ ಮಗ್ನಳಾಗಿದ್ದೆ. ಗೇಟ್ ತೆಗೆದು ಯಾರೋ ಒಳ ಬಂದ ಸದ್ದು. ಅಕ್ಕ ಆಚೆ ಹೋಗಿ ನೋಡಿದಳು, ಲಂಕೇಶ್ ನಮ್ಮ ಮನೆಯ ಕಡೆ ಬರುತ್ತಿದ್ದರು ಎಂದು ಹೇಳಿದ ಅವಳ ಖುಷಿ ಹೇಳ ತೀರದು, “ನಮ್ಮ ಮನೆಗೆ ಲಂಕೇಶ್” ಎಂದು ಓಡಿ ಬಂದು ಒಳಗೆ ಹೇಳಿದಳು ನನಗೆ ಎದೆ ಢವಢವ, ಛೇ ಮನೆ ಚೆನ್ನಾಗಿ ಓರಣವಾಗಿಟ್ಟಿದ್ದೇನೆ, ಆದರೆ ಅವರಿಗೆ ತಿನ್ನಲು ಕುಡಿಯಲು ಏನು ಕುಡಿಯಲು ಕೊಡುವುದು ಎನ್ನುವ ಬಗ್ಗೆ ತಲೆ ಕೆಡಿಸಿಕೊಂಡು ಅಡುಗೆ ಮನೆ ಸೇರಿದೆ ಅಮ್ಮ ಅವರಿಗೆ ಟೀ ಕಾಫಿ ಎಂದು ಕೇಳಿದರು ಕಾಫಿ ಆದರೆ ಒಳ್ಳೆಯದು ಎಂದರು ಕಾಫಿ ಮಾಡಿ ಅಮ್ಮ ಹಾಲು ಜಾಸ್ತಿ ಬೆರೆಸಿ ಕೊಟ್ಟರು ಅದನ್ನು ನೋಡಿದ ಕೂಡಲೇ ಲಂಕೇಶರು, “ಇದು ಹಾಲು ಜಾಸ್ತಿಯಾಯ್ತು ಇನ್ನು ಸ್ವಲ್ಪ ಕಾಪಿ ಪುಡಿ ಹಾಕಿ ಕುದಿಸಿ ಕೊಡಿ “ ಎಂದರು. ಅಮ್ಮ ಕೂಡಲೇ ಅದನ್ನ ಮತ್ತೆ ರೀಮೇಕ್ ಮಾಡಿ ತಂದು ಕೊಟ್ಟಾಗ ಯಾವ ಹಮ್ಮು ಬಿಮ್ಮು ಇಲ್ಲದೆ ಮಾತನಾಡುತ್ತಾ ಕಾಫಿ ಕುಡಿಯತೊಡಗಿದರು. ಅಷ್ಟರಲ್ಲಿ ನನ್ನ ಮನಸ್ಸಿಗೆ ಬಂದದ್ದು ಮನೆಯಲ್ಲಿದ್ದ ಕ್ಯಾಮೆರಾ, ಅದರಲ್ಲಿ ರೀಲ್ ಇದೆಯಾ ಎಂದು ನೋಡಿದೆ ಇರಲಿಲ್ಲ. ಅಕ್ಕನಿಗೆ ಹೇಳಿ ಐದೇ ನಿಮಿಷ ಬಂದೆ ಎಂದು ಹೇಳಿ ಬಿಡಿಎ ಕಾಂಪ್ಲೆಕ್ಸ್ನಲ್ಲಿದ್ದ ಸ್ಟುಡಿಯೋದಿಂದ ರೀಲ್ ಹಾಕಿಸಿ ತಂದೆ. ಅಷ್ಟರಲ್ಲಿ ಅವರಿನ್ನೂ ಕಾಫಿ ಕುಡಿದು ಬಟ್ಟಲು ಕೆಳಗಿರಿಸುತ್ತಿದ್ದರು, ನನ್ನ ಮುಖದಲ್ಲಿ ಇಳಿಯುತ್ತಿದ್ದ ಬೆವರು ಒರೆಸಿಕೊಳ್ಳುತ್ತಾ ಕ್ಯಾಮರಾ ಹಿಡಿದು “ಒಂದು ಫೋಟೋ ತೆಗೆದುಕೊಳ್ಳಲೇ” ಎಂದೆ “ಓ ಅಗತ್ಯವಾಗಿ” ಅಂತ ನಗುತ್ತಾ “ಕ್ಯಾಮರಾದಲ್ಲಿ ರೀಲು ಮೊದಲೇ ಇತ್ತಾ” ಎಂದರು. “ಇಲ್ಲ ಈಗ ಹಾಕಿಸಿ ತಂದೆ” ಎಂದೆ ಅವರ ಕಣ್ಣುಗಳಲ್ಲಿ ಆಶ್ಚರ್ಯ ಸಂತೋಷ ಎರಡೂ ಇಣುಕಿತ್ತು.
"ಇಷ್ಟು ಬೇಗ ನೀನು ಹೋಗಿ ರೀಲು ಹಾಕಿಸಿ ತಂದೆಯಾ. ಗುಡ್. ಹೆಣ್ಣು ಮಕ್ಕಳೆಂದರೆ ಹೀಗೇ ಇರಬೇಕು, ಸಬಲರಾಗಿರಬೇಕು, ಧರ್ಯವಂತರಾಗಿರಬೇಕು” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ ಫೋಟೋಗೆ ಪೋಸು ಕೊಟ್ಟರು, ನಾನು ಎಲ್ಲರ ಫೋಟೋ ತೆಗೆದೆ. ನಾನು ಅವರ ಜೊತೆ ಫೋಟೋ ತೆಗೆಸಿಕೊಳ್ಳುವ ವಿಷಯ ತಲೆಗೆ ಬಂದಿರಲೇ ಇಲ್ಲ ಅಥವಾ ಅಕ್ಕನಿಗೆ ಅಮ್ಮನಿಗೆ ಕೂಡ, ಅವರೇ ಕರೆದು ಯಾಕೆ ನೀನು ಬಾ ಫೋಟೋಗೆ ಅಂತ ಕರೆದು ಪಕ್ಕದಲ್ಲಿ ಕೂರಿಸಿಕೊಂಡು ಫೋಟೋಗೆ ನೀಡಿದ ಪೋಸು ನಾನೆಂದೂ ಮರೆಯಲಾಗದ ಕ್ಷಣ.
“ಹೆಣ್ಣು ಮಕ್ಕಳು ಓದಬೇಕು ಸ್ವಾವಲಂಬಿಗಳಾಗಬೇಕು, ಹಾಗಂತ ಗಂಡು ಮಕ್ಕಳು ಎಲ್ಲ ಅವಕಾಶಗಳನ್ನು ಹೆಣ್ಣು ಮಕ್ಕಳಿಗೆ ಬಿಟ್ಟು ಕೊಟ್ಟು ಕಡೆಗೆ ಅವರು ಹಕ್ಕಿಗೆ ಹೋರಾಡುವಂತಾಗಬಾರದು” ಎಂದು ನಕ್ಕಿದ್ದರು.
ಹೆಣ್ಣು ಮಕ್ಕಳು ವಿದ್ಯೆ ಕಲಿಯಬೇಕು, ಸ್ವಾವಲಂಬಿಗಳಾಗಿರಬೇಕು , ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಕೊಡಬೇಕು ಎಂಬ ಆಶಯಗಳನ್ನು ಹೊಂದಿದ್ದ ನಮ್ಮ ಅಪ್ಪನ ಚಿಂತನೆಗಳು ನನ್ನ ಜೀವನ ರೂಪಿಸಿದೆಯೋ ಅದೇ ರೀತಿ ಲಂಕೇಶರ ವಿಚಾರಗಳು ಬಹಳಷ್ಟು ತಿಳುವಳಿಕೆ ಧೈರ್ಯಗಳನ್ನು ನನ್ನಲ್ಲಿ ತುಂಬಿದೆ. ಇಂದಿನ ರಾಜಕೀಯ ಕೆಸರೆರಚಾಟದಲ್ಲಿ ಅವರನ್ನು ನೆನಪಿಸಿಕೊಳ್ಳದ ದಿನಗಳಿಲ್ಲ. ಅವರು ನಮ್ಮಂತಹ ಎಷ್ಟೋ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದರು.
ಪಿ.ಲಂಕೇಶ್ ಅವರೊಂದಿಗೆ ಲೇಖಕಿ ಕೆ.ಬಿ.ನೇತ್ರಾವತಿ