ಆರ್ಯ ವೈಶ್ಯರಿಗೆ ರಾಜಕೀಯ ಅಧಿಕಾರ: ಶಾಸಕ ಆರ್. ರಾಜೇಂದ್ರ ಭರವಸೆ

ಆರ್ಯ ವೈಶ್ಯರಿಗೆ ರಾಜಕೀಯ ಅಧಿಕಾರ: ಶಾಸಕ ಆರ್. ರಾಜೇಂದ್ರ ಭರವಸೆ


ಆರ್ಯ ವೈಶ್ಯರಿಗೆ ರಾಜಕೀಯ ಅಧಿಕಾರ:
ಶಾಸಕ ಆರ್. ರಾಜೇಂದ್ರ ಭರವಸೆ


ಮಧುಗಿರಿ: ಆರ್ಯವೈಶ್ಯ ಜನಾಂಗಕ್ಕೆ ರಾಜಕೀಯ ಅಧಿಕಾರ ಕೊಡುವ ಸಂದರ್ಭದಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ತಿಳಿಸಿದರು.

ಪಟ್ಟಣದ ಅವರ ನಿವಾಸದಲ್ಲಿ ಆರ್ಯವೈಶ್ಯ ಮಂಡಳಿ ಮತ್ತು ವಿವಿಧ ಮಹಿಳಾ ಸಂಘಟನೆಗಳ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಆರ್ಯವೈಶ್ಯ ಜನಾಂಗ ಜವಾಬ್ದಾರಿ ರೀತಿಯಲ್ಲಿ ವ್ಯವಹಾರ ಮಾಡಬೇಕು ಹಾಗೂ ಜನತೆಯೊಂದಿಗೆ ಉತ್ತಮ ರೀತಿಯ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಧುಗಿರಿ ತಾಲ್ಲೂಕಿನಲ್ಲಿ ಕಳೆದ 40 ವರ್ಷಗಳಿಂದ ಆಗದ ಅಭಿವೃದ್ಧಿ ಕಾರ್ಯಗಳು 2013 ಮತ್ತು 2018 ರ ಅವಧಿಯಲ್ಲಿ ಶಾಸಕರಾಗಿದ್ದ ಕೆ.ಎನ್. ರಾಜಣ್ಣ ಅವರ ಅವಧಿಯಲ್ಲಿ ಅಭಿವೃದ್ಧಿಯಾಗಿದೆ. ತಾಲೂಕಿನ ಅಭಿವೃದ್ಧಿಯ ಜೊತೆಗೆ ನಿಮ್ಮಗಳ ವ್ಯವಹಾರ ವೃದ್ಧಿಯಾಗಿದೆ ಎಂದ ಅವರು ವ್ಯವಹಾರದಲ್ಲಿ ಆಸೆ ಇರಲಿ, ಅತಿಯಾಸೆ ಬೇಡ ಎಂದ ಅವರು ಜನಾಂಗಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ನಿಮ್ಮ ಜೊತೆ ಸದಾ ನಾನಿರುತ್ತೇನೆ. ಅಧಿಕಾರಕ್ಕೂ ಮೊದಲು ಹೇಗಿದ್ದೆವೋ ಅದೇ ರೀತಿ ನಮ್ಮ ನಿಮ್ಮ ಭಾಂದವ್ಯ ಇರಲಿ. ಪರಿಷತ್ತಿನಲ್ಲಿ ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ ಎಂದರು.


ಸಹಕಾರ ಮಹಾಮಂಡಳ ಮಾಜಿ ಅಧ್ಯಕ್ಷ ಎನ್. ಗಂಗಣ್ಣ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ತಾಲೂಕಿನಲ್ಲಿ ಶಾಸಕರು ಮಾಡದ ಕೆಲಸವನ್ನು ಮಾಜಿ ಶಾಸಕರ ಪುತ್ರ ರಾಜೇಂದ್ರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನಾಂಗ ಕೆ.ಎನ್. ರಾಜಣ್ಣ ಮತ್ತು ರಾಜೇಂದ್ರ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ  ಶ್ರೀನಿವಾಸ್, ತಾಲೂಕು ಕಸಾಪ ಅಧ್ಯಕ್ಷೆ ಸಹನಾ ನಾಗೇಶ್,  ಮುಖಂಡರುಗಳಾದ ಬದರಿನಾಥ್, ಜಿ.ಆರ್. ವೆಂಕಟೇಶ್ ಬಾಬು, ಎಂ.ಎಸ್. ರಘುನಾಥ್, ಮಧು, ಪುರಸಭಾ ಉಪಾಧ್ಯಕ್ಷ ರಾಧಿಕಾ, ಆನಂದಕೃಷ್ಣ, ಪುರಸಭಾ ಮಾಜಿ ಅಧ್ಯಕ್ಷ ಡಿ.ಜೆ. ಶಂಕರನಾರಾಯಣ ಶೆಟ್ಟಿ, ರಮೇಶ್, ಮೋಹನ್, ಲಕ್ಷಿ÷್ಮ ಮೂರ್ತಿ, ಪುಷ್ಪಾವತಿ, ಭಾರತಮ್ಮ, ಪುಷ್ಪವತಿ, ರತ್ನಯ್ಯ ಶೆಟ್ಟಿ, ನಂಜಮ್ಮ ಹಾಜರಿದ್ದರು.