ಸಾಮಾಜಿಕನ್ಯಾಯಕ್ಕೆಧಕ್ಕೆತರುವ 10% ಇಡಬ್ಲೂಎಸ್‌ತೀರ್ಪು

ಸಾಮಾಜಿಕ ನ್ಯಾಯಕ್ಕೆ ಧಕ್ಕೆ

ಸಾಮಾಜಿಕನ್ಯಾಯಕ್ಕೆಧಕ್ಕೆತರುವ 10% ಇಡಬ್ಲೂಎಸ್‌ತೀರ್ಪು

ಆರ್ಥಿಕ ದುರ್ಬಲ ವರ್ಗಗಳವರಿಗೆ 10% ಮೀಸಲಾತಿ ನೀಡುವ ಸರ್ಕಾರದಆದೇಶಕುರಿತ ಈ ತೀರ್ಪು ನಮಗೇನಾವೇ ಒಪ್ಪಿ ಅಂಗೀಕರಿಸಿರುವ ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಳಲಾದ "ಎಲ್ಲರಿಗೂ ಸಾಮಾಜಿಕ, ಆರ್ಥಿಕ ರಾಜಕೀಯ ನ್ಯಾಯ ಕಲ್ಪಿಸಲಾಗುವುದು" ಎಂಬ ಆಶಯಕ್ಕೆ ಮತ್ತು ಸಂವಿಧಾನದ ಮೂಲಭೂತ ತತ್ವಗಳಲ್ಲೊಂದಾದ ಸಾಮಾಜಿಕ ನ್ಯಾಯಕ್ಕೆ ವಿರುದ್ದವಾದುದಾಗಿದೆ ಎಂದು ವಿಶ್ಲೇಷಿಸಿದ್ದಾರೆ ಹೈಕೋರ್ಟ್ ನ್ಯಾಯವಾದಿ ಹೆಚ್.ವಿ.ಮಂಜುನಾಥ.

ಸಾಮಾಜಿಕನ್ಯಾಯಕ್ಕೆಧಕ್ಕೆತರುವ


10% ಇಡಬ್ಲೂಎಸ್‌ತೀರ್ಪು

      ಆರ್ಥಿಕ ದುರ್ಬಲ ವರ್ಗದವರಿಗೆ ಶೇ 10% ರಷ್ಟು ಮೀಸಲಾತಿ ಕಲ್ಪಿಸಿದ್ದ 103 ನೇಸಂವಿಧಾನದ ತಿದ್ದುಪಡಿ ಕಾಯ್ದೆ-2019 ಅನ್ನು ಸುಪ್ರೀಂ ಕೋರ್ಟ ನ  7.11.2022 ರ ತೀರ್ಪಿನ ಮೂಲಕ ಎತ್ತಿ ಹಿಡಿದಿದ್ದು ಬಹುಚರ್ಚೆಯನ್ ಹುಟ್ಟು ಹಾಕಿದೆ. 

ಐದು ಸದಸ್ಯರ ಸಂವಿಧಾನಿಕ ಪೀಠದ ನ್ಯಾಯಮೂರ್ತಿಗಳು ಆರ್ಥಿಕ ದುರ್ಬಲವರ್ಗದವರ ಮೀಸಲಾತಿಯನ್ನು ನೀಡುವಾಗ ಅನುಸರಿಸಿದ ಆರ್ಥಿಕ ಮಾನದಂಡ ಕುರಿತು ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಒಮ್ಮತವನ್ನು ವ್ಯಕ್ತಪಡಿಸಿದ್ದಾರೆ. 

ನ್ಯಾಯಮೂರ್ತಿ ರವೀಂದ್ರಭಟ್ಟರವರು "ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳನ್ನು ಆರ್ಥಿಕ ದುರ್ಬಲ ವರ್ಗದವರ ಮೀಸಲಾತಿ ವ್ಯಾಪ್ತಿಯಿಂದ ಹೊರಗಿಟ್ಟಿರುವುದರಿಂದ ಸಂವಿಧಾನದ ಮೂಲಭೂತ ರಚನೆಗೆ ಧಕ್ಕೆಆಗುತ್ತದೆ" ಎಂಬ ಕಾರಣದಿಂದ 103 ನೇ ಸಂವಿಧಾನದ ತಿದ್ದುಪಡಿ ಕಾಯ್ದೆ-2019 ಅನ್ನು ಅಸಂವಿಧಾನಿಕ ಎಂದು ತೀರ್ಪಿತ್ತು ತಿದ್ದುಪಡಿಯನ್ನು ರದ್ದುಗೊಳಿಸಿದ್ದಾರೆ. ಈ ತೀರ್ಪಿಗೆ ಮುಖ್ಯನ್ಯಾಯಮೂರ್ತಿಗಳಾಗಿದ್ದ ಯು.ಯು ಲಲಿತ್‌ರವರು ಸಹಮತ ವ್ಯಕ್ತಪಡಿಸಿದ್ದಾರೆ. 

ಆದರೆ ಆರ್ಥಿಕ ಮಾನದಂಡದ ಆಧಾರದ ಮೇಲೆ ಮೀಸಲಾತಿಗೆ ಅವಕಾಶ ಕಲ್ಪಿಸಬಹುದೇ? ಹಾಗೇ ಮಾಡಿದಲ್ಲಿ, ಸಂವಿಧಾನದ ಮೂಲಭೂತ ರಚನಾತತ್ವವನ್ನು ಉಲ್ಲಂಘಿಸಿದಂತೆ ಆಗುತ್ತದೆಯೇ? ಎಂಬುದು ಈ ಪ್ರಕರಣದಲ್ಲಿ ಇದ್ದ ಪ್ರಮುಖ ಅಥವಾ ಕೇಂದ್ರ ಪ್ರಶ್ನೆ ಆಗಿತ್ತು. ಐದು ನ್ಯಾಯಮೂರ್ತಿಗಳು ಆರ್ಥಿಕ ದುರ್ಬಲ ವರ್ಗದವರ ಮೀಸಲಾತಿಯನ್ನು ನೀಡುವಾಗ ಅನುಸರಿಸಿದ ಆರ್ಥಿಕ ಮಾನದಂಡ ಒಪ್ಪಿರುವುದು ಮಾತ್ರವಲ್ಲ ಅದುಸಂವಿಧಾನದ ಮೂಲಭೂತ ರಚನೆಗೆ ಧಕ್ಕೆ ತರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವುದು ಅತ್ಯಂತ ಕಳವಳಕಾರಿಯಾದ ಅಂಶವಾಗಿದೆ. ಇದೇ ಬಹು ದೊಡ್ಡ ಚರ್ಚೆಗೂ ಕಾರಣವಾಗಿದೆ.

ಸಂವಿಧಾನದಲ್ಲಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಲು ಅವಕಾಶ ಇದೆ. 'ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ' ಹಿಂದುಳಿದವರನ್ನು ಗುರುತಿಸುವಿಕೆಯ ಮಾನದಂಡವಾಗಿರುತ್ತದೆ. ಶತಮಾನಗಳ ಕಾಲ ಸಾಮಾಜಿಕ ಕಾರಣಗಳಿಂದ ಅನ್ಯಾಯಕ್ಕೊಳಪಟ್ಟ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಮತ್ತು ಆ ಮೂಲಕ ತಾರತಮ್ಯ ನಿವಾರಣೆ ಮಾಡುವುದು ಇದರ ಮೂಲ ಉದ್ದೇಶ. ಸಂವಿಧಾನದಲ್ಲಿ ಎಲ್ಲಿಯೂ ಆರ್ಥಿಕ ಮಾನದಂಡವನ್ನು ಪರಿಗಣಿಸಿ ಮೀಸಲಾತಿ ಕಲ್ಪಿಸಬೇಕು ಅಥವಾ ಕಲ್ಪಿಸಬಹುದು ಎಂದು ಹೇಳಿಲ್ಲ. ಹೀಗಿರುವಾಗ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಆರ್ಥಿಕ ಮಾನದಂಡವನ್ನು ಪರಿಗಣಿಸಿ ನೀಡಲಾದ ಆರ್ಥಿಕ ದುರ್ಬಲ ವರ್ಗದವರ ಮೀಸಲಾತಿಯನ್ನು ಎತ್ತಿ ಹಿಡಿಯುವುದರ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಮಾನದಂಡವನ್ನು ಬದಲಾಯಿಸುತ್ತದೆ. 

ಈ ತೀರ್ಪು "ಆರ್ಥಿಕಮಾನದಂಡವೊಂದನ್ನೆ ಆಧರಿಸಿ ಮೀಸಲಾತಿ ನೀಡಲು ಬರುವುದಿಲ್ಲ" ಎಂದು ಸುಪ್ರೀಂ ಕೋರ್ಟಿನ ಒಂಬತ್ತು ಸದಸ್ಯರ ಸಂವಿಧಾನಿಕ ಪೀಠ 1992 ರಲ್ಲಿ ಇಂದ್ರಾಸಹಾನಿ ಪ್ರಕರಣದಲ್ಲಿ ನೀಡಿದ್ದ ತೀರ್ಪಿಗೂ ವಿರುದ್ದವಾಗಿದೆ ಮತ್ತು ಅದೇ ತೀರ್ಪಿನಲ್ಲಿ ನಿಗದಿಪಡಿಸಿರುವ ಮೀಸಲಾತಿ ಮಿತಿ ಶೇ 50 ರಷ್ಟು ಮೀರಬಾರದು ಎಂಬುದನ್ನು ಉಲ್ಲಂಘಿಸುತ್ತದೆ.  ಆದರೆ ಹೆಚ್ಚು ಕಮ್ಮಿ ಎಲ್ಲ ನ್ಯಾಯಮೂರ್ತಿಗಳು "ಮೀಸಲಾತಿ ಮಿತಿಯು ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಮತ್ತು ಇತರೆ ಹಿಂದುಳಿದವರ್ಗಗಳಿಗೆ ನೀಡಲಾಗುವ ಮೀಸಲಾತಿಗೆ ಮಾತ್ರಅನ್ವಯಿಸುತ್ತದೆ, 'ಆರ್ಥಿಕ ದುರ್ಬಲ ವರ್ಗಗಳು' ಎಂಬುದು ಪ್ರತ್ಯೇಕ ವರ್ಗವಾಗಿದ್ದು ಮೀಸಲಾತಿ ಮಿತಿ ನಿಯಮ ಅನ್ವಯಿಸುವುದಿಲ್ಲ" ಎಂದು ಅಭಿಪ್ರಾಯ ಪಡುತ್ತಾರೆ. 

ಹಾಗಾಗಿ ಇದು ಏಕ ಕಾಲದಲ್ಲಿ ಮೀಸಲಾತಿಯ ಮಾನದಂಡಗಳು ಮತ್ತು 'ಹಿಂದುಳಿದವರು' ಎಂಬುದರ ಅರ್ಥವನ್ನು ಬದಲಾಯಿಸಿದಂತೆ ಅಥವಾ ಪಲ್ಲಟಗೊಳಿಸಿದಂತೆ ಆಗುತ್ತದೆ. ಆ ಮೂಲಕ ಮೀಸಲಾತಿಯ ವಿಶಾಲ ಪರಿಕಲ್ಪನೆಯನ್ನು ಬುಡ ಸಹಿತ ತೆಗೆದು ಹಾಕಿ ಸಂವಿಧಾನದ ಆಶೋತ್ತರಗಳಿಗೆ ತದ್ವಿರುದ್ಧವಾದ ಹೊಸ ಪರಿಕಲ್ಪನೆಯನ್ನು ನೀಡಿ "ಮೀಸಲಾತಿ ಎಂದರೆ ಬಡತನ ನಿರ್ಮೂಲನ ಕಾರ್ಯಕ್ರಮ" ಎಂಬ ಸೀಮಿತಾರ್ಥವನ್ನು ಕೊಡುತ್ತದೆ. ಮೀಸಲಾತಿ ಪ್ರಾತಿನಿಧ್ಯದ ವಿಷಯವೇ ಹೊರತು ಬಡತನದ ಪ್ರಶ್ನೆಅಲ್ಲ ಎಂಬುದನ್ನು ಮರೆತು ಬಿಡುತ್ತದೆ. ಆ ಮೂಲಕ ಸಂವಿಧಾನದ ಮೂಲತತ್ವಗಳಲ್ಲೊಂದಾದ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಪೆಟ್ಟುಕೊಡುತ್ತದೆ. ಅದೇಕಾರಣಕ್ಕಾಗಿ ಸಂವಿಧಾನದ ಮೂಲಭೂತ ರಚನೆಗೆ ಧಕ್ಕೆ ಆಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. 

"ಇದು ಮೀಸಲಾತಿಯ ಮಾನದಂಡವನ್ನು ಬದಲಾಯಿಸುವುದಿಲ್ಲ; ಸಮಾನತೆಯ ತತ್ವವನ್ನು ಮತ್ತಷ್ಟು ವಿಸ್ತರಿಸುತ್ತದೆ" ಎಂಬ ಇನ್ನೊಂದುವಾದ ಇದೆ ಮತ್ತು ತೀರ್ಪು ಅದನ್ನೇ ಹೇಳುತ್ತದೆ. ಅದರರ್ಥ 'ಅದೂ ಇರುತ್ತೆ ಇದೂ ಇರುತ್ತೆ, ಹಾಗಾಗಿ ಮಾನದಂಡಗಳನ್ನು ಬದಲಾಯಿಸಿದಂತೆ ಆಗುವುದಿಲ್ಲ' ಎಂಬುದು.  ಇದಕ್ಕೆ ನಾವು ಸಾಮಾಜಿಕ ನ್ಯಾಯದ ಮೂಲ ಪರಿಕಲ್ಪನೆಯನ್ನು ಅರಿತರೆ ಇದು ಯಾವ ರೀತಿಯ ಪ್ರಮಾದ ಎಂಬುದು ಅರ್ಥವಾಗುತ್ತದೆ. ಈಗ 'ಅದೂ ಇರುತ್ತೆ ಇದು ಇರುತ್ತೆ' ಎನ್ನುವವರು ನಾಳೆ " ಅದು ಬೇಡ ಇದು ಮಾತ್ರ ಇರಲಿ" ಎನ್ನಬಹುದು. ಮೆಜಾರಿಟಿ ತೀರ್ ಪುನೀಡಿದ ಮೂವರು ನ್ಯಾಯಮೂರ್ತಿಗಳ ಪೈಕಿ ಇಬ್ಬರು ನ್ಯಾಯಮೂರ್ತಿಗಳು "ಸ್ವಾತಂತ್ರ‍್ಯಬಂದು 75 ವರ್ಷ ಮುಗಿಯುತ್ತಿರುವ ಹೊತ್ತಿನಲ್ಲಾದರೂ ಸಮಾಜದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮೀಸಲಾತಿ ವ್ಯವಸ್ಥೆ ಬಗ್ಗೆ ಪುನರ್‌ ಪರಿಶೀಲಿಸಬೇಕು ಮತ್ತು ಮೀಸಲಾತಿಗೆ ಕಾಲಮಿತಿ ನಿಗದಿಗೊಳಿಸಬೇಕು. ಬಾಬಾ ಸಾಹೇಬರು ಮೀಸಲಾತಿಯನ್ನು ಕೇವಲ ಹತ್ತು ವರ್ಷಕ್ಕೆ ಅಳವಡಿಸಿದ್ದರೂ ಏಳು ದಶಕಗಳು ಕಳೆದರೂ ಮುಂದುವರೆಯುತ್ತಿದೆ. ಹಾಗಾಗಿ ಅನಿರ್ಧಿಷ್ಟ ಕಾಲ ಮುಂದುವರೆಸಬಾರದು" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಈ ನನ್ನ ಅನುಮಾನ ಮತ್ತು ಕಳವಳಕ್ಕೆ ಕಾರಣವಾಗಿವೆ. 

ಇದು ಏನನ್ನು ಹೇಳುತ್ತದೆ ಎಂದು ಅರ್ಥೈಸಿಕೊಂಡರೆ ಸಂವಿಧಾನ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯಲ್ಲಿ ನಂಬಿಕೆಯಿಟ್ಟಿರುವವರೆಲ್ಲರಿಗೂ ಇದೊಂದು ಅಪಾಯದ ಕರೆಗಂಟೆ ಎಂಬುದು ತಿಳಿಯುತ್ತದೆ. 

ಈಗ ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಮೀಸಲಾತಿ ನೀತಿಯ ಅನುಸಾರ 101 ಜಾತಿಗಳುಳ್ಳ ಪರಿಶಿಷ್ಟಜಾತಿಗೆ ಶೇ 17, 51 ಜಾತಿಗಳುಳ್ಳ ಪರಿಶಿಷ್ಟ ಪಂಗಡಕ್ಕೆ ಶೇ 7 ಮತ್ತು 207 ಜಾತಿಗಳುಳ್ಳ ಓಬಿಸಿಗೆ ಶೇ 32 ರಷ್ಟು ಮೀಸಲಾತಿ ಇದೆ. ಆದರೆ ಪ್ರಾತಿನಿಧ್ಯದ ಕೊರತೆ ಇಲ್ಲದಿದ್ದರೂ ಅಗತ್ಯಕ್ಕಿಂತ ಹೆಚ್ಚು ಪ್ರಾತಿನಿಧ್ಯ ಇದ್ದಾಗ್ಯೂ ಶೇಕಡಾವಾರು 4 ರಷ್ಟಿರುವ ಬ್ರಾಹ್ಮಣ, ಆರ್ಯವೈಶ್ಯ, ನಗರ್ತ, ಜೈನ್‌ ಮತ್ತು ಮೊದಲಿಯಾರ್- ಈ ಐದು ಜಾತಿಗಳಿಗೆ ಇಡಬ್ಲೂಎಸ್‌ ಹೆಸರಿನಲ್ಲಿ ಶೇ.10 ರಷ್ಟು ಮೀಸಲಾತಿ ನಿಗದಿಗೊಳಿಸಲಾಗಿದೆ ಮತ್ತು ಅದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. 

ಒಟ್ಟಾರೆಯಾಗಿ ಹೇಳುವುದಾದರೆ ಈ ತೀರ್ಪು ನಮಗೇನಾವೇ ಒಪ್ಪಿ ಅಂಗೀಕರಿಸಿರುವ ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಳಲಾದ "ಎಲ್ಲರಿಗೂ ಸಾಮಾಜಿಕ, ಆರ್ಥಿಕ ರಾಜಕೀಯ ನ್ಯಾಯ ಕಲ್ಪಿಸಲಾಗುವುದು" ಎಂಬ ಆಶಯಕ್ಕೆ ಮತ್ತು ಸಂವಿಧಾನದ ಮೂಲಭೂತ ತತ್ವಗಳಲ್ಲೊಂದಾದಸಾಮಾಜಿಕನ್ಯಾಯಕ್ಕೆವಿರುದ್ದವಾದುದಾಗಿದೆ.



ಹಿನ್ನೋಟ

8.1.2019 - ಕೇಂದ್ರ ಸರ‍್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಆಗಿನ ಮಂತ್ರಿ ಮತ್ತು ಕರ‍್ನಾಟಕದ ಈಗಿನ ರಾಜ್ಯಪಾಲರಾದ ಶ್ರೀ ಥಾವರ್‌ ಚಂದ್‌ ಗೆಹ್ಲೋಟ್ ಸಂವಿಧಾನದ (124ನೇ ತಿದ್ದುಪಡಿ) ಮಸೂದೆ-2019 ಅನ್ನು ಲೋಕಸಭೆಯಲ್ಲಿ ಮಂಡಿಸಿದರು.

9.1.2019- ಚಳಿಗಾಲದ ಅಧಿವೇಶನದ ಕೊನೆಯ ದಿನ ಲೋಕಸಭೆ ಸಂವಿಧಾನದ (124ನೇ ತಿದ್ದುಪಡಿ) ಮಸೂದೆ-2019 ಅನ್ನು ಅಂಗೀಕರಿಸಿತು.  ಅಂದು ಹಾಜರಿದ್ದ 326 ಲೋಕ ಸಭಾಸದಸ್ಯರ ಪೈಕಿ 323 ಪರ ಮತ್ತು 3 ವಿರುದ್ದ ಮತಗಳು ಬಿದ್ದವು.

10.1.2019- ರಾಜ್ಯ ಸಭೆಯಲ್ಲಿ ಮಂಡಿಸಲಾಯಿತು ಮತ್ತು ಅಂದೇ ಅಂಗೀಕರಿಸಲಾಯಿತು. 165 ಮತಗಳು ಮಸೂದೆಪರ ಮತ್ತು 7 ಮತಗಳು ವಿರುದ್ದ ಬಿದ್ದವು. 

12.1.2019- ಆಗಿನ ರಾಷ್ಟ್ರಪತಿಗಳಾದ ಶ್ರೀ. ರಾಮನಾಥ ಕೋವಿಂದ್ ಮಸೂದೆಗೆ ಅಂಕಿತಹಾಕಿದರು.

14.1.2019- ಸದರಿ ಮಸೂದೆಯು ಸಂವಿಧಾನದ ( 103ನೇ ತಿದ್ದುಪಡಿ) ಕಾಯ್ದೆ-2019 ಆಗಿ ಜಾರಿಗೆ ಬಂದಿತು.

7.11.2022- ಸರ‍್ವೋಚ್ಚ ನ್ಯಾಯಾಲಯವು 3:2 ರ ಮೆಜಾರಿಟಿ ಆದೇಶದ ಪ್ರಕಾರ ಸಂವಿಧಾನದ ( 103ನೇ ತಿದ್ದುಪಡಿ) ಕಾಯ್ದೆ-2019 ಅನ್ನು ಎತ್ತಿ ಹಿಡಿಯಿತು.