ಜಾತಿ- ಭೂಮಿ ಪ್ರಶ್ನೆಯೊಡನೆ ಹಿಂದುತ್ವ-ಮಾರುಕಟ್ಟೆಗೆ ಮುಖಾಮುಖಿಯಾದ ಬಿಹಾರ

ಆದರೆ ಬಿಹಾರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಅಭಿವೃದ್ಧಿ ಮಾದರಿ-ಕಲ್ಯಾಣ ಯೋಜನೆಗಳು ಬಗೆಹರಿಸುವುದಿಲ್ಲ. ಇದಕ್ಕೆ ಬೇಕಿರುವುದು   ನವ ಉದಾರವಾದಿ ಆರ್ಥಿಕತೆಗಿಂತಲೂ ಭಿನ್ನವಾದ, ತಳಸಮಾಜದ ಅವಕಾಶವಂಚಿತರ,  ಸೌಲಭ್ಯ ವಂಚಿತರ ಬದುಕನ್ನು ಹಸನುಗೊಳಿಸುವ, ಸುಭದ್ರ ಭವಿಷ್ಯವನ್ನು ಒದಗಿಸುವ ಪರ್ಯಾಯ ಆರ್ಥಿಕ ನೀತಿಗಳು. ಎಡಪಕ್ಷಗಳನ್ನೂ ಒಳಗೊಂಡಂತೆ,  ವಿರೋಧ ಪಕ್ಷಗಳು ಈ ದಿಕ್ಕಿನಲ್ಲಿ ಯೋಚಿಸಲು ಸಾಧ್ಯವೇ ? ಇಲ್ಲವಾದಲ್ಲಿ ತಳಸಮಾಜದ ದುಡಿಯುವ ಜನತೆ ಹೆಚ್ಚು ಸೌಲಭ್ಯಗಳನ್ನು ನೀಡುವ ರಾಜಕೀಯ ಮೈತ್ರಿಕೂಟವನ್ನೇ ಬೆಂಬಲಿಸುವುದು ನಿಶ್ಚಿತ.

ಜಾತಿ- ಭೂಮಿ ಪ್ರಶ್ನೆಯೊಡನೆ ಹಿಂದುತ್ವ-ಮಾರುಕಟ್ಟೆಗೆ ಮುಖಾಮುಖಿಯಾದ ಬಿಹಾರ

 

ನಾ ದಿವಾಕರ

        ಸ್ವಾತಂತ್ರ್ಯ ಬಂದ ದಿನದಿಂದ ವರ್ತಮಾನದವರೆಗೂ ಬಿಹಾರವನ್ನು ಬಂಧಿಸಿರುವ ಸಮಾನ ಎಳೆ ಅಭಿವೃದ್ಧಿ ಅಥವಾ ಪ್ರಜಾಪ್ರಭುತ್ವ ಅಲ್ಲ. ಈ ಎಳೆಯನ್ನು ಎಷ್ಟೇ ಬಿಡಿಸಿ ನೋಡಿದರೂ ಆಂತರಿಕವಾಗಿ ನಮಗೆ ಅಲ್ಲಿ ಕಾಣುವುದು ಜಾತಿ ಅಸ್ಮಿತೆ-ರಾಜಕಾರಣ ಮತ್ತು ಭೂಮಾಲೀಕರ ಊಳಿಗಮಾನ್ಯ ದಬ್ಬಾಳಿಕೆ. ಬದಲಾದ ಭಾರತದಲ್ಲಿ ಬದಲಾಗದೆಯೇ ಉಳಿದಿರುವ ಒಂದು ರಾಜ್ಯವಾಗಿ ಬಿಹಾರವನ್ನು ಈ ನೆಲೆಗಳಲ್ಲಿ ಇಂದಿಗೂ ನಿಲ್ಲಿಸಬಹುದು. ಪಕ್ಷಗಳು ಬದಲಾಗಿವೆ, ಸಿದ್ದಾಂತಗಳು ಅದಲುಬದಲಾಗಿವೆ, ತತ್ವಗಳು ಚುನಾವಣಾ ಮಾರುಕಟ್ಟೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾಗುತ್ತಾ ಬಂದಿವೆ. ಮಾರ್ಕ್ಸ್‌, ಲೋಹಿಯಾ, ಅಂಬೇಡ್ಕರ್‌ ತತ್ವಗಳು , ರಾಜಕೀಯ ಅವಕಾಶವಾದದ ಅಸ್ತ್ರಗಳಾಗಿ ಪರಿಣಮಿಸಿದ್ದು, ಈಗ ನಮ್ಮ ನಡುವೆ ಇಲ್ಲದ ಕರ್ನಾಟಕದ ಹಿರಿಯ ರಾಜಕಾರಣಿಯೊಬ್ಬರು ಹೇಳಿದ್ದಂತೆ “ ಪಕ್ಷಾಂತರಿಗಳಾದರೂ ತತ್ವಾಂತರಿಗಳಾಗದ ” ರಾಜಕಾರಣಿಗಳಿಗೆ ಬಿಹಾರ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ.

 

      ಈ ಬದಲಾವಣೆಗಳ ನಡುವೆ, ಜಾರ್ಖಂಡ್‌ ರಾಜ್ಯ ಪ್ರತ್ಯೇಕವಾಗುವ ಮುನ್ನ ಅಮೂಲ್ಯ ನೈಸರ್ಗಿಕ ಸಂಪತ್ತು, ಅಪಾರ ಅರಣ್ಯ ಮತ್ತು ಖನಿಜಗಳ ಸಮೃದ್ಧ ಗಣಿಯಾಗಿದ್ದ ಬಿಹಾರ, ತದನಂತರದಲ್ಲಿ ಕೃಷಿಯನ್ನು ಹೊರತು ಮತ್ತಾವುದೇ ಉತ್ಪಾದನಾ ಮೂಲಗಳಿಲ್ಲದ ರಾಜ್ಯವಾಗಿ ಬದಲಾಗಿದ್ದು , ಇಲ್ಲಿನ ರಾಜಕೀಯ ಪಲ್ಲಟಗಳ ಒಂದು ಭಾಗವಾಗಿದೆ. ಉತ್ಪಾದನಾ/ತಯಾರಿಕೆಯ ಕೈಗಾರಿಕೆಗಳಿಲ್ಲದ ಬಿಹಾರದಲ್ಲಿ, ಗ್ರಾಮೀಣ ಯುವಜನಾಂಗಕ್ಕೆ ಜೀವನೋಪಾಯ ಮಾರ್ಗವಾಗಿ ಉಳಿದಿರುವ ಒಂದೇ ಆಯ್ಕೆ ಎಂದರೆ ಅನ್ಯ ರಾಜ್ಯಗಳಿಗೆ, ಅನ್ಯ ದೇಶಗಳಿಗೆ ವಲಸೆ ಹೋಗುವುದು ಮತ್ತು ಸುಭದ್ರ ನೌಕರಿ ಒದಗಿಸದೆ ಆನ್‌ಲೈನ್‌ ಮಾರುಕಟ್ಟೆ, ಸೇವಾ ವಲಯಗಳು. ಈ ವ್ಯತ್ಯಯಗಳ ನಡುವೆಯೇ ಕಳೆದ ಹತ್ತು ವರ್ಷಗಳಲ್ಲಿ ಲೋಹಿಯಾವಾದಿ ನೀತಿಶ್‌ ಕುಮಾರ್‌ ಅವರ ಅವಕಾಶವಾದಿ ರಾಜಕಾರಣದ ಫಲವಾಗಿ, ಬಿಜೆಪಿ ತನ್ನ ಕಾರ್ಪೋರೇಟ್‌ ಹಿಂದುತ್ವವಾದಿ ರಾಜಕಾರಣವನ್ನು ಬಿಹಾರದಲ್ಲಿ ಪ್ರಯೋಗಿಸುತ್ತಿದೆ.

 

ಡತನದ ಶಾಶ್ವತ ಛಾಯೆಯಲ್ಲಿ

     ಭಾರತದ ಬಡರಾಜ್ಯಗಳೆಂದೇ ಹೆಸರಾಗಿರುವ BIMARU ರಾಜ್ಯಗಳ (ಬಿಹಾರ, ಮಧ್ಯಪ್ಷದೇಶ, ರಾಜಸ್ಥಾನ, ಉತ್ತರಪ್ರದೇಶ ) ಸಮಾನ ಲಕ್ಷಣ ಎಂದರೆ ನಾಲ್ಕೂ ರಾಜ್ಯಗಳಲ್ಲಿ ಭೂಮಾಲೀಕರ ದಬ್ಬಾಳಿಕೆ, ಊಳಿಗಮಾನ್ಯ ಸಮಾಜ ಜೀವಂತವಾಗಿದ್ದು ಅಷ್ಟೇ ಪ್ರಮಾಣದಲ್ಲಿ ಜಾತಿ ದೌರ್ಜನ್ಯಗಳನ್ನೂ ಈಗಲೂ ಕಾಣಬಹುದು. ಈ ರಾಜ್ಯಗಳ ಪೈಕಿ ಅತಿಹೆಚ್ಚು ನೈಸರ್ಗಿಕ ಖನಿಜ ಸಂಪತ್ತನ್ನು ಹೊಂದಿದ್ದಾಗಲೂ ಸಹ ( ಕಬ್ಬಿಣದ ಅದಿರು, ಮೈಕಾ, ತಾಮ್ರ ಮತ್ತು ಕಲ್ಲಿದ್ದಲು) ಬಿಹಾರ ಬಡರಾಜ್ಯ ಎನಿಸಿಕೊಂಡಿತ್ತು. ಏಕೆಂದರೆ 1970ರ ದಶಕದ ಭೂ ಸುಧಾರಣೆಗಳಾಗಲೀ, ಪ್ರಬಲ ಎಡಪಂಥೀಯ ಚಳುವಳಿಗಳಾಗಲೀ, ಇಲ್ಲಿ ಭೂ ಸಂಬಂಧಗಳನ್ನು, ಭೂಮಾಲಿಕತ್ವದ ನೆಲೆಗಳನ್ನು ಭಂಗಗೊಳಿಸಲು ಸಾಧ್ಯವಾಗಿಲ್ಲ. ಆದರೆ 1960-70ರ ಎಡಪಂಥೀಯ ಚಳುವಳಿಗಳು ಭೂಮಾಲೀಕರ ದರ್ಪ-ದಬ್ಬಾಳಿಕೆಗಳನ್ನು ಕಡಿಮೆ ಮಾಡುವಲ್ಲಿ ತಮ್ಮದೇ ಆದ ಪಾತ್ರ ವಹಿಸಿವೆ.

      ಈಗ ಕೇವಲ ಕೃಷಿ ಭೂಮಿಯನ್ನೇ ಪ್ರಧಾನವಾಗಿ ನಂಬಿಕೊಂಡಿದ್ದರೂ, ಬಿಹಾರದಲ್ಲಿರುವ ಫಲವತ್ತಾದ ಕೃಷಿ ಭೂಮಿ, ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆಗಳನ್ನು ಪಡೆದಿವೆ. ಆಹಾರ ಸಂಸ್ಕರಣೆಯ ಔದ್ಯಮಿಕ ಘಟಕಗಳನ್ನು ಸ್ಥಾಪಿಸುವ ಮೂಲಕ ಇಲ್ಲಿನ ಕೃಷಿ ಉತ್ಪನ್ನಗಳನ್ನು ವ್ಯವಸ್ಥಿತವಾಗಿ ಮಾರುಕಟ್ಟೆ ಮಾಡಬಹುದಿತ್ತು. ಈ ಕೈಗಾರಿಕಾ ಘಟಕಗಳು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಕಲ್ಪಿಸಬಹುದಿತ್ತು. ಯಾವ ಸರ್ಕಾರವೂ ಇದನ್ನು ಮಾಡದಿರುವುದರಿಂದ  ಬಿಹಾರದ ಕಚ್ಚಾ ಕೃಷಿ ಉತ್ಪನ್ನಗಳು ಇತರ ರಾಜ್ಯಗಳಿಗೆ ರವಾನೆಯಾಗುತ್ತಿದ್ದು, ಉದ್ಯೋಗಾವಕಾಶಗಳನ್ನು ಕುಂಠಿತಗೊಳಿಸಿದೆ. ಮೊದಲಿನಿಂದಲೂ ಪಶುಸಂಗೋಪನೆಗೆ ಹೆಸರಾಗಿರುವ ಬಿಹಾರದಲ್ಲಿ ಹಾಲು ಉತ್ಪನ್ನಗಳನ್ನು ತಯಾರಿಸುವ ಹೈನುಗಾರಿಕೆ ಉದ್ಮಮಗಳನ್ನೂ ಅಭಿವೃದ್ಧಿಪಡಿಸಲಾಗಿಲ್ಲ. ಆಧುನಿಕೀಕರಣಗೊಳ್ಳದೆ ವಾಣಿಜ್ಯೀಕರಣಕ್ಕೊಳಗಾಗದೆ  ರಾಜ್ಯ ಹಿಂದುಳಿದಿದೆ.

 

      ಆಧುನಿಕ ಆರ್ಥಿಕತೆಯ ಜೀವನಾಡಿ ಎಂದೇ ಪರಿಗಣಿಸಲ್ಪಡುವ ಪ್ರವಾಸೋದ್ಯಮಕ್ಕೂ ಸಹ ಬಿಹಾರ ಪ್ರಶಸ್ತ ಸ್ಥಳವಾಗಿದೆ. ಇತಿಹಾಸ ಪ್ರಸಿದ್ಧ ಬುದ್ಧ ಗಯಾ, ನಳಂದ ವಿಶ್ವವಿದ್ಯಾಲಯ, ರಾಜ್‌ಗಿರ್‌, ವೈಶಾಲಿಯ ಬೌದ್ಧ ವಲಯ ಪ್ರವಾಸೋದ್ಯಮದ ಕೇಂದ್ರಗಳಾಗಿ ರಾಜ್ಯಕ್ಕೆ ಆದಾಯ ಒದಗಿಸಬಲ್ಲದು.  ವಿಶ್ವದ ಎಲ್ಲ ಭಾಗಗಳಿಂದ ಇಲ್ಲಿಗೆ ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ಆದರೆ  ಸೂಕ್ತ ಮೂಲ ಸೌಕರ್ಯಗಳಿಲ್ಲದೆ, ಈ ಯಾತ್ರಾಸ್ಥಳಗಳು ನಿರ್ಲಕ್ಷಿಸಲ್ಪಟ್ಟಿವೆ. ಇನ್ನೂ ಕುತೂಹಲದ ಸಂಗತಿ ಎಂದರೆ ಬಿಹಾರದಲ್ಲಿ ಅತಿ ಹೆಚ್ಚು ಪ್ರಮಾಣದ ವಿದ್ಯಾವಂತ, ಇಂಗ್ಲಿಷ್‌ ಮಾತನಾಡಬಲ್ಲ ಯುವ ಜನಾಂಗ ಇದೆ. ಹಾಗಾಗಿ ಸಾಫ್ಟ್‌ ವೇರ್‌ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಉದ್ದಿಮೆಯನ್ನು ಅಭಿವೃದ್ಧಿಪಡಿಸುವ ಮೂಲಕ ಬಿಹಾರಲ್ಲಿ ಉದ್ಯೋಗ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಈ ನಡುವೆ ಕೇಂದ್ರ ಸರ್ಕಾರ ಬಿಹಾರದಲ್ಲಿ ಡಿಫೆನ್ಸ್‌ ಕಾರಿಡಾರ್‌ ನಿರ್ಮಿಸುವ ಯೋಜನೆಯನ್ನು ಜನರ ಮುಂದಿರಿಸಿದೆ !!

 

ಜಾತಿ ಮತ್ತು ಭೂಮಿಯ ನಡುವೆ

      ಈ ಎಲ್ಲ ಸಂಭಾವ್ಯ ಪ್ರಗತಿಗೆ ಅಡ್ಡಿಯಾಗಿರುವುದು ಬಿಹಾರದ ಜಾತಿ ರಾಜಕಾರಣ ಮತ್ತು ಸಮಾಜದ ಎಲ್ಲ ಸ್ತರಗಳಲ್ಲೂ ಹರಡಿರುವ ಮೇಲ್ಜಾತಿಗಳ ಪ್ರಾಬಲ್ಯ, ಆಧಿಪತ್ಯ ಮತ್ತು ಯಜಮಾನಿಕೆ. ಸ್ವಾತಂತ್ರ್ಯಪೂರ್ವದಲ್ಲಿ ಬಿಹಾರದ ಇಡೀ ಸಂಪತ್ತಿನ ಒಡೆತನ ಹೊಂದಿದ್ದ ಮೇಲ್ಜಾತಿ ಸಮುದಾಯಗಳು (ಬ್ರಾಹ್ಮಣ, ರಜಪೂತ್‌, ಭೂಮಿಹಾರ್‌ ಮತ್ತು ಕಾಯಸ್ತ ) ತಮ್ಮ ಪ್ರಭಾವವನ್ನು ಕಳೆದುಕೊಂಡಿದ್ದು 1960ರ ನಂತರದ ಹಿಂದುಳಿದ ವರ್ಗಗಳ ಹಕ್ಕೊತ್ತಾಯದ ಹೋರಾಟಗಳ ಪ್ರಭಾವದಿಂದ. 1980-90ರ ಮಂಡಲ್‌ ಯುಗದಲ್ಲಿ ಇದೇ ಆಂದೋಲನವನ್ನು ರಾಜಕೀಯವಾಗಿ ಬಳಸಿಕೊಂಡ ಲಲ್ಲೂ ಪ್ರಸಾದ್‌ ಯಾದವ್‌, ಶರದ್‌ ಯಾದವ್‌ ರಾಮ್‌ ವಿಲಾಸ್‌ ಪಾಸ್ವಾನ್‌,  ನೀತಿಶ್‌ ಕುಮಾರ್‌ ಮೂಲತಃ ಲೋಹಿಯಾ ಸಮಾಜವಾದದ ಅನುಯಾಯಿಗಳಾಗಿದ್ದು, ಈಗಲೂ ಸಹ ಇವರ ಪಕ್ಷಗಳು ಪ್ರಬಲ ರಾಜಕೀಯ ಶಕ್ತಿಗಳಾಗಿ ಕಾಣುತ್ತವೆ.

 

     ಹಿಂದುಳಿದ ವರ್ಗಗಳ ಜನಾಂದೋಲನಗಳು, ರಾಮ್‌ ವಿಲಾಸ್‌ ಪಾಸ್ವಾನ್‌ ಮುಂತಾಧ ನಾಯಕರ ನೇತೃತ್ವದಲ್ಲಿ ರೂಪುಗೊಂಡ ಪ್ರಬಲ ದಲಿತ ಚಳುವಳಿಗಳು ತಮ್ಮ ಪ್ರಭಾವವನ್ನು ಉಳಿಸಿಕೊಂಡಿದ್ದರೂ ಸಹ, ಇಂದಿಗೂ ಸಹ ಶೇಕಡಾ 15.5ರಷ್ಟು ಜನಸಂಖ್ಯೆ ಹೊಂದಿರುವ ಮೇಲ್ಜಾತಿಗಳು ಶೇಕಡಾ 31ರಷ್ಟು ಸರ್ಕಾರಿ ನೌಕರಿಗಳನ್ನು ಆಕ್ರಮಿಸಿವೆ. ಮೇಲ್ಜಾತಿಗಳ ಶೇಕಡಾ 10ರಷ್ಟು ಕುಟುಂಬಗಳು ಮಾಸಿಕ 50,000 ರೂ ಆದಾಯ ಗಳಿಸುತ್ತಿದ್ದರೆ, ಒಬಿಸಿಗಳಲ್ಲಿ ಈ ಪ್ರಮಾಣ ಶೇಕಡಾ 4, ಅತಿ ಹಿಂದುಳಿದ ಮತ್ತು ದಲಿತ ಸಮುದಾಯಗಳಲ್ಲಿ ಶೇಕಡಾ 2ರಷ್ಟು ಕುಟುಂಬಗಳು ಮಾತ್ರ ಇಷ್ಟು ಆದಾಯ ಗಳಿಸುತ್ತಿವೆ. ಪರಿಶಿಷ್ಟ ಪಂಗಡಗಳಲ್ಲಿ ಇದು ಶೇಕಡಾ 1ರಷ್ಟಿದೆ. 20 ಎಕರೆಗೂ ಹೆಚ್ಚಿನ ಶೇಕಡಾ 80ಕ್ಕೂ ಹೆಚ್ಚು ಭೂಮಿ ಮೇಲ್ಜಾತಿಗಳ ಒಡೆತನದಲ್ಲಿದೆ ಎಂದು ಮಾನವ ಅಭಿವೃದ್ಧಿ ಸಮೀಕ್ಷೆ -2011ರಲ್ಲಿ ದಾಖಲಿಸಲಾಗಿದೆ.

 

       ಲಲ್ಲೂ ಯಾದವ್‌ ಆಳ್ವಿಕೆಯನ್ನು ಜಂಗಲ್‌ ರಾಜ್‌ ಎಂದು ಮೂದಲಿಸುತ್ತಾ ತಮ್ಮ ಆಳ್ವಿಕೆಯನ್ನು ಸು-ಶಾಸನ್‌ (ಉತ್ತಮ ಆಳ್ವಿಕೆ) ಎಂದು ಬೆನ್ನುತಟ್ಟಿಕೊಳ್ಳುವ ನೀತಿಶ್‌ ಕುಮಾರ್‌ ʼವಿಕಾಸ ಪುರುಷʼ ಎಂಬ ಬಿರುದನ್ನೂ ಸಂಪಾದಿಸಿದ್ದಾರೆ. ಆದರೆ ಪ್ರಸ್ತುತ ಚುನಾವಣೆಗಳ ನಡುವೆಯೇ ಜನ ಸುರಾಜ್‌ ಪಕ್ಷದ ನಾಯಕರೊಬ್ಬರ ಹತ್ಯೆಯಾಗಿರುವುದು ಭಿನ್ನ ಚಿತ್ರಣವನ್ನೇ ನೀಡುತ್ತದೆ. ಈ ಘಟನೆಯನ್ನು ಬದಿಗಿಟ್ಟು ನೋಡಿದಾಗಲೂ, ಒಬಿಸಿ (ಇತರ ಹಿಂದುಳಿದ ವರ್ಗಗಳು) , ಇಬಿಸಿ (ತೀವ್ರ ಹಿಂದುಳಿದ ವರ್ಗಗಳು) ರಾಜಕೀಯ ಪ್ರಾಬಲ್ಯ ಗಳಿಸಿ ದಶಕಗಳ ಆಳ್ವಿಕೆ, ಆಂದೋಲನಗಳನ್ನು ನಡೆಸಿದ್ದರೂ, ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟಗಳಲ್ಲಿ, ರಾಜ್ಯವನ್ನು ಕಾಡುತ್ತಿರುವ ಕೈಗಾರಿಕೋದ್ಯಮದ, ಉತ್ಪಾದನಾ ಉದ್ದಿಮೆಗಳ ಕೊರತೆ,  ಉದ್ಯೋಗ ಕೊರತೆ, ಭೂಮಾಲೀಕತ್ವ ಮತ್ತು ಜಾತಿ ಶೋಷಣೆಗಳು ಪ್ರಧಾನ ಕಾರ್ಯಸೂಚಿಗಳಾಗಿಲ್ಲ. ಸಿಪಿಐ ಎಂಎಲ್‌ ಲಿಬರೇಷನ್‌ ಮತ್ತಿತರ ಎಡಪಕ್ಷಗಳು ಮಾತ್ರ ಈ ಜಟಿಲ ಸಿಕ್ಕುಗಳನ್ನು ಬಿಡಿಸಲು ಹೋರಾಟ ನಡೆಸುತ್ತಲೇ ಬಂದಿವೆ.

 

ಹೊಸ ಮಾದರಿ ಕಾಣದ  ಕಾರ್ಯಸೂಚಿಗಳು

 

    ಲಲ್ಲೂ ಆಗಲೀ ನೀತಿಶ್‌ ಆಗಲೀ ತಮ್ಮ ಆಳ್ವಿಕೆಯಲ್ಲಿ ಅಥವಾ ರಾಜಕಾರಣದಲ್ಲಿ ತಮ್ಮ ಸಮುದಾಯಗಳಲ್ಲೇ ಇರುವ ಶ್ರೀಮಂತ ಭೂಮಾಲೀಕರ ವಿರುದ್ಧ ಎಂದಿಗೂ ದನಿಎತ್ತಿಲ್ಲ. ಬಿಹಾರದ ಆರ್ಥಿಕತೆಯೇ ಚುನಾವಣೆಗಳಲ್ಲಿ ಮಾನದಂಡವಾಗಿದ್ದರೆ, ನೀತಿಶ್‌ ಕುಮಾರ್‌ 20 ವರ್ಷಗಳ ಆಳ್ವಿಕೆ ಎಂದೋ ಕೊನೆಯಾಗುತ್ತಿತ್ತು. ನೀತಿಶ್‌ ನೇತೃತ್ವದ ಮೈತ್ರಿಕೂಟಕ್ಕೆ ವಿರುದ್ಧವಾಗಿ ರೂಪಿಸಲಾಗಿರುವ ಮಹಾಘಟ ಬಂಧನ್‌ ಮೈತ್ರಿಕೂಟವು ಆಡಳಿತ ವೈಫಲ್ಯ, ಆರ್ಥಿಕ ಹಿನ್ನಡೆ ಮುಂತಾದ ಸಮಸ್ಯೆಗಳನ್ನು ಮಂದಿಟ್ಟಿವೆಯಾದರೂ, ಸ್ಪಷ್ಟವಾದ ಪರ್ಯಾಯ ಆರ್ಥಿಕ ನೀತಿಯನ್ನು ಜನರ ಮುಂದಿಡುವಲ್ಲಿ ವಿಫಲವಾಗಿವೆ. ಬಹಳ ಮುಖ್ಯವಾಗಿ ಬಿಹಾರವನ್ನು ಕಾಡುತ್ತಿರುವ ವಲಸೆ ಕಾರ್ಮಿಕರ ಸಮಸ್ಯೆ, ಉದ್ಯೋಗ ಸೃಷ್ಟಿ ಮತ್ತು ಅಸಮಾನತೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸ್ಪಷ್ಟ ಕಾರ್ಯಸೂಚಿಗಳು ಕಾಣುವುದಿಲ್ಲ.

 

     ಚಿರಾಗ್‌ ಪಾಸ್ವಾನ್‌ ಅವರ ಎಲ್‌ಜೆಪಿ ಮತ್ತು ಪ್ರಶಾಂತ್‌ ಕಿಶೋರ್‌ ಅವರ ಜನಸುರಾಜ್‌ ಪಕ್ಷಗಳು ಆಹಾರ ಸಂಸ್ಕರಣೆ ಉದ್ದಿಮೆಗಳು, ಸೇವಾ ವಲಯದ ಅಭಿವೃದ್ಧಿಯ ಬಗ್ಗೆ ಮಾತನಾಡಿದರೂ, ಮೂಲತಃ ಬಿಹಾರದ ಬದಲಾವಣೆಗೆ ಅತ್ಯವಶ್ಯವಾಗಿರುವ ಸಂಪತ್ತಿನ ಮರುವಿತರಣೆ ಅಥವಾ ಭೂ ಸುಧಾರಣೆಯ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಹಾಗಾಗಿ ಎಲ್ಲ ಪಕ್ಷಗಳು ಜನರ ಮುಂದಿಡುವ ಅಭಿವೃದ್ಧಿ ಮಾದರಿಗಳಲ್ಲೂ ಕಾಣಬಹುದಾದ ಸಮಾನ ಎಳೆ ಎಂದರೆ, ದೊಡ್ಡ ಭೂಮಾಲೀಕರ, ಕಾರ್ಪೋರೇಟ್-ವಾಣಿಜ್ಯೋದ್ಯಮಿಗಳ ಹಾಗೂ ಅಧಿಕಾರಶಾಹಿಯ ಕೈಯ್ಯಲ್ಲಿ ಸಂಪತ್ತಿನ ಕ್ರೋಢೀಕರಣವಾಗುವುದನ್ನು ತಪ್ಪಿಸುವ ಆಶಯಗಳ ಕೊರತೆ.  ಎಡಪಕ್ಷಗಳು ಸಂಪತ್ತಿನ ಮರುವಿತರಣೆಯ ಕಾರ್ಯಸೂಚಿಯನ್ನು ಹೊಂದಿದ್ದರೂ, ಅದನ್ನು ಸಾಮಾಜಿಕ ನ್ಯಾಯದ  ನೆಲೆಯಲ್ಲಿ ಕಾರ್ಯಗತಗೊಳಿಸುವ ಸ್ಪಷ್ಟ ನೀಲನಕ್ಷೆಯನ್ನು ಹೊಂದಿಲ್ಲ ಅಂದರೆ ಮುಂದುವರೆದ ಜಾತಿಗಳ ಭೂ ಹೀನ ರೈತರು ಎದುರಿಸುವ ಸಮಸ್ಯೆಗಳಿಗಿಂತಲೂ ಭಿನ್ನವಾದ ಜಟಿಲವಾದ ಸಮಸ್ಯೆಗಳನ್ನು ತಳಸಮುದಾಯಗಳ ರೈತರು ಎದುರಿಸುತ್ತಾರೆ ಎಂಬ ವಾಸ್ತವವನ್ನು ವಿಶ್ಲೇಷಿಸಲು ಸಾಧ್ಯವಾಗಿಲ್ಲ.

 

ಕಾರ್ಪೋರೇಟ್‌ ಆರ್ಥಿಕತೆ-ವಾಸ್ತವ ಸನ್ನಿವೇಶ

     ಬಿಜೆಪಿಯ ಆರ್ಥಿಕ ವಿಶ್ಲೇಷಕರು ಬಿಹಾರವನ್ನು ದೇಶದಲ್ಲೇ ಅತಿ ವೇಗದ ಅಭಿವೃದ್ಧಿ ಆರ್ಥಿಕತೆ ಎಂದೇ ವ್ಯಾಖ್ಯಾನಿಸುತ್ತಾರೆ. 2025-26ರ ವೇಳೆಗೆ ಬಿಹಾರದ ಜಿಎಸ್‌ಡಿಪಿ, ಅಂದರೆ ರಾಜ್ಯದ ಒಟ್ಟು ಉತ್ಪಾದನೆಯ ಅಭಿವೃದ್ಧಿ ಪ್ರಮಾಣವು ಶೇಕಡಾ 22ರಷ್ಟಾಗುತ್ತದೆ ಅರ್ಥಾತ್‌ 11 ಲಕ್ಷ ಕೋಟಿ ರೂಗಳಾಗುತ್ತದೆ ಎಂದು ಅಂದಾಜಿಸುತ್ತಾರೆ. ಆದರೆ ಪದಾರ್ಥಗಳ ಶಾಶ್ವತ ಬೆಲೆಗಳನ್ನು ಆಧರಿಸಿ ನೋಡಿದಾಗ, ಇದು ಶೇಕಡಾ 9.2ರಷ್ಟಾಗುತ್ತದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಜನಸಂಖ್ಯೆಯಲ್ಲಿ ದೇಶದ ಮೂರನೆ ದೊಡ್ಡ ರಾಜ್ಯವಾಗಿರುವ ಬಿಹಾರ, ಜಿಎಸ್‌ಡಿಪಿ ಅಭಿವೃದ್ಧಿಯಲ್ಲಿ 14ನೇ ಶ್ರೇಣಿಯಲ್ಲಿದೆ. ತಲಾ ಆದಾಯ ಗಳಿಕೆಯಲ್ಲಿ 29 ರಾಜ್ಯಗಳ ಪೈಕಿ 28ನೆ ಸ್ಥಾನದಲ್ಲಿದೆ. ಕಳೆದ ಹತ್ತು ವರ್ಷಗಳಲ್ಲಿ ಬಿಹಾರ ಅಭೂತಪೂರ್ವ ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಬೆನ್ನುತಟ್ಟಿಕೊಳ್ಳುವ ಎನ್‌ಡಿಎ ಒಕ್ಕೂಟ ಮೂಲ ಸೌಕರ್ಯಗಳ ಅಭಿವೃದ್ಧಿಯನ್ನೇ ಪ್ರಧಾನವಾಗಿ ಪರಿಗಣಿಸುತ್ತದೆ. (ಇದೇ ಅವಧಿಯಲ್ಲಿ 15 ಸೇತುವೆಗಳು ಕುಸಿದಿರುವುದು ಸುದ್ದಿಯಾಗುವುದಿಲ್ಲ.)

 

     ಆದರೆ ಬಿಹಾರದಲ್ಲಿ ನಿರೀಕ್ಷಿಸಲಾಗುತ್ತಿರುವ ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಅನುದಾನ ಒದಗಿಸುತ್ತಿರುವುದು ಕೇಂದ್ರ ಸರ್ಕಾರ. 33  ಸಾವಿರ ಕೋಟಿ ರೂಗಳ 875 ಕಿಲೋಮೀಟರ್‌ ಹೆದ್ದಾರಿ ಉನ್ನತೀಕರಣ, 675 ಕೋಟಿ ರೂಗಳ ಜಿಲ್ಲಾ ಮಟ್ಟದ ರಸ್ತೆ ಅಭಿವೃದ್ಧಿ,  3,822 ಕೋಟಿ ರೂಗಳ ಚತುಷ್ಪತ ಸಾಹೆಬ್‌ಗಂಜ್-ಅರೆರಾಜ್-ಬೆಟ್ಟಯ್ಯ ಕಾರಿಡಾರ್‌ ರಸ್ತೆ,  2,192 ಕೋಟಿ ರೂಗಳ ಭಕ್ತಿಯಾರ್‌ಪುರ, ರಾಜ್‌ಗಿರ-ತಾತಯ್ಯ ರೈಲ್ವೇ ಮಾರ್ಗವನ್ನು ಎರಡು ಹಳಿಗಳಾಗಿ ಪರಿವರ್ತಿಸುವುದು, ಅಮೃತ ಭಾರತ್‌ ಎಕ್ಷ್‌ಪ್ರೆಸ್‌ ರೈಲು ಯೋಜನೆಯ 1 ಲಕ್ಷ ಕೋಟಿ ರೂ ಯೋಜನೆ , ಇವೆಲ್ಲ ಯೋಜನೆಗಳಿಗೂ ಕೇಂದ್ರ ಸರ್ಕಾರವೇ ಹಣಕಾಸು ನೀಡುತ್ತಿದೆ. ಇಲ್ಲಿ ನೇರವಾಗಿ ಗಮನಿಸಬಹುದಾದ ಅಂಶ ಎಂದರೆ ಜಿಲ್ಲೆಗಳ ರಸ್ತೆ ಅಭಿವೃದ್ಧಿಗಿಂತಲೂ ಹೆಚ್ಚಿನ ಪ್ರಾಶಸ್ತ್ಯವನ್ನು ಹೆದ್ದಾರಿಗಳಿಗೆ ನೀಡಿರುವುದು. ಅಂದರೆ ತಳಸಮಾಜಕ್ಕೆ ಅಗತ್ಯವಾದ ಅಭಿವೃದ್ಧಿಯ ಕೆಲಸಗಳು ನಿರ್ಲಕ್ಷ್ಯಕ್ಕೊಳಗಾಗುತ್ತಿವೆ.

      ಆದರೆ ಬಿಹಾರದ ಹಿಂದುಳಿಯುವಿಕೆಗೆ ಮೂಲ ಕಾರಣ ಇರುವುದು ಸ್ಥಳೀಯ ಉದ್ಯೋಗಗಳ ಕೊರತೆಯಲ್ಲಿ. ಬಿಹಾರದಲ್ಲಿ ಕೈಗಾರಿಕಾ ಬೆಳವಣಿಗೆಯ ಪ್ರಮಾಣ 2018-19ರಲ್ಲಿ ಶೇಕಡಾ 8.5ರಷ್ಟಿದ್ದುದು, ಕೋವಿದ್‌ ವರ್ಷದಲ್ಲಿ ಶೇಕಡಾ 6.2ಕ್ಕೆ ಕುಸಿದಿತ್ತು, 2022-23ರ ವೇಳೆಗೆ ಶೇಕಡಾ 10.5ರಷ್ಟು ದಾಖಲಾಗಿತ್ತು. ಆದರೆ 2023-24ರ ಉತ್ಪಾದನಾ ವಲಯದ ವಾರ್ಷಿಕ ಸಮೀಕ್ಷೆಯ ಅನುಸಾರ ಶೇಕಡಾ 5.8ಕ್ಕೆ ಕುಸಿದಿದೆ. ಸೇವಾ ವಲಯದಲ್ಲಿ ಬಿಹಾರ ಶೇಕಡಾ 58.6ರಷ್ಟು ಪಾಲನ್ನು ಹೊಂದಿರುವುದು ಸಕಾರಾತ್ಮಕವಾಗಿ ಕಂಡರೂ ಇದಕ್ಕೆ ಕಾರಣ ಆನ್‌ಲೈನ್‌ ವಾಣಿಜ್ಯ ಉದ್ದಿಮೆಗಳ ಹೆಚ್ಚಳ. ಇದು ಸುಸ್ಥಿರ ಅಥವಾ ಶಾಶ್ವತ ಉದ್ಯೋಗಗಳನ್ನು ಸೃಷ್ಟಿಸುವುದಿಲ್ಲ. ಹಾಗಾಗಿಯೇ ಬಿಹಾರದಿಂದ ಉದ್ಯೋಗ ಅರಸಿ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ್

 

ಶ್ರಮಿಕರ ಬವಣೆ ಆಳ್ವಿಕೆಯ ನಿರ್ಲಕ್ಷ್ಯ

 

     ಬಿಜೆಪಿಯ ಅರ್ಥಶಾಸ್ತ್ರಜ್ಞರ ಮಾಹಿತಿಯ ಅನುಸಾರವೇ 2023ರಲ್ಲಿ ಬಿಹಾರದ 23 ಸಾವಿರ ಕಾರ್ಮಿಕರು ವಿದೇಶಗಳಿಗೆ ವಲಸೆ ಹೋಗಿದ್ದಾರೆ. ಉಳಿದಂತೆ ರಾಜ್ಯದ ಶೇಕಡಾ 7.2ರಷ್ಟು ಜನರು ಇತರ ರಾಜ್ಯಗಳಿಗೆ ವಲಸೆ ಹೋಗಿ ತಮ್ಮ ಸ್ಥಳೀಯ ಕುಟುಂಬಗಳನ್ನು ನಿರ್ವಹಿಸುತ್ತಿದ್ದಾರೆ. ಈ ಅಗಾಧ ಸಂಖ್ಯೆಯ ವಲಸೆ ಕಾರ್ಮಿಕರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ಯಾವುದೇ ನೀಲನಕ್ಷೆಯನ್ನು ನೀತಿಶ್‌ ಸರ್ಕಾರ ಅಥವಾ ಎನ್‌ಡಿಎ ಒಕ್ಕೂಟ ಒದಗಿಸುವುದಿಲ್ಲ. ಈ ಕಾರ್ಮಿಕರು ರಾಜ್ಯದ ಬೊಕ್ಕಸಕ್ಕೆ ರವಾನಿಸುವ ಹಣ ಬಹುಮಟ್ಟಿಗೆ ಜನರ ಜೀವನೋಪಾಯ ನಿರ್ವಹಣೆಗೆ ಖರ್ಚಾಗುತ್ತಿದೆ. ಈ ಅಪಾರ ಪ್ರಮಾಣದ ಹಣವನ್ನು ಕಾರ್ಪೋರೇಟ್‌ ಶೇರು ಮಾರುಕಟ್ಟೆಗೆ ವರ್ಗಾಯಿಸುವ ನಿಟ್ಟಿನಲ್ಲಿ ನೀತಿಶ್‌ ಸರ್ಕಾರ ಯೋಚಿಸುತ್ತಿದೆಯೇ ಹೊರತು, ಇದನ್ನು ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಒದಗಿಸುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿಲ್ಲ. .

 

 

      ಬಿಹಾರದಲ್ಲಿ ಇಂದಿಗೂ ಸಹ ಶೇಕಡಾ 46ರಷ್ಟು ಕಾರ್ಮಿಕರು  ಕಡಿಮೆ ಆದಾಯ ಒದಗಿಸುವ ಕೃಷಿ ವಲಯವನ್ನೇ ಅವಲಂಬಿಸಿದ್ದಾರೆ. ಇದಕ್ಕೆ ಕಾರಣ ಪಾರಂಪರಿಕ ಭೂಮಾಲೀಕತ್ವ ಇನ್ನೂ ಜೀವಂತವಾಗಿರುವುದು. ಬಿಹಾರದ ಊಳಿಗಮಾನ್ಯ ವ್ಯವಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿರುವ ಭೂಮಿಯ ಮರುವಿತರಣೆಯ ಪ್ರಮಾಣದಲ್ಲಿ ಗುರುತಿಸಬಹುದು.  ಶೇಕಡಾ 52ರಷ್ಟು ಸಣ್ಣ ರೈತರು ತಾವು ಬೆಳೆದ ಫಸಲಿನ ಶೇಕಡಾ 50ರಷ್ಟು  ಮಾತ್ರ ಪಡೆಯುತ್ತಾರೆ. ಇದು ಅವರಿಗೆ ಮರು ಹೂಡಿಕೆಗೆ ಸಮರ್ಪಕವಾಗಿರುವುದಿಲ್ಲ.. ಬದುಕು ಕಟ್ಟಿಕೊಳ್ಳಲೂ ನೆರವಾಗುವುದಿಲ್ಲ. ಇಲ್ಲಿ ಉಲ್ಬಣಿಸಬಹುದಾದ ಅಸಮಾಧಾನಗಳನ್ನು ತಣಿಸುವ ಸಲುವಾಗಿಯೇ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದಿಂದ ಪ್ರತಿ ಮಹಿಳೆಗೂ 10 ರೂಗಳನ್ನು ಸ್ವಯಂ ಉದ್ಯೋಗ ಸೃಷ್ಟಿಸುವ ಸಲುವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಈ ಹಣವನ್ನು ರಾಜ್ಯ ಬೊಕ್ಕಸದಿಂದ ನೀಡಲಾಗುವುದಿಲ್ಲ, ಬದಲಾಗಿ ಬ್ಯಾಂಕ್‌ಗಳಲ್ಲಿ ಅರ್ಜಿ ಸಲ್ಲಿಸಿ, ಮಹಿಳೆಯರು ಬ್ಯಾಂಕಿನ ನಿಬಂಧನೆಗಳಿಗನುಸಾರವಾಗಿ ಸಾಲದ ರೂಪದಲ್ಲಿ ಪಡೆಯುತ್ತಾರೆ.

 

ಮರೀಚಿಕೆಗಳ ಬೆನ್ನಟ್ಟಿ

 

     ಈ ಹಲವು ವ್ಯತ್ಯಯಗಳ ನಡುವೆ ಬಿಹಾರ ಚುನಾವಣೆಯನ್ನು ಎದುರಿಸುತ್ತಿದ್ದು, ಮೊದಲನೆ ಹಂತದ ಮತದಾನ ಮುಗಿದಿದೆ. ನವ ಉದಾರವಾದ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಯ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯನ್ನು ಅನುಸರಿಸುತ್ತಲೇ, ದುಡಿಯುವ ವರ್ಗಗಳಲ್ಲಿ, ತಳಸಮಾಜದ ಅವಕಾಶವಂಚಿತರಲ್ಲಿ ಹಾಗೂ ಬಡತನದ ಅಂಚಿನಲ್ಲಿರುವ ಶ್ರೀಸಾಮಾನ್ಯರಲ್ಲಿ ಉಂಟಾಗಬಹುದಾದ ಅಸಮಾಧಾನ, ಹತಾಶೆ ಮತ್ತು ಆಕ್ರೋಶಗಳನ್ನು ತಣಿಸುವ ʼ ಕಲ್ಯಾಣ ಯೋಜನೆ ʼ (Welfare schemes) ಅಥವಾ ಉಚಿತ ಸೌಲಭ್ಯಗಳನ್ನು ಒದಗಿಸುವ, ಮಾದರಿಯನ್ನು ಎನ್‌ಡಿಎ ಒಕ್ಕೂಟ ಜನರ ಮುಂದಿರಿಸಿದೆ. ವಿರೋಧ ಪಕ್ಷಗಳ ಒಕ್ಕೂಟ, ಮಹಾಘಟ್‌ಬಂಧನ್‌ ಸಹ ಇದೇ ಮಾದರಿಯನ್ನು ಉನ್ನತೀಕರಿಸಿ ಹೆಚ್ಚಿನ ಸೌಲಭ್ಯಗಳ ಆಶ್ವಾಸನೆಯನ್ನು ನೀಡಿದೆ.

 

      ಆದರೆ ಬಿಹಾರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಅಭಿವೃದ್ಧಿ ಮಾದರಿ-ಕಲ್ಯಾಣ ಯೋಜನೆಗಳು ಬಗೆಹರಿಸುವುದಿಲ್ಲ. ಇದಕ್ಕೆ ಬೇಕಿರುವುದು   ನವ ಉದಾರವಾದಿ ಆರ್ಥಿಕತೆಗಿಂತಲೂ ಭಿನ್ನವಾದ, ತಳಸಮಾಜದ ಅವಕಾಶವಂಚಿತರ,  ಸೌಲಭ್ಯ ವಂಚಿತರ ಬದುಕನ್ನು ಹಸನುಗೊಳಿಸುವ, ಸುಭದ್ರ ಭವಿಷ್ಯವನ್ನು ಒದಗಿಸುವ ಪರ್ಯಾಯ ಆರ್ಥಿಕ ನೀತಿಗಳು. ಎಡಪಕ್ಷಗಳನ್ನೂ ಒಳಗೊಂಡಂತೆ,  ವಿರೋಧ ಪಕ್ಷಗಳು ಈ ದಿಕ್ಕಿನಲ್ಲಿ ಯೋಚಿಸಲು ಸಾಧ್ಯವೇ ? ಇಲ್ಲವಾದಲ್ಲಿ ತಳಸಮಾಜದ ದುಡಿಯುವ ಜನತೆ ಹೆಚ್ಚು ಸೌಲಭ್ಯಗಳನ್ನು ನೀಡುವ ರಾಜಕೀಯ ಮೈತ್ರಿಕೂಟವನ್ನೇ ಬೆಂಬಲಿಸುವುದು ನಿಶ್ಚಿತ.

ಬಿಹಾರ- ಒಂದು ಪುಟ್ಟ ಪರಿಚಯ

      ಭಾರತ ಗಣರಾಜ್ಯದಲ್ಲಿ ಬಿಹಾರ ಉತ್ತರ ಪೂರ್ವ ಭಾಗದ ಒಂದು ರಾಜ್ಯ. ಸುಮಾರು 10.50 ಕೋಟಿ ಜನಸಂಖ್ಯೆಯಿದೆ. ಜನಸಂಖ್ಯೆಯ ದೃಷ್ಟಿಯಿಂದ ಎರಡನೇ ಅತಿ ದೊಡ್ಡರಾಜ್ಯ, ವಿಸ್ತೀರ್ಣದಲ್ಲಿ 12 ನೇ ದೊಡ್ಡಮತ್ತು 2024 ರಲ್ಲಿ ಜಿಡಿಪಿ ಯಲ್ಲಿ 14 ನೇ ದೊಡ್ಡ ರಾಜ್ಯವಾಗಿದೆ .] ಬಿಹಾರವು ಪಶ್ಚಿಮಕ್ಕೆ ಉತ್ತರ ಪ್ರದೇಶ ನೇಪಾಳ ಪಶ್ಚಿಮ ಬಂಗಾಳದ ಉತ್ತರ ಭಾಗ ಮತ್ತು ದಕ್ಷಿಣಕ್ಕೆ ಜಾರ್ಖಂಡ್  ಅನ್ನು ಪಶ್ಚಿಮದಿಂದ ಪೂರ್ವಕ್ಕೆ ಹರಿಯುವ ಗಂಗಾ ನದಿಯಿಂದ ಭಾಗಗೊಂಡಿದೆ.

    ನವೆಂಬರ್ 15, 2000 ರಂದು, ದಕ್ಷಿಣ ಬಿಹಾರದ ದೊಡ್ಡ ಭಾಗವನ್ನು ಬಿಟ್ಟುಕೊಟ್ಟು ಜಾರ್ಖಂಡ್‌ ರಾಜ್ಯವನ್ನು ಸೃಜಿಸಲಾಯಿತು. 2020 ರ ವರದಿಯ ಪ್ರಕಾರ ಬಿಹಾರದ ಜನಸಂಖ್ಯೆಯ ಸುಮಾರು 11.27% ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.. ಬಿಹಾರವು ಯಾವುದೇ ಭಾರತೀಯ ರಾಜ್ಯಕ್ಕಿಂತ ಹೆಚ್ಚಿನ ಯುವಜನರನ್ನು ಹೊಂದಿದೆ.  ಅಧಿಕೃತ ಭಾಷೆ ಹಿಂದಿ,ಉರ್ದು ಜೊತೆಗೆ ಮುಖ್ಯ ಸ್ಥಳೀಯ ಭಾಷೆಗಳು ಮೈಥಿಲಿ, ಮಗಾಹಿ ಮತ್ತು ಭೋಜ್‌ಪುರಿ, ಆದರೆ ಸಣ್ಣ ಮಟ್ಟದಲ್ಲಿ ಮಾತನಾಡುವ ಹಲವಾರು ಇತರ ಭಾಷೆಗಳೂ ಇವೆ.

     ಬಿಹಾರವು ಒಟ್ಟು 94,163 ಕಿ.ಮೀ (36,357 ಚದರ ಮೈಲಿ) ವಿಸ್ತೀರ್ಣವನ್ನು ಹೊಂದಿದ್ದು , ಸಮುದ್ರ ಮಟ್ಟಕ್ಕಿಂತ ಸರಾಸರಿ 173 ಅಡಿ (53 ಮೀ) ಎತ್ತರದಲ್ಲಿದೆ. ಇದು ಉತ್ತರದಲ್ಲಿ ನೇಪಾಳ , ದಕ್ಷಿಣದಲ್ಲಿ ಜಾರ್ಖಂಡ್ , ಪೂರ್ವದಲ್ಲಿ ಪಶ್ಚಿಮ ಬಂಗಾಳ ಮತ್ತು ಪಶ್ಚಿಮದಲ್ಲಿ ಉತ್ತರ ಪ್ರದೇಶದಿಂದ ಕೂಡಿದೆ. ಇದು ಭೌತಿಕ ಮತ್ತು ರಚನಾತ್ಮಕ ಪರಿಸ್ಥಿತಿಗಳ ಆಧಾರದ ಮೇಲೆ ಮೂರು ಭಾಗಗಳನ್ನು ಹೊಂದಿದೆ: ದಕ್ಷಿಣ ಪ್ರಸ್ಥಭೂಮಿ , ಶಿವಾಲಿಕ್ ಪ್ರದೇಶ ಮತ್ತು ಬಿಹಾರದ ಗಂಗಾ ಬಯಲು .  ಇದಲ್ಲದೆ, ಫಲವತ್ತಾದ ಬಿಹಾರ ಬಯಲಿನ ವಿಶಾಲವಾದ ಪ್ರದೇಶವನ್ನು ಗಂಗಾ ನದಿಯಿಂದ ಎರಡು ಅಸಮಾನ ಭಾಗಗಳಾಗಿ ವಿಂಗಡಿಸಲಾಗಿದೆ - ಉತ್ತರ ಬಿಹಾರ ಮತ್ತು ದಕ್ಷಿಣ ಬಿಹಾರ. ಗಂಗಾ ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತದೆ ಮತ್ತು ಅದರ ಉಪನದಿಗಳೊಂದಿಗೆ, ಬಿಹಾರ ಬಯಲಿನ ಕೆಲವು ಭಾಗಗಳಲ್ಲಿ ನಿಯಮಿತವಾಗಿ ಪ್ರವಾಹ ಉಂಟು ಮಾಡುತ್ತದೆ. ಮುಖ್ಯ ಉತ್ತರ ಉಪನದಿಗಳು ನೇಪಾಳದ ಹಿಮಾಲಯದಲ್ಲಿ ಹುಟ್ಟುವ ಗಂಡಕ್ ಮತ್ತು ಕೋಶಿ ಮತ್ತು ಕಠ್ಮಂಡು ಕಣಿವೆಯಲ್ಲಿ ಹುಟ್ಟುವ ಬಾಗ್ಮತಿ . ಇತರ ಉಪನದಿಗಳು ಸನ್, ಬುಧಿ ಗಂಡಕ್ , ಚಂದನ್, ಒರ್ಹಾನಿ ಮತ್ತು ಫಾಲ್ಗು .  ಬಿಹಾರವು 6,764.14 ಚದರ ಕಿಮೀ  ಅರಣ್ಯ ಪ್ರದೇಶವನ್ನು ಹೊಂದಿದೆ , ಅರಣ್ಯವು ಬಿಹಾರದ ಭೌಗೋಳಿಕ ಪ್ರದೇಶದ ಶೇಕಡಾ 7.1 ರಷ್ಟಿದೆ.

     ಬಿಹಾರವು ಸಂಪೂರ್ಣವಾಗಿ ಸಮಶೀತೋಷ್ಣ ವಲಯದ ಉಪೋಷ್ಣವಲಯದ ಪ್ರದೇಶದಲ್ಲಿದೆ ಮತ್ತು ಅದರ ಹವಾಮಾನ ಪ್ರಕಾರವು ಆರ್ದ್ರ ಉಪೋಷ್ಣವಲಯವಾಗಿದೆ . ಇದರ ತಾಪಮಾನವು ಸಾಮಾನ್ಯವಾಗಿ ಉಪೋಷ್ಣವಲಯವಾಗಿದ್ದು, ಬಿಸಿ ಬೇಸಿಗೆ ಮತ್ತು ಶೀತ ಚಳಿಗಾಲವನ್ನು ಹೊಂದಿರುತ್ತದೆ. ಬಿಹಾರವು ಸರಾಸರಿ ದೈನಂದಿನ ಹೆಚ್ಚಿನ ತಾಪಮಾನವನ್ನು ಕೇವಲ 26 °C ಮತ್ತು ವಾರ್ಷಿಕ ಸರಾಸರಿ 26 °C ಹೊಂದಿದೆ. ಹವಾಮಾನವು ತುಂಬಾ ಬೆಚ್ಚಗಿರುತ್ತದೆ, ಆದರೆ ಕೆಲವೇ ಉಷ್ಣವಲಯದ ಮತ್ತು ಆರ್ದ್ರ ತಿಂಗಳುಗಳನ್ನು ಹೊಂದಿರುತ್ತದೆ. ವರ್ಷದ ಹಲವಾರು ತಿಂಗಳುಗಳು ನಿರಂತರವಾಗಿ 25 °C ಗಿಂತ ಹೆಚ್ಚಿನ ತಾಪಮಾನದಲ್ಲಿ, ಕೆಲವೊಮ್ಮೆ 29 °C ವರೆಗಿನ ತಾಪಮಾನದಲ್ಲಿ ಬೆಚ್ಚಗಿರುತ್ತದೆ ಅಥವಾ ಬಿಸಿಯಾಗಿರುತ್ತದೆ. ಕಡಿಮೆ ಮಳೆಯಿಂದಾಗಿ ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ ಪ್ರಯಾಣಿಸಲು ಉತ್ತಮ ಸಮಯ. ಮೇ ನಿಂದ ಸೆಪ್ಟೆಂಬರ್ ವರೆಗೆ ಮಳೆಯ ದಿನಗಳು .

 

 ( ಈ ಲೇಖನದ ಕೆಲವು ವ್ಯಾಖ್ಯಾನಗಳು, ಮಾಹಿತಿ, ದತ್ತಾಂಶ ಮತ್ತು ಅಂಕಿ ಅಂಶಗಳಿಗೆ ಆಧಾರ : ಬಿ ಎಸ್.‌ ಶಿವರಾಮನ್‌ ಅವರ ಲೇಖನ ಹಾಗೂ ದ ಹಿಂದೂ ಪತ್ರಿಕೆಯ, ನವಂಬರ್‌ 5ರ ಸಂಚಿಕೆಯ ಲೇಖನ Biharʼs Electoral battles should be about land and not caste alone  ̲ ಅಪರಾಜಯ್‌ ಮತ್ತು ಶ್ರೀನಿವಾಸನ್‌ ರಮಣಿ)

-೦-೦-೦-೦-