ಕರ್ನಾಟಕದ ಹೊಸ ಆಳ್ವಿಕೆಯೂ,  ನಾಗರಿಕ ಸಮಾಜದ ಹೊಣೆಯೂ 

ಬಹುಸಂಖ್ಯೆಯ ಜನತೆ ತಾವು ಎದುರಿಸುವ ಸಾಮಾಜಿಕ-ಆರ್ಥಿಕ ಸವಾಲುಗಳಿಗೆ ಪರಿಹಾರವನ್ನೂ ಸರ್ಕಾರಗಳ ಆಡಳಿತ-ಆರ್ಥಿಕ ನೀತಿಗಳಲ್ಲೇ ಕಂಡುಕೊಳ್ಳಲು ಯತ್ನಿಸುತ್ತಾರೆ. ಇಲ್ಲಿ ಜನಸಾಮಾನ್ಯರು ಜನಪ್ರತಿನಿಧಿಗಳಿಂದ ಆರ್ಥಿಕ ಪ್ರಾಮಾಣಿಕತೆ, ನೈತಿಕ ಸಂಯಮ, ಸಂವಿಧಾನಬದ್ಧತೆ ಹಾಗೂ ಜನಪರ ಕಾಳಜಿಯನ್ನು ನಿರೀಕ್ಷಿಸುತ್ತಲೇ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುತ್ತಾರೆ.

ಕರ್ನಾಟಕದ ಹೊಸ ಆಳ್ವಿಕೆಯೂ,  ನಾಗರಿಕ ಸಮಾಜದ ಹೊಣೆಯೂ 

ಅಭಿಮತ


ನಾ ದಿವಾಕರ

2023ರ ಕರ್ನಾಟಕದ ಚುನಾವಣಾ ಫಲಿತಾಂಶಗಳು ಖಚಿತ ಗೆಲುವಿನ ಭ್ರಮೆಯಲ್ಲಿದ್ದ ಬಿಜೆಪಿ ನಾಯಕರನ್ನು ಸಂಪೂರ್ಣವಾಗಿ ವಿಚಲಿತಗೊಳಿಸಿದೆ. ಅಧಿಕಾರ ಕಳೆದುಕೊಂಡು 40 ದಿನಗಳು ಕಳೆದಿದ್ದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವಲ್ಲಿ ಪಕ್ಷ ವಿಫಲವಾಗಿರುವುದು ಒಂದೆಡೆ ಪಕ್ಷದೊಳಗಿನ ಆಂತರಿಕ ತಲ್ಲಣವನ್ನೂ ಮತ್ತೊಂದೆಡೆ ಜವಾಬ್ದಾರಿಯ ಕೊರತೆಯನ್ನೂ ತೋರಿಸುತ್ತದೆ. ಆಡಳಿತಾರೂಢ ಪಕ್ಷದ ಮುಖ್ಯಮಂತ್ರಿ ಆಯ್ಕೆಗಿಂತಲೂ ವಿರೋಧ ಪಕ್ಷ ನಾಯಕನ ಆಯ್ಕೆ ಜಟಿಲವಾಗುವುದು ಅಧಿಕಾರ ರಾಜಕಾರಣದ ಒಂದು ಮಜಲನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಹೊಸ ಸರ್ಕಾರದ ಅವಸರದ ನಿರ್ಧಾರಗಳನ್ನು ಅಥವಾ ಅವೈಜ್ಞಾನಿಕವಾಗಿ-ಪೂರ್ವಸಿದ್ಧತೆಯಿಲ್ಲದೆ ಘೋಷಿಸಲಾದ ಕೆಲವು ಯೋಜನೆಗಳನ್ನು ವಿರೋಧಿಸುವುದನ್ನೇ ಪ್ರಧಾನ ಅಸ್ತ್ರವನ್ನಾಗಿ ಪರಿಗಣಿಸಿರುವ ಬಿಜೆಪಿ ನಾಯಕರಿಗೆ ತಾವು ಎಡವಿದ್ದೆಲ್ಲಿ ಎಂದು ಅರ್ಥವಾಗುವುದು ತುಸು ಕಷ್ಟವೇ ಆಗಬಹುದು. ಏಕೆಂದರೆ ಭಾರತದ ರಾಜಕಾರಣದಲ್ಲಿ ಯಾವುದೇ ರಾಜಕೀಯ ಪಕ್ಷಗಳೂ ತಮ್ಮ ಅಧಿಕಾರಾವಧಿಯ ದುರಾಡಳಿತವನ್ನು ಪ್ರಾಮಾಣಿಕವಾಗಿ ವಿಶ್ಲೇಷಣೆಗೊಳಪಡಿಸುವುದಿಲ್ಲ. ಬಿಜೆಪಿಯೂ ಇದಕ್ಕೆ ಹೊರತಲ್ಲ.


 ಈ ನಡುವೆ ತನ್ನ ಗೆಲುವಿನಿಂದ ಅತಿರೇಕದ ಆತ್ಮವಿಶ್ವಾಸದಿಂದ ಬೀಗುತ್ತಿರುವ ಕಾಂಗ್ರೆಸ್ ಪಕ್ಷವೂ ಸಹ ತನ್ನ ಪೂರ್ವೇತಿಹಾಸದತ್ತ ಒಮ್ಮೆ ಹೊರಳಿ ನೋಡುವುದು ಅತ್ಯವಶ್ಯವಾಗಿದೆ. ಆದರೂ ಪಕ್ಷದ ಯಾವುದೇ ನಾಯಕರಲ್ಲೂ ಈ ಧೋರಣೆ ಕಂಡುಬರುತ್ತಿಲ್ಲ. ರಾಜ್ಯದ ಜನತೆ ಬಿಜೆಪಿಯ ಆಡಳಿತ ಭ್ರಷ್ಟತೆ-ಕೋಮುವಾದಿ ಮತದ್ವೇಷದ ವಿರುದ್ಧ ಮತ ನೀಡಿದ್ದರೂ, ಇದಕ್ಕೂ ಮೀರಿದ ಸಾಮಾಜಿಕ-ಆರ್ಥಿಕ ಕಾರಣಗಳಿರುವುದನ್ನು ಪಕ್ಷದ ಆಂತರಿಕ ಚಿಂತನಕಟ್ಟೆಯಲ್ಲಿ ಚರ್ಚೆಗೊಳಪಡಿಸಬೇಕಿದೆ. ಹಿಂದುತ್ವ ರಾಜಕಾರಣದ ಕೆಲವು ಜನವಿರೋಧಿ ನೀತಿಗಳನ್ನು ಬದಲಿಸುವುದಷ್ಟೇ ಅಲ್ಲದೆ, ಕಳೆದ 20 ವರ್ಷಗಳಿಂದಲೂ ರಾಜ್ಯದಲ್ಲಿ ವಿವಿಧ ಸರ್ಕಾರಗಳು ಅನುಸರಿಸುತ್ತಿರುವ ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಗಳು ಸೃಷ್ಟಿಸಿರುವ ಅಸಮಾನತೆಗಳನ್ನು ಸರಿಪಡಿಸುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ. ಈ ದುರವಸ್ಥೆಗೆ ಹಿಂದಿನ ಕಾಂಗ್ರೆಸ್ ಸರ್ಕಾರಗಳ ಕೊಡುಗೆಯೂ ಇದೆ ಎಂಬ ಪ್ರಾಮಾಣಿಕ ಅರಿವು ಕಾಂಗ್ರೆಸ್ ಪಕ್ಷದಲ್ಲಿ ಅತ್ಯವಶ್ಯವಾಗಿ ಇರಬೇಕು.


ಫಲಿತಾಂಶ ಬಿಚ್ಚಿಟ್ಟ ವಾಸ್ತವಗಳು


ಈ ರಾಜಕೀಯ ಆಯಾಮಗಳ ಹೊರತಾಗಿಯೂ 2023ರ ಫಲಿತಾಂಶಗಳು ಎರಡು ಸುಡುವಾಸ್ತವಗಳನ್ನು ರಾಜ್ಯದ ಜನತೆಯ ಮುಂದೆ ತೆರೆದಿಟ್ಟಿದೆ. ಮೊದಲನೆಯದು, ಜನಸಾಮಾನ್ಯರ ಬದುಕಿನಲ್ಲಿ ಯಾವುದೇ ರೀತಿಯ ಭಾವನಾತ್ಮಕ ವಿಚಾರಗಳು ಒಂದು ಹಂತದವರೆಗೆ ಮಾತ್ರವೇ ಪ್ರಭಾವ ಬೀರಲು ಸಾಧ್ಯ. ತಮ್ಮ ಜೀವನ ಹಾಗೂ ಜೀವನೋಪಾಯ ಮಾರ್ಗಗಳ ನಿರಂತರ ಶೋಧದಲ್ಲಿರುವ ಬಹುಸಂಖ್ಯೆಯ ಜನತೆಗೆ ನಿತ್ಯ ಬದುಕಿನ ಸವಾಲುಗಳು ಸದಾ ಪ್ರಧಾನವಾಗಿಯೇ ಇರುತ್ತದೆ. ಭಾರತದಂತಹ ಸಾಂಪ್ರದಾಯಿಕ ಶ್ರೇಣೀಕೃತ ಸಮಾಜದಲ್ಲಿ ಲಾಭಕೋರ ಬಂಡವಾಳಶಾಹಿಯು ಸೃಷ್ಟಿಸುವ ಅಸಮಾನತೆಗಳು ತಳಸಮುದಾಯಗಳನ್ನೇ ಹೆಚ್ಚು ಕಾಡುತ್ತವೆ. ಈ ಜನಸಮುದಾಯಗಳು ಎದುರಿಸುವ ಸಾಮಾಜಿಕ-ಸಾಂಸ್ಕೃತಿಕ ಸಿಕ್ಕುಗಳು ಹಾಗೂ ಆರ್ಥಿಕ ಕಂದರಗಳನ್ನು ಸರಿಪಡಿಸಲು ಹಾಗೂ ತಮ್ಮ ಜೀವನಮಟ್ಟ ಸುಧಾರಣೆಗಾಗಿ ಸರ್ಕಾರಗಳತ್ತ ಗಮನಹರಿಸುವುದು ಸಹಜ. ಈ ಬಹುಸಂಖ್ಯೆಯ ಜನತೆ ತಾವು ಎದುರಿಸುವ ಸಾಮಾಜಿಕ-ಆರ್ಥಿಕ ಸವಾಲುಗಳಿಗೆ ಪರಿಹಾರವನ್ನೂ ಸರ್ಕಾರಗಳ ಆಡಳಿತ-ಆರ್ಥಿಕ ನೀತಿಗಳಲ್ಲೇ ಕಂಡುಕೊಳ್ಳಲು ಯತ್ನಿಸುತ್ತಾರೆ. ಇಲ್ಲಿ ಜನಸಾಮಾನ್ಯರು ಜನಪ್ರತಿನಿಧಿಗಳಿಂದ ಆರ್ಥಿಕ ಪ್ರಾಮಾಣಿಕತೆ, ನೈತಿಕ ಸಂಯಮ, ಸಂವಿಧಾನಬದ್ಧತೆ ಹಾಗೂ ಜನಪರ ಕಾಳಜಿಯನ್ನು ನಿರೀಕ್ಷಿಸುತ್ತಲೇ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುತ್ತಾರೆ.


ಎರಡನೆಯ ವಾಸ್ತವ ಎಂದರೆ ಹಿಂದುತ್ವ ರಾಜಕಾರಣವು ದೇಶಾದ್ಯಂತ ಪ್ರತಿಪಾದಿಸುತ್ತಿರುವ ಬಹುಸಂಖ್ಯಾವಾದದ ಸಮೀಕರಣಗಳು ದೇಶದ ಎಲ್ಲ ರಾಜ್ಯಗಳಲ್ಲೂ ಒಂದೇ ರೀತಿಯಲ್ಲಿ ನೆಲೆ ಕಾಣಲಾಗುವುದಿಲ್ಲ. ಬಹುಸಂಖ್ಯಾತ ಸಮುದಾಯವನ್ನು ತನ್ನದಾಗಿಸಿಕೊಳ್ಳುವ ಬಿಜೆಪಿಯ ಆಡಳಿತ ಸೂತ್ರ ಹೇಗೆ ವಿಫಲವಾಗಬಹುದು ಅಥವಾ ತಿರುಗುಬಾಣವಾಗಬಹುದು ಎನ್ನುವುದನ್ನು ಮಣಿಪುರದ ಬೆಳವಣಿಗೆಗಳು ನಿರೂಪಿಸಿವೆ. 


ನಾಗರಿಕ ಸಮಾಜದ ಪಾತ್ರ


ಈ ಎರಡು ವಾಸ್ತವಿಕ ಸನ್ನಿವೇಶಗಳ ನಡುವೆಯೇ ಕರ್ನಾಟಕದ ನಾಗರಿಕ ಸಮಾಜದ ನೂರಾರು ಸಂಘಟನೆಗಳು ಕಳೆದ ಚುನಾವಣೆಗಳಲ್ಲಿ ಕರ್ನಾಟಕದ ಸಮನ್ವಯದ ನೆಲೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿದಿವೆ. ದ್ವೇಷ ರಾಜಕಾರಣದಿಂದ ಉಂಟಾಗಬಹುದಾದ ಅಪಾಯಗಳನ್ನು ಸಾಮಾನ್ಯ ಜನತೆಗೆ ಮನದಟ್ಟು ಮಾಡುವಲ್ಲಿ ಈ ಸಂಘಟನೆಗಳು ಕೊಂಚ ಮಟ್ಟಿಗೆ ಯಶಸ್ವಿಯಾಗಿವೆ. 


ಕಾಂಗ್ರೆಸ್ ಪಕ್ಷದ ಗೆಲುವಿಗೆ ಅಥವಾ ಬಿಜೆಪಿಯ ಪರಾಭವಕ್ಕೆ ನಾಗರಿಕ ಸಮಾಜದ ಸಂಘಟನೆಗಳ ಕಾರ್ಯಸೂಚಿ ಮತ್ತು ಕಾರ್ಯಾಚರಣೆ ಪೂರಕವಾಗಿದ್ದರೂ, ಅದೊಂದೇ ನಿರ್ಣಾಯಕ ಕಾರಣವಲ್ಲ ಎಂಬ ಪರಿವೆಯೂ ಪ್ರಗತಿಪರ ಸಂಘಟನೆಗಳಲ್ಲಿ ಇರಬೇಕಾಗುತ್ತದೆ. 


ಏಕೆಂದರೆ ರಾಜ್ಯವ್ಯಾಪಿಯಾಗಿ ಹರಡಿ ಬೇರೂರಿರುವ ಕೋಮು-ಜಾತಿ-ಮತ-ಮಹಿಳಾ ದ್ವೇಷದ ನೆಲೆಗಳನ್ನು ಕೇವಲ ಒಂದು ಚುನಾವಣಾ ಫಲಿತಾಂಶದ ಮೂಲಕ ತಿಳಿದುಕೊಳ್ಳುವುದು ಸಾಧ್ಯವಿಲ್ಲ. 


ಯಾವುದೇ ಪಕ್ಷವು ಅಧಿಕಾರದಲ್ಲಿದ್ದರೂ ವಿಭಜಕ ಶಕ್ತಿಗಳು ತಮ್ಮ ಕಾರ್ಯಾಚರಣೆಯಿಂದ ವಿಮುಖವಾಗುವುದಿಲ್ಲ. ಸರ್ಕಾರ ಅನುಸರಿಸುವ ಕಾನೂನಾತ್ಮಕ ಕ್ರಮಗಳಿಂದಷ್ಟೇ ಕೋಮುವಾದಿ-ಮತಾಂಧ ಶಕ್ತಿಗಳನ್ನು ನಿಯಂತ್ರಿಸಲೂ ಆಗುವುದಿಲ್ಲ. ಆಳಕ್ಕೆ ಇಳಿದಿರುವ ಮತೀಯ ಭಾವನೆಗಳನ್ನು ಹೋಗಲಾಡಿಸಲು ಜನಸಾಮಾನ್ಯರ ನಡುವೆ ನಿರಂತರ ಸಂವಾದ-ಸಂವಹನ ಅವಶ್ಯವಾಗಿ ನಡೆಸಬೇಕಾಗುತ್ತದೆ. 


ನಾಗರಿಕ ಸಮಾಜದ ಪುರೋಗಾಮಿ ಸಂಘಟನೆಗಳು ಇದರಿಂದಲೇ ಸಂತೃಪ್ತರಾಗುವುದೂ ತರವಲ್ಲ. ಸಮಾಜದ ಗರ್ಭದಲ್ಲೇ ಅಡಗಿರುವ ತಾರತಮ್ಯದ ನೆಲೆಗಳೊಂದಿಗೇ ಮತೀಯವಾದಿ-ಮತಾಂಧ ಶಕ್ತಿಗಳಿಂದ ಉತ್ತೇಜಿತವಾಗುವ ಮನುಕುಲ ವಿರೋಧಿ ಭಾವನೆಗಳ ವಿರುದ್ಧ ಈ ಸಂಘಟನೆಗಳು ನಿರಂತರ ಸಂಘರ್ಷದಲ್ಲಿರಬೇಕಾಗುತ್ತದೆ. ರಾಜಕೀಯವಾಗಿ ಇಂತಹ ದುರ್ಭಾವನೆಗಳನ್ನೇ ಬಳಸಿಕೊಳ್ಳುವ ಪಕ್ಷಗಳ ವಿರುದ್ಧ ಜನಸಾಮಾನ್ಯರನ್ನು ಸಂಘಟಿಸುತ್ತಲೇ, ಈ ಆಲೋಚನೆಗಳ ಮೂಲ ಬೇರುಗಳನ್ನು ಸಾಮಾಜಿಕ ಬದುಕಿನ, ಸಾಂಸ್ಕೃತಿಕ ಚಟುವಟಿಕೆಗಳ ನಡುವೆಯೇ ಗುರುತಿಸಬೇಕಾಗುತ್ತದೆ. ಎಡಪಕ್ಷಗಳನ್ನೂ ಒಳಗೊಂಡAತೆ ಪ್ರಗತಿಪರ ಎನಿಸಿಕೊಳ್ಳುವ ಎಲ್ಲ ಪುರೋಗಾಮಿ ಸಂಘಟನೆಗಳ ಹೆಜ್ಜೆ ಈ ನಿಟ್ಟಿನಲ್ಲೇ ಕ್ರಮಿಸಬೇಕಿದೆ.

ಕರ್ನಾಟಕದ 2023ರ ಚುನಾವಣೆಗಳು ಇಂತಹ ಒಂದು ಸದವಕಾಶವನ್ನು ಒದಗಿಸಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗೆ ಒಂದು ಪಕ್ಷದ ಗೆಲುವು ಅಥವಾ ಸೋಲು ನಿರ್ಣಾಯಕ ಅಂಶವಾಗುವುದಿಲ್ಲ. ಪ್ರಜಾಪ್ರಭುತ್ವ ತನ್ನ ಬೇರುಗಳನ್ನು ಉಳಿಸಿಕೊಳ್ಳಬೇಕಾದರೆ, ಸಂವಿಧಾನ ಪ್ರಜ್ಞೆಯ ಬೇರುಗಳು ಸಮಾಜದ ಅಂತರಾಳದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಬೇರುಗಳಿಗೆ ವಿಷವುಣಿಸುವ ಶಕ್ತಿಗಳ ವಿರುದ್ಧ ಹೋರಾಡುತ್ತಲೇ, ಸಮಾಜದ ಕಟ್ಟಕಡೆಯ ವ್ಯಕ್ತಿಯಲ್ಲೂ ಸಮಾನತೆಯ ಸೂಕ್ಷ್ಮ ಸಂವೇದನೆಯನ್ನು ಉದ್ಧೀಪನಗೊಳಿಸುವ ಕಾರ್ಯಸೂಚಿಯನ್ನು ಪುರೋಗಾಮಿ ಶಕ್ತಿಗಳು ರೂಪಿಸಬೇಕಿದೆ. 


ಪ್ರಗತಿಪರರ ಜವಾಬ್ದಾರಿಗಳು

ವಾಸ್ತವದಲ್ಲಿ ಎಡಪಕ್ಷಗಳು, ದಲಿತ ಸಂಘಟನೆಗಳು, ಸಮಾಜಮುಖಿ ಸಂಸ್ಥೆಗಳು, ಮಾನವ ಹಕ್ಕು ಸಂಘಟನೆಗಳು ತಮ್ಮ ಮೂಲ ಅಸ್ಮಿತೆಗಳನ್ನು ವಿಸರ್ಜಿಸದೆಯೇ ಈ ರೀತಿಯ ವೇದಿಕೆಯನ್ನು ರೂಪಿಸಲು ಖಂಡಿತವಾಗಿಯೂ ಸಾಧ್ಯವಿದೆ. ಡಾ. ಬಿ.ಆರ್. ಅಂಬೇಡ್ಕರ್, ಮಾರ್ಕ್ಸ್, ಲೋಹಿಯಾ, ಪೆರಿಯಾರ್, ಮಹಾತ್ಮ ಗಾಂಧಿ ಮುಂತಾದ ಮಹಾನ್ ಚಿಂತಕರ ಆಲೋಚನೆಗಳನ್ನು ಗಂಭೀರವಾಗಿ ಮನನ ಮಾಡಿಕೊಂಡರೆ ಇಂತಹ ಒಂದು ವೇದಿಕೆಯ ಅನಿವಾರ್ಯತೆ ಹಾಗೂ ಕಾರ್ಯಸಾಧ್ಯತೆ ಎರಡೂ ಸಹ ಮನದಟ್ಟಾಗಲು ಸಾಧ್ಯ.