ಸಿನಿಮೀಯ ಅನ್ನಿಸಬಹುದು, ಆದರೆ ಇವು ನಿಜ..,  ನೇತ್ರಾವತಿ.ಕೆ.ಬಿ

  ಅಂದರೆ ಅವಳನ್ನು ಅವರು ಕರೆದೊಯುತ್ತಾರೆ ಎನ್ನುವುದು ಖಾತರಿಯಾಗಿತ್ತು. ಒಂದು ರಾತ್ರಿ ಗೂಂಡಾಗಳೊಂದಿಗೆ ಮನೆಗೆ ನುಗ್ಗಿ ಅವಳನ್ನು ಎಳೆದೊಯ್ದರು.

ಸಿನಿಮೀಯ ಅನ್ನಿಸಬಹುದು, ಆದರೆ ಇವು ನಿಜ..,                                                                                                              ನೇತ್ರಾವತಿ.ಕೆ.ಬಿ

ಜೀವದ ಕತೆ-16


ಕೆ.ಬಿ.ನೇತ್ರಾವತಿ

 

    ಅಕ್ಕ ಡಾಕ್ಟರ್ ಓದಲು ಬಿಎಂಸಿ, ಬೆಂಗಳೂರು ಸೇರಿಕೊಂಡ ಮೇಲೆ ಅವಳಿಗೆ ಹಾಸ್ಟೆಲ್ ಸೆಟ್ ಆಗಲಿಲ್ಲ ಅಂತ ಅಪ್ಪ ಬೆಂಗಳೂರಿನಲ್ಲಿ ಮನೆ ಮಾಡಿಕೊಟ್ಟಿತ್ತು, ಜೊತೆಗೆ ನನ್ನ ತಮ್ಮನನ್ನ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿಗೆ ಸೇರಿಸಿತು, ಅಮ್ಮ, ಅಕ್ಕ, ತಮ್ಮ ಬೆಂಗಳೂರಿನಲ್ಲಿದ್ದರು. ನಾನು ದಾವಣಗೆರೆಯಲ್ಲಿ ಓದುತ್ತಿದ್ದೆ. ಅಪ್ಪ ಮಧುಗಿರಿಯಲ್ಲಿತ್ತು.


    ನಾನು ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಮನೆಗೆ ಬಂದು ಪಿಎಸ್‌ಯುಗಳಿಗೆ ಪರೀಕ್ಷೆಗಳನ್ನು ಬರೆಯಲು ಓದುವದರಲ್ಲಿ ಮಗ್ನಳಾಗಿದ್ದೆ. ತಮ್ಮ ಬಿಎಎಸ್ಸಿ ಮೂರನೇ ವರ್ಷ ಓದುತ್ತಿದ್ದ, ಅಕ್ಕ ಎರಡನೇ ವರ್ಷದ ಎಂಬಿಬಿಎಸ್.


ಹೇಳಿದರೆ ಸಿನಿಮೀಯ ಅನ್ನಿಸಬಹುದು ಆದರೆ ಇವು ನಿಜ.


   ಅಕ್ಕ ಒಂದು ದಿನ ನನ್ನ ಸ್ನೇಹಿತೆ ಇವಳೆಂದು, ನಾವಿಬ್ಬರೂ ಕಂಬೈಂಡ್ ಸ್ಟಡಿ ಮಾಡುತ್ತೇವೆ ಎಂದು ಮನೆಗೆ ಕರೆ ತಂದು ಪರಿಚಯಿಸಿದಾಗ, ನನಗೆ ಬಂದ ಮೊದಲ ಯೋಚನೆಯೇ ಅಯ್ಯೋ ನನ್ನ ತಮ್ಮ ಮೊದಲೇ ಸರಿ ಇಲ್ಲ. ಅಂತಹುದರಲ್ಲಿ ಇವಳನ್ನು ಯಾಕೆ ಕರೆ ತಂದಳು ಅನ್ನಿಸಿದರೂ ಒಳಗೇ ನುಂಗಿಕೊಂಡೆ ಅಕ್ಕ ಯಾವತ್ತೂ ಹಾಗೆ ನಾವು ಊಹಿಸಿಕೊಂಡಿರಲು ಸಾಧ್ಯವಿಲ್ಲದ ಗೋಜಲುಗಳನ್ನು ಜೀವನದಲ್ಲಿ ದಿಡೀರ್ ಅಂತ ತಂದು ನಿಲ್ಲಿಸುತ್ತಿದ್ದಳು, ಎಂಎಸ್ಸಿ ಪೂರ್ತಿ ಮಾಡಿದ್ದರೆ ಅಷ್ಟು ಹೊತ್ತಿಗೆ ಲೆಕ್ಚರರ್ ಆಗಿರುತ್ತಿದ್ದಳು, ಎಂಎಸ್ಸಿ ಅರ್ಧದಲ್ಲಿ ಬಿಟ್ಟು ಎಂಬಿಬಿಎಸ್ ಸೇರಿ ಈಗ ಓದಲು ಕಷ್ಟ ಪಡುತ್ತಿದ್ದಳು.


  ಸರಿ ಎಲ್ಲರ ಪರಿಚಯದ ನಂತರ ಸ್ನೇಹಿತೆಗೆ ಎಂದಿನಂತೆ ಅಮ್ಮ, ದೋಸೆ, ಟೀ ಮಾಡಿಕೊಟ್ಟರು. ಮತ್ತೆ ಬರುವುದಾಗಿ ತಿಳಿಸಿ ಹೋದಳು, ಮೇಲಿನ ನೋಟಕ್ಕೆ ನಮ್ಮದೊಂದು ಸುಂದರವಾದ ಸಂಸಾರ ಅಪ್ಪ ಎಂಜಿನಿಯರ್, ಇವರಿಗೇನು ಕಡಿಮೆ ಇಲ್ಲ ಎನ್ನುವಂಥ ಭಾವನೆ. ಆದರೆ ಒಳಗೊಳಗೆ ನಮ್ಮ ಅಪ್ಪನ ಅಫೇರ್ ಗಳು ಮತ್ತು ಅವುಗಳಿಂದ ನಮಗಾಗುತ್ತಿದ್ದ ನೋವನ್ನು ಯಾರಿಗೂ ಹೇಳಿಕೊಳ್ಳಲಾಗುತ್ತಿರಲಿಲ್ಲ.


    ನಾನು ಅಂದು ಕೊಡಂತೆ ನಮ್ಮ ಅಕ್ಕನ ಸ್ನೇಹಿತೆ ಮತ್ತು ನನ್ನ ತಮ್ಮನ ನಡುವೆ ಹುಟ್ಟಿದ ಸ್ನೇಹದ ಬಗ್ಗೆ ತಿಳಿದು ನಾವು ಅವರಿಬ್ಬರನ್ನೂ ಕರೆದು ತಿಳಿ ಹೇಳಿದೆವು. “ನೋಡಿ ನೀವಿನ್ನೂ ಓದುತ್ತಿದ್ದೀರಾ, ಈಗಲೇ ಇಂತಹ ಸ್ನೇಹ ಬೇಡ, ಓದಿ ಕೆಲಸಕ್ಕೆ ಸೇರಿ ನಂತರ ನಿರ್ಧಾರ ಮಾಡಿ. ನೀನಂದುಕೊಂಡಂತೆ ನಮ್ಮ ಜೀವನವಿಲ್ಲ ನಮ್ಮ ಜೀವನದಲ್ಲಿ uncertainity ಇದೆ ಹಾಗಾಗಿ ಅಲ್ಲಿವರೆಗೂ ಬರೀ ಸ್ನೇಹಿತರಾಗಿರಿ ಮದುವೆ ಎನ್ನುವ ಬಗ್ಗೆ ಯೋಚನೆ ಮಾಡಬೇಡಿ. ನೀನು ಬೇರೆ ಹೇಳುತ್ತಿ ನಿಮ್ಮ ಅಪ್ಪ ನಾಯಕ ಸಮುದಾಯದ ಸಂಘದ ಅಧ್ಯಕ್ಷ ಅವರಿಗೆ ಇಂಟರ್ ಕ್ಯಾಸ್ಟ್ ಮದುವೆಗಳು ಇಷ್ಟ ಇಲ್ಲ ಅಂತ ಅಂದ ಮೇಲೆ ಇಂತಹ ನಿರ್ಧಾರಗಳು ಬೇಡ” ಅಂತ ಅವಳಿಗೂ ತಿಳಿ ಹೇಳಿದ ಮೇಲೆ ಆಕೆ ಒಲ್ಲದ ಮನಸ್ಸಿನಿಂದ ಒಪ್ಪಿದಳು. ನನ್ನ ತಮ್ಮ ಆಯ್ತು ಅಂತ ಹೇಳಿ ಅವನ ಪಾಡಿಗೆ ಅವನು ಜಿಮ್ ದೇಹದಾರ್ಢ್ಯ ಸ್ಪರ್ಧೆ ಕಡೆ ಹೆಚ್ಚು ಒತ್ತುಕೊಡುತ್ತಿದ್ದ. ಜಿಮ್‌ನ ಓನರ್ ನನ್ನ ತಮ್ಮನ ಫ್ರೆಂಡ್. ಅವನನ್ನು ಕೂಡ ಕರೆದು ನಮಗೆ ತಿಳಿಯದಂತೆ ಇವರೇನಾದರೂ ಮದುವೆಗೆ ಮುಂದಾದರೆ ನಮಗೆ ತಿಳಿಸಿ ಅಂತ ಹೇಳಿದೆವು. ಆತ ಕೂಡ ಆಯ್ತು ಅಂತ ಹೇಳಿದ.


     ಆದರೆ ಒಂದು ದಿನ ಸಂಜೆ ಜಿಮ್‌ಗೆ ಹೋಗುವುದಾಗಿ ಹೋದ ತಮ್ಮ ಮನೆಗೆ ವಾಪಸ್ಸು ಬರಲಿಲ್ಲ. ರಾತ್ರಿ 7ರ ಸುಮಾರಿಗೆ ಜಿಮ್‌ನ ಸ್ನೇಹಿತ/ಓನರ್ ಬಂದು ತಿಳಿಸಿದ, ನನ್ನ ತಮ್ಮ ಜಿಮ್‌ಗೆ ಹೋಗಲೆಂದು ಮನೆಯಿಂದ ಹೊರಟ ಮೇಲೆ ಬಸ್‌ಸ್ಟಾಪ್‌ನಲ್ಲಿ ತೇಜಸ್ವಿನಿ ಕಾಯುತ್ತಿದ್ದಳೆಂದೂ, ಅವಳು ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿ “ಓಡಿ ಹೋಗಿ ಮದುವೆಯಾಗೋಣ ನಡಿ” ಎಂದಳAತೆ. ನನ್ನ ತಮ್ಮ ಏನೂ ನಿರ್ಧರಿಸಲಾಗದೆ ನಾವಂದು ಕೊಂಡAತೆ ಜಿಮ್‌ನ ಆ ಸ್ನೇಹಿತನ ಹತ್ತಿರ ಹೋಗಿ ಸಹಾಯ ಕೇಳಿದ್ದ ಆತನಿಗೆ ನಾವು ಮೊದಲೇ ವಾರ್ನ್ ಮಾಡಿದ್ದಂತೆ ಆತ ನಿರಾಕರಿಸಿದಾಗ ಆಯ್ತು ನಾವು ಇಲ್ಲಿಂದ ಹೋದ ಒಂದು ಘಂಟೆ ನಂತರ ಮನೆಗೆ ವಿಷಯ ತಿಳಿಸಿ ಅಂತ ಅಲ್ಲಿಂದ ಅವರಿಬ್ಬರೂ ಹೋಗಿದ್ದರಂತೆ. ಅದರಂತೆಯೇ ಆತ ಈಗ ಬಂದು ವಿಷಯ ತಿಳಿಸಿ, ಸಾರಿ ಕೇಳಿ ಹೋದ. ಎಲ್ಲಿಗೆ ಹೋದರು ಎಂಬ ಪ್ರಶ್ನೆಗೆ ಗೊತ್ತಿಲ್ಲ ಅಂದ. ಸರಿ ರಾತ್ರಿ ನಮ್ಮ ಮೂವರಿಗೂ ನಿದ್ದೆ ಬರಲಿಲ್ಲ ಅಮ್ಮ ಬೆಳಗ್ಗೆ ಮೊದಲ ಸಿಟಿ ಬಸ್ ಹತ್ತಿ, ಮೆಜೆಸ್ಟಿಕ್ ತಲುಪಿ, ಅಲ್ಲಿಂದ ಬಸ್ ನಲ್ಲಿ ಮಧುಗಿರಿಗೆ ಅಪ್ಪನ ಹತ್ತಿರ ಹೋಯಿತು ವಿಷಯ ತಿಳಿಸಲು. ಅದಾಗಲೇ ಮಧುಗಿರಿಯವಳ ಜೊತೆ ಅಪ್ಪನ ಸಂಬಂಧ ಆಳವಾಗಿ ಬೇರೂರಿತ್ತು. ಗೌಡರ ಜಾತಿಯ ಆಕೆಗೆ ಹಣದ ಮುಂದೆ ಜಾತಿ ನಗಣ್ಯವಾಗಿತ್ತು. ನನ್ನ ತಮ್ಮ ಮತ್ತು ತೇಜಸ್ವಿನಿ ಇಬ್ಬರೂ ನೇರ ಮಧುಗಿರಿಯಲ್ಲಿದ್ದ ಅಪ್ಪನ ಬಳಿಗೇ ಹೋಗಿ ಮದುವೆ ಮಾಡಿಸು ಅಂತ ದುಂಬಾಲು ಬಿದ್ದಿದ್ದರು. 


    ಅಮ್ಮ ಪಕ್ಕದ ಮನೆಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ನಮಗೆ ಇನ್ನು ನಮ್ಮ ಕಥೆ ಮುಗಿಯಿತು ಅನ್ನಿಸಿತು, ಏನೂ ಮಾಡಲು ತೋಚದೆ ಯೋಚನೆಯಲ್ಲಿ ಮುಳುಗಿದೆವು ಅಮ್ಮ ಅಪ್ಪ ಬರುವವರೆಗೆ ಕಾಯುವ ಸರದಿ ನಮ್ಮದಾಗಿತ್ತು. ಆತಂಕಕ್ಕೆ ಊಟ ತಿಂಡಿ ಏನೂ ಸೇರಲಿಲ್ಲ. ಅಷ್ಟು ಹೊತ್ತಿಗೆ ತೇಜಸ್ವಿನಿಯ ಚಿಕ್ಕಪ್ಪ ಅನು ಅಡ್ರೆಸ್ ಅವಳ ಪುಸ್ತಕದಲ್ಲಿ ಸಿಕ್ಕಿತೆಂದೂ ಹುಡುಕಿ ಬಂದರು. ಆಕೆ ನಮ್ಮ ಮನೆಯಲ್ಲೇನಾದರೂ ಇರುವ ಬಗ್ಗೆ ವಿಚಾರಿಸಿದಾಗ, ಅಕ್ಕ , “ನೋಡಿ ಅದರ ಬಗ್ಗೆ ಮಾತನಾಡುತ್ತೇನೆ ತೇಜಸ್ವಿನಿಯ ಅಪ್ಪನೊಂದಿಗೆ ಬನ್ನಿ” ಎಂದು ಹೇಳಿದಳು, “ಅಂದರೆ ಅವಳು ಎಲ್ಲಿದ್ದಾಳೆ ಎಂದು ನಿಮಗೆ ತಿಳಿದಿದೆಯಾ” ಅಂತ ಅವರ ಚಿಕ್ಕಪ್ಪ ಕೇಳಿದರೆ, “ಹೌದು ಅವರೊಂದಿಗೆ ಬನ್ನಿ” ಅಂತ ಹೇಳಿ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಬರುವಂತೆ ತಿಳಿಸಿದಳು. ಸಂಜೆ ನಾಲ್ಕು ಘಂಟೆಗೆ ನಾನು ಅಕ್ಕ ಹೋಗಿ ಅಲ್ಲಿ ಕಾಯುತ್ತಿದ್ದೆವು. ಮಾರುತಿ ವ್ಯಾನ್‌ನಲ್ಲಿ ತೇಜಸ್ವಿನಿ ಅಪ್ಪ ಅಮ್ಮ ಚಿಕ್ಕಪ್ಪ ಚಿಕ್ಕಮ್ಮ ಎಲ್ಲರೂ ಬಂದರು ಅನು ಇರುವ ವಿಷಯ ಹೇಳಿದಳು. ಅವರಪ್ಪನಿಗೆ ಈ ವಿಷಯ ಇಷ್ಟವಾಗಲಿಲ್ಲ. “ಸರಿ ಹೂ ನಿನ್ನ ತಮ್ಮನ ಜೊತೆ ತೇಜಸ್ವಿನಿ ಓಡಿಹೋಗಿದ್ದಾಳೆ ಅಲ್ಲವಾ ಸರಿ ಅವರು ಬಂದಾಗ ಫೋನ್ ಮಾಡಿ” ಅಂತ ಹೇಳಿ ಹೋದರು. ಈ ಎಲ್ಲಾ ನನಗೆ ಸೇರದ, ನನಗೆ ಬೇಕಾಗಿರದ ಅನವಶ್ಯಕ ಘಟನೆಯಾಗಿತ್ತು ನನ್ನ ತಮ್ಮ ಅಕ್ಕ ಇವರಿಬ್ಬರ character ಬಗ್ಗೆ ಸದಾ ಒಳ್ಳೆ ಅಭಿಪ್ರಾಯದ ಹೊಂದಿರದ ನನಗೆ ಇದು ನುಂಗಲಾರದ ತುತ್ತಾಗಿತ್ತು.


    ಅತ್ತ ಅವರಿಬ್ಬರನ್ನು ಮದುವೆ ಮಾಡಿಸಿ ಮಧುಗಿರಿಯಿಂದ ಕರೆದುಕೊಂಡು ಅಮ್ಮ ಬಂತು, ಅಪ್ಪ ಮಾರನೆ ದಿನ ಬರುವುದಾಗಿ ತಿಳಿಸಿತ್ತು. ಹೇಗೂ ಅವನಿಗೆ ಅದಾಗಲೇ ಸೆಪರೇಟ್ ರೂಮ್ ಇದ್ದರಿಂದ ಅವರಿಗೆ ಆ ರೂಮು ಬಿಟ್ಟುಕೊಡಲಾಯಿತು. ಅವರಪ್ಪ ಅಮ್ಮ ಚಿಕ್ಕಪ್ಪ ಚಿಕ್ಕಮ್ಮ ಬಂದವರು ಕುಶಲೋಪರಿ ವಿಚಾರಿಸಿ ಹೋದರು. ಮಾರನೆ ದಿನ ಅಪ್ಪ ಬಂದಾಗ ಕೂಡ ಅವರು ಬಂದು ಅವಳನ್ನು ಓದಲು ಕಾಲೇಜಿಗೆ ಕಳಿಸುವಂತೆ ನನ್ನ ತಮ್ಮನ ಕಾಲೇಜು ಕೂಡ ಮುಂದುವರಿಸುವಂತೆ ತಿಳಿ ಹೇಳಿ ಹೋದರು. ಆದರೆ ಅಪ್ಪ ಹೋದ ನಂತರ ನನ್ನ ತಮ್ಮ ಅವಳನ್ನ ಕಾಲೇಜಿಗೆ ಹೋಗು ಅಂತ ಹೇಳಲಿಲ್ಲ, ಅವಳೂ ಹೋಗಲಿಲ್ಲ. ಅವರಪ್ಪ ಚಿಕ್ಕಪ್ಪ ಪುನಃ ಬಂದು ಅವಳ ಬಟ್ಟೆ ಪುಸ್ತಕ ಎಲ್ಲ ಕೊಟ್ಟು ಹೋದರು.


 ಅತ್ತ ಒಂದು ವಾರಕ್ಕೆ ಅವಳ ಅಪ್ಪ ಚಿಕ್ಕಪ್ಪ ಅಮ್ಮ ಚಿಕ್ಕಮ್ಮ ಎಲ್ಲರೂ ಬಂದು , ಹನಿಮೂನ್‌ಗೆ ಅಂತ ಅವರಿಬ್ಬರನ್ನು ಕರೆದುಕೊಂಡು ಹೊರಟಾಗ ಅಮ್ಮ ಆತಂಕಕ್ಕೆ ತಾನೂ ಜೊತೆಯಲ್ಲಿ ಹೋಯಿತು. ಒಂದು ವಾರ ಮಂಗಳೂರು ಸುತ್ತಿ ವಾಪಸ್ಸು ಬಂದರು. ಅತ್ತ ಎರಡು ಮೂರು ದಿನ ಕಾಲೇಜಿಗೆ ಹೋಗಿರಬಹುದು. ಅವಳು ಪುನಃ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದಳು. ನಾನು ಬುದ್ಧಿ ಹೇಳ ಹೋದರೆ ಇಬ್ಬರೂ ನನಗೆ ಎದುರು ವಾದಿಸುತ್ತಿದ್ದರು. ನನ್ನನ್ನು ಕಂಡರೆ ಎಲ್ಲರೂ ಹಾಗೆ ಮಾತನಾಡುವುದು, ನಾನು ಕಪ್ಪಗಿದ್ದೇನೆ ನನಗೆ ಅವರನ್ನ ಕಂಡರೆ ಅಸೂಯೆ, ಹೀಗೇ, ಅದು ನನಗೇನು ಹೊಸದಾಗಿರಲಿಲ್ಲ. ಕೆಎಎಸ್ ಎಕ್ಸಾಮ್ ಬರೆದಿದ್ದೆ 1994, ಅದರ ರಿಸಲ್ಟ್ ಬಂದಿತ್ತು ಸುಮಾರು 640 ಅಂಕ ಬಂದಿತ್ತು ಆದರೆ ಅದೇನೋ ಯಾರೋ ಕಾಪಿ ಹೊಡೆದಿದ್ದಾರೆ ಅಂತ ಸುಮಾರು ಜನರಿಗೆ ಒಂದೇ ಅಂಕ ಬಂದಿದೆ ಎಂತಲೂ ಯಾವ ಮುನ್ಸೂಚನೆ ಇಲ್ಲದೆ ಪುನಃ ರೀವ್ಯಾಲ್ಯುಯೇಷನ್ ಮಾಡುವುದಾಗಿ ಪರಿಷ್ಕರಿಸಿದ ರಿಸಲ್ಟ್ ಕೊಟ್ಟರು ನನ್ನ ಮಾರ್ಕ್ಸ್ ಏಕಾಏಕಿ 440ಕ್ಕೆ ಇಳಿದಿತ್ತು, ಏನೂ ಮಾಡದ ನನ್ಮ ಅಂಕ ಏಕೆ ಕಡಿಮೆ ಮಾಡಿದರೋ ತಿಳಿಯದು, ಇದೆಲ್ಲದರ ಮಧ್ಯೆ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ SAIL ಬಹಳ ಚೆನ್ನಾಗಿ ಬರೆದಿದ್ದೆ. ಜೂನಿಯರ್ ಇಂಜಿನಿಯರ್ ಆಗುತ್ತೇನೆ ಎನ್ನುವ ಭರಸೆ ಇತ್ತು ಅಲ್ಲದೆ ಜಿಆರ್‌ಇ ಟೋಫೆಲ್‌ಗೆ ಕೂಡ ತಯಾರಿ ನಡೆಸಿದ್ದೆ, 


   ಮನೆಯಲ್ಲಿ ಆಗಾಗ ನನ್ನ ತಮ್ಮ ಮತ್ತು ಅವಳು ಜಗಳವಾಡುವುದು ಕೇಳಿ, ಏನು ವಿಷಯ ಅಂತ ಕೇಳಿದರೆ ಅವಳು ಬಾಯಿ ಬಿಡಲಿಲ್ಲ . ಅವಳಿಗೆ ಈ ಹಿಂದೆ ಇದ್ದ ಸ್ನೇಹಿತನೊಬ್ಬನ ವಿಷಯದ ಬಗ್ಗೆ ಜಗಳ ನಡೆದಿತ್ತು, ಅದೇ ಮುಂದುವರಿದು ಆಯ್ತು ನನಗೆ ಕೆಲಸ ಇಲ್ಲ ಓದಲು ಮನಸ್ಸಾಗುತ್ತಿಲ್ಲ ನಿಮ್ಮ ಅಪ್ಪನಿಗೆ ಹೇಳಿ ದುಡ್ಡು ಕೊಡಿಸು ಒಂದು ಜಿಮ್ ಇಡುತ್ತೇನೆ ಇಲ್ಲ ಬಿಸಿನೆಸ್ ಮಾಡುತ್ತೇನೆ ಅಂತ ಅವಳಿಗೆ ಹೇಳಿ ಅವರಪ್ಪನಿಗೆ ಫೋನ್ ಮಾಡಿಸಿದ್ದ ನನ್ನ ತಮ್ಮ. ನಾವು ಎಷ್ಟು ಬೇಡವೆಂದರೂ ಕೇಳಲಿಲ್ಲ. ಮನೆಗೆ ಬಂದ ಅವರಪ್ಪ “ ನಾವೇ ಅವನಿಗೆ ದುಡ್ಡು ಕೇಳುವಂತೆ ಹೇಳಿದ್ದೇವೆ, ಇದು ವರದಕ್ಷಿಣೆ ಕಿರುಕುಳ ಅಂತ ಅವರ ಮಾತಿನಿಂದ ಅನ್ನಿಸಿ, ನಾನು ಒಳಗೇ ನಡುಗಿ ಹೋಗಿದ್ದೆ, ಅಂದು ಅವರಪ್ಪ ಅವಳಿಗೆ ಹೇಳಿದ ಒಂದು ಮಾತು, ಅದರ ಸೂಚ್ಯ ಅರ್ಥ ನಂತರ ನನಗಾಯಿತು “ You need not be a slave for  sex” .


    ಅಂದರೆ ಅವಳನ್ನು ಅವರು ಕರೆದೊಯುತ್ತಾರೆ ಎನ್ನುವುದು ಖಾತರಿಯಾಗಿತ್ತು. ಒಂದು ರಾತ್ರಿ ಗೂಂಡಾಗಳೊಂದಿಗೆ ಮನೆಗೆ ನುಗ್ಗಿ ಅವಳನ್ನು ಎಳೆದೊಯ್ದರು. ಅವಳ ಚಿಕ್ಕಪ್ಪ ಅವರೊಂದಿಗೆ ಇದ್ದದ್ದರಿಂದ ಅದು ಅವರದೇ ಕೆಲಸ ಅಂತ ಬೇರೆ ಹೇಳಬೇಕಿರಲಿಲ್ಲ. ಬೆಳಗ್ಗೆ ಫೋನ್ ಮಾಡಿದಾಗ ಅವಳ ಚಿಕ್ಕಪ್ಪನೇ ಉತ್ತರ ಕೊಟ್ಟ, “ನೋಡಿ ಇದೆಲ್ಲಾ ಅವಳಿಗೆ ತಿಳಿದೇ ನಡೆದಿದೆ. ಇಲ್ಲಿಗೆ ಸುಮ್ಮನಾಗಿ. ನಾವು ಕಂಪ್ಲೇಂಟ್ ಕೊಡಲ್ಲ, ನೀವೂ ಕೊಡಬೇಡಿ” ಅಂತ. ಆದರೆ ನಮ್ಮಪ್ಪ ಸುಮ್ಮನಿರಲಿಲ್ಲ ನಂತರ ನಮ್ಮ ಮಗಳು ಮನೆಗೆ ಬಂದೇ ಇಲ್ಲ ಅಂತ ನಮ್ಮ ಮೇಲೆ ದೂರು ಕೊಟ್ಟರೆ ಏನು ಮಾಡುವುದು ಅಂತ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿತು. ಆಕೆಯ ಮನೆಗೆ ಪೊಲೀಸ್ ಭೇಟಿ ಕೊಡಲಿಲ್ಲ, ಅವರು ಅವರಿಗೆ ದುಡ್ಡು ಕೊಟ್ಟು ಸುಮ್ಮನಾಗಿಸಿದ್ದರು. “ನಮಗೇನು ತೊಂದರೆಯಿಲ್ಲ, ನಾವು ದೂರು ಕೊಟ್ಟಿದ್ದೇವೆ, ನೀ ನನ್ನ ಜೊತೆ ನಡಿ ಮಧುಗಿರಿಗೆ ಅಂತ ಅಪ್ಪ ನನ್ನ ತಮ್ಮನನ್ನ ಕರೆಯಿತು, ಇತ್ತ ಓನರ್ ಕೂಡ ನೀವು ಒಳ್ಳೆ ಜನ ಅಂತ ಮನೆ ಕೊಟ್ವಿ ಇಷ್ಟೆಲ್ಲ ಬೀದಿ ರಂಪವಾದರೆ ನಮ್ಮ ಮನೆ ರೆಪ್ಯುಟೇಷನ್ ಏನಾಗುತ್ತೆ ನೀವು ಮನೆ ಖಾಲಿ ಮಾಡಿ ಅಂದರು, ಅಪ್ಪ “ಇಲ್ಲ ನನ್ನ ಮಗನಿಂದ ಇದೆಲ್ಲ ಆಗಿದೆ ಅವನನ್ನ ನಾ ಕರೆದುಕೊಂಡು ಹೋಗುತ್ತೇನೆ. ಹೆಣ್ಣು ಮಕ್ಕಳಿಬ್ಬರು ಇಲ್ಲಿ ಇರುತ್ತಾರೆ ಏನು ತೊಂದರೆ ಆಗದಂತೆ ನೋಡಿಕೊಳ್ತೇನೆ ಬೇಕಾದ್ರೆ ಅಡ್ವಾನ್ಸ ಜಾಸ್ತಿ ಕೊಡುತ್ತೇನೆ” ಎಂದಾಗ ಈಗಾಗಲೇ ಕೊಟ್ಟಿದ್ದ 20 ಸಾವಿರದ ಅಡ್ವಾನ್ಸ್ ಜೊತೆಗೆ ಇನ್ನು ಇಪ್ಪತ್ತು ಸಾವಿರಕ್ಕೆ ಬೇಡಿಕೆ ಇಟ್ಟರು. ಆಯ್ತು ಅಂತು ಅಪ್ಪ, ಆದರೆ ಅಪ್ಪನ ಕೈಕಾಲು ಹಿಡಿದ ನನ್ನ ತಮ್ಮ ಇಲ್ಲ ʼಅಯ್ಯʼ ನಾನು ಇನ್ನು ತೊಂದರೆ ಕೊಡಲ್ಲ ಓದಿಕೊಂಡು ಹೋಗುತ್ತೇನೆ, ನನಗೆ ಇಲ್ಲೆ ಇರಲು ಅವಕಾಶ ಕೊಡುʼ ಅಂತ ಕಣ್ಣೀರು ಸುರಿಸಿದ. ಅವನ ಕಣ್ಣೀರಿಗೆ ಮರುಳಾದ ಅಪ್ಪ ಅವನಿಗೂ ಆಯ್ತು ಅಂತ ಹೊರಟುಹೋಯ್ತು. 


    ನನಗೆ ಈ ಘಟನೆಗಳಿಂದ ಆದ ಅವಮಾನ ನೋವುಗಳಿಂದ ಸುಧಾರಿಸಿಕೊಳ್ಳುವುದು ಬಹಳವೇ ಕಷ್ಟವಾಗಿತ್ತು, ಓದುವುದು ಅರ್ಧಕ್ಕೆ ನಿಂತಿತು. ಇವರೆಲ್ಲರಿಂದ ದೂರ ಹೋಗಬೇಕೆನಿಸಿತ್ತು,. ಒಬ್ಬಳೇ ಹೆಣ್ಣುಮಗಳು ಎಲ್ಲಿಗೆ ಹೋಗಬಹುದು ಯಾರು ಆಶ್ರಯಕೊಡುತ್ತಾರೆ ಅಂತೆಲ್ಲ ಯೋಚಿಸಿ, ಇಲ್ಲ ಜಿಆರ್‌ಇ ಟೋಫೆಲ್ ಪರೀಕ್ಷೆ ಚೆನ್ನಾಗಿ ಬರೆದು ಅಮೆರಿಕಾಕ್ಕೆ ಹೋಗಬೇಕು ಇವರೆಲ್ಲರಿಂದ ದೂರ, ನಾನು ಈಗ ಓದಿರುವ ಪ್ರಕಾರ ಒಳ್ಳೆ RANK  ಬರುತ್ತೆ ಹಾಗೂ ವೀಸಾ ಖರ್ಚಿಗೆ ಅಪ್ಪ ಹೇಗೂ ದುಡ್ಡು ಕೊಡುವುದಾಗಿ ತಿಳಿಸಿದೆಯಲ್ಲ ಅಂತ ಸಮಾಧಾನ ಮಾಡಿಕೊಂಡೆ.


ಆದರೆ ಈ ಸಮಾಧಾನ ಒಂದು ವಾರ ಕೂಡ ಉಳಿಯಲಿಲ್ಲ.

(ಮುಂದಿನ ಕಿನ್ನರಿಗೆ)

(ಮುಖ ಚಿತ್ರ: ಸಾಲ್ವಡಾರ್‌ ಡಾಲಿ)