2024ರೊಳಗೆ ಪ್ರತಿ ಮನೆಗೂ ನೀರು ಜಲಜೀವನ್ ಮಿಷನ್ ಅಡಿ ಅಗತ್ಯ ಕ್ರಿಯಾ ಯೋಜನೆ ರೂಪಿಸಿ - ಆಯುಕ್ತ ಪ್ರಕಾಶ್

2024ರೊಳಗೆ ಪ್ರತಿ ಮನೆಗೂ ನೀರು   ಜಲಜೀವನ್ ಮಿಷನ್ ಅಡಿ ಅಗತ್ಯ ಕ್ರಿಯಾ ಯೋಜನೆ ರೂಪಿಸಿ - ಆಯುಕ್ತ ಪ್ರಕಾಶ್

2024ರೊಳಗೆ ಪ್ರತಿ ಮನೆಗೂ ನೀರು


ಜಲಜೀವನ್ ಮಿಷನ್ ಅಡಿ ಅಗತ್ಯ ಕ್ರಿಯಾ ಯೋಜನೆ ರೂಪಿಸಿ - ಆಯುಕ್ತ ಪ್ರಕಾಶ್

ಕೋಲಾರ: ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ 2024ರೊಳಗೆ ನಳದ ಮೂಲಕ ಶುದ್ದ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್  ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಿಯಾಯೋಜನೆ ತಯಾರಿಸುವಂತೆ ರಾಜ್ಯ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಆಯುಕ್ತ ಹೆಚ್.ಪಿ.ಪ್ರಕಾಶ್ ಸೂಚನೆ ನೀಡಿದರು.


ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಸೋಮನಾಥೇಶ್ವರ ಕಲ್ಯಾಣಮಂಟಪದಲ್ಲಿ ಜಿಪಂ, ಜಲಜೀವನ್ ಮಿಷನ್, ಸ್ವಚ್ಚಭಾರತ ಮಿಷನ್ ಯೋಜನೆಗಳಡಿ ಗ್ರಾಮ ಕ್ರಿಯಾಯೋಜನೆ ತಯಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.


ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ಪ್ರತಿಯೊಬ್ಬರಿಗೂ 55 ಲೀಟರ್ ನೀರನ್ನು ಮನೆ ಬಾಗಿಲಿಗೆ ಒದಗಿಸುವ ಉದ್ದೇಶ ಹೊಂದಿದ್ದು, ಅದಕ್ಕೂ ಮುನ್ನಾ ಹಳ್ಳಿಯ ಪರಿಸ್ಥಿತಿ, ಹೀಗಿರುವ ನೀರಿನ ವ್ಯವಸ್ಥೆ ಗಮನಿಸಿ ಸಮರ್ಪಕವಾದ ಕಾರ್ಯಾತ್ಮಕವಾದ ಯೋಜನೆ ತಯಾರಿಸುವ ಮೂಲಕ ನೀರಿನ ಸಮಾನ ಹಂಚಿಕೆಗೆ ಕ್ರಮವಹಿಸಬೇಕಾಗಿದೆ ಎಂದು ತಿಳಿಸಿದರು.


2019ರಲ್ಲೇ ಜಲಜೀವನ ಮಿಷನ್ ಆರಂಭವಾಗಿದ್ದರೂ, ಆಗ ಪ್ರತಿ ಗ್ರಾಮಕ್ಕೆ ನೀರು ಒದಗಿಸುವ ಉದ್ದೇಶವಿತ್ತು ಎಂದ ಅವರು, ಈಗ ಪ್ರತಿ ಮನೆಗೂ ನಳ ನೀರು ಒದಗಿಸುವ ಮೂಲಕ ಯಾರೇ ಆಗಲಿ ನೀರಿಗಾಗಿ ದೂರ ಹೋಗಿ ಬರುವುದನ್ನು ತಪ್ಪಿಸುವುದಾಗಿದೆ ಎಂದರು.


ವರ್ಷದ 365 ದಿನವೂ ನಳ ನೀರು ಸರಬರಾಜು ಆಗಬೇಕು, ಹಳ್ಳಿಗಳ ಪರಿಸ್ಥಿತಿ ಅವಲೋಕಿಸಿ ಬೇಡಿಕೆಗೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಬೇಕು ಎಂದರು.


ಈ ಯೋಜನೆಯಡಿ ಕೊಳವೆ ಬಾವಿ, ನೀರಿನ ಸಂಪರ್ಕ, ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಎಲ್ಲವೂ ಸೇರಿದ್ದು, ಒಟ್ಟಾರೆಯಾಗಿ ಪ್ರತಿ ಮನೆಗೂ ನೇರವಾಗಿ ನೀರು ಒದಗಿಸುವುದ್ದಾಗಿದೆ ಎಂದು ತಿಳಿಸಿದರು.
ನಳ ನೀರು ಪ್ರತಿಮನೆಗೂ ಒದಗಿಸಿ ಮೀಟರ್ ಅಳವಡಿಸುವ ಕುರಿತು ಆಯುಕ್ತ ಪ್ರಕಾಶ್ ಪ್ರಸ್ತಾಪಿಸಿದಾಗ ಅದಕ್ಕೆ ಗ್ರಾ.ಪಂ ಸದಸ್ಯ ಎ.ಎಸ್.ನಂಜುAಡಗೌಡ ವಿರೋಧ ವ್ಯಕ್ತಪಡಿಸಿದರು.
ನಂಜುAಡಗೌಡ ಮಾತನಾಡಿ, ಅರಾಭಿಕೊತ್ತನೂರು ಗ್ರಾಮದಲ್ಲಿ ಬೇಸಿಗೆಯಲ್ಲೂ ಇಲ್ಲಿನ ಎರಡು ಬಾವಿಗಳಲ್ಲಿ 5 ಅಡಿ ಆಳದಲ್ಲೇ ಶುದ್ದ ಕುಡಿಯುವ ನೀರು ಲಭ್ಯವಿದೆ, ಇಂತಹ ಸಂದರ್ಭದಲ್ಲಿ ಮೀಟರ್ ಅಳವಡಿಸಿದ್ದೇ ಆದಲ್ಲಿ ತೆರಿಗೆಗೆ ಅಂಜಿ ಅನೇಕರು ಈ ಯೋಜನೆಯ ಪ್ರಯೋಜನ ಪಡೆಯಲು ಮುಂದಾಗುವುದಿಲ್ಲ ಮತ್ತು ಗ್ರಾಮದಲ್ಲಿ ಶೇ.60 ಪರಿಶಿಷ್ಟರು,ಬಡವರಿದ್ದಾರೆ ಎಂದು ತಿಳಿಸಿದರು.


ಇದಕ್ಕೆ ಉತ್ತರಿಸಿದ ಆಯುಕ್ತರು, ಮೀಟರ್ ಅಳವಡಿಕೆ ಉದ್ದೇಶ ಎಷ್ಟು ನೀರು ಬಳಸಲಾಗುತ್ತಿದೆ ಎಂಬುದನ್ನು ಅರಿಯಲು ಮಾತ್ರ, ತೆರಿಗೆ ನಿರ್ಧಾರ ಆಯಾ ಗ್ರಾಮ ಪಂಚಾಯಿತಿಗೆ ಸೇರಿದ್ದು, ಮೀಟರ್ ಅಳವಡಿಕೆಗೂ ನೀವೇ ನಿರ್ಧರಿಸಿ ಎಂದು ಸೂಚಿಸಿದರು.


ಕುಡಿಯುವ ನೀರಿನ ಬೋರ್‌ವೆಲ್‌ಗಳ ರೀಚಾರ್ಜ್ಗೆ ಕ್ರಮವಹಿಸಿ, ಕೆಸಿ ವ್ಯಾಲಿ ನೀರು ನೇರವಾಗಿ ಕೊಳವೆ ಬಾವಿಗೆ ಹೋಗುವಂತಿದ್ದರೆ ಅಂತಹ ನೀರನ್ನು ಬಳಸದಿರಿ ಎಂದು ಆಯುಕ್ತರು ಸೂಚಿಸಿದರು.


ಬೆತ್ತನಿ ಗ್ರಾಮದಲ್ಲಿ 80 ಮನೆಗಳಿದ್ದು, ಅಲ್ಲಿ ಓವರ್ ಹೆಡ್ ಟ್ಯಾಂಕ್ ಇಲ್ಲ ಎಂಬ ದೂರಿಗೆ ಸ್ಪಂದಿಸಿದ ಆಯುಕ್ತರು ಅಲ್ಲಿ 10 ಸಾವಿರ ಲೀಟರ್ ಟ್ಯಾಂಕ್ ನಿರ್ಮಿಸಲು ಸೂಚಿಸಿ, ಅರಾಭಿಕೊತ್ತನೂರು ಗ್ರಾಮದಲ್ಲಿನ ಲಕ್ಷ ಲೀಟರ್ ಟ್ಯಾಂಕ್ ಸುಸ್ಥಿತಿಯಲ್ಲಿದೆ, ಉಳಿದ 25 ಸಾವಿರ ಲೀಟರ್ ಟ್ಯಾಂಕ್ ಶಿಥಿಲಗೊಂಡಿದ್ದು, ಅದನ್ನು ತೆಗೆದು ಹೊಸ ಟ್ಯಾಂಕ್ ನಿರ್ಮಿಸಲು ಸೂಚಿಸಿದರು.


ಜಲಜೀವನ್ ಮಿಷನ್ ಯೋಜನೆಯಡಿ ಯಾವುದೇ ಗ್ರಾಮದಲ್ಲಿ ನೀರು ಒದಗಿಸುವುದಾದರೆ ಅಲ್ಲಿ ಕ್ಲೋರಿನೇಷನ್ ಯುನಿಟ್ ಮಾಡಿ, ನೀರಿನ ಶುದ್ದತೆ ಕುರಿತು ಕಾಲಕಾಲಕ್ಕೆ ಗಮನಹರಿಸಬೇಕು ಎಂದು ಸೂಚಿಸಿದರು.


ಕಾರ್ಯಕ್ರಮಕ್ಕೂ ಮೊದಲು ಅರಾಭಿಕೊತ್ತನೂರು ಗ್ರಾಮದಲ್ಲಿನ ಕುಡಿಯುವ ನೀರಿನ ಮೂಲ,ಸರಬರಾಜು ಕೊಳವೆ ಮಾರ್ಗ,ಟ್ಯಾಂಕ್ ಮತ್ತಿತರ ಮಾಹಿತಿ ಇರುವ ನಕ್ಷೆಯನ್ನು ಬರೆದಿದ್ದು, ಅದರ ಕುರಿತು ಗ್ರಾಮದ ಸಾಕ್ಷರತಾ ಪ್ರೇರಕ ರಾಮಚಂದ್ರಪ್ಪ ವಿವರಿಸಿದರು.


ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 1980 ಹಳ್ಳಿಗಳಿದ್ದು,  ಇದರಲ್ಲಿ 1680 ಕಂದಾಯ ಗ್ರಾಮಗಳಾಗಿವೆ ಎಂದು ತಿಳಿಸಿ, ಇದರಲ್ಲಿ ಈಗಾಗಲೇ 1 ಸಾವಿರ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿದೆ ಎಂದು ತಿಳಿಸಿದರು.
ಗ್ರಾ.ಪಂ ಅಧ್ಯಕ್ಷ ರಾಜಣ್ಣ ಅಧ್ಯಕ್ಷತೆ ವಹಿಸಿದ್ದು, ಸಭೆಯಲ್ಲಿ  ಜಿಪಂ ಸಿಇಒ ಉಖೇಶ್ ಕುಮಾರ್, ಕುಡಿಯುವ ನೀರು,ನೈರ್ಮಲ್ಯ ಇಲಾಖೆ ಅಧೀಕ್ಷಕ ಅಭಿಯಂತರ ನಾಗರಾಜ್, ನೀರು, ನೈರ್ಮಲ್ಯ ಸಮಿತಿ ರಾಜ್ಯ ನಿರ್ದೇಶಕ ಪರಮೇಶ್ವರ ಹೆಗಡೆ, ಗ್ರಾ.ಪಂ ಉಪಾಧ್ಯಕ್ಷೆ ಶಾಂತಮ್ಮ, ಯೋಜನಾ ನಿರ್ದೇಶಕಿ ಶೃತಿ, ಇಇ ಮಂಜುನಾಥ್, ಎಇಇಗಳಾದ ಶೇಷಾದ್ರಿ, ನಾರಾಯಣಸ್ವಾಮಿ, ರವಿಚಂದ್ರ, ಶ್ರೀನಿವಾಸ್, ಸುಬ್ರಮಣಿ, ವಿವಿಧ ತಾಲ್ಲೂಕುಗಳ ತಾಪಂ ಇಒಗಳಾದ  ಬಾಬು, ಕೃಷ್ಣಪ್ಪ, ಆನಂದ್ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.