ಎಸಿಬಿ ರದ್ದು ಮಾಡಿದ ಹೈಕೋರ್ಟ್ : ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಸಿಕ್ಕೀತೇ ಸ್ವಾತಂತ್ರ್ಯ

ಸುದ್ದಿ ವಿಶ್ಲೇಷಣೆ -ಆರ್.ಹೆಚ್.ನಟರಾಜ್ ಎಸಿಬಿ ರದ್ದು ಮಾಡಿದ ಹೈಕೋರ್ಟ್ : ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಸಿಕ್ಕೀತೇ ಸ್ವಾತಂತ್ರ್ಯ

ಎಸಿಬಿ ರದ್ದು ಮಾಡಿದ ಹೈಕೋರ್ಟ್ : ಭ್ರಷ್ಟಾಚಾರದ  ವಿರುದ್ಧದ ಹೋರಾಟಕ್ಕೆ ಸಿಕ್ಕೀತೇ ಸ್ವಾತಂತ್ರ್ಯ

ಸುದ್ದಿ ವಿಶ್ಲೇಷಣೆ

-ಆರ್.ಹೆಚ್.ನಟರಾಜ್

ಎಸಿಬಿ ರದ್ದು ಮಾಡಿದ ಹೈಕೋರ್ಟ್ : ಭ್ರಷ್ಟಾಚಾರದ

ವಿರುದ್ಧದ ಹೋರಾಟಕ್ಕೆ ಸಿಕ್ಕೀತೇ ಸ್ವಾತಂತ್ರ್ಯ

 

ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯ್ತು ಎಂಬ ದಾರ್ಶನಿಕರ ಮಾತು ರಾಜಕಾರಣ ಮತ್ತು ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ ಸಾರ್ವಕಾಲಿಕ ಸತ್ಯವಾಗುತ್ತದೆ

ಭ್ರಷ್ಟಾಚಾರ ತಡೆ ವಿಚಾರ ಬಂದಾಗ ಪಕ್ಷಗಳ ಹಣೆಬರಹ ಒಂದೇ ಎಂಬುದು ಪದೇ ಪದೇ ಮನವರಿಕೆಯಾಗುತ್ತಸೆ.

ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮದು ಶೂನ್ಯ ಸಹಿಷ್ಣುತೆ ಎಂದು ಹೇಳಿದವರು ಕೂಡ ಅಧಿಕಾರಕ್ಕೆ ಬಂದ ಮೇಲೆ ಆ ವಿಚಾರದಲ್ಲಿ ಸಂಪೂರ್ಣ ಸಹಿಷ್ಣುಗಳಾಗುತ್ತಾರೆ. ಇದಕ್ಕೆ ಯಾವುದೇ ಪಕ್ಷವೂ ಹೊರತಲ್ಲ. ಪುರಾಣ ಹೇಳೋಕೆ, ಬದನೇಕಾಯಿ ತಿನ್ನೋಕೆ ಎಂಬ ಗಾದೆಮಾತು ಇದಕ್ಕೆ ಹೇಳಿ ಮಾಡಿದಂತಿದೆ.

ಇಂತಹ ಕಟು ವಾಸ್ತವದ ನಡುವೆಯೂ ಅಲ್ಲಲ್ಲಿ ಬೆಳಕಿನ ಕಿರಣ ಕಾಣ ಸಿಗುತ್ತವೆ ಇವುಗಳು ಒಂದು ರೀತಿಯಲ್ಲಿ ಮರುಭೂಮಿಯಲ್ಲಿನ ಓಯಸಿಸ್ ನಂತೆ ಭರವಸೆ ಮತ್ತು ಚೈತನ್ಯವನ್ನು ಬಡಿದೆಬ್ಬಿಸುತ್ತವೆ. ವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುತ್ತವೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಮಯದಲ್ಲಿ ಭ್ರಷ್ಟಾಚಾರದ ಕುರಿತಾದ ರಾಜ್ಯ ಹೈಕೋರ್ಟ್ ತೀರ್ಪು ಇಂತಹ ಭರವಸೆಗೊಂದು ಸಾಕ್ಷಿ

1980 ರ‌ ಅವಧಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಸಾತ್ವಿಕ ಸಿಟ್ಟು ಹೊರಹೊಮ್ಮುತಿತ್ತು.ಇದಕ್ಕೆ ಪೂರಕವಾಗಿ ಅಂದಿನ ಪ್ತಜ್ಞಾವಂತ ಹೋರಾಟಗಾರರು ಸ್ಪಂದಿಸುತ್ತಿದ್ದರು. ಇದರ ಪರಿಣಾಮವಾಗಿ ಅಂದು ಆಡಳಿತ ನಡೆಸುತ್ತಿದ್ದ

ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಸರ್ಕಾರ ಸಂವಿಧಾನದ ಆಶಯಗಳನ್ನು ಬಳಸಿ ಭ್ರಷ್ಟಾಚಾರದ ವಿರುದ್ಧದ ಸಮರಕ್ಕೆ ಲೋಕಾಯುಕ್ತವನ್ನು ಹುಟ್ಟು ಹಾಕಿತು ಇದಕ್ಕಾಗಿ  'ಕರ್ನಾಟಕ ಲೋಕಾಯುಕ್ತ ಕಾಯಿದೆ 1984' ಜಾರಿಗೆ ಬಂತು.

ಅಂತೂ ಒಂದು ವ್ಯವಸ್ಥೆಯಾಗಿ ಇದು ಜಾರಿಗೆ ಬಂತು .ಆದರೆ ನ್ಯಾಯಮೂರ್ತಿ ಎನ್.ವೆಂಕಟಾಚಲ ಇದರ ಮುಖ್ಯಸ್ಥರಾಗಿ ಕೆಲಸ ಆರಂಭಿಸಿದಾಗ ಇಂತಹದೊಂದು ವ್ಯವಸ್ಥೆ ಇದೆ ಎಂದು ಜನರಿಗೆ ಮನವರಿಕೆಯಾದರೆ  ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಇದರ ಮುಖ್ಯಸ್ಥರಾಗಿ ಬರುತ್ತಿದ್ದಂತೆ ಇಡೀ ದೇಶಕ್ಕೆ ಲೋಕಾಯುಕ್ತ ಪರಿಚಯವಾಯಿತು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅಧಿಕಾರದಲ್ಲಿ ಮುಖ್ಯಮಂತ್ರಿಯೊಬ್ಬರು ಕಾರಾಗೃಹ ಸೇರಿದರೆ, ಮಂತ್ರಿಗಳು, ಶಾಸಕರು, ಹಿರಿಯ ಅಧಿಕಾರಿಗಳು ಜೈಲೂಟ ಸವಿಯುವಂತಾಯಿತು.

ಈ ಸಂಸ್ಥೆ ಗಳಿಸಿದ ಜನಪ್ರಿಯತೆ ರಾಷ್ಟ್ರಮಟ್ಟದಲ್ಲಿ ಇಂತಹದೊಂದು ಸಂಸ್ಥೆಯ ಅಗತ್ಯವಿದೆ ಎಂಬ ಆಭಿಪ್ರಾಯ ಮೂಡಿಸಿತು.

ಗಾಂಧಿವಾದಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಲೋಕಪಾಲ್‌ ವಿಧೇಯಕ ಜಾರಿಗಾಗಿ ದೊಡ್ಡ ಹೋರಾಟ ನಡೆಯಿತು. ಸಮಾಜದ ಪ್ರಜ್ಞಾವಂತ ಜನತೆ ಇದರಲ್ಲಿ ಸಾಗರೋಪಾದಿಯಲ್ಲಿ ತೊಡಗಿದರು.

ಇದರ ಪರಿಣಾಮವಾಗಿ ಲೋಕಪಾಲ್ ಮಸೂದೆಯೂ ಬಂತು ಅಂದು ಆಡಳಿತದಲ್ಲಿ ಸರ್ಕಾರ ಮೂಲೆ ಗುಂಪಾಯಿತು.ಹೋರಾಟ ಬೆಂಬಲಿಸಿದ್ದ ಬಿಜೆಪಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು.ಆದರೆ ಇಲ್ಲಿಯವರೆಗೆ ಕರ್ನಾಟಕ ಲೋಕಾಯುಕ್ತದಂತಹ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಅಸ್ತಿತ್ವಕ್ಕೆ ಬರಲಿಲ್ಲ. ಹೋರಾಟದ ನೇತೃತ್ವ ವಹಿಸಿದ್ದ ಅಣ್ಣಾಹಜಾರೆ ತಮ್ಮ ಕುಟೀರದಿಂದ ಹೊರಬರಲಿಲ್ಲ ಅದು ಬೇರೆ ಮಾತು.

ಇನ್ನು ಕರ್ನಾಟಕದ ವಿಷಯಕ್ಕೆ ಬರುವುದಾದರೆ, ಸಂತೋಷ್ ಹೆಗಡೆಯವರ ನಂತರ ಈ ಹುದ್ದೆಗೆ ಬಂದ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ನ್ಯಾಯಾಂಗ ಬಡಾವಣೆ ನಿವೇಶನ ವಿಷಯವಾಗಿ ಹುದ್ದೆಯಿಂದ ನಿರ್ಗಮಿಸಿದರು.ಈ ವಿಷಯವಾಗಿ ಹುದ್ದೆ ಬಹಳ ದಿನ ಖಾಲಿ ಉಳಿಯುವಂತಾಯಿತು.

ಬಹಳಷ್ಟು ಕಸರತ್ತಿನ ಬಳಿಕ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದ ಭಾಸ್ಕರ್ ರಾವ್ ಅವರನ್ನು ನೇಮಿಸಿತು.

ಇವರ ನೇಮಕ ಪ್ರಸ್ತಾಪಕ್ಕೆ ನ್ಯಾಯಾಂಗ ವ್ಯವಸ್ಥೆಯಲ್ಲೇ ಅಪಸ್ವರ ಬಂತು. ಆದರೂ ಅಂದಿನ ಸರಕಾರ ಇದನ್ನು ಲೆಕ್ಕಿಸದೇ ಭಾಸ್ಕರ ರಾವ್‌ ಅವರನ್ನು ಈ ನೇಮಿಸಿತ್ತು. ಈ ಅವಧಿಯಲ್ಲಿ ಅಂದಿನ ಸಿಎಂ ವಿರುದ್ಧವೂ ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣ ದಾಖಲಾದರೂ ಕ್ರಮ ಆಗಲಿಲ್ಲ. ನಂತರ ಲೋಕಾಯುಕ್ತ ಪುತ್ರನ ವಿರುದ್ಧವೇ ಲಂಚ ಆರೋಪ ಎದುರಾಯಿತು. ಲೋಕಾಯುಕ್ತದಲ್ಲಿದ್ದ ಅಧಿಕಾರಿಗಳು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿ ಬಿದ್ದರು.

ಈ ಬಿಕ್ಕಟ್ಟು ನ್ಯಾಯಮೂರ್ತಿ ಭಾಸ್ಕರ ರಾವ್‌ ಪದಚ್ಯುತಿಗೆ ವಿಧಾನ ಮಂಡಲ ಅಧಿವೇಶನದಲ್ಲಿ ನಿರ್ಣಯ ಮಾಡಿ ಮುಖ್ಯ ನ್ಯಾಯಮೂರ್ತಿಗಳಿಗೆ ಕಳಿಸುವ ಹಂತದ ವರೆಗೆ  ಮುಂದುವರಿಯಿತು. ಅಂತಿಮವಾಗಿ ಅವರು ಪದತ್ಯಾಗ ಮಾಡಿದರು.

ಇದು ಕರ್ನಾಟಕ ಲೋಕಾಯುಕ್ತ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಪರಿಣಮಿಸಿತು.

 ಇದರ ಬೆನ್ನಲ್ಲೇ ಲೋಕಾಯುಕ್ತದ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಬೀಳುವಂತಹ ತೀರ್ಪೊಂದು ಸುಪ್ರೀಂ ಕೋರ್ಟ್ ನಿಂದ ಹೊರಬಿತ್ತು.

ಇದಕ್ಕೆ ಪರಿಹಾರವಾಗಿ ಲೋಕಾಯುಕ್ತಕ್ಕೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತಹ ಅಧಿಕಾರ ನೀಡಬೇಕಿತ್ತು.ಆದರೆ ಅಂದು ಅಧಿಕಾರದಲ್ಲಿದ್ದ ಸರ್ಕಾರ ಮಾಡಿದ್ದೇ ಬೇರೆ.

ಯಾವುದೋ ದುರುದ್ದೇಶ ಅಥವಾ ಮುಂಜಾಗ್ರತೆಯಿಂದ ಲೋಕಾಯುಕ್ತ ಕಾಯಿದೆ ತಿದ್ದುಪಡಿ ಮೂಲಕ ಲೋಕಾಯುಕ್ತ ಅಧಿಕಾರ ಮೊಟಕುಗೊಳಿಸಿತು.

ಭ್ರಷ್ಟಾಚಾರ ತಡೆ ಅಧಿನಿಯಮ - 1988 ಅನುಷ್ಠಾನ ಮತ್ತು ತನಿಖೆ ಹೊಣೆಗಾಗಿ ಭ್ರಷ್ಟಾಚಾರ ನಿಗ್ರಹ ದಳ ರಚಿಸಲಾಯಿತು

ಲೋಕಾಯುಕ್ತ ನ್ಯಾ. ಭಾಸ್ಕರ ರಾವ್‌ ಪುತ್ರನ ಲಂಚ ಪ್ರಕರಣದಲ್ಲಿ ಕಳಂಕಿತ ಲೋಕಾಯುಕ್ತರನ್ನು ಅಭಿಯೋಜನೆಗೆ ಒಳಪಡಿಸಲು ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ಅನಿವಾರ್ಯತೆಯ ಕಾರಣ ನೀಡಿ ಲೋಕಾಯುಕ್ತ ಕಾಯಿದೆ (ತಿದ್ದುಪಡಿ) ಕಾಯಿದೆ 2015' ರೂಪಿಸಿತು

ಅಂತೆಯೇ ಮಾರ್ಚ್ 2016ರಲ್ಲಿ ಲೋಕಾಯುಕ್ತಕ್ಕಿದ್ದ ಪೊಲೀಸ್‌ ತನಿಖಾಧಿಕಾರ ಕಸಿದುಕೊಂಡು ಮುಖ್ಯಮಂತ್ರಿಗಳೇ ಸಕ್ಷಮ ಪ್ರಾಧಿಕಾರವಾಗಿರುವ ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಲಾಯಿತು. ಯಾವುದಾದರೂ ಹಿರಿಯ ಅಧಿಕಾರಿ ವಿರುದ್ಧದ ದೂರಿನ ತನಿಖೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನುಮತಿ ಅಗತ್ಯ ಎಂಬ ನಿಯಮ ರೂಪಿಸಲಾಯಿತು.

ಇದರ ಪರಿಣಾಮ ಲೋಕಾಯುಕ್ತ ಕೇವಲ ದೂರು‌ ಸ್ವೀಕಾರದ ಕೇಂದ್ರ ಅರ್ಥಾತ್ ಸಾರ್ವಜನಿಕ ಕುಂದು ಕೊರತೆಗಳನ್ನು ಸ್ವೀಕರಿಸುವ ವ್ಯವಸ್ಥೆಯಾಯಿತು.

ಲೋಕಾಯುಕ್ತವನ್ನು ಈ ರೀತಿ ದುರ್ಬಲಗೊಳಿಸಿದ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು,ಸಾಮಾಜಿಕ ಹೋರಾಟಗಾರರು ಮುಗಿಬಿದ್ದರು.ಆದರೆ ಅಂದಿನ ಸರ್ಕಾರ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ಕಸಿಕ್ಕಿಲಇದನ್ನು ತಮ್ಮ ಲಾಭಕ್ಕೆ ಬಳಸಲೆತ್ನಿಸಿದ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುವ ಭರವಸೆ ನೀಡಿದವು.ಆದರೆ ವಾಸ್ತವ ಎನು ಗೊತ್ತಾ..

ಹೌದು, ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ವಿಚಾರದಲ್ಲಿ ಸದ್ಯದ ಮಟ್ಟಿಗೆ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಒಂದೇ ದೋಣಿಯ ಪ್ರಯಾಣಿಕರಂತಾಗಿವೆ. ಸಿದ್ದರಾಮಯ್ಯ ಅವರ ಸರ್ಕಾರ  ಲೋಕಾಯುಕ್ತ ಸಂಸ್ಥೆಯ ಸ್ವಾಯತತ್ತೆಗೆ ಕಡಿವಾಣ ಹಾಕಿ ಎಸಿಬಿ ಸಂಸ್ಥೆಯನ್ನು ಹುಟ್ಟುಹಾಕಿದಾಗ ಪ್ರಬಲ ವಿರೋಧ ವ್ಯಕ್ತಪಡಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಕೂಡ ತಾವೇನೂ ಕಾಂಗ್ರೆಸ್ಸಿಗಿಂತ ಕಡಿಮೆ ಇಲ್ಲ ಎಂಬಂತೆ ವರ್ತಿಸುತ್ತಿವೆ.

ಇದಕ್ಕೆ ಮತ್ತೂ ಒಂದು ಉದಾಹರಣೆ ಎಂದರೆ ಲೋಕಾಯುಕ್ತ ಕುರಿತಾದ ಸಾರ್ವಜನಿಕ ರಿಟ್ ಅರ್ಜಿಯ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರಬುಲಿಂಗ ನಾವದಗಿ ಅವರು ಹೈಕೋರ್ಟ್ ಮುಂದೆ ಮಂಡಿಸಿದ ವಾದವೇ ಸಾಕ್ಷಿ.

ಎಸಿಬಿ ರಚನೆಯಾಗಿರುವುದರಿಂದ ಲೋಕಾಯುಕ್ತ ಸಂಸ್ಥೆಯ ಸ್ವಾಯತ್ತೆಗೆ ಯಾವುದೇ ಧಕ್ಕೆಯಾಗಿಲ್ಲ. ಎಸಿಬಿ ಎಂಬುದು ಲೋಕಾಯುಕ್ತಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆಯೇ ಹೊರತು ಲೋಕಾಯುಕ್ತವನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ವಾದಿಸಿದರು.

ಈ ವಾದ ಮಂಡನೆ ಬಿಜೆಪಿ ಸರ್ಕಾರ ಎಸಿಬಿ ರದ್ದುಗೊಳಿಸುತ್ತಿದೆ ಎಂಬ ನಿರೀಕ್ಷೆಯನ್ನು ಹುಸಿ ಮಾಡಿತು ಅಷ್ಟೇ ಅಲ್ಲ, ಇಂತಹ ಸಂಸ್ಥೆಗಳನ್ನು (ಲೋಕಾಯುಕ್ತ ಮತ್ತು ಎಸಿಬಿ) ಎಂತಹ ಪ್ರಾಮಾಣಿಕ ಅಧಿಕಾರಿಗಳು ನಡೆಸಿಕೊಂಡು ಹೋಗುತ್ತಾರೆ ಎಂಬುದರ ಮೇಲೆ ಅವುಗಳ ಯಶಸ್ಸು ಅಡಗಿದೆ ಎಂದು ಹೇಳುವ ಮೂಲಕ ಅಡ್ವೋಕೇಟ್ ಜನರಲ್, ಭ್ರಷ್ಟಾಚಾರ ವಿಚಾರದಲ್ಲಿ ಎಲ್ಲವೂ ಅಧಿಕಾರಿಗಳ ಕೈಯ್ಯಲ್ಲಿದೆ. ರಾಜಕೀಯ ಪಕ್ಷಗಳು ಅಥವಾ ಅವುಗಳ ನಾಯಕರಿಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಪ್ರತಿಪಾದಿಸಿದರು

ಆದರೆ ಈ ಯಾವುದೇ ವಾದವನ್ನು ಮಾನ್ಯ ಮಾಡದ ನ್ಯಾಯಮೂರ್ತಿ ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಎಸಿಬಿ ರಚನೆಯ ಆದೇಶವನ್ನು ರದ್ದುಪಡಿಸುವ ತೀರ್ಪು ನೀಡಿದೆ ಈ ಮೂಲಕ ನ್ಯಾಯಪೀಠ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಕೊಡುಗೆ ನೀಡಿದೆ.ಈ ಮೂಲಕ ಲೋಕಾಯುಕ್ತಕ್ಕೆ ಮಾನ್ಯತೆ ದೊರಕುವಂತೆ ಮಾಡಿದೆ.

ಈಗ ಸರ್ಕಾರ ಮಾಡಬೇಕಿರುವುದು ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುವ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸ್ವಾತಂತ್ರ್ಯ ನೀಡಬೇಕಿದೆ....