‘ನಕ್ಸಲ್‍’ ರನ್ನು ಸೃಷ್ಟಿಸುವ ಸರಕಾರಗಳು

 ‘ನಕ್ಸಲ್‍’ ರನ್ನು ಸೃಷ್ಟಿಸುವ ಸರಕಾರಗಳು
 ‘ನಕ್ಸಲ್‍’ ರನ್ನು ಸೃಷ್ಟಿಸುವ ಸರಕಾರಗಳು

ಮಲೆಕುಡಿಯ ಎಂಬ ಕಾಡುವಾಸಿ ಬುಡಕಟ್ಟಿಗೆ ಸೇರಿದ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲ ಅವರನ್ನು ಸರಕಾರ 2012ರಲ್ಲಿ ನಕ್ಸಲ್ ಎಂದು ಹಣೆ ಪಟ್ಟಿ ಕಟ್ಟಿ ಬಂಧಿಸಿ, ಕೇಸು ಜಡಿದಿತ್ತು. ಸರಕಾರದ ಆರೋಪದಲ್ಲಿ ಹುರುಳಿಲ್ಲ ಎಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿ ಅವರನ್ನು ದೋಷಮುಕ್ತರನ್ನಾಗಿ ಮಾಡಿದೆ. ಕಳೆದ ಒಂಭತ್ತು ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಪತ್ರಕರ್ತ ವಿಠಲ ಮಲೆಕುಡಿಯ ತುಮಕೂರಿನಲ್ಲೂ ಪ್ರಜಾವಾಣಿ ವರದಿಗಾರರಾಗಿದ್ದರು. ಸರಕಾರ ಪೊಲೀಸರ ಮುಖಾಂತರ ಒಬ್ಬ ವ್ಯಕ್ತಿಯನ್ನು ನಕ್ಸಲ್ ಎಂದು ಹಣೆಪಟ್ಟಿ ಕಟ್ಟಿಬಿಟ್ಟರೆ ಅದರಿಂದ ಪಾರಾಗುವುದು ಸುಲಭವಲ್ಲ, ಇಂಥ ಪರಿಸ್ಥಿತಿಯಲ್ಲಿದ್ದ ವಿಠಲ್ ಅವರಿಗೆ ಉದ್ಯೋಗ ನೀಡಿದ ಪ್ರಜಾವಾಣಿ ಅಭಿನಂದನೀಯ. ಒಟ್ಟಾರೆ ನಡೆದದ್ದೇನು ಎಂಬ ಕುರಿತು ವಿಠಲ್‍ ಮಾತುಗಳಲ್ಲೇ ಕೇಳಿ- ಸಂಪಾದಕ

 ‘ನಕ್ಸಲ್‍’ ರನ್ನು ಸೃಷ್ಟಿಸುವ ಸರಕಾರಗಳು

 ಅಂದು ಮಾರ್ಚ್‌ 2, 2012. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಯ ಕುತ್ಲೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಎಲ್ಲ ಮನೆಗಳಲ್ಲಿ ಆತಂಕದ ವಾತಾವರಣ ಇತ್ತು. ನೂರಾರು ನಕ್ಸಲ್‌ ನಿಗ್ರಹ ಪಡೆಯ ಪೊಲೀಸರು ಬಹಳಷ್ಟು ಮನೆಗಳಿಗೆ ಹೋಗಿ ಆತಂಕ ಹುಟ್ಟಿಸಿದ್ದರು. ಕೆಲವು ಮನೆಗಳಿಗೆ ದಾಳಿ ಮಾಡಿ ಜನರು ಹೆದರುವಂತೆ ಮಾಡಿದ್ದರು. ಸ್ಥಳೀಯ ಬುಡಕಟ್ಟು ಜನರನ್ನು ತಮ್ಮೊಂದಿಗೆ ಬಲವಂತವಾಗಿ ಬರಹೇಳಿ ಮನೆಗಳಿಗೆ ಹಾಗೂ ಕಾಡಿನಲ್ಲಿ ದಾರಿ ತೋರಿಸುವಂತೆ ಒತ್ತಾಯಿಸಿದ್ದರು. ಊರಿನ ಇಬ್ಬರನ್ನು ಪೊಲೀಸರು ಕರೆದುಕೊಂಡು ಅರಣ್ಯದೊಳಗೆ ಹೋಗಿದ್ದರು. ಆತಂಕ ಎಲ್ಲೆಡೆ ಮನೆಮಾಡಿತ್ತು.

ಮರುದಿನ ಪತ್ರಿಕೆಗಳಲ್ಲಿ ಪೊಲೀಸರ ದೌರ್ಜನ್ಯದ ವರದಿಯೂ ಬಿತ್ತರವಾಗಿತ್ತು. ಆ ದಿನವೇ ನಮ್ಮ ಮನೆಗೂ ಬಂದಿದ್ದ ಸುಮಾರು 30ಕ್ಕಿಂತಲೂ ಹೆಚ್ಚು ಪೊಲೀಸರು ತಂದೆಯ ಕಾಲು ಮುರಿಯುವಂತೆ ಹೊಡೆದಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಓದುತ್ತಿದ್ದ ನನಗೂ ಈ ಘಟನೆ ತಿಳಿಯಿತು. ಕೂಡಲೇ ಮನೆಗೆ ಧಾವಿಸಿದೆ. ಮಾರ್ಚ್ 3, 2012ರಂದು ನನ್ನನ್ನು ಮತ್ತು ನನ್ನ ತಂದೆಯನ್ನು ಬಂಧಿಸಿದ್ದರು. ಮತ್ತೆ ನಡೆದದ್ದು ಇತಿಹಾಸ.

ಮನೆಯಲ್ಲಿದ್ದ ದಿನಬಳಕೆಯ ವಸ್ತು, ಸಕ್ಕರೆ, ಚಾಹುಡಿ, ಪೇಪರ್‌ಗಳು, ಪಾತ್ರೆಗಳು, ಹುತಾತ್ಮ ಭಗತ್‌ಸಿಂಗ್‌ ಪುಸ್ತಕ ಎಲ್ಲವನ್ನೂ ಹೊತ್ತೊಯ್ದಿದ್ದರು. ಅದೇ ಸಂದರ್ಭದಲ್ಲಿಯೇ ಎಡಚಳವಳಿಯ ಮುಖಂಡರು, ಪತ್ರಕರ್ತರು, ಜನಪರ ಕಾಳಜಿ ಇರುವ ಅನೇಕರು ನನ್ನ ಮತ್ತು ಕುಟುಂಬದ ಪರ ನಿಂತಿದ್ದರು. ದೇಶದ್ರೋಹದ ಆರೋಪ ಹೊರಿಸಿ ಪೊಲೀಸರು ಒಟ್ಟು 15 ದಿನ ಕಸ್ಟಡಿಗೆ ಪಡೆದುಕೊಂಡರು. ಹಲವು ಸ್ಥರದ ಅಧಿಕಾರಿಗಳು ವಿಚಾರಣೆಯ ನೆಪದಲ್ಲಿ ಠಾಣೆಗೆ ಭೇಟಿ ನೀಡುತ್ತಲೇ ಇದ್ದರು.

ಅದೇ ಸಂದರ್ಭದಲ್ಲಿ ಪತ್ರಕರ್ತ ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ ತಕ್ಷಣಕ್ಕೆ ಜತೆಯಾಗಿ ನಿಂತಿದ್ದರು.

2012ರ ಎಪ್ರಿಲ್‌ 18ಕ್ಕೆ ಕೇರಳದ ಪಾಲಕ್ಕಾಡ್‌ ಸಂಸದ ಎಂ.ಬಿ.ರಾಜೇಶ್‌ (ಈಗಿನ ಕೇರಳ ವಿಧಾನಸಭಾ ಸ್ಪೀಕರ್‌) ಕುತ್ಲೂರಿನ ಅರಣ್ಯವಾಸಿಗಳನ್ನು ಭೇಟಿಯಾಗಿ (ಆ ಸಂದರ್ಭದಲ್ಲಿ ಸಿಪಿಐಎಂ ಮುಖಂಡ ಬಿ.ಮಾಧವ, ಡಿವೈಎಫ್‌ಐ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಸಿಜಿ ಮ್ಯಾಥ್ಯೂ, ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಮುನೀರ್‌ ಕಾಟಿಪಳ್ಳ, ವಕೀಲ ಬಿಎಂ ಭಟ್‌, ಶಿವಕುಮಾರ್‌, ಶೇಖರ್‌ ಎಲ್‌ ಮತ್ತು ಮುಖಂಡರು) ಧೈರ್ಯ ತುಂಬಿದ್ದರು. ಹಾಗೂ ಮಂಗಳೂರಿನ ಜೈಲಿಗೂ ಭೇಟಿ ನೀಡಿ ನಮಗೆ ಧೈರ್ಯ ತುಂಬಿದ್ದರು.

‘ಕುತ್ಲೂರಿನ ಕಾಡಿನಲ್ಲಿ ನೂರಾರು ವರ್ಷಗಳಿಂದ ಕಾನೂನುಬದ್ಧವಾಗಿ ನೆಲೆಸಿರುವ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸುವ ರಾಜ್ಯ ಸರ್ಕಾರದ ತಂತ್ರವಾಗಿ ನಕ್ಸಲ್‌ ನಿಗ್ರಹ ದಳದಿಂದ ನಡೆಯುತ್ತಿರುವ ಕಾರ್ಯಾಚರಣೆಯು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ವಿಠಲ ಮತ್ತು ಆತನ ತಂದೆಯ ಮೇಲಿನ ಆರೋಪಗಳು ಸುಳ್ಳು. ವಿಠಲನ ಬಳಿಯಿಂದ ಭಗತ್‌ಸಿಂಗ್‌ ಪುಸ್ತಕ ದೊರೆತ ಹಿನ್ನೆಲೆಯಲ್ಲಿ ಆತ ನಕ್ಸಲ್‌ ಬೆಂಬಲಿಗ ಎಂದು ಸಾಕ್ಷ್ಯ ಒದಗಿಸುವುದಾದರೆ ನಾವೆಲ್ಲ ಜೈಲಿನಲ್ಲಿರಬೇಕಾಗುತ್ತದೆ. ಭಗತ್‌ ಸಿಂಗ್‌ ಪುಸ್ತಕ ಹೊಂದಿದ್ದ ಕಾರಣಕ್ಕೆ ವಿದ್ಯಾರ್ಥಿಯನ್ನು ಬಂಧಿಸುವ ಕಾರ್ಯಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ಬ್ರಿಟಿಷ್‌ ಸರ್ಕಾರ ಕೂಡಾ ಈ ರೀತಿ ಮಾನವ ಹಕ್ಕು ಉಲ್ಲಂಘನೆ ಮಾಡಿಲ್ಲ. ಇಲ್ಲಿನ ಆದಿವಾಸಿಗಳ ಪಟ್ಟಾ ಜಾಗವನ್ನು ಕಿತ್ತು ಕಾರ್ಪೋರೇಟ್‌ ಕಂಪನಿಗಳಿಗೆ ನೀಡಲು ಸರ್ಕಾರ ಯತ್ನಿಸುತ್ತಿದೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ವಿಠಲನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಈ ಬಗ್ಗೆ ಸಂಸತ್ತಿನಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದರು. ಮತ್ತು ಸಂಸತ್ತಿನ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು.

ಮೇ 14, 2012ರಂದು  ಅಧ್ಯಾಪಕ, ನಟ, ವಿಚಾರವಾದಿ ಜಿ.ಕೆ ಗೋವಿಂದ ರಾವ್ ಭೇಟಿ ನೀಡಿದ್ದರು. ದೇಶದ್ರೋಹದ ಆರೋಪದ ಮೇಲೆ ನನ್ನ ಮತ್ತು ನನ್ನ ತಂದೆಯ ಬಂಧನ ಪ್ರಕರಣದಲ್ಲಿ 'ವಿಠಲ ಮಲೆಕುಡಿಯ ಕುಟುಂಬ ಸಂರಕ್ಷಣಾ ಸಮಿತಿ'ಯ ಅಧ್ಯಕ್ಷರಾಗಿದ್ದು ನಮ್ಮ ಕುಟುಂಬದ ಪರವಾಗಿ ನಿಂತಿದ್ದರು. ಮೇ 2012ರಲ್ಲಿ ಮಂಗಳೂರು ಜೈಲಿಗೂ ಭೇಟಿ ನೀಡಿ ಧೈರ್ಯ ತುಂಬಿದ್ದರು. ‘ಜೀವನದಲ್ಲಿ ಭರವಸೆಯನ್ನು ಕಳೆದುಕೊಳ್ಳದಿರು. ಎಲ್ಲವೂ ಸರಿ ಹೋಗುವುದು’ ಎಂದು ಧೈರ್ಯ ತುಂಬಿದ್ದರು. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗಳಲ್ಲೂ ಭಾಗವಹಿಸಿ ನನ್ನ ಮತ್ತು ತಂದೆಯ ಬಿಡುಗಡೆಗೆ ಆಗ್ರಹಿಸಿದ್ದರು. 2012ರ ಜುಲೈನಲ್ಲಿ ಬಿಡುಗಡೆಯಾದ ನಂತರ ಬೆಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಧೈರ್ಯ ತುಂಬಿದ್ದರು.ಇವರು ಇದೇ ತಿಂಗಳ 15ರಂದು ನಮ್ಮನಗಲಿದರು.

ಮೇ 20. 2012ರಲ್ಲಿ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕಾರಟ್‌ ಜೈಲಿಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ರಾಜದ್ರೋಹದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು, ಭಗತ್‌ ಸಿಂಗ್‌ ಅವರನ್ನೂ ಇದೇ ಆರೋಪ ಹೊರಿಸಿ ಗಲ್ಲಿಗೇರಿಸಲಾಗಿತ್ತು. ಭಗತ್‌ ಸಿಂಗ್‌ ಕುರಿತು ಕುಲದೀಪ್‌ ನಯ್ಯರ್‌ ಬರೆದ ಪುಸ್ತಕವನ್ನು ಇಟ್ಟುಕೊಂಡಿದ್ದ ಕಾರಣಕ್ಕೆ ವಿದ್ಯಾರ್ಥಿ ವಿಠಲನ ಮೇಲೆ ರಾಜದ್ರೋಹದ ಆಪಾದನೆ ಹೊರಿಸಿ ಜೈಲಿಗೆ ಹಾಕಲಾಗಿದೆ. ಬ್ರಿಟಿಷ್‌ ಕಾಲದ ಕರಾಳ ಕಾನೂನಿನ ಪಳೆಯುಳಿಕೆ ಉಳಿದಿರುವುದಕ್ಕೆ ಇದು ಸಾಕ್ಷಿ ಎಂದಿದ್ದರು.

ಮೇ ತಿಂಗಳಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಭಾರತ ವಿದ್ಯಾರ್ಥಿ ಫೆಡರೇಷನ್‌ ಹಾಗೂ ಡಿವೈಎಫ್‌ಐ ಬೆಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ನನ್ನ ಮತ್ತು ತಂದೆಯ ಬಿಡುಗಡೆಗೆ ಒತ್ತಾಯಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿವಿ ಶ್ರೀರಾಮರೆಡ್ಡಿ, ಪ್ರೊ.ಕೆ ಮರುಳಸಿದ್ದಪ್ಪ, ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್‌, ಮಹಮ್ಮದ್‌ ಖುರೇಶಿ, ಮಾವಳ್ಳಿ ಶಂಕರ್‌, ಜಿಎನ್‌ ನಾಗರಾಜ್‌, ರವಿಕೃಷ್ಣಾ ರೆಡ್ಡಿ ಸಹಿತ ಹಲವು ಜನಪರ ವ್ಯಕ್ತಿಗಳು ಭಾಗವಹಿಸಿದ್ದರು.

ಏಪ್ರಿಲ್‌ 19, 2012ರಂದು ಪ್ರಜಾವಾಣಿ ಸಂಪಾದಕೀಯದಲ್ಲಿ ‘ನಕ್ಸಲೀಯರನ್ನು ಹುಟ್ಟಿಸಬೇಡಿ’ ಎಂದು ಬರೆದು ‘ಸಾರ್ವಜನಿಕ ಪ್ರತಿರೋಧದ ಕಟ್ಟೆ ಒಡೆಯುವ ಮೊದಲೇ ಬಂಧನದಲ್ಲಿಟ್ಟಿರುವ ವಿದ್ಯಾರ್ಥಿಯನ್ನು ಬಿಡುಗಡೆಗೊಳಿಸಿ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಬೇಕು’ ಎಂದು ಬರೆದಿತ್ತು.

ಡಿವೈಎಫ್‌ಐ, ಎಸ್‌ಎಫ್‌ಐ ಸಂಘಟನೆಗಳು 2012ರ ಮೇ ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಅಕ್ರಮ ಬಂಧನವನ್ನು ಖಂಡಿಸಿತ್ತು. ಹಾಗೂ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಎಪ್ರಿಲ್‌ 13ರಂದು ಉಪವಾಸ ಸತ್ಯಾಗ್ರಹ ಆರಂಭಿಸಲಾಗಿತ್ತು.

ನನ್ನ ಬಂಧನದ ಹಿಂದಿನ ದಿನಗಳು ಬಹಳಷ್ಟು ಕಠಿಣವಾಗಿಯೇ ಇದ್ದವು. ಒಂದರ್ಥದಲ್ಲಿ ‘ಪೊಲೀಸ್‌ ಪೀಡಿತ ಪ್ರದೇಶ’ವಾಗಿಯೇ ಇತ್ತು. ನಮ್ಮೂರಿನಿಂದ ಪಟ್ಟಣ ಪ್ರದೇಶಕ್ಕೆ ಹೋಗಬೇಕೆಂದರೆ 12 ಕಿ.ಮೀ ದೂರವನ್ನು ಕಾಡಲ್ಲಿ ನಡೆದೇ ಹೋಗಬೇಕಿತ್ತು. ಇಂಥ ಸಂದರ್ಭದಲ್ಲಿ ಪೊಲೀಸರು ಕಿರುಕುಳವನ್ನು ನೀಡುತ್ತಲೇ ಇದ್ದರು. ಒಂದಷ್ಟು ದಿನಸಿ ಸಾಮಾನುಗಳನ್ನು ಹೆಚ್ಚು ಮನೆಗೆ ತಂದರೂ ಚೆಲ್ಲಾಪಿಲ್ಲಿ ಮಾಡಿ ಇದು ಇಷ್ಟೊಂದು ಯಾಕೆ ತಂದಿದ್ದೀರಿ, ನಿಮ್ಮ ಮನೆಯಲ್ಲಿ ಇರುವ ಜನರೆಷ್ಟು ಎಂದು ಮುಂತಾಗಿ ತಕರಾರು ತೆಗೆಯುತ್ತಿದ್ದರು. ಪಟ್ಟಣಕ್ಕೆ ಹೋಗಿ ದಿನಸಿ ತರುವಾಗ ದಾರಿ ಮಧ್ಯದಲ್ಲಿ ನಕ್ಸಲ್‌ ನಿಗ್ರಹ ದಳದ ಪೊಲೀಸರು ಸಿಕ್ಕರೆಂದರೆ ಎಲ್ಲ ದಿನಸಿ ಪೊಟ್ಟಣಗಳನ್ನು ತೆರೆದು ತೋರಿಸಬೇಕಾದ ಅಲಿಖಿತ ನಿಯಮವೂ ಆ ದಿನಮಾನಗಳಲ್ಲಿ ಇತ್ತು. ಅಷ್ಟೇ ಅಲ್ಲದೇ ಸಂಬಂಧಿಕರೇನಾದರೂ ಬಂದಿದ್ದಾರೆಂದು ತಿಳಿದ ಕೂಡಲೇ ಅವರ ಮನೆಗೆ ಧಾವಿಸಿ ವಿಚಾರಣೆ ಮಾಡುತ್ತಿದ್ದರು. ಯಾವಾಗ ಹೊರಟು ಹೋಗುತ್ತೀರಿ ಎಂದೂ ಕೇಳುತ್ತಿದ್ದರು. ‘ನಕ್ಸಲರನ್ನು ನಿಗ್ರಹಿಸಲೆಂದೇ ಸೃಷ್ಟಿ ಮಾಡಿದ’ ನಕ್ಸಲ್‌ ನಿಗ್ರಹ ಪಡೆಯು ಕುತ್ಲೂರು ಹಾಗೂ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಜನರಿಗೆ ಒಕ್ಕಲೆದ್ದು ಹೋಗಲು ಒತ್ತಡವನ್ನು ತರುತ್ತಲೇ ಇದ್ದರು. ಸರ್ಕಾರ ಮತ್ತು ಇತರ ಸ್ವಯಂ ಸೇವಾ ಸಂಸ್ಥೆಗಳು ಆ ಭಾಗದಲ್ಲಿ ಕಾರ್ಯಾಚರಿಸಿ ಹಲವು ಆದಿವಾಸಿ ಕುಟುಂಬಗಳನ್ನು ಬೀದಿಗೆ ತಂದಿದ್ದೂ ಇದೆ. ಇದೇ ಮಾದರಿಯಲ್ಲಿ ನಕ್ಸಲ್‌ ನಿಗ್ರಹ ಪಡೆಯ ಪೊಲೀಸರೂ ಜನರಿಗೆ 10 ಲಕ್ಷ ಪ್ಯಾಕೇಜ್‌ ಹಣದ ಆಮಿಷವನ್ನೂ ತೋರಿಸುತ್ತಿದ್ದರು. ಇದನ್ನು ಆ ಸಂದರ್ಭದಲ್ಲೇ ನಮ್ಮ ವ್ಯಾಪ್ತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ವಿರೋಧಿಸುತ್ತಾ ಬರಲಾಯಿತು. ಪೊಲೀಸರ ದೌರ್ಜನ್ಯ, ಹಿಂಸೆಯ ಬಗ್ಗೆ ಪತ್ರಕರ್ತರು ಸುದ್ದಿ ಮಾಡತೊಡಗಿದರು. ಇಲ್ಲಿ ನಡೆಯುವ ಹಿಂಸೆ ಮುಚ್ಚಿ ಹೋಗುವುದರ ಬದಲು ಹೊರಜಗತ್ತಿಗೆ ಗೊತ್ತಾಗುತ್ತಿತ್ತು. ಇದು ಪೊಲೀಸರಿಗೆ ಆ ಸಂದರ್ಭದಲ್ಲಿ ಅಲ್ಲಿನ ಜನರ ಮೇಲೆ ಇನ್ನಷ್ಟು ಸಿಟ್ಟಿಗೂ ಕಾರಣವಾಯಿತು. ನನ್ನ ಬಂಧನದ ಹಿಂದಿನ ದಿನ ಸ್ಥಳೀಯರನ್ನೊಬ್ಬರನ್ನು ವಶಕ್ಕೆ ಪಡೆದ ಪೊಲೀಸರ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗಿತ್ತು.

ದೇಶದ್ರೋಹದ ಆರೋಪದ ಮೇಲೆ ಬಂಧನವಾದಾಗ ಜನಪರ ವ್ಯಕ್ತಿಗಳು, ಸಂಘಟನೆಗಳು ಬೆಂಬಲ ನೀಡಿದ್ದರಿಂದ ನಾನು ಇಂದು ನಿಮ್ಮ ಮುಂದಿದ್ದೇನೆ. ಡಿವೈಎಫ್‌ಐ ಅಂದಿನ ದಕ್ಷಿಣಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಮುನೀರ್‌ ಕಾಟಿಪಳ್ಳ ಹಾಗೂ ಪತ್ರಕರ್ತರಾಗಿದ್ದ ನವೀನ್‌ ಸೂರಿಂಜೆ ಮುಂತಾದ ಹಲವು ಜನರು ನಮ್ಮ ಕುಟುಂಬದ, ಕುತ್ಲೂರು ಜನತೆಯ ಪರವಾಗಿ ನಿಂತಿದ್ದು ಮರೆಯಲು ಸಾಧ್ಯವಿಲ್ಲ. ನ್ಯಾಯಾಲಯವು ಜಾಮೀನು ನೀಡಿದ ನಂತರ ಹೊರಬಂದು ಅನೇಕ ಜನಪರ ಹೋರಾಟ, ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಆ ದಿನಗಳಲ್ಲಿ ಅಸಂಖ್ಯಾತ ಸಹೃದಯ ಜನರು ಜತೆಯಾಗಿದ್ದರು. ನಂತರ ನಡೆದ ಗ್ರಾಮ ಪಂಚಾಯಿತಿ, ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ನಡೆದ ಚುನಾವಣೆಗಳಲ್ಲೂ ಸ್ಪರ್ಧಿಸಿದಾಗ ಜನರು ನೀಡಿದ ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ. ಬಂಧನ ಸಂದರ್ಭದಲ್ಲಿ ನಮ್ಮ ಕುಟುಂಬದ ಸರ್ವಸ್ವವನ್ನೂ ನೋಡಿಕೊಂಡ ಕುತ್ಲೂರು ಗ್ರಾಮಸ್ಥರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗೆಯೇ ಪೊಲೀಸರ ದೌರ್ಜನ್ಯದ ನಡುವೆಯೂ ಹಲವು ಹೋರಾಟದ ಸಂದರ್ಭದಲ್ಲಿ ಧ್ವನಿಯಾದ ಗ್ರಾಮಸ್ಥರು, ಎಸ್‌ಎಫ್‌ಐ ಕಾರ್ಯಕರ್ತರು, ಡಿವೈಎಫ್‌ಐ ಕಾರ್ಯಕರ್ತರು, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕಾರ್ಯಕರ್ತರು, ಸಿಪಿಐಎಂ, ಸಿಪಿಎಂ ಕಾರ್ಯಕರ್ತರು, ದಲಿತ ಹಕ್ಕು ಸಮಿತಿ ಕಾರ್ಯಕರ್ತರಿಗೂ ನಾನು ಎಂದಿಗೂ ಅಭಾರಿ. ಬಂಧನದ ಸಂದರ್ಭದಲ್ಲೇ ಮಂಗಳೂರು ವಿಶ್ವವಿದ್ಯಾಲಯದ ಎರಡನೇ ಸೆಮಿಸ್ಟರ್‌ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಸಹಕರಿಸಿದ ಎಲ್ಲ ಕಾಲೇಜು ಮಿತ್ರರಿಗೆ, ಅಂದು ಕಣ್ಣೀರಾದ ಎಲ್ಲ ಸಹೃದಯವಂತರಿಗೆ, ಪತ್ರಕರ್ತರಿಗೆ, ನಂತರದ ಎಲ್ಲ ಹೋರಾಟಗಳಲ್ಲಿ ಜತೆಯಾಗಿ ನಿಂತ ಹಾಗೂ ಇಂದಿಗೂ ವಿಠಲ ಮಲೆಕುಡಿಯ ನೀವೇ ಅಲ್ಲವೇ ಎಂದು ಇಂದಿಗೂ ಪರಿಚಯಿಸಿ ನೈತಿಕ ಸ್ಥೈರ್ಯ ತುಂಬುವ ಹಾಗೂ ವೃತ್ತಿ ಜೀವನದಲ್ಲಿ ಜತೆಯಾದ ಎಲ್ಲರಿಗೂ ನಾನು ಚಿರಋಣಿ.

ಹಾಗೂ ಅಂದಿನಿಂದ ಇಂದಿನವರೆಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ಮೇ 18, 2012ರಂದು ನಮ್ಮ ಬಂಧನದಿಂದ ಚಿಂತಿತರಾದ ಬಿವಿ ಕಕ್ಕಿಲ್ಲಾಯ ಅವರು ಭಾರತ ಕಮ್ಯೂನಿಸ್ಟ್ ಪಕ್ಷದ ದಕ ಜಿಲ್ಲಾ ಘಟಕದ ಕಾರ್ಯಕರ್ತರೊಡಗೂಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ತನ್ನ ತೀವ್ರ ಅನಾರೋಗ್ಯದ ನಡುವೆಯೂ ಪ್ರತಿಭಟನೆಯಲ್ಲಿ ಭಾಗಿಯಾಗಿ, ವಿಠಲನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಆತನಿಗೆ ಹಾಜರಾತಿಯ ಕೊರತೆ ಇದೆ ಎಂದು ಹೇಳಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ಕುತಂತ್ರವನ್ನು ಸರ್ಕಾರ ಅನುಸರಿಸುತ್ತಿದೆ. ವಿಠಲ ಮತ್ತು ಆತನ ತಂದೆಯನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಿ ವಿದ್ಯಾಭ್ಯಾಸಕ್ಕೆ ನಿರಾತಂಕವಾದ ಅವಕಾಶವನ್ನು ಒದಗಿಸಿಕೊಡಬೇಕು ಎಂದು ಒತ್ತಾಯ ಮಾಡಿದ್ದರು. ಅದು ಅವರ ಜೀವನದ ಕೊನೆಯ ಪ್ರತಿಭಟನೆ, ಭಾಷಣವೂ ಆಗಿತ್ತು.

ಹೀಗೆ ಅಸಂಖ್ಯಾತ ಮನಸುಗಳ ಧ್ವನಿಯ ಪರವಾಗಿ ನಾವಿಂದು ನಿರ್ದೋಷಿಗಳೆಂದು ಬಿಡುಗಡೆಯಾಗಿದ್ದೇವೆ. ಬಿಡುಗಡೆಗೊಳಿಸಿದ ನ್ಯಾಯಾಲಯಕ್ಕೂ ಧನ್ಯವಾದ ಸಲ್ಲುತ್ತದೆ.

ನಿಮ್ಮನ್ನು ಮರೆಯುವುದಾದರೂ ಹೇಗೆ: ಆತಂಕದ ಕಾಲದಲ್ಲೂ ಇನ್ನಷ್ಟು ಸಮಸ್ಯೆಗಳ ಸುಳಿಗೆ ಸಿಲುಕುವಂತೆ ಮಾಡಿದ್ದ ಮತ್ತು ವಿಠಲನಿಗೆ ನಕ್ಸಲ್‌ ಸಂಪರ್ಕ ಇದ್ದದ್ದರಿಂದಲೇ ಆತನನ್ನು ಬಂಧಿಸಿದ್ದೇವೆ ಎಂದು ಆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಪೊಲೀಸ್‌ ಮಹಾನಿರ್ದೇಶಕ ಎ.ಆರ್‌.ಇನ್‍ಫೆಂಟ್‌, ನಕ್ಸಲ್‌ ನಿಗ್ರಹ ಪಡೆಯ ಮುಖ್ಯಸ್ಥರಾಗಿದ್ದ ಅಲೋಕ್‌ ಕುಮಾರ್‌. ಅಂದಿನ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಅಭಿಷೇಕ್‌ ಗೋಯಲ್‌, ದೂರು ನೀಡಿ ಮನೆಯಿಂದ ‘ಹುತಾತ್ಮ ಭಗತ್‌ ಸಿಂಗ್‌’ ಪುಸ್ತಕ, ಚೆಂಬು, ಲೋಟ, ಪ್ಲೇಟ್‌, ಟೂತ್‌ ಬ್ರಷ್‌, ಸಕ್ಕರೆ, ಚಹಾಹುಡಿ, ಕಾಫಿ ಹುಡಿ, ಚುನಾವಣಾ ಬಹಿಷ್ಕಾರ ಬೇಡಿಕೆಯುಳ್ಳ ಪತ್ರ,ಕಂಬಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದೇನೆ ಎಂದು ಹೇಳಿ ನ್ಯಾಯಾಲಯ ವಿಚಾರಣಾ ಸಂದರ್ಭದಲ್ಲಿ ಬೈನಾಕ್ಯಲರ್‌ನ್ನು ನಕ್ಸಲ್‌ ನಿಗ್ರಹ ಪಡೆಯ ಸಿಬ್ಬಂದಿ ಕೂಡಾ ಬಳಸುತ್ತಾರೆ. ನಕ್ಸಲ್‌ ಚಟುವಟಿಕೆ ಬಗ್ಗೆ ದಿನಪತ್ರಿಕೆಗಳಲ್ಲಿ ಬರುವ ವರದಿಗಳನ್ನು ನಕ್ಸಲ್‌ ನಿಗ್ರಹ ಪಡೆಯವರು ಸಂಗ್ರಹಿಸುತ್ತಾರೆ. ನಾನು ವಶಪಡಿಸಿದ ಪತ್ರಗಳಲ್ಲಿ ಬರೆದಿದ್ದ ಒಕ್ಕಣೆಗಳನ್ನು ಸಂಪೂರ್ಣವಾಗಿ ಓದಿರಲಿಲ್ಲ. ನಕ್ಸಲರನ್ನು ಬೆಂಬಲಿಸುವ ಬಗ್ಗೆ ನಿರ್ದಿಷ್ಟವಾದ ನಮೂದು ಅದರಲ್ಲಿ ಇಲ್ಲದಿರುವುದು ಸತ್ಯ. ಸ್ಥಳೀಯ ಸಮಸ್ಯೆಗಳನ್ನು ಈಡೇರಿಸಿಲ್ಲ ಎನ್ನುವ ಬಗ್ಗೆ ನಮೂದಿಸಿದ್ದು ಸತ್ಯ. ಅದೇ ಪತ್ರದಲ್ಲಿ ಪೊಲೀಸರು ನೀಡುವ ಕಿರುಕುಳದ ಬಗ್ಗೆಯೂ ನಮೂದಿಸಲಾಗಿದೆ. ಪೊಲೀಸರು ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸದೇ ಇರುವವರೆಗೆ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸುವವರೆಗೆ ಚುನಾವಣೆಯನ್ನು ಬಹಿಷ್ಕರಿಸೋಣ ಎಂದು ನಮೂದು ಮಾಡಿದ್ದು ಹೌದು. ನಾನು ಆರೋಪಿತರ ಮನೆಗೆ ಹೋದಾಗ ನನ್ನ ಮತ್ತು ಸಿಬ್ಬಂದಿಯವರಲ್ಲಿ ನಮ್ಮ ಆಯುಧಗಳು ಇದ್ದವು. ಶೋಧನಾ ಕಾರ್ಯದ ವೇಳೆ ನನ್ನ ಸಿಬ್ಬಂದಿಗಳು ಏನು ಕಾರ್ಯವನ್ನು ನಿರ್ವಹಿಸಿರುತ್ತಾರೆ ಎನ್ನುವ ಬಗ್ಗೆ ನಮೂದು ಇಲ್ಲ. ಸಂಬಂಧಿತ ಅವಧಿಯಲ್ಲಿ ಆರೋಪಿಯು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಅಧ್ಯಯನ ಮಾಡುತ್ತಿದ್ದರು. ಆ ವೇಳೆಗೆ ಕುತ್ಲೂರು ಪ್ರದೇಶದಲ್ಲಿ ಪೊಲೀಸರಿಂದ ಜನರಿಗೆ ಆಗುತ್ತಿದ್ದ ಕಿರುಕುಳದ ಬಗ್ಗೆ ಪತ್ರಿಕೆಗಳಲ್ಲಿ ಮತ್ತು ಟಿ.ವಿ ಮಾಧ್ಯಮದಲ್ಲಿ ದೂರುಗಳನ್ನು ಹೇಳುತ್ತಿದ್ದುದು ಇರಬಹುದು ಎಂದು ಹೇಳಿ ಭಗತ್‌ ಸಿಂಗ್‌ ಓರ್ವ ಸ್ವಾತಂತ್ರ್ಯ ಹೋರಾಟಗಾರ. ಅವರಿಗೆ ಸಂಬಂಧಿಸಿದ ಪುಸ್ತಕವನ್ನು ಓದುವುದು ಅಪರಾಧವಲ್ಲ. ಚುನಾವಣಾ ಸಂದರ್ಭದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎನ್ನುವ ಬಗ್ಗೆ ದೂರು ಹೇಳುವುದು ಅಪರಾಧವಲ್ಲ ಎಂದು ಹೇಳಿಕೆ ನೀಡಿದ್ದ ದೂರುದಾರ ನಕ್ಸಲ್‌ ನಿಗ್ರಹ ಪಡೆಯ ಅಂದಿನ ಆರ್‌ಎಸ್‌ಐ ಸಚಿನ್‌ ಲಾರೆನ್ಸ್‌, ಅಂದಿನ ವೇಣೂರು ಪೊಲೀಸ್‌ ಇನ್‌ಸ್ಪೆಕ್ಟರ್‌ ಉಮೇಶ್‌ ಉಪ್ಪಳಿಕೆ, ಸರ್ಕಲ್‌ ಇನ್‌ಸ್ಪೆಕ್ಟರ್‌ ಭಾಸ್ಕರ್‌ ರೈ, ಹಾಗೂ ‘ನಾನು ದೂರುದಾರರು ತಮ್ಮ ವಶಕ್ಕೆ ಪಡೆದಂತಹ ವಸ್ತುಗಳನ್ನು ನೋಡಿದ್ದೇನೆ. ಭಗತ್‌ ಸಿಂಗ್‌ ಇವರ ಪುಸ್ತಕವನ್ನು ಇಟ್ಟುಕೊಳ್ಳುವುದು ಮತ್ತು ಓದುವುದು ಅಪರಾಧ ಅಲ್ಲ. ದೂರುದಾರರು ವಶಪಡಿಸಿದ ಎಲ್ಲ ವಸ್ತುಗಳು ಮನುಷ್ಯನ ದಿನನಿತ್ಯಕ್ಕೆ ಬೇಕಾಗುವಂತಹ ಜೀವನಾವಶ್ಯಕ ವಸ್ತುಗಳು ಆಗಿವೆ. ಈ ಕೇಸಿನಲ್ಲಿ ವಶಪಡಿಸಿಕೊಂಡ ಬೈನಾಕ್ಯುಲರ್‌ ಮಕ್ಕಳ ಮಕ್ಕಳ ಆಟಿಕೆಯ ಸಾಮಾನು’ ಎಂದು ನ್ಯಾಯಾಲಯದ ವಿಚಾರಣಾ ಸಂದರ್ಭದಲ್ಲಿ ಒಪ್ಪಿಕೊಂಡ ಪುತ್ತೂರು ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್‌ ಅಧೀಕ್ಷಕರಾಗಿದ್ದ, ನನ್ನ ಪ್ರಕರಣದ ತನಿಖಾಧಿಕಾರಿಯೂ ಆಗಿದ್ದ ಎಂ.ಎನ್‌.ಅನುಚೇತ್‌, ಪ್ರಕರಣ ದಾಖಲಾಗುವ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ, ಹಾಗೂ ಮೂರು ವರ್ಷಗಳ ನಂತರದಲ್ಲಿ ಚಾರ್ಜ್‌ಶೀಟ್‌ ಹಾಕಲು ಅನುಮತಿ ನೀಡಿದ ಅಂದಿನ ಗೃಹ ಇಲಾಖೆ, ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ವೇಣೂರು ಠಾಣೆಯಲ್ಲಿ ಆ ಸಂದರ್ಭದಲ್ಲಿ ಇದ್ದ ಪೊಲೀಸ್‌ ಇಲಾಖೆಯ ಸಿಬ್ಬಂದಿ, ಮಂಗಳೂರು ವಿವಿಯ ಪತ್ರಿಕೋದ್ಯಮದ ಎರಡನೇ ಸೆಮಿಸ್ಟರ್‌ ಪರೀಕ್ಷೆ ಬರೆಯಲು ವಿಠಲನಿಗೆ ಅನುಮತಿ ನೀಡಿ ಎಂದು ಪ್ರಗತಿಪರ ಸಂಘಟನೆಗಳು ಕೇಳಿದಾಗಲೂ ನಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿ, ವಿಠಲನಿಗೆ ಅಗತ್ಯವಿರುವಷ್ಟು ಹಾಜರಾತಿ ಇಲ್ಲದ ಕಾರಣ, ಪರೀಕ್ಷೆ ಬರೆಯಲು ಅವಕಾಶ ನೀಡಲಾಗದು ಎಂದು ಕೋರ್ಟ್‌ಗೆ ಪತ್ರ ನೀಡಿದ್ದ ಹಾಗೂ ಪರೀಕ್ಷೆಗೆ ಹಾಜರಾಗಲು ನ್ಯಾಯಾಲಯದ ಅನುಮತಿ ಪತ್ರ ತನ್ನಿ ಎಂದು ಹೇಳಿದ್ದ ಮಂಗಳೂರು ವಿಶ್ವವಿದ್ಯಾಲಯದ ಅಂದಿನ ಉಪ ಕುಲಪತಿ ಟಿ.ಸಿ.ಶಿವಶಂಕರಮೂರ್ತಿ, ಹಾಗೂ ಆತ ಇನ್ನು ಈ ಕೇಸಿನಿಂದ ಹೊರಬರಲಾರ ಎಂದು ಹೇಳಿಕೊಂಡು ತಿರುಗಾಡಿದ ಕೆಲವೇ ಕೆಲವು ಹಿತಶತ್ರುಗಳನ್ನು ಮರೆಯುವುದಾದರೂ ಹೇಗೆ.

ನ್ಯಾಯದ ಪರ ಹೋರಾಡಿದವರು

ದಕ್ಷಿಣ ಕನ್ನಡ ಜಿಲ್ಲಾ ಮೂರನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು ವಿಠಲ ಮತ್ತು ಅವರ ತಂದೆಯ ಮೇಲಿನ ದೇಶದ್ರೋಹದ ಆರೋಪದ (ಕಲಂ 120(ಬಿ) ಐಪಿಸಿ ಕಲಂ 19, 20 ಯು.ಎ (ಪ್ರಿವೆನ್ಷನ್‌) ಕಾಯ್ದೆ 1967) ಕುರಿತು ತೀರ್ಪು ಪ್ರಕಟಿಸಿದೆ. (ದಿ 21.10.2021ರಂದು ತೀರ್ಪು ಹೊರಬಿದ್ದಿದೆ).

ದೇಶದ್ರೋಹದ ಪ್ರಕರಣದಲ್ಲಿ ವಕೀಲ ದಿನೇಶ್ ಹೆಗ್ಡೆ, ಉಳೇಪಾಡಿ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿ ಮತ್ತು ಇವರನ್ನು ನಿರ್ದೋಷಿಗಳು ಎಂದು ತೀರ್ಪು ಬರಲು ಕಾರಣರಾದರು. ಶಹನಾಝ್, ಪ್ರೇಮ್ ಕುಮಾರ್ ಸಹಕಾರ ನೀಡಿದ್ದರು. ಬೆಳ್ತಂಗಡಿ ನ್ಯಾಯಾಲಯದಲ್ಲಿ ಪ್ರಕರಣವಿದ್ದಾಗ ವಕೀಲ ಎಂ.ಎಸ್.ಶಿವಕುಮಾರ್ ಸಹಕಾರ ನೀಡಿದ್ದರು.