ಶ್ರೇಷ್ಟ ಸಿನಿಮಾ ನಿರ್ದೇಶಕ, ಕನ್ನಡಿಗ ಗುರುದತ್ – ಒಂದು ನೆನಪು

ಶ್ರೇಷ್ಟ ಸಿನಿಮಾ ನಿರ್ದೇಶಕ, ಕನ್ನಡಿಗ ಗುರುದತ್ – ಒಂದು ನೆನಪು

ಶ್ರೇಷ್ಟ ಸಿನಿಮಾ ನಿರ್ದೇಶಕ, ಕನ್ನಡಿಗ ಗುರುದತ್ – ಒಂದು ನೆನಪು

ಅಳಿಯದ ನೆನಪು 


ತಿರು ಶ್ರೀಧರ


ಭಾರತೀಯ ಚಿತ್ರರಂಗದಲ್ಲಿ ಬಲವಾದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಗುರುದತ್ ಕನ್ನಡಿಗರು, ಜುಲೈ 9 ಅವರ ಜನ್ಮ ದಿನ, ಹುಟ್ಟಿದ್ದು ಬೆಂಗಳೂರಿನಲ್ಲಾದರೂ ಬೆಳೆದದ್ದು ಬಂಗಾಳದ ಕೊಲ್ಕತಾದಲ್ಲಿ, ಹಿಂದಿ ಸಿನಿಮಾಗಳನ್ನೇ ಭಾರತೀಯ ಚಿತ್ರರಂಗದ ಮುಖ್ಯವಾಹಿನಿಯ ಪ್ರಾತಿನಿಧಿಕ ಸಿನಿಮಾಗಳೆಂದು ಪರಿಭಾವಿಸಿರುವ ಹೊತ್ತಿನಲ್ಲಿ ಕ್ಲೋಸ್ ಅಪ್ ಶಾಟ್ ಪರಿಚಯಿಸಿದ ಗುರುದತ್‌ರ ಪುಟ್ಟ ಪರಿಚಯ ಇಲ್ಲಿದೆ.


ಶ್ರೇಷ್ಟ ಸಿನಿಮಾ ನಿರ್ದೇಶಕ, ಕನ್ನಡಿಗ ಗುರುದತ್ – ಒಂದು ನೆನಪು
 
ಗುರುದತ್ ಭಾರತೀಯ ಚಿತ್ರರಂಗ ಕಂಡ ಮಹಾನ್ ಕಲಾವಿದ. ಗುರುದತ್ ಅವರ ಪೂರ್ಣ ಹೆಸರು ಗುರುದತ್ ಶಿವಶಂಕರ್ ಪಡುಕೋಣೆ. ನಟನಾಗಿ, ನಿರ್ಮಾಪಕ, ನಿರ್ದೇಶಕನಾಗಿ ಅವರು ಚಿತ್ರರಂಗದಲ್ಲಿ ಮೂಡಿಸಿದ ಕಲಾಭಿವ್ಯಕ್ತಿಗಳು ಅವಿಸ್ಮರಣೀಯವಾದುದು.


ಗುರುದತ್ 1925ರ ಜುಲೈ 9ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಶಿವಶಂಕರರಾವ್ ಪಡುಕೋಣೆ. ತಾಯಿ ವಾಸಂತಿ ಪಡುಕೋಣೆ. ಗುರುದತ್ ಅವರ ತಂದೆ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ ಮೊದಲು ಮುಖ್ಯೋಪಾಧ್ಯಾಯರಾಗಿ ನಂತರ ಬ್ಯಾಂಕ್ ಉದ್ಯೋಗಿಯಾಗಿದ್ದರು. ತಾಯಿ ವಾಸಂತಿ ಶಾಲೆಯೊಂದರಲ್ಲಿ ಉಪಾಧ್ಯಾಯಿನಿಯಾಗಿ, ಖಾಸಗಿ ಶಿಕ್ಷಕಿಯಾಗಿ ಕೆಲಸ ಮಾಡಿದರು. ಅವರು ಅನೇಕ ಸಣ್ಣ ಕಥೆಗಳನ್ನು ಬರೆದಿದ್ದು, ಹಲವಾರು ಬಂಗಾಳಿ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಚಲನಚಿತ್ರ ನಿರ್ದೇಶಕಿಯಾದ ಕಲ್ಪನಾ ಲಾಜ್ಮಿ ಇವರ ತಂಗಿಯ ಮಗಳು.


ಗುರುದತ್ ತನ್ನ ಬಾಲ್ಯದ ಬಹುಪಾಲು ಸಮಯದಲ್ಲಿ ಪೋಸ್ಟರುಗಳನ್ನು ಬಿಡಿಸುತ್ತಿದ್ದ. ತಾಯಿಯ ತಮ್ಮನಾದ ಬಾಲಕೃಷ್ಣ ಬಿ.ಬೆನೆಗಲ್ ಅವರೊಂದಿಗೆ ಆಟವಾಡುತ್ತಿದ್ದ. ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ಯಾಮ್ ಬೆನೆಗಲ್ ಬಾಲಕೃಷ್ಣರವರ ತಮ್ಮನಾದ ಶ್ರೀಧರ.ಬಿ.ಬೆನೆಗಲ್ ಅವರ ಮಗ.


ಗುರುದತ್ ಅವರ ತಂದೆ ಬೆಂಗಳೂರಿನಲ್ಲಿ ಬ್ಯಾಂಕ್ ಒಂದರ ಉದ್ಯೋಗಿಯಾಗಿದ್ದಾಗ ಅವರಿಗೆ ಕೋಲ್ಕತ್ತಾದ ಭವಾನಿಪೋರ್ ಎಂಬಲ್ಲಿಗೆ ವರ್ಗವಾಯಿತು. ಇಲ್ಲಿಯೇ ಗುರುದತ್ ತಮ್ಮ ವಿಧ್ಯಾಭ್ಯಾಸವನ್ನು ಮುಗಿಸಿದರು. ಆದುದರಿಂದ ಗುರುದತ್ ನಿರರ್ಗಳವಾಗಿ ಬೆಂಗಾಳಿಯಲ್ಲಿ ಮಾತನಾಡುತ್ತಿದ್ದರು ಹಾಗೂ ಅವರ ಎಲ್ಲಾ ಕೆಲಸಗಳಲ್ಲಿ ಬಂಗಾಳದ ಸಂಸ್ಕೃತಿಯ ಛಾಪು ಎದ್ದು ಕಾಣಿಸುತ್ತಿತ್ತು. ನಂತರ ಮುಂಬೈನ ಬಾಲಿವುಡ್ಡಿಗೆ 1940ನೇ ಇಸವಿಯಲ್ಲಿ ಬಂದ ಮೇಲೆ ತನ್ನ ಹೆಸರಿನಲ್ಲಿದ್ದ ಶಿವಶಂಕರ್ ಪಡುಕೋಣೆಯನ್ನು ತೆಗೆದುಹಾಕಿ ಗುರುದತ್ ಎಂದು ಹೆಸರಾದರು. ಇವರ ಹೆಸರು ದತ್ ಎಂದು ಕೊನೆಗೊಳ್ಳುವದರಿಂದ ಬಹುತೇಕ ಜನರು ಇವರನ್ನು ಬಂಗಾಲಿಯೆAದೇ ಭಾವಿಸಿದ್ದರು.


14 ವರ್ಷದ ಗುರುದತ್, ತಮ್ಮ ಅಜ್ಜಿ ಸಾಯಂಕಾಲ ಉರಿಸುತ್ತಿದ್ದ ದೀಪದ ಮುಂದೆ ಕೈಯ್ಯೊಡ್ಡಿ ಅದರ ನೆರಳಿನಿಂದ ಗೋಡೆಗಳ ಮೇಲೆ ಚಿತ್ರ ಬಿಡಿಸುತ್ತಿದ್ದ. ಯಾವುದೇ ತರಬೇತಿಯಿಲ್ಲದಿದ್ದರೂ, ಚೆನ್ನಾಗಿ ನರ್ತನವನ್ನೂ ಮಾಡುತ್ತಿದ್ದ. ಶಾಲೆಯಲ್ಲಿ ಓರ್ವ ಉತ್ತಮ ವಿದ್ಯಾರ್ಥಿಯಾಗಿದ್ದ. ಆದರೆ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಕಾಲೇಜಿಗೆ ಹೋಗಲಾಗಲಿಲ್ಲ. ಬದಲಾಗಿ ರವಿಶಂಕರ್ ಅವರ ಅಣ್ಣನಾದ ಉದಯಶಂಕರ್ ಅವರ ನಾಟಕ ಶಾಲೆಯನ್ನು ಸೇರಿದ. ಅಲ್ಮೋರಾದಲ್ಲಿರುವ ಉದಯಶಂಕರ್ ಇಂಡಿಯಾ ಕಲ್ಚರ್ ಸೆಂಟರ್ ನಾಟ್ಯ, ನಾಟಕ ಹಾಗೂ ಸಂಗೀತವನ್ನು ಕಲಿಸುವ ಕೇಂದ್ರವಾಗಿತ್ತು. ಗುರುಕುಲ ಪದ್ಧತಿ ಹಾಗೂ ಆಧುನಿಕ ಕಲಾ ವಿಶ್ವವಿದ್ಯಾನಿಲಯ ಇವೆರಡರ ಉತ್ತಮ ಅಂಶಗಳನ್ನು ಅಳವಡಿಸಿ ಕಲೆಯನ್ನು ಹೇಳಿಕೊಡುವುದು ಈ ಕೇಂದ್ರದ ಧ್ಯೇಯೋದ್ದೇಶವಾಗಿತ್ತು. ಬೇರೆ ಬೇರೆ ಕ್ಷೇತ್ರಗಳಲ್ಲಿ ಉತ್ತಮ ರೀತಿಯಲ್ಲಿ ಪಳಗಿದ ಕಲಾವಿದರನ್ನು ರೂಪಿಸುವ ಪ್ರಯತ್ನವನ್ನು ಮಾಡಿದ ಸಂಸ್ಥೆಯಿದು. 16 ವರ್ಷದ ಗುರು ದತ್ 1941ನೇ ಇಸವಿಯಲ್ಲಿ ಈ ಕೇಂದ್ರವನ್ನು ಸೇರಿದರು. ಆ ಸಮಯದಲ್ಲಿ ಇವರು 75 ರೂಪಾಯಿಗಳ (ಆಗಿನ ಕಾಲದಲ್ಲಿ ದೊಡ್ಡ ಮೊತ್ತವದು) 5 ವರ್ಷದ ವಿದ್ಯಾರ್ಥಿ ವೇತನವನ್ನು ಸಂಪಾದಿಸಿದರು. ಇಲ್ಲಿ 1944ನೇ ಇಸವಿಯವರೆಗೆ ಕಲಾಭ್ಯಾಸವನ್ನು ಮಾಡಿದರು. ದುರದೃಷ್ಟವಶಾತ್ ಎರಡನೇ ಮಹಾಯದ್ಧದ ಬಿಸಿಯೇರಿದುದರಿಂದ ಈ ಕೇಂದ್ರವನ್ನು ಒತ್ತಾಯಪೂರ್ವಕವಾಗಿ ಮುಚ್ಚಲಾಯಿತು.


ಪುಣೆಯಲ್ಲಿನ ಪ್ರಭಾತ್ ಫಿಲ್ಮ್ ಕಂಪೆನಿಯಲ್ಲಿ ಕೆಲವು ಕಾಲ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯ, ಸಹ ನಿರ್ದೇಶನ, ನೃತ್ಯ ನಿರ್ದೇಶನ ಮಾಡಿದ ಗುರುದತ್ ತಮ್ಮ ಗುತ್ತಿಗೆ ಅವಧಿ ಮುಗಿದ ಸಮಯದಲ್ಲಿ ನಿರುದ್ಯೋಗಿಯಾಗಿ ಮಾತುಂಗದಲ್ಲಿ ತಮ್ಮ ಮನೆಯವರ ಜೊತೆ ವಾಸವಾಗಿದ್ದರು. ಆ ಸಮಯದಲ್ಲಿ ಗುರುದತ್ ಆಂಗ್ಲ ಭಾಷೆಯಲ್ಲಿ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡರು. ಅಲ್ಲಿನ ಸ್ಥಳೀಯ ವಾರಪತ್ರಿಕೆಯಾಗಿದ್ದ ದಿ ಇಲ್ಲಸ್ಟ್ರೇಟೆಡ್ ವೀಕ್ಲಿಯಲ್ಲಿ ಸಣ್ಣ ಕಥೆಗಳನ್ನು ಬರೆಯತೊಡಗಿದರು. ಇದೇ ಕಾಲದಲ್ಲಿ ಗುರುದತ್ ತಮ್ಮ ಆತ್ಮಚರಿತ್ರೆಯಂತೆ ಕಾಣುವ ಪ್ಯಾಸಾ ಹಿಂದೀ ಚಲನಚಿತ್ರದ ಕಥೆಯನ್ನು ಬರೆದರೆಂದು ಹೇಳುತ್ತಾರೆ. 


ಪ್ರಭಾತ್ ಫಿಲ್ಮ್ ಕಂಪೆನಿಯಲ್ಲಿದ್ದಾಗ ಅವರ ಸ್ನೇಹ ದೇವಾನಂದ್ ಮತ್ತು ರೆಹಮಾನ್ ಅವರೊಂದಿಗೆ ಗಾಢವಾಗಿತ್ತು. ದೇವಾನಂದರು ಗುರುದತ್ ಅವರಿಗೆ ತಮ್ಮ ನವಕೇತನ್ ಕಂಪೆನಿಯಲ್ಲಿ ನಿರ್ದೇಶಕನಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟರು. ಅಂತೆಯೇ ನವಕೇತನ್ ಕಂಪೆನಿ ನಿರ್ಮಾಣದ ಗುರುದತ್ ನಿರ್ದೇಶನದ 'ಬಾಝಿ' ಚಲನಚಿತ್ರವು 1951ನೇ ಇಸವಿಯಲ್ಲಿ ತೆರೆ ಕಂಡಿತು. ಈ ಹೊಸ ಕೆಲಸದ ಹಿಂದೆ ಒಂದು ಕುತೂಹಲಕಾರಿಯಾದ ಕಥೆಯಿದೆ. ಪುಣೆಯ ಪ್ರಭಾತ್ ಕಂಪೆನಿಯಲ್ಲಿರುವಾಗ ಗುರುದತ್ ಹಾಗೂ ದೇವಾನಂದ್ ಇಬ್ಬರ ಬಟ್ಟೆಯನ್ನೂ ಕೂಡ ಒಬ್ಬನೇ ಅಗಸನು ಒಗೆಯುತ್ತಿದ್ದ. ಒಂದು ದಿನ ದೇವಾನಂದ್ ತಮ್ಮ ಅಂಗಿ ಅದಲು ಬದಲಾಗಿರುವುದನ್ನು ಗಮನಿಸಿದರು. ಅವರು ‘ಹಮ್ ಏಕ್ ಹೈ’ ಚಿತ್ರದ ನಾಯಕ ನಟನಾಗಿ ಅಭಿನಯಿಸಲು ಚಿತ್ರೀಕರಣಕ್ಕೆ ಸ್ಟುಡಿಯೋಗೆ ಬಂದಾಗ ಓರ್ವ ಯುವ ನೃತ್ಯ ನಿರ್ದೇಶಕ ತಮ್ಮ ಅಂಗಿಯನ್ನು ಧರಿಸಿರುವುದನ್ನು ಗಮನಿಸಿದರು. ಪ್ರಶ್ನಿಸಿದಾಗ, ಗುರುದತ್ ಅದು ತನ್ನ ಅಂಗಿಯಲ್ಲವೆAದೂ, ಧರಿಸಲು ಬೇರೆ ಅಂಗಿ ತನ್ನಲ್ಲಿ ಇಲ್ಲವಾದುದರಿಂದ ಇದನ್ನು ಧರಿಸಿದೆನೆಂದೂ ಒಪ್ಪಿಕೊಂಡರು. ಅವರಿಬ್ಬರೂ ಸಮವಯಸ್ಕ್ಕರಾಗಿದ್ದುದರಿಂದ, ಈ ಘಟನೆಯು ಒಂದು ಅಮೋಘ ಸ್ನೇಹದಲ್ಲಿ ಕೊನೆಗೊಂಡಿತು. ಗುರುದತ್ ಹಾಗೂ ದೇವಾನಂದ್ ಜೊತೆಯಾಗಿ ಎರಡು ಅತೀ ಯಶಸ್ವೀ ಚಲನಚಿತ್ರಗಳಾದ 'ಬಾಝೀ' ಹಾಗೂ 'ಜಾಲ್' ಚಿತ್ರಗಳನ್ನು ನಿರ್ಮಿಸಿದರು. ಕಲಾತ್ಮಕತೆಯಲ್ಲಿ ಗುರುದತ್ ಹಾಗೂ ಚೇತನ್ ಆನಂದ್ (ದೇವಾನಂದ್ ರವರ ಅಣ್ಣ) ಇವರ ನಡುವಿನ ಭಿನ್ನಾಭಿಪ್ರಾಯಗಳಿಂದ ಮುಂದಿನ ದಿನಗಳಲ್ಲಿ ಇವರಿಗೆ ಜೊತೆಯಾಗಿ ಚಿತ್ರ ನಿರ್ಮಿಸುವುದು ತ್ರಾಸದಾಯಕವಾಯಿತು.


'ಬಾಝಿ' ಚಿತ್ರ ಭಾರತೀಯ ಚಲನಚಿತ್ರರಂಗದ ಇತಿಹಾಸದಲ್ಲಿ ಎರಡು ಪ್ರಮುಖ ತಾಂತ್ರಿಕ ಬೆಳವಣಿಗೆಗಳಿಗೆ ನಾಂದಿ ಹಾಡಿತು. ಚಿತ್ರದಲ್ಲಿ 14 * 100 ಎಮ್.ಎಮ್. ಲೆನ್ಸ್ ಸಹಾಯದಿಂದ ಬಹಳ ಸಮೀಪದಿಂದ ತೆಗೆದ ದೃಶ್ಯಗಳ ತಂತ್ರಜ್ಞಾನ ಮೂಡಿಬಂತು. ಮುಂದೆ ಇದು "ಗುರುದತ್ ಶಾಟ್" ಎಂದೇ ಹೆಸರಾಯಿತು ಹಾಗೂ ಈ ಚಿತ್ರದಲ್ಲಿ ಹಾಡುಗಳ ಮುಖಾಂತರ ಕಥೆಯನ್ನು ಮುಂದುವರಿಸುವ ರೀತಿಯೂ ಕೂಡಾ ಆಗಿನ ದಿನಗಳಿಗೆ ಹೊಚ್ಚ ಹೊಸದು. ಗುರುದತ್ ಈ ಚಿತ್ರದಲ್ಲಿ ಜೋಹ್ರಾ ಸೆಹಗಲ್ ಎಂಬುವವರನ್ನು ನೃತ್ಯ ನಿರ್ದೇಶಕಿಯಾಗಿ ಪರಿಚಯಿಸಿದರು ಹಾಗೂ ಮುಂದೆ ತನ್ನ ಮಡದಿಯಾದ ಗೀತಾದತ್ ಅವರನ್ನು ಈ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಭೇಟಿಯಾದರು.


ಬಾಝೀ ಚಲನಚಿತ್ರವು ತೆರೆ ಕಂಡ ಕೂಡಲೇ ಯಶಸ್ವಿಯಾಯಿತು. ಇದರ ನಂತರ ಗುರುದತ್ 'ಜಾಲ್' ಹಾಗೂ 'ಬಾಝ್' ಚಲನಚಿತ್ರಗಳನ್ನು ನಿರ್ಮಿಸಿದರು. ಈ ಎರಡೂ ಚಲನಚಿತ್ರಗಳು ಯಶಸ್ಸನ್ನು ಕಾಣಲಿಲ್ಲವಾದರೂ, ಮುಂದಿನ ದಿನಗಳಲ್ಲಿ ಬಂದ ಚಿತ್ರಗಳಲ್ಲಿ ಅತ್ಯದ್ಭುತವಾಗಿ ಶ್ರಮಿಸಿದ ತಂಡವೊAದನ್ನು ರಚಿಸುವದಕ್ಕೆ ಸಾಧ್ಯವಾಯಿತು. ಹಾಸ್ಯನಟ ಜಾನಿವಾಕರ್, ನಮ್ಮ ಛಾಯಾಗ್ರಾಹಕ ವಿ.ಕೆ.ಮೂರ್ತಿ, ಲೇಖಕ ಹಾಗೂ ನಿರ್ದೇಶಕ ಅಬ್ರಾರ್ ಅಲ್ವಿ ಇವರೇ ಮೊದಲಾದಂತಹ ಅನೇಕ ಕಲಾವಿದರನ್ನು ಅನ್ವೇಷಿಸಿ, ಗುರುದತ್ ಪ್ರೋತ್ಸಾಹಿಸಿದರು. ಸರಿಯಾದ ನಾಯಕ ನಟ ಸಿಗದೇ ಗುರುದತ್ 'ಬಾಝ್' ಚಿತ್ರದಲ್ಲಿ ನಾಯಕನ ಪಾತ್ರವನ್ನು ತಾವೇ ನಿರ್ವಹಿಸಿದ್ದಲ್ಲದೇ, ನಿರ್ದೇಶನವನ್ನೂ ಮಾಡಿದರು.


ಅದೃಷ್ಟ ಲಕ್ಷ್ಮಿಯು ಗುರುದತ್ ಮುಂದಿನ ಚಿತ್ರವಾದ 'ಆರ್ ಪಾರ್'ನಲ್ಲಿ ಒಲಿದಳು. ಇದಾದ ನಂತರ 1955ರಲ್ಲಿ ತೆರೆ ಕಂಡ ಮಿಸ್ಟರ್ ಆಂಡ್ ಮಿಸ್ಸೆಸ್ 55, ಸಿ.ಐ.ಡಿ., ಸೈಲಾಬ್ ಹಾಗೂ 1957ರಲ್ಲಿ ತೆರೆಕಂಡ ನಿರಾಸಕ್ತ ಪ್ರಪಂಚದಿAದ ತಿರಸ್ಕೃತನಾಗಿ ತನ್ನ ಮರಣಾನಂತರವೇ ಯಶಸ್ಸನ್ನು ಕಾಣುವ ಕವಿಯೊಬ್ಬನ ಕಥೆಯ 'ಪ್ಯಾಸಾ' ಇವೇ ಮೊದಲಾದ ಚಲನಚಿತ್ರಗಳು ಭಾರೀ ಯಶಸ್ಸನ್ನು ಕಂಡವು. ಈ ಮೇಲಿನ 5 ಚಿತ್ರಗಳ ಪೈಕಿ 3 ಚಿತ್ರಗಳಲ್ಲಿ ಗುರುದತ್ ಪ್ರಧಾನ ಭೂಮಿಕೆಯನ್ನು ವಹಿಸಿದ್ದರು.


1959ನೇ ಇಸವಿಯಲ್ಲಿ ಬಿಡುಗಡೆಯಾದ ‘ಕಾಗಝ್ ಕೇ ಪೂಲ್’ ಚಿತ್ರವು ಗುರುದತ್ ಪಾಲಿಗೆ ತೀವ್ರ ನಿರಾಶಾದಾಯಕವಾಗಿತ್ತು. ಪ್ರಸಿದ್ಧ ನಿರ್ದೇಶಕನೊಬ್ಬ (ಗುರುದತ್) ಕಲಾವಿದೆಯೊಬ್ಬಳನ್ನು (ವಹೀದಾ ರೆಹಮಾನ್ - ನಿಜ ಜೀವನದಲ್ಲೂ ಗುರುದತ್ ಈಕೆಯನ್ನು ಪ್ರೀತಿಸುತ್ತಿದ್ದರು) ಪ್ರೀತಿಸುವ ಕಥಾವಸ್ತುವುಳ್ಳ ಈ ಚಿತ್ರವನ್ನು ಗುರುದತ್ ತಮ್ಮ ತನು ಮನ ಧನದಿಂದ ನಿರ್ಮಿಸಿದ್ದರು. ಈ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಅಪಾರ ಸೋಲನ್ನು ಕಂಡಿತು ಹಾಗೂ ಇದರಿಂದ ಗುರುದತ್ ಅಪಾರ ನಷ್ಟವನ್ನು ಅನುಭವಿಸಿದರು. ಅವರ ನಿಧನಾನಂತರ ಈ ಚಿತ್ರ ವಿಶ್ವದ ಶ್ರೇಷ್ಠಚಿತ್ರಗಳಲ್ಲೊಂದು ಎಂದು ಇಂದೂ ಖ್ಯಾತವಾಗಿದೆ. ಆದರೆ ಈ ಚಿತ್ರದ ವ್ಯಾವಹಾರಿಕ ಸೋಲು ಅದರ ಸೃಷ್ಟಿಕರ್ತನನ್ನು ಬಹುತೇಕವಾಗಿ ಬಲಿತೆಗೆದುಕೊಂಡಿತ್ತು. ತನ್ನ ಹೆಸರು ಶಾಪಗ್ರಸ್ತವೆಂದು ಭಾವಿಸಿದ ಗುರುದತ್ ಮುಂದೆ ತಮ್ಮ ಕಂಪೆನಿಯಿAದ ಹೊರ ಬಂದ ಎಲ್ಲಾ ಚಿತ್ರಗಳ ನಿರ್ದೇಶನವನ್ನು ಇತರ ನಿರ್ದೇಶಕರಿಂದ ಮಾಡಿಸಿದರು.


ಚೌದ್ವೀಕಾ ಚಾಂದ್ ಚಿತ್ರದಲ್ಲಿ ಗುರುದತ್ ಒತ್ತಾಯಪೂರ್ವಕವಾಗಿ ನಟಿಸಿದರು. ಈ ಚಿತ್ರವು ಬಹಳ ಯಶಸ್ಸನ್ನು ಕಂಡಿತು ಹಾಗೂ ಇವರ ಸ್ಟುಡಿಯೋವು ಪತನವಾಗುವುದನ್ನು ತಡೆಗಟ್ಟಿತು. ಇವರ ಸಹಾಯಕರಾದ ಅಬ್ರಾರ್ ಅಲ್ವಿ ಅವರ ನಿರ್ದೇಶನದಲ್ಲಿ 1962ನೇ ಇಸವಿಯಲ್ಲಿ ತೆರೆ ಕಂಡ್ 'ಸಾಹೇಬ್ ಬೀವಿ ಔರ್ ಗುಲಾಮ್' ಚಲನಚಿತ್ರದಲ್ಲಿಯೂ ಕೂಡಾ ಇವರು ನಟಿಸಿದರು. ಆ ಚಿತ್ರದಲ್ಲಿ ಗುರುದತ್ ಹೆಸರು ನಿರ್ದೇಶಕನಾಗಿ ಕಾಣಿಸಲಿಲ್ಲವಾದರೂ ಈ ಚಿತ್ರವನ್ನು ಪರೋಕ್ಷವಾಗಿ ಇವರೇ ನಿರ್ದೇಶಿಸಿದ್ದಾರೆಂದು ಅನೇಕ ಕಲಾವಿಮರ್ಶಕರು ಅಭಿಪ್ರಾಯ ಪಟ್ಟರು. ಈ ಚಿತ್ರವು ಗುರುದತ್ ಅಭಿನಯದ ಅತ್ಯಂತ ಕಲಾತ್ಮಕ ಹಾಗೂ ದುರಂತ ಕಥೆಯುಳ್ಳ ಚಿತ್ರವೆಂದು ಇಂದಿಗೂ ಪರಿಗಣಿಸಲ್ಪಡುತ್ತದೆ. ಆ ಚಿತ್ರದ ನಂತರ ಅಷ್ಟೇನೂ ಪ್ರಚಾರ ಪಡೆಯದ ಅನೇಕ ಚಿತ್ರಗಳಲ್ಲಿ ಗುರುದತ್ ಅಭಿನಯಿಸಿದರು.


ಅಕ್ಟೋಬರ್ 1964ರ ಅಕ್ಟೋಬರ್ 10ರಂದು ಹಾಸಿಗೆಯ ಮೇಲೆ ಗುರುದತ್ ಮೃತದೇಹವು ಪತ್ತೆಯಾಯಿತು. ಅವರು ಮದ್ಯದಲ್ಲಿ ನಿದ್ರೆ ಗುಳಿಗೆಗಳನ್ನು ಬೆರೆಸಿ ಸೇವಿಸುತ್ತಿದ್ದರೆಂದು ಹೇಳುತ್ತಾರೆ. ದುರಾದೃಷ್ಟವಶಾತ್ ಗೀತಾದತ್ ಅವರೊಂದಿಗಿನ ಇವರ ವೈವಾಹಿಕ ಜೀವನವು ದುರಂತವಾಗಿತ್ತು. ಇವರ ತಮ್ಮ ಆತ್ಮಾರಾಮ್ ಹೇಳುವಂತೆ "ಗುರುದತ್ ಕೆಲಸದ ವಿಷಯದಲ್ಲಿ ಎಷ್ಟು ಶಿಸ್ತಿನ ವ್ಯಕ್ತಿಯಾಗಿದ್ದರೋ, ವೈಯಕ್ತಿಕ ಜೀವನದಲ್ಲಿ ಅಷ್ಟೇ ಅಶಿಸ್ತಿನವರಾಗಿದ್ದರು." ತಮ್ಮ ಮರಣಕಾಲದಲ್ಲಿ ಗೀತಾರವರಿಂದ ಬೇರ್ಪಟ್ಟು ಏಕಾಂಗಿಯಾಗಿ ಬದುಕುತ್ತಿದ್ದರು. ಅವರ ಮರಣಾನಂತರ ಅವರ ಚಿತ್ರಗಳು ಭಾರತ ಹಾಗೂ ಪ್ರಪಂಚದಾದ್ಯAತ ನಡೆದ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಅಪಾರ ಹೆಸರು ಪಡೆದವು. ಭಾರತೀಯ ಕಲಾರಸಿಕರ ಹೃದಯದಲ್ಲಿ ಗುರುದತ್ ಅವರ ಹೆಸರ ಅಮರವಾದದ್ದು.