ಎಷ್ಟು ಯೋಚಿಸಿದರೂ, ಪ್ರಶ್ನೆಗಳೇ.., ನೇತ್ರಾವತಿ.ಕೆ.ಬಿ

ಕಳೆದ ವಾರದ ಕಿನ್ನರಿಯಲ್ಲಿ , (ಅಕ್ಕ ಮತ್ತು ತಮ್ಮ ಓದಲೆಂದು ಅಪ್ಪ ಬೆಂಗಳೂರಿನಲ್ಲಿ ಮನೆ ಮಾಡಿಕೊಡುತ್ತಾರೆ, ಅಲ್ಲಿ ಅಕ್ಕನ ತನ್ನ ಸಹಪಾಠಿ ಗೆಳತಿಯನ್ನು ಕಂಬೈನ್ಡ್‌ ಸ್ಟಡಿಗೆಂದು ಕರೆತರುತ್ತಾಳೆ, ಆ ಗೆಳತಿ ಮತ್ತು ತಮ್ಮ ಪ್ರೇಮಿಸಿ, ಓಡಿ ಹೋಗಿ ಮದುವೆಯಾಗಿ ಮತ್ತೆ ಮನೆಗೆ ಬಂದು ಉಳಿದುಕೊಳ್ಳುತ್ತಾರೆ, ಅವರ ದಾಂಪತ್ಯ ಕೆಲವೇ ದಿನ , ಅವಳ ಚಿಕ್ಕಪ್ಪ ಗೂಂಡಾಗಳೊಂದಿಗೆ ಬಂದು ಅವಳನ್ನು ಕರೆದುಕೊಂಡು ಹೋಗುತ್ತಾರೆ. ಮುಂದೆ ಓದಿ )

ಎಷ್ಟು ಯೋಚಿಸಿದರೂ,  ಪ್ರಶ್ನೆಗಳೇ..,                                                                                                                                      ನೇತ್ರಾವತಿ.ಕೆ.ಬಿ

ಜೀವದ ಕತೆ-17

ನೇತ್ರಾವತಿ.ಕೆ.ಬಿ

     ತೇಜಸ್ವಿನಿಯನ್ನು ಅವರ ಮನೆಯವರು ಎಳೆದೊಯ್ಯುವಾಗ ಅವಳ ಕೈಯಿಂದ ಬಿಚ್ಚಿ ಬಂದಿದ್ದ ಚಿನ್ನದ ಬಳೆಗಳನ್ನು ಕೊಡುವಂತೆ ಅಮ್ಮನನ್ನ ಕೇಳಿದ ಯಾಕೆ ನಾನು ಕೊಡಲ್ಲ ಅಂದಾಗ ಅಮ್ಮನನ್ನ ಹೊಡೆಯಲು ಮುಂದಾದ ಅಮ್ಮ ಅವುಗಳನ್ನು ಅಕ್ಕಿ ಡಬ್ಬದಲ್ಲಿ ಮುಚ್ಚಿ ಇಟ್ಟು ಅಪ್ಪನಿಗೆ ವಿಷಯ ತಿಳಿಸಲು ಹೊರಟುಹೋಯಿತು ಅಮ್ಮ ಆ ಕಡೆ ಹೋಗುತ್ತಿದ್ದಂತೆ ನಮ್ಮ ಮೇಲೆ ಬಳೆ ಕೊಡದಿದ್ದರೆ ಕೊಲ್ಲುವುದಾಗಿ ಕುಡುಗೋಲು ಹಿಡಿದು ನಿಂತ ನಾವು ವಿಧಿಯಿಲ್ಲದೆ ಬಳೆ ಕೊಟ್ಟೆವು  ಅಮ್ಮ ಬರುವ ಹೊತ್ತಿಗೆ ಅವುಗಳನ್ನು ಮಾರಿ ಅದರಿಂದ ಪುಡಿ ರೌಡಿಗಳನ್ನು ಕರೆದುಕೊಂಡು ಹೋಗಿ ತೇಜಸ್ವಿನಿ ಮನೆಗೆ ನುಗ್ಗಿಸಿ ಅವಳನ್ನು ಕರೆ ತರುವ ವಿಫಲ ಯತ್ನ ಮಾಡಿದಾಗ ಇವನನ್ನು ಕಂಡ ಆಕೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳಂತೆ ಆದ್ದರಿಂದ ಅವರು ಪೊಲೀಸರಿಗೆ ಫೋನ್‌ ಮಾಡುವದರೊಳಗೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ ಇದರಿಂದ ರೊಚ್ಚಿಗೆದ್ದ ಆಕೆಯ ಮನೆಯವರು ಪೊಲೀಸ್‌ ದೂರು ದಾಖಲಿಸಿ ನಾನ್‌ ಬೇಲಬಲ್‌ ವಾರಂಟ್‌ ಹೊರಡಿಸಿದ್ದರು, ನಮ್ಮ ಮನೆಗೆ ರಾತ್ರಿ ನುಗ್ಗಿ ಬಂದ ಪೊಲೀಸರು ಮನೆಯೆಲ್ಲಾ ಸರ್ಚ್‌ ಮಾಡಿದಾಗ ನಮಗೆ ತಿಳಿದ ವಿಷಯ ಇವು. ನನ್ನ ತಮ್ಮ ಬಂದರೆ ಕೂಡಲೇ ತಿಳಿಸುವಂತೆ ಬೆದರಿಕೆ ಹಾಕಿ ಹೋದರು. ಮಾರನೆ ಬೆಳಗ್ಗೆ ಬಂದ ಅಪ್ಪ ಲಂಕೇಶ್‌ ಪತ್ರಿಕೆಯ ಲಾಯರ್‌ ಅವರನ್ನ ಹಿಡಿದು ವಿಷಯ ತಿಳಿಸಿದಾಗ ಆತ ಪೊಲೀಸರಿಂದ ವಿಷಯ ಪಡೆದದ್ದು ನಮ್ಮ ಅಮ್ಮ ಅಕ್ಕ  ನನ್ನ ಮೇಲೆ ಕೂಡ ನಾನ್‌ ಬೇಲಬಲ್‌  ವಾರಂಟ್‌ ಹೊರಡಿಸುವ ಸಾಧ್ಯತೆ ಇದೆ ಎಂದೂ ನಾವು ಕೂಡಲೇ ಮನೆ ಬಿಟ್ಟು ಹೋಗಬೇಕೆಂಬುದು.

   ಎಲ್ಲಿಗೆ ಹೋಗುವುದು ಅದೂ ನಿಂತ ನಿಲುವಿಗೆ  ಮನೆಗೆ ಬಂದು ಎರಡೆರಡು ಜೊತೆ ಬಟ್ಟೆ ಬ್ಯಾಗಿಗೆ ತುರುಕಿಕೊಂಡು ಮನೆ ಬೀಗ ಹಾಕಿ ಕಾಡೇನಹಳ್ಳಿಗೆ ತೆರಳಿದೆವು. ಆ ಲಾಯರ್‌ ಮೊದಲಿಗೆ ನನ್ನ ತಮ್ಮನ  ಬೇಲ್‌ಗೆ  ಅಪ್ಲೈ ಮಾಡಿದ್ದರು,  ಇತ್ತ ಮನೆಯ ಹತ್ತಿರ ಪುನಃ ಬಂದ ಪೊಲೀಸರಿಗೆ (ಸುಮ್ಮನೆ ಸ್ಟೇಷನ್‌ ಗೆ ಕರೆಸಿ ಟಾರ್ಚರ್‌ ಮಾಡಲು) ನಾವು ಎಲ್ಲಿ ಹೋಗಿದ್ದೇವೆ ಎಂದು ತಿಳಿಯದೆ ವಾಪಸ್ಸು ಹೋದರಂತೆ.

   ಅತ್ತ ಪುನಃ 4 ದಿನ ಬಿಟ್ಟು ನನ್ನ ತಮ್ಮನ ಬೇಲ್‌ ವಿಷಯ ಏನಾಯಿತು ಅಂತ ಆ ಲಾಯರ್‌ ನ ಭೇಟಿ ಮಾಡಿದಾಗ ನಾಳೆ ಬೇಲ್‌ ಸಿಗುತ್ತದೆ ಎಂದಿದ್ದಾರೆ, ಹಸಿವಾಗಿದೆ, ಅಪ್ಪ ಮತ್ತು ಅಕ್ಕ  ಊಟವನ್ನ ಪಾರ್ಸೆಲ್‌ ತಂದು,  ಬನಶಂಕರಿ  ಮನೆ ಬೀಗ ತೆಗೆದು ಒಳಬಂದು ಕೈತೊಳೆದು, ಪಾರ್ಸೆಲ್‌ ಬಿಚ್ಚಿ ತುತ್ತು ಅನ್ನ ಬಾಯಲ್ಲಿ ಇಡುವ ಮೊದಲೇ ಇನ್ನೇನು ಬಾಯಲ್ಲಿ ಇಡಬೇಕು ಅನ್ನುವಾಗ ಪೊಲೀಸರು ಒಳ ನುಗ್ಗಿ  ಇಬ್ಬರನ್ನೂ ಪೊಲೀಸ್‌ ಜೀಪು ಹತ್ತಿಸಿಕೊಂಡು ಸ್ಟೇಷನ್‌ಗೆ ಕರೆದುಕೊಂಡು ಹೋಗಿದ್ದಾರೆ. ಪಕ್ಕದ ಮನೆಯಲ್ಲೇ ಇದ್ದ ಮನೆಯ ಓನರ್‌ ಅಷ್ಟು ಬೇಗ ಪೊಲೀಸರಿಗೆ ಫೋನ್‌ ಮಾಡಿದ್ದರಂತೆ.

    ಸ್ಟೇಷನ್‌ನಲ್ಲಿ ಅಪ್ಪ ಮತ್ತು ಅಕ್ಕ ಇಬ್ಬರನ್ನೂ  ಕೂರಿಸಿ , ನಂತರ ತೇಜಸ್ವಿನಿಯನ್ನು ಕರೆಸಿ “ ಹೇಳಮ್ಮಾ ಈಗ ಇವರೆಲ್ಲ ನಿನಗೆ ಏನೇನು ತೊಂದರೆ ಕೊಟ್ಟರು” ಎಂದು ಕೇಳಿದಾಗ ಆಕೆ ಅಳುಕುತ್ತಲೇ “ ಇವರೆಲ್ಲರಿಗೂ (ಅಮ್ಮ ಅಕ್ಕ ಮತ್ತು ನಾನು) ಬಹಳ ಹುಡುಗರ ಪರಿಚಯವಿದೆ, ಅವರ ಜೊತೆ ಇವರಿಗೆ ಸಂಬಂಧವಿದೆ, ಮೈಮಾರಿಕೊಳ್ತಾರೆ, ಇವರ ಅಕೌಂಟ್‌ ನಲ್ಲಿ ಬಹಳ ದುಡ್ಡಿದೆ,  ನನಗೂ ಅವರುಗಳ ಜೊತೆ ಮಲಗುವಂತೆ ಹಿಂಸೆ ಮಾಡುತ್ತಿದ್ದರು, ಕೈ ಹಿಡಿದು ಎಳೆಯುತ್ತಿದ್ದರು ಅವರ ಅಪ್ಪನಿಗೂ ಅಫೇರ್‌ ಗಳಿವೆ.  ಅಂತ ಕಣ್ಣಿರು ಹಾಕಿದಳಂತೆ. ಆ ಕಣ್ಣೀರು ಸುಳ್ಳು ಆಪಾದನೆ ಹೊರಿಸುತ್ತಿದ್ದುದಕ್ಕಾ ಅಥವಾ ಏಕೋ ಗೊತ್ತಿಲ್ಲ. ಆ ನಂತರ ಅವಳನ್ನ ಅಲ್ಲಿಂದ ಕಳಿಸಿದ ಇನ್ಸ್‌ಪೆಕ್ಟರ್‌ “ಏನ್ರೀ ಈಗ ಏನು ಹೇಳುತೀರಾ ಜೀವನ ಪೂರ್ತಿ ಜೈಲಲ್ಲಿ ಕೊಳಿಬೇಕು ಹಾಗೆ ಮಾಡುತ್ತೀನಿ” ಅಂದಾಗ ಮುಖದ ತುಂಬ ಕೋಪವೇ ತುಂಬಿಕೊಂಡಿದ್ದ ಅಪ್ಪ ಅಕ್ಕನನ್ನ ಕೆಂಗಣ್ಣಿನಿಂದ ನೋಡುತ್ತಾ ಇನ್ಸ್‌ ಪೆಕ್ಟರ್‌ ನ ನೋಡುತ್ತಾ” ನೋಡಿ ನಾನು ಒಬ್ಬ ಸರ್ಕಾರಿ ನೌಕರ ನನ್ನ ಫ್ಯಾಮಿಲಿ ಮೇಲೆ ನನ್ನ ಮೇಲೆ ನೀವು ಇಂತಹ ದೂರು ಹೊರಿಸುವ ಹಾಗಿಲ್ಲ ನಾನು ದೂರ ಇರುತ್ತೇನೆ ಅಂತ ಅವರ ಅಕೌಂಟ್‌ನಲ್ಲಿ ಇಟ್ಟುಕೊಳ್ಳಲು ದುಡ್ಡು ಕೊಟ್ಟಿರುವುದು ನಾನೇ . ಇನ್ನು ನನಗೆ ಅಫೇರ್‌ ಇದೆ ಅನ್ನುವುದನ್ನು ನನ್ನ ಕುಟುಂಬ ಹೇಳಬೇಕೇ ಹೊರತು ಬೇರೆಯವರಲ್ಲ” ಅಂತ ಅಂದಾಗ ಇನ್ಸ್‌ ಪೆಕ್ಟರ್‌ ಒಳಗೆ ಎದ್ದು ಹೋಗಿ ಗುಸು ಮಾತನಾಡಿ “ಸರಿ ನೀವಿನ್ನು ಹೊರಡಿ” ಅಂತ ಕಳಿಸಿದರಂತೆ.

ಅಲ್ಲಿಂದ ಅಕ್ಕ ಅದೇಗೆ ಬಂದು ತೋಟ ಸೇರಿದಳೋ,  ಕಣ್ಣೆಲ್ಲ ಊದಿಕೊಂಡಿತ್ತು, ಅಪ್ಪ ಜೊತೆಯಲ್ಲಿ ಬಂದಿರಲಿಲ್ಲ, ಕೇಳಿದಾಗ ಅಕ್ಕ  ನಡೆದ ವಿಷಯವನ್ನೆಲ್ಲ ಹೇಳಿದಳು. ಆ ಘಟನೆ ನಂತರ ಅಪ್ಪ ಚೆನ್ನಾಗಿ ಕುಡಿದು “ನಿಮ್ಮಿಂದ ನನ್ನ ಗೌರವ ನನ್ನ ಮನೆತನ ಎಲ್ಲಾ ಹಾಳಾಯಿತು, ನನಗೆ ನಿಮ್ಮ ಸಂಬಂಧ ಬೇಡ, ಮಧುಗಿರಿಯವಳು ಹೇಳಿದ್ದಳು, ನಿನ್ನ ಹೆಂಡತಿ ಮಕ್ಕಳು ಸರಿ ಇಲ್ಲ ಅಂತ,  ಅವಳ ಮಾತು ನಾನು ಕೇಳಲಿಲ್ಲ. ಅವಳು ಹೇಳಿದ್ದೆ ಸರಿ, ಹೋಗು ಹಾಳಾಗಿ ಹೋಗು” ಅಂತ ಅಕ್ಕನನ್ನ ಬಸ್‌ ಹತ್ತಿಸಿ ಮಧುಗಿರಿ ಬಸ್ಸು ಹತ್ತಿ ಹೋಯಿತಂತೆ.

     ನನಗಂತೂ ಇದು ಶಾಕ್‌, ಅಷ್ಟು ಹೊತ್ತಿಗೆ ನನ್ನ ಅಮ್ಮನ ತಮ್ಮಂದಿರು ಇಬ್ಬರಿಗೂ ಮದುವೆಯಾಗಿತ್ತು,. ದೊಡ್ಡ ಮಾಮನಿಗೆ ಇಬ್ಬರು ಮಕ್ಕಳಿದ್ದರು.  ದೊಡ್ಡ ಮಾಮ ಹುಳಿಯಾರಿನಲ್ಲಿದ್ದರು. ಆತ  ಬಂದು “ಇವರನ್ನ ಯಾಕೋ ಮನೆಗೆ ಸೇರಿಸಿದೆ, ಬೆಂಗಳೂರಲ್ಲಿ ಏನೇನು ಮಾಡಿಕೊಂಡಿದ್ದಾರೋ ನಿನಗೆ ಯಾಕೋ ಬೇಕು ಮೊದಲು ಇವರನ್ನು ಮನೆಯಿಂದ ಆಚೆ ಹಾಕು” ಅಂತ ಅಂತ ಚಿಕ್ಕ ಮಾಮನಿಗೆ ಹೇಳಿದ್ದನಂತೆ.  ಆ ವಿಷಯವನ್ನು  ಚಿಕ್ಕ ಮಾಮ ಸಂಕೋಚದಿಂದಲೆ ತಿಳಿಸಿದ. ನಮ್ಮಿಂದ ಅವನಿಗೆ ಯಾಕೆ ತೊಂದರೆ ಅನ್ನಿಸಿದರೂ ಯಾವ ಪಾತ್ರೆ ಪಡಗ ಇಲ್ಲದೆ ನಮ್ಮ ಚಿಕ್ಕನಾಯಕನಹಳ್ಳಿ ಮನೆಗೆ ಹೋಗುವುದು ಹೇಗೆ ಅಂತ ಯೋಚಿಸುತ್ತಿರುವಾಗ ಯುಗಾದಿ ಹಬ್ಬ ಬಂದಿತು. ಅಲ್ಲೇ ಎದುರುಗಡೆ ಮನೆ ಕಟ್ಟಿಕೊಂಡು ಇದ್ದ ಚಿಕ್ಕಮ್ಮನ ಮಗಳು ಅಥವಾ ಆಗಾಗ ಅಲ್ಲಿಗೆ ಬರುತ್ತಿದ್ದ ಚಿಕ್ಕಮ್ಮ ಯಾರೂ ನಮಗೆ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ ಅಥವಾ ಮಾಮಂದಿರು ಬೇಡ ಅಂದರೇನಂತೆ ನಮ್ಮ ಮನೆಗೆ ಬನ್ನಿ ಅಂತ ಎಂದೂ ಕರೆಯಲಿಲ್ಲ. ಬದಲಿಗೆ ನಾವು ಅಜ್ಜಿ ಮನೆಯಲ್ಲಿ ಸ್ನಾನ ಮಾಡಿದರೆ ಅವರೂ ಅಲ್ಲೆ ಬಂದು ಸ್ನಾನ ಮಾಡುವುದು, ಅಡುಗೆಯನ್ನ ಬೇಕೆಂತಲೇ ಅಲ್ಲೆ ಬಂದು ಮಾಡಿಕೊಂಡು ನಮಗೆ ಅಡ್ಡಿ ಪಡಿಸುವುದು ನಡೆದೇ ಇತ್ತು ಆದರೂ ಚಿಕ್ಕಮ್ಮನ ಮಗಳು ಯುಗಾದಿಗೆ ಕರೆದಾಗ ಬೇಸರ ಕಳೆಯಲೆಂದು ನಾನು ತುಮಕೂರಿಗೆ ಚಿಕ್ಕಮ್ಮನ ಮನೆಗೆ ಬಂದಿದ್ದೆ, ಇತ್ತ  ಅಂದು ದಿಡೀರನೆ  ಬಸ್ಸು ಇಳಿದು ಬಂದ ಅಪ್ಪ ಅಕ್ಕನನ್ನ ಕೊಚ್ಚಿಹಾಕುತ್ತೇನೆ ಇಷ್ಟೆಲ್ಲ ಕಷ್ಟಗಳಿಗೆ ಅವಳೇ ಕಾರಣ ಅಂತ ಅವಳನ್ನು ಕೊಲ್ಲುಲು ಮಚ್ಚು ಹಿಡಿದು ಅಟ್ಟಾಡಿಸತೊಡಗಿತಂತೆ, ಆಕ ಚಿಕ್ಕ ಮಾಮನ ಹೆಂಡತಿ ಅಕ್ಕನನ್ನ ಕೊಟ್ಟಿಗೆಗೆ ತಳ್ಳಿ ಬಾಗಿಲು ಹಾಕಿ ಅಡ್ಡ ನಿಂತು ಕೊಚ್ಚುವುದಾದರೆ ಮೊದಲು ನನ್ನ ಕೊಲ್ಲಿ ನಂತರ ಅಕ್ಕನನ್ನ ಕೊಲ್ಲುವೆಯಂತೆ ಅಂತ ಅಡ್ಡ ನಿಂತಾಗ ವಿಧಿಯಿಲ್ಲದೆ “ಇಂದಿಗೆ ನೀನು ನನ್ನ ಪಾಲಿಗೆ ಸತ್ತು ಹೋದೆ” ಅಂತ ಬೈದು ಹೊರಟು ಹೋಯಿತಂತೆ.

    ಅಜ್ಜಿ ಇವೆಲ್ಲದಕ್ಕೆ ಮೂಕ ಪ್ರೇಕ್ಷಕಿ. ನಾನು ವಾಪಸ್ಸು ಬಂದಾಗ ವಿಷಯ ತಿಳಿದು ಅಲ್ಲಿರುವುದು ಸೂಕ್ತ ಅಲ್ಲ ನಮ್ಮಿಂದ ಅವರಿಗೆ ತೊಂದರೆ ಅನ್ನಿಸಿ ಒಂದಷ್ಟು ಮಡಕೆ ಕೊಂಡುಕೊಂಡು ಚಿಕ್ಕ ನಾಯಕನ ಹಳ್ಳಿಯ ನಮ್ಮ ಮನೆಗೆ ತೆರಳಿ ರೇಷನ್‌ ತಂದು ಒಲೆ ಹಚ್ಚಿ ಅಡುಗೆ ಮಾಡಿ  ತಿಂದೆವು ಅಪ್ಪ ಚಿಕ್ಕ ನಾಯಕನಹಳ್ಳಿಯಲ್ಲಿ  ಎರಡು ಮನೆ ಕಟ್ಟಿ ಮೂರನೆಯ ಮನೆಗೆ ಪಾಯ ಹಾಕಿ ಹಾಗೆ ಬಿಟ್ಟಿತ್ತು, ಮೂವರಿಗೂ ಮೂರು ಮನೆ ಅಂತ ಆಗಿ ಉಳಿದ 60X40 ಸೈಟು ಉಳಿದಿತ್ತು.

    ಮುಂದೆ ಏನು ಮಾಡುವುದು ಎಷ್ಟು ಯೋಚಿಸಿದರೂ ಪ್ರಶ್ನೆಗಳೇ, ಅದರಿಂದ ಹೊರಬರುವ ಹಾದಿ ಕಾಣಲಿಲ್ಲ. ಅಷ್ಟು ಹೊತ್ತಿಗೆ ಬೇಲ್‌  ಸಿಕ್ಕಿದ ವಿಷಯ ತಿಳಿದ ನನ್ನ ತಮ್ಮ ಕೂಡ ಬಂದು ವಕ್ಕರಿಸಿದ್ದ. “ನಡೀರಿ ಇಂತಹ ಜೀವನ ನಡೆಸಬೇಕಾ, ನಾನು ಬೇಲ್‌ ಪ್ರಕಾರ ಬೆಂಗಳೂರಲ್ಲೆ ಇರಬೇಕು, ಇವರಿಂದ ಇಷ್ಟೆಲ್ಲ ಅನ್ನಿಸಿಕೊಂಡು ಇರಬೇಕಾ ನಡೀರಿ” ಅಂತ ಕುಂತ.

    ಅದರ ಹಿಂದಿನ ದಿನ ನಾನು ತಿಪಟೂರಿನ ಇಂಜಿನಿಯರಿಂಗ್‌ ಕಾಲೇಜಲ್ಲಿ ಉಪನ್ಯಾಸಕ ಹುದ್ದೆಗೆ ಸೇರಲೆಂದು ಹುಳಿಯಾರಿನಲ್ಲಿದ್ದ ದೊಡ್ಡ ಮಾಮನ ಮನೆಗೆ ಹೋಗಿದ್ದೆ, ಅಲ್ಲಿಗೂ ರಾತ್ರೋ ರಾತ್ರಿ ಬಂದ ನನ್ನ ತಮ್ಮ “ನಡಿ, ಅಮ್ಮ ಮತ್ತು ಅಕ್ಕ  ನಿನಗಾಗಿ ಕಾಯುತ್ತಿದ್ದಾರೆ.  ಬೆಂಗಳೂರಲ್ಲೆ ಕೆಲಸಕ್ಕೆ ಸೇರುವಿಯಂತೆ. ಅಂದ.

    “ನಾ ಬರಲ್ಲ ನಿನ್ನಿಂದಲೆ ಇಷ್ಟೆಲ್ಲಾ ಆಗಿದ್ದು ಯಾವ ಮುಖ ಇಟ್ಟುಕೊಂಡು ಇಲ್ಲಿಗೆ ಬಂದೆ ಹೋಗೋ” ಅಂದಾಗ ಅವನ ಬಿರುಸು ಮಾತು ಮಾಮನ ಕಡೆ ತಿರುಗಿತು ಮಾಮ ಹೇಳಿತು “ನೋಡಮ್ಮ ನಿನಗೆ ಕೆಲಸಕ್ಕೆ ಸೇರಿಸಲು ಅಷ್ಟೆ ಕರೆದುಕೊಂಡು ಬಂದಿದ್ದು . ನೋಡಮ್ಮ ನಿನ್ನಿಂದ ಇಂಥ ಲೋಫರ್‌ ಹತ್ತಿರ ಕೆಟ್ಟ ಮಾತು ಕೇಳುವ ಅನಿವಾರ್ಯತೆ ನನಗೆ ಏನಿದೆ, ನೀನು ಹೋಗಮ್ಮ” ಅಂದರು.

   ವಿಧಿಯಿಲ್ಲದೆ ಅವನ ಜೊತೆ ಚಿಕ್ಕನಾಯಕನಹಳ್ಳಿಗೆ ಬಂದೆ, ರಾತ್ರಿಯೇ ಬಸ್ಸು ಹತ್ತಿ ಬೆಂಗಳೂರಿಗೆ ಬಂದೆವು ಅದೇ ಬನಶಂಕರಿ ಮನೆಗೆ. ಓನರ್‌ ನಮ್ಮ ಕಂಡ ತಕ್ಷಣ ಅಂದ ಮಾತು “ಮೊದಲು ಮನೆ ಖಾಲಿ ಮಾಡಿ” ಅಂತ. ಅಷ್ಟು ಹೊತ್ತಿಗೆ ಸ್ಟೇಷನ್‌ ನಲ್ಲಿ ಏನೆಲ್ಲ ಸುಳ್ಳುಗಳನ್ನು ಹೇಳಿದ್ದರೋ ಅದೇ ರೀತಿ ಇಡೀ ಏರಿಯಾದ ಜನರಿಗೆಲ್ಲಾ ಹಬ್ಬಿಸಿದ್ದರು, ನನ್ನ ತಮ್ಮನ ಸ್ನೇಹಿತರನ್ನೆಲ್ಲ ಸ್ಟೇಷನ್‌ ಗೆ ಕರೆಸಿ ಬೆಂಡ್‌ ಎತ್ತಿದ್ದರು. ಜಿಮ್‌ ಓನರ್‌ ಸೇರಿ ಎಲ್ಲರನ್ನೂ ಕರೆಸಿ ವಿಚಾರಿಸಿದ್ದರಂತೆ ಅವರೆಲ್ಲ ಇಂತಹ ಕುಟುಂಬದ ಸ್ನೇಹ ಮಾಡಿದೆವಾ ಅಂತ ಛೆ ಅಂತ ಬೈದುಕೊಂಡವರೇ ಅಷ್ಟು ಹೊತ್ತಿಗೆ ಸಿಟ್ಟು ಇಳಿದ ಅಪ್ಪ ಬೇಲ್‌ ಕೊಡಿಸಿದ್ದ ಲಾಯರ್‌ಗೆ ಫೀಸು ಕೊಡಲೆಂದು ನನ್ನ ಅಕೌಂಟ್‌ ನಲ್ಲಿದ್ದ ಹತ್ತು ಸಾವಿರ ಈಸಿಕೊಂಡಿತ್ತು ಅದಾಗಲೇ ನಾನು ಚೆನ್ನೈಗೆ ಹೋಗಿ ಜಿಆರ್‌ ಇ ಟೋಫೆಲ್‌ ಪರೀಕ್ಷೆ ಬರೆಯುವ ದಿನಾಂಕ ಮುಗಿದುಹೋಗಿತ್ತು,

   ಅಪ್ಪ ಪುನಃ ತುಮಕೂರಿನ ಒಬ್ಬ ನಮ್ಮ ಜಾತಿಯ ತುಮಕೂರಿನ ಲಾಯರ್‌ ಗೆ ಸುಮಾರು 25  ಸಾವಿರ ದುಡ್ಡು ಕೊಟ್ಟು (ಇದೆಲ್ಲ 1994-95 ರಲ್ಲಿ ನಡೆದದ್ದು ಅವತ್ತಿಗೆ  ಈ ಮೊತ್ತದ  ವ್ಯಾಲ್ಯೂ ಯೋಚನೆ ಮಾಡಿ) ಕೇಸ್‌ ಮುಗಿಸಿಕೊಡುವಂತೆ ತಿಳಿಸಿತ್ತು,. ಜೊತೆಗೆ ಓನರ್‌ ಹತ್ತಿರ ಬಂದು ಮನೆ ಸಿಕ್ಕ ತಕ್ಷಣ ಖಾಲಿ ಮಾಡುತ್ತೇವೆ ಎಂದು ತಿಳಿಸಿತ್ತು,

    ನಾನು ಹಾಲು ತರಲು ಹತ್ತಿರದ ಡೈರಿಗೆ ತೆರಳಿದಾಗ ಪ್ರತಿ ಮನೆಯ ಜನಗಳು ಇವರೇ ನೋಡಿ ಇವರೇ ನೋಡ್ರಿ ಅಂತ ಕೈ ತೋರಿಸಿ ಪದಗಳನ್ನು ಹೇಳುತ್ತಿದ್ದರೆ ನಾನ್ಯಾಕೆ ಇನ್ನೂ ಬದುಕಿದ್ದೇನೆ ಛೆ ನಾನೆಷ್ಟು ಹೆದರು ಪುಕ್ಕಲಿ, ನನಗೆ ಸಾಯಲೂ ಧೈರ್ಯ ಸಾಲದು ಅಂತ ಕಣ್ಣ ಅಂಚಲ್ಲಿ ಬಂದ ಕಣ್ಣೀರು ಒರೆಸಿಕೊಂಡು, ಮನೆಗೆ ಬಂದು ಅಳುತ್ತಾ ಕೂತೆ.

    ಅಲ್ಲಿವರೆಗೆ ಸಿನಿಮಾದಲ್ಲಿ ನೋಡುತ್ತಿದ ಕಥೆಯಂತೆ  ನಮ್ಮ ಜೀವನದಲ್ಲಿ ಇಂತಹ ಘಟನೆ ನಡೆಯುತ್ತದೆ ಅಂತ ನಾನು ಊಹಿಸಿರಲಿಲ್ಲ, ಇವರಿಂದ ದೂರ ಹೋಗಬೇಕು ಅಷ್ಟೆ ನನ್ನ ಕನ್ಣೆದುರಿಗೆ ಇದ್ದದ್ದು ಆದರೆ ಹೇಗೆ? ಯಕ್ಷ ಪ್ರಶ್ನೆಯಾಗಿತ್ತು. ಆದರೆ ನಮ್ಮದೇ ಜಾತಿಯ  ಆ ತುಮಕೂರಿನ ಲಾಯರ್‌ ದುಡ್ಡು ನುಂಗಿ ಯಾವುದೇ ಕೇಸ್‌ ನಡೆಸದೆ, ಬೆಂಗಳೂರಿನ ಒಬ್ಬ ದಲಿತ ಮುಖಂಡನನ್ನು ತಂದು ಪರಿಚಯಿಸಿ ನೋಡಿ ಇನ್ನು ಮೇಲೆ ನಿಮಗೆ ಬೇಕಾದ ಸಹಾಯ ಈತ ಮಾಡುತ್ತಾನೆ, ಎಂದು ತಿಳಿಸಿ ಹೋದ, ಆತ ಮಾಡಿದ್ದು ಏನು? ನನ್ನನ್ನು  ಒಬ್ಬ ಬಿಇಎಂಎಲ್‌ ನಲ್ಲಿದ್ದ ಒಬ್ಬ  ಇಂಜಿನಿಯರ್‌ಗೆ ಮದುವೆ ಮಾಡಿಸುವುದು, ಆತ ನನಗೆ ಅಲ್ಲೇ ಕೆಲಸ ಕೊಡಿಸಿಕೊಳ್ಳುವುದು, ನಾನು ನನ್ನ  ಅಮ್ಮ ಅಕ್ಕನಿಗೆ ಜೀವನಕ್ಕೆ ಅಂತ ಇಷ್ಟು ದುಡ್ಡು ಕೊಡುವುದು, ಅವಳು ಬೇಕಾದ್ರೆ ಎಂಬಿಬಿಎಸ್‌ ಮುಂದುವರೆಸಲಿ, ಎಂಬ ಒಪ್ಪಂದವಾಗಿತ್ತು, ಅದರ ಜೊತೆಗೆ ಮತ್ತೊಬ್ಬ ದಲಿತ ಮುಖಂಡ ಐಸೆಕ್‌ ನಲ್ಲಿ ಕೆಲಸದಲ್ಲಿದ್ದಾತನನ್ನು ಪರಿಚಯಿಸಿ ಇವರು ಕೇಸ್‌ ಬಿ ರಿಪೋರ್ಟ್‌ ಮಾಡಿಸಲು ಸಹಾಯ ಮಾಡುತ್ತಾರೆ, ಅಂತ. ಆದರೆ ಐಸೆಕ್‌ ನವನು ಬೆಂಗಳೂರಿನ  ದಲಿತ ಮುಖಂಡನಿಗೆ ವಿಷಯ ತಿಳಿಯದಂತೆ ಆತ ನಿಮ್ಮಿಬ್ಬರಲ್ಲಿ ಯಾರು ದೊಡ್ಡವರು ಅವರನ್ನು ನಾನು ಮದುವೆಯಾಗುತ್ತೇನೆ ಅಂತ ವಿಷಯ ಮುಂದಿಟ್ಟಿದ್ದ, ಆತ ನಮ್ಮ ಮನೆಯಲ್ಲಿದ್ದ ಮಂಚ, ಟಿವಿ ಫ್ರಿಡ್ಜ್‌ , ಮಿಕ್ಸಿ, ಸಾಮಾನು  ಹೀಗೆ ಅವುಗಳನ್ನೆಲ್ಲ ಕಣ್ಣಲ್ಲೇ  ಅಳತೆ ಮಾಡಿ ಎಷ್ಟು ವರದಕ್ಷಿಣೆ ಕೇಳಬಹುದು ಎಂಬುದರ ಮೇಲೆ ಈ ಪ್ರಪೋಸ್‌ ಮಾಡಿದ್ದ ಅನ್ನುವುದು ಆನಂತರ ನಮಗೆ ತಿಳಿಯಿತು.

    ಈ ಹೊತ್ತಿನಲ್ಲೇ  ಅಮ್ಮ ತನ್ನ ಕಸಿನ್‌ನನ್ನ ಭೇಟಿ ಮಾಡಿ ಯಾರಾದ್ರು ಲಾಯರ್‌ ಇದ್ರೆ ತಿಳಿಸು ಅಂತ ಸಹಾಯ ಕೇಳಿದಾಗ ಆಕೆ ಸಯನೈಡ್‌ ತಿಂದು ಸಾಯಬಾರದಾ ಅಂತ ನಿಂದಿಸಿದ್ದಳು.

(ಮುಂದಿನ ʼಕಿನ್ನರಿʼಗೆ)