ಬಡವರೇಕೆ ‘ಅನ್ನಭಾಗ್ಯ’  ಅಕ್ಕಿ ಮಾರಿಕೊಳ್ಳುತ್ತಾರೆ 

ಅನ್ನ ಭಾಗ್ಯ ಯೋಜನೆ ಯಾವುದಾದರೂ ರೂಪದಲ್ಲಿ ಬಡವರಿಗೆ ಉಪಯೋಗವೇ ಆಗುತ್ತಾ ಬಂದಿದೆ. 

ಬಡವರೇಕೆ ‘ಅನ್ನಭಾಗ್ಯ’  ಅಕ್ಕಿ ಮಾರಿಕೊಳ್ಳುತ್ತಾರೆ 

ರವಿಕುಮಾರ್ ಟೆಲೆಕ್ಸ್ 


ಬಡವರು ಅನ್ನಭಾಗ್ಯ ಅಕ್ಕಿಯನ್ನು ಮಾರಿಕೊಳ್ಳುತ್ತಾರೆ ನಿಜ, ಯಾಕೆಂದರೆ ಪಡೆದ ಅಕ್ಕಿಯಲ್ಲಿ ಅರ್ಧ ಪಾಲನ್ನು ಕೆ.ಜಿ 10 ರೂಪಾಯಿಗಳಂತೆ ಮಾರಾಟ ಮಾಡಿ ಬಂದ ಹಣದಲ್ಲಿ ಉಪ್ಪು/ಮೆಣಸು/ಎಣ್ಣೆ..ಮಗುವಿನ ಜ್ವರಕ್ಕೆ ಔಷಧಿ/ ಸ್ಕೂಲ್ ಫೀ...ಹೀಗೆ ಇತರೆ ಅತ್ಯಾವಶ್ಯಕ ಅಗತ್ಯಗಳನ್ನು ನೀಗಿಸಿಕೊಳ್ಳುತ್ತಿದ್ದರು. ಬಡವರು ಅಕ್ಕಿ ಮಾರಿಕೊಳ್ಳುತ್ತಾರೆ ಎಂದು ದೂರುವವರಿಗೆ ಹಸಿವು,ಬಡತನದ ಅರಿವಿರುವುದಿಲ್ಲ. ಅಥವಾ ಅವರನ್ನು ಕೇಡಿನ ರಾಜಕಾರಣ ಆವರಿಸಿಕೊಂಡಿರುತ್ತದೆ. 


ಅನ್ನ ಭಾಗ್ಯ ಯೋಜನೆ ಯಾವುದಾದರೂ ರೂಪದಲ್ಲಿ ಬಡವರಿಗೆ ಉಪಯೋಗವೇ ಆಗುತ್ತಾ ಬಂದಿದೆ. 


ಇದೀಗ ರಾಜ್ಯ ಸರ್ಕಾರ ಅಕ್ಕಿ ಕೊರತೆಯಿಂದ (ಒಕ್ಕೂಟ ಸರ್ಕಾರದ ರಾಜಕೀಯ ಕೇಡು) ಬಡವರಿಗೆ ಅಕ್ಕಿ ಬದಲು ಅದರ ಬಾಬ್ತು ಕೆ.ಜಿ 34 ರೂ ಗಳಂತೆ ಕ್ಯಾಷ್ ಕೊಡಲು ಮುಂದಾಗಿರುವುದಂತೂ ಅತ್ಯಂತ ಉದಾತ್ತ ,ಸಮಯೋಚಿತ ನಿರ್ಧಾರ. 


ಇದುವರೆಗೂ ಬಡವರ ಅಸಹಾಯಕತೆಯನ್ನೆ ಬಂಡವಾಳ ಮಾಡಿಕೊಂಡು ಕೆ.ಜಿ ಗೆ 10 ರೂ ಗಳಂತೆ ಅಕ್ಕಿ ಖರೀದಿಸುತ್ತಿದ್ದ ಹೊಟೇಲ್, ಅಕ್ಕಿಮಿಲ್ ಮಾಫಿಯಾ ಅಕ್ಕಿ ಬದಲಿಗೆ ಕೆ ಜಿಗೆ 34 ರೂ. ಗಳನ್ನು ಕೊಡುವ ಸರ್ಕಾರದ ನಿರ್ಧಾರದಿಂದ ನೆಲಕಚ್ಚಿಹೋಗಲಿದೆ. 


 ಕೆ.ಜಿ 34 ರೂ ಗಳು ನೇರವಾಗಿ ಬಡವರಿಗೆ ದಕ್ಕುವುದರಿಂದ ಆ ಕುಟುಂಬದ ಅವಶ್ಯಕತೆಗಳ ಭಾರ ಇನ್ನಷ್ಟು ಹಗುರವಾಗುತ್ತದೆ. ಉದಾ: ನಾಲ್ವರಿರುವ ಒಂದು ಕುಟುಂಬ ಕ್ಕೆ ಈಗ ಸಿಗುತ್ತಿರುವ 5 ಕೆ.ಜಿ ಅಕ್ಕಿಜೊತೆ ಉಳಿದ ಐದು ಕೆಜಿಯ ಬಾಬ್ತು 680 ರೂ. ಗಳು ಸಿಗುತ್ತದೆ. ಈ ಮೊತ್ತ ಬಡ ಕುಟುಂಬಕ್ಕೆ ದೊಡ್ಡದೇ ಆಗಿರುತ್ತದೆ. 


ಇದರಿಂದ ಬದುಕಿಗೆ ನಿರ್ಧಿಷ್ಟ ಆದಾಯದ ಭರವಸೆಯೂ ಸಿಕ್ಕು ದುಡಿಯುವ ಶಕ್ತಿ ಇಮ್ಮಡಿಸುತ್ತದೆ. 


ದುಡಿಯುವ ವರ್ಗಗಳನ್ನು ಹಸಿವು ಮತ್ತು ಮೂಲಭೂತ ಅಗತ್ಯಗಳಿಂದ ಸದೃಢಗೊಳಿಸಿದರೆ ದುಡಿಯುವ ಶಕ್ತಿ ವೃದ್ದಿಸಿ ರಾಜ್ಯದ/ದೇಶದ ಆರ್ಥಿಕಾಭಿವೃದ್ಧಿ ಯಲ್ಲಿ ಚೇತರಿಕೆಯೂ ಕಂಡುಬರುತ್ತದೆ, ಅದು ಅಭಿವೃದ್ಧಿಗೆ ಬೆನ್ನೆಲುಬಾಗುತ್ತದೆ. ಎಂಬುದನ್ನು ಖ್ಯಾತ ಅರ್ಥಶಾಸ್ತ್ರಜ್ಞ Adam smith ರಾಜಕೀಯ ಆರ್ಥಿಕತೆಯನ್ನು (political economy) ) ಕರಾರುವಕ್ಕಾಗಿ ನಿರ್ವಚಿಸುತ್ತಾನೆ. 


ಅಕ್ಕಿಗೆ ಬದಲಾಗಿ ನಗದು ಕೊಡುವ ಮತ್ತು ರಾಜ್ಯ ಸರ್ಕಾರದ ಇತರೆ ಗ್ಯಾರಂಟಿ ಯೋಜನೆಗಳು ಇಂತಹ ಥಿಯೇರಿಯಲ್ಲೆ ರೂಪಿತಗೊಂಡಿರುವುದನ್ನು ಮನಗಾಣಬೇಕು. 


ಬಡವರ ಬದುಕನ್ನು ಯಾವುದಾದರೂ ರೂಪದಲ್ಲಿ ಬಲಪಡಿಸುವ ಯೋಜನೆಗಳನ್ನು ಯಾವುದೇ ಸರ್ಕಾರ ತಂದರೂ ಅದನ್ನು ಅಂತಃಕರಣದಿAದ ಉಳ್ಳವರು ಸ್ವಾಗತಿಸಬೇಕು. ಬೆಂಬಲಿಸಬೇಕು. ಇದು ಸಮಾಜದಲ್ಲಿನ "ಉಳ್ಳವರು ಮತ್ತು ಉಳ್ಳದವರ" (Have's - Have noter's)) ನಡುವಿನ ಅಂತರವನ್ನು ಇಲ್ಲವಾಗಿಸಿ ಸಮಸಮಾಜ ನಿರ್ಮಾಣ ಕ್ಕೆ ನಾಂದಿಯಾಗುತ್ತದೆ. 

ಇದೀಗ ಬಡವರಿಗೆ ಅಕ್ಕಿಗೆ ಬದಲಾಗಿ ನಗದು ಕೊಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸುವವರು ಕೇವಲ ಸರ್ಕಾರದ ವಿರೋಧಿಗಳಲ್ಲ, ಅವರು ಬಡವರ ವಿರೋಧಿಗಳೂ ಆಗಿರುತ್ತಾರೆ. ಬಡವರನ್ನು ದೋಚುವ ಮಾಫಿಯಾದ ವಕ್ತಾರರೇ ಆಗಿರುತ್ತಾರೆ. 

ಇಂತಹವರ ವಿರುದ್ಧ ಜನರೇ ಬೀದಿಗಿಳಿದು ಪಾಠ ಕಲಿಸಬೇಕು. 

ಅನ್ನ ಭಾಗ್ಯ ಯೋಜನೆ ಕೊಡುವವರ ಜವಾಬ್ದಾರಿ ಮತ್ತು ಪಡೆಯುವವರ ಬದುಕಿಗೆ ಸಂಬAಧಿಸಿದ್ದು. ಉಳಿದಂತೆ ಇದನ್ನು ವಿರೋಧಿಸುವವರು ನೀಚರೂ,ಪಾಪಿಷ್ಟರೂ ಆಗಿರುತ್ತಾರೆ.