ಉದ್ಯೋಗ ಖಾತರಿಯೂ ಮಾರುಕಟ್ಟೆಯ ತಂತ್ರವೂ-ಗ್ರಾಮಭಾರತದ ಜೀವನಾಡಿಗೆ ಅರಿವಳಿಕೆ ಮದ್ದು
ಯುವ ಸಮಾಜದ ದೃಷ್ಟಿಯಲ್ಲಿ ಅಳಿಸಿಹೋಗುತ್ತಿರುವುದು ಹೆಸರುಗಳಲ್ಲ ಭವಿಷ್ಯದ ಸುಂದರ ಕನಸುಗಳು ತಳಸಮಾಜದ ನಾಡಿಮಿಡಿತವನ್ನು ಗ್ರಹಿಸದಿದ್ದರೆ ಆಳ್ವಿಕೆಗಳು ಸಾಮಾನ್ಯರಿಗೆ ವಿಮುಖವಾಗುತ್ತವೆ
ನಾ ದಿವಾಕರ
ಭಾಗ 1
2047ಕ್ಕೆ ಭಾರತ ವಸಾಹತು ದಾಸ್ಯದಿಂದ ವಿಮೋಚನೆ ಪಡೆದು ನೂರು ವರ್ಷಗಳಾಗುತ್ತವೆ. ಈ ವೇಳೆಗೆ ದೇಶವನ್ನು ʼ ವಿಕಸಿತ ಭಾರತ ʼವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಬಿಜೆಪಿ ಸರ್ಕಾರ ತನ್ನ ಹೊಸ ಆರ್ಥಿಕ, ಔದ್ಯಮಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಆಡಳಿತ ನೀತಿಗಳನ್ನು ರೂಪಿಸುತ್ತಿದೆ. ಸಂಘಪರಿವಾರದ ಬೌದ್ಧಿಕ ಕೂಟ ಚರಿತ್ರೆಯ ಕುರುಹುಗಳನ್ನು ಅಳಿಸಿಹಾಕುತ್ತಿರುವಂತೆಯೇ, ಕೇಂದ್ರ ಸರ್ಕಾರ ಹಲವು ಯೋಜನೆಗಳಿಗೆ ಸಂಯೋಜಿತವಾಗಿರುವ ಚಾರಿತ್ರಿಕ ವ್ಯಕ್ತಿಗಳ ಹೆಸರುಗಳನ್ನೂ ಅಳಿಸಿಹಾಕುವ ಧಾವಂತದಲ್ಲಿದೆ. ಭಾರತ ʼ ವಿಕಸಿತ ʼ ಆಗುವ ವೇಳೆಗೆ , ಸ್ವಾತಂತ್ರ್ಯ ಪೂರ್ವ ಭಾರತದ ಕುರುಹುಗಳನ್ನು ರೂಪಾಂತರಗೊಳಿಸಿ, ಹೊಸ ವಿನ್ಯಾಸದೊಂದಿಗೆ ಯುವ ಪೀಳಿಗೆಯ ಮುಂದಿಡುವ ಈ ಮಹತ್ವಾಕಾಂಕ್ಷೆಗೆ ಇತ್ತೀಚೆಗೆ ಬಲಿಯಾಗಿರುವುದು ರಾಷ್ಟ್ರಪಿತ ಮಹಾತ್ಮ ಗಾಂಧಿ.
ಇಡೀ ವಿಶ್ವದ ಅರ್ಥಶಾಸ್ತ್ರಜ್ಞರು, ಆರ್ಥಿಕ ವಿಶ್ಲೇಷಕರು ಗೌರವಪೂರ್ವಕವಾಗಿ ಆದರಿಸುವ ಮತ್ತು 21ನೆ ಶತಮಾನದ ಅತ್ಯುತ್ತಮ ಉದ್ಯೋಗ ಯೋಜನೆ ಎಂದು ಕೊಂಡಾಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ (MNREGA-ನರೇಗಾ), ಈ ಪ್ರೌಢ ಸ್ಥಾನವನ್ನು ಗಳಿಸಿರುವುದು ಗಾಂಧಿ ಹೆಸರಿರುವ ಕಾರಣಕ್ಕಲ್ಲ. ನವ ಉದಾರವಾದಿ ಮಾರುಕಟ್ಟೆ ನೀತಿಗಳ ಪ್ರಹಾರಕ್ಕೆ ತಲ್ಲಣಿಸಿರುವ ಭಾರತದ ಲಕ್ಷಾಂತರ ಹಳ್ಳಿಗಳಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ, ಅಭದ್ರತೆ, ಅನಿಶ್ಚಿತತೆ ಮತ್ತು ಕೌಟುಂಬಿಕ ದುಸ್ಥಿತಿಗಳನ್ನು ಒಂದು ಹಂತದವರೆಗಾದರೂ ಸರಿಪಡಿಸುವ ಈ ಯೋಜನೆಯ ಉದಾತ್ತ ಆಲೋಚನಾ ಕ್ರಮಕ್ಕೆ. ಭಾರತ ವಾಸಿಸುವುದೇ ಗ್ರಾಮಗಳಲ್ಲಿ ಎಂದು ಪ್ರತಿಪಾದಿಸಿ, ಗ್ರಾಮೀಣ ಆರ್ಥಿಕತೆಯ ಸಬಲೀಕರಣವೇ ದೇಶದ ಸಮೃದ್ದಿಯ ಮೂಲ ಎಂಬ ಮಹಾತ್ಮ ಗಾಂಧಿಯ ಕನಸನ್ನು ಸ್ವಲ್ಪ ಮಟ್ಟಿಗಾದರೂ ನನಸು ಮಾಡುವ ಈ ಯೋಜನೆಯನ್ನು ಅವರ ಹೆಸರಿನಲ್ಲೇ ಗುರುತಿಸುವುದು, ಮಹಾತ್ಮನಿಗೆ ಸಲ್ಲುವ ಗೌರವ.
ಸಂಸ್ಥೆ, ಸ್ಥಾವರ, ಯೋಜನೆ ಮತ್ತು ನೀತಿಗಳಲ್ಲಿರುವ ಸತ್ವ ಹಾಗೂ ತಾತ್ವಿಕ ಸದುದ್ದೇಶಕ್ಕೂ, ಹೆಸರುಗಳಿಗೂ ಸಂಬಂಧ ಇರಲೇಬೇಕೆಂದಿಲ್ಲ. ಹಾಗೆ ನೋಡಿದರೆ ಮಹಾತ್ಮನಿಗೆ ಗೌರವ ಸಲ್ಲಿಸುವುದೇ ಆದರೆ ನರೇಗಾ ಯೋಜನೆಯನ್ನು ಮತ್ತಷ್ಟು ವಿಸ್ತರಿಸಬೇಕಿತ್ತು. ಅದೇ ರೀತಿಯ ಉದ್ಯೋಗ ಯೋಜನೆಯನ್ನು ನಗರಗಳಿಗೂ ವಿಸ್ತರಿಸಬೇಕಿತ್ತು. ಕನಿಷ್ಠ ವೇತನದ ಮೊತ್ತ ಹೆಚ್ಚು ಮಾಡಬೇಕಿತ್ತು. ದುಡಿಮೆಗೆ ಸರಿಯಾದ ಕೂಲಿಯನ್ನು ನಿಗದಿಪಡಿಸಬೇಕಿತ್ತು. ವಾರ್ಷಿಕ ಬಜೆಟ್ನಲ್ಲಿ ಈ ಯೋಜನೆಗೆ ಸಮರ್ಪಕವಾದ ಅನುದಾನವನ್ನು ಒದಗಿಸಬೇಕಿತ್ತು. ಈ ಪ್ರಾಮಾಣಿಕ ಪ್ರಯತ್ನಗಳಿಲ್ಲದೆ, ನರೇಗಾ ಯೋಜನೆಯನ್ನು ವರ್ಷದಿಂದ ವರ್ಷಕ್ಕೆ ದುರ್ಬಲಗೊಳಿಸುತ್ತಲೇ ಬಂದಿರುವಾಗ, ಅಲ್ಲಿ ಮಹಾತ್ಮನ ಹೆಸರು ಹೇಗೆ ಹೊಂದಿಕೊಳ್ಳಲು ಸಾಧ್ಯ ?
ಆದರೂ ʼ ಹೆಸರಿನಲ್ಲೇನಿದೆ ʼ ಎನ್ನುವುದು ಒಂದು ಸಾಮಾನ್ಯ ತಿಳುವಳಿಕೆಯ ಪ್ರಶ್ನೆ. ಖಂಡಿತವಾಗಿಯೂ ಹೆಸರು ಎನ್ನುವುದು ಗೌರವಪೂರ್ವಕ ಚಿಹ್ನೆಯಷ್ಟೇ. ಬಿಜೆಪಿಯ 11 ವರ್ಷದ ಆಳ್ವಿಕೆಯಲ್ಲಿ ಈ ಪದವನ್ನು ಕೊಂಚ ವಿಸ್ತರಿಸಿ ʼ ಹೆಸರು ಅಳಿಸುವುದರಲ್ಲೇನಿದೆ ? ʼ ಎಂದು ಕೇಳುವಂತಾಗಿದೆ. ಏಕೆಂದರೆ ಗಾಂಧಿ ಮತ್ತು ನೆಹರೂ ಅವರ ಹೆಸರುಗಳನ್ನು ಆಳ್ವಿಕೆಯ ಲಿಖಿತ ಚರಿತ್ರೆಯಿಂದ ಅಳಿಸಿಹಾಕುವ ಎಲ್ಲ ರೀತಿಯ ಪ್ರಯತ್ನಗಳನ್ನೂ ಸರ್ಕಾರ ಮಾಡುತ್ತಿದೆ. ಬಿಜೆಪಿಯ ರಾಜಕೀಯ ಇತಿಹಾಸದಲ್ಲಿ ಇಂತಹ ಉದಾತ್ತ ಯೋಜನೆಗಳನ್ನು ಗುರುತಿಸಲು ಅಗತ್ಯವಾದ ಚಾರಿತ್ರಿಕ ನಾಯಕರ ಹೆಸರುಗಳನ್ನು ಗುರುತಿಸುವುದು ಕಷ್ಟ. ಗಾಂಧಿ, ಅಂಬೇಡ್ಕರ್ ಮತ್ತು ನೆಹರೂ ಭಾರತದ ನಿರ್ಮಾಣದಲ್ಲಿ ನೀಡಿರುವಂತಹ ಕೊಡುಗೆಗೆ ಸಮನಾದ ಕಾಣಿಕೆ ನೀಡಿರುವ ಅಥವಾ ಗ್ರಾಂಥಿಕ ವಿಶ್ಲೇಷಣೆಯನ್ನು ತಮ್ಮ ಸಾಹಿತ್ಯದ ಮೂಲಕ ದಾಖಲಿಸಿರುವ ನಾಯಕರು ಬಿಜೆಪಿಯ ಪಟ್ಟಿಯಲ್ಲಿ ಕಾಣುವುದು ಕಷ್ಟ. ಹಾಗಾಗಿ ಮಹಾತ್ಮ ಗಾಂಧಿಯ ಸ್ಥಾನವನ್ನು ಅನಿವಾರ್ಯವಾಗಿ ರಾಮ ಆಕ್ರಮಿಸುತ್ತಾನೆ. ಗಾಂಧಿ, ಅಂಬೇಡ್ಕರ್, ನೆಹರೂ ಮೊದಲಾದವರನ್ನು ಪ್ರತಿಮೆ, ಸ್ಥಾವರ, ಸಂಸ್ಥೆ , ರಸ್ತೆಯ ನಾಮಫಲಕಗಳಲ್ಲಿ ಗುರುತಿಸುವುದಕ್ಕಿಂತಲೂ ಆಧುನಿಕ-ನವ ಭಾರತದ ಭೂಪಟದಲ್ಲಿ ಗುರುತಿಸಲಾಗುತ್ತದೆ.
ವಿಕಾಸಶೀಲತೆಯ ವೈರುಧ್ಯಗಳು
2047ರ ಹೊತ್ತಿಗೆ ದೇಶವನ್ನು ʼ ವಿಕಸಿತ ಭಾರತ ʼ ಮಾಡಲಾಗುತ್ತದೆ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಹಮ್ಮಿಕೊಂಡಿದೆ. ವಿಕಾಸವಾಗುವುದನ್ನು ಯಾರೂ ಬೇಡ ಎನ್ನುವುದಿಲ್ಲ ಆದರೆ ʼ ವಿಕಾಸ ʼ ಎನ್ನುವ ಸಾಪೇಕ್ಷ ಕಲ್ಪನೆಯನ್ನು ಛೇದಿಸಿ ನೋಡಿದಾಗ, ಭಾರತ ತನ್ನ 78 ವರ್ಷಗಳ ಆಳ್ವಿಕೆಯಲ್ಲಿ ವಿಕಸಿತ ಆಗಿಲ್ಲವೇ ಎಂಬ ಜಿಜ್ಞಾಸೆ ಉಂಟಾಗುತ್ತದೆ. ಈಗಾಗಲೇ ವಿಕಾಸವಾಗಿ ತನ್ನ ಸ್ವಾತಂತ್ರ್ಯ ಪೂರ್ವ ಸ್ಥಿತಿಗತಿಗಳನ್ನು ದಾಟಿ, ಒಂದು ಪ್ರಗತಿಶೀಲ ರಾಷ್ಟ್ರವಾಗಿ ರೂಪುಗೊಂಡಿರುವ ಭಾರತವನ್ನು ಪುನಃ ʼ ವಿಕಸಿತ ʼ ಮಾಡುವುದರ ಔಚಿತ್ಯವನ್ನು ತಾತ್ವಿಕ ನೆಲೆಯಲ್ಲಿ ಚರ್ಚಿಸಬೇಕಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಹಾಗೂ ವಿಜ್ಞಾನ ತಂತ್ರಜ್ಞಾನದ ನೆಲೆಯಲ್ಲಿ ಭಾರತ ಇಂದು ವಿಶ್ವದ ಅಗ್ರ ರಾಷ್ಟ್ರಗಳ ಪೈಕಿ ನಿಂತಿರುವುದೇ ಈ ವಿಕಾಸಶೀಲತೆಗೆ ಸಾಕ್ಷಿಯಾಗಿದೆ.
ಈ ವಿಕಾಸಕ್ಕೆ ಕಾರಣರಾದವರನ್ನು ಶೋಧಿಸುವಾಗ ಸಹಜವಾಗಿ ನಮ್ಮ ಗಮನ ಸಂವಿಧಾನ ರಚಿಸಿದ ಅಂಬೇಡ್ಕರ್, ಆಧುನಿಕ ಭಾರತದ ನಿರ್ಮಾತೃ ನೆಹರೂ, ಶೋಷಿತರ ಬದುಕಿಗೆ ಸಾಂತ್ವನ ನೀಡುವ ಸಾಂಸ್ಥಿಕ ಸಂರಚನೆಗಳನ್ನು ನಿರ್ಮಿಸಿದ ಇಂದಿರಾಗಾಂಧಿ ಹಾಗೂ ತಾತ್ವಿಕ ನೆಲೆಯಲ್ಲಿ ಶಾಂತಿ, ಅಹಿಂಸೆ ಮತ್ತು ಸಮನ್ವಯ ಸಂಸ್ಕೃತಿಯನ್ನು ಕಲ್ಪಿಸಿದ ಮಹಾತ್ಮ ಗಾಂಧಿ, ವಿವೇಕಾನಂದ, ಠಾಗೋರ್ ಎಲ್ಲರೂ ಸಹ ಗೋಚರಿಸುತ್ತಾರೆ. ಈ ಮಹನೀಯರು ಕಟ್ಟಿದ ಸುಭದ್ರ ಬುನಾದಿಯ ಮೇಲೆ ಈಗ ನವ ಉದಾರವಾದಿ ಬಂಡವಾಳಶಾಹಿಯ ಮಾರುಕಟ್ಟೆ ತನ್ನ ಸಾಮ್ರಾಜ್ಯವನ್ನು ಕಟ್ಟಲು ಮುಂದಾಗಿದೆ. ಈ ಸುಭದ್ರ ಅಡಿಪಾಯದ ಮೇಲೆ ನಿಂತಿರುವ ನವ ಭಾರತ ಈಗ ವಿಕಸಿತ ಆಗುವತ್ತ ನಡೆದಿರುವುದು ಸ್ವಾಗತಾರ್ಹ. ಆದರೆ ಈ ವಿಕಾಸದ ಫಲಾನುಭವಿಗಳು ಯಾರು ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ?
ವಿಕಾಸ-ಪ್ರಗತಿ ಮತ್ತು ಅಭಿವೃದ್ಧಿ ಈ ಮೂರು ಕಲ್ಪನೆಗಳ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗಮನಿಸಬೇಕಿದೆ. 78 ವರ್ಷಗಳ ಆಳ್ವಿಕೆಯಲ್ಲಿ ಭಾರತ ಸಾಂವಿಧಾನಿಕವಾಗಿ ಆಳಲ್ಪಟ್ಟಿದೆ. ಸಂವಿಧಾನದ ಮೂಲ ಆಶಯಗಳಿಗೆ ಚ್ಯುತಿ ಉಂಟಾಗದಂತೆ, 1975ರ ತುರ್ತುಪರಿಸ್ಥಿತಿಯ ಹೊರತಾಗಿಯೂ, ಪ್ರಜಾಪ್ರಭುತ್ವೀಯ ಆಡಳಿತ ನೀತಿಗಳನ್ನು ಅನುಸರಿಸುತ್ತಾ ಬಂದಿರುವ ಭಾರತ ಕಳೆದ ಒಂದು ದಶಕದಲ್ಲಿ ಭಿನ್ನ ದಾರಿಯಲ್ಲಿ ಸಾಗುತ್ತಿರುವುದನ್ನು ಈ ಸಂದರ್ಭದಲ್ಲಿ ಗಮನಿಸಲೇಬೇಕಿದೆ. ಸಮಾಜವಾದಿ ಆರ್ಥಿಕತೆ, ಬಹುತ್ವ ಸಂಸ್ಕೃತಿ, ಸೆಕ್ಯುಲರ್ ಸಮಾಜ ಹಾಗೂ ಶೋಷಿತರ ಪರ ಕಾನೂನು-ಯೋಜನೆಗಳ ಹೆದ್ದಾರಿಯಲ್ಲಿ ಸಾಗಿಬಂದಿರುವ ಸ್ವತಂತ್ರ ಭಾರತ ಈಗ ʼಆತ್ಮನಿರ್ಭರ ʼ ಎಂಬ ಹಣೆಪಟ್ಟಿಯನ್ನೂ ಪಡೆದುಕೊಂಡಿದೆ. ಆದರೆ ನೆಲದ ವಾಸ್ತವಗಳತ್ತ ಗಮನಿಸಿದಾಗ, ಈ ನಾಲ್ಕೂ ಸಾಂವಿಧಾನಿಕ ಆಶಯಗಳ ಹೊರತಾಗಿಯೂ ಭಾರತದ ವಿಕಾಸ ಅಥವಾ ಅಭಿವೃದ್ಧಿಯ ಫಲಾನುಭವಿಗಳು ಸಿರಿವಂತರು, ಕಾರ್ಪೋರೇಟ್ ಉದ್ಯಮಿಗಳೇ ಆಗಿರುವುದು ಕಾಣುತ್ತದೆ. ಶೋಷಿತ ಸಮುದಾಯಗಳ ಸಾಂವಿಧಾನಿಕ ವಿಮೋಚನೆ ಸಾಮಾಜಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಮರೀಚಿಕೆಯಾಗಿ ಕಾಣುತ್ತಿದೆ.
ಭವಿಷ್ಯದ ಫಲಾನುಭವಿಗಳು ಯಾರು ?
ಈಗ ವಿಕಸಿತ ಆಗಲಿರುವ ನವ ಭಾರತದ ಫಲಾನುಭವಿಗಳು ಯಾರಾಗಿರುತ್ತಾರೆ ? ಇಲ್ಲಿ ಪುನಃ ನಮಗೆ ಉಳ್ಳವರಲ್ಲೇ ಉಚ್ಛ ಮಟ್ಟದಲ್ಲಿರುವ ಕಾರ್ಪೋರೇಟ್ ಔದ್ಯಮಿಕ ವಾರಸುದಾರರು, ಬಂಡವಾಳಶಾಹಿಗಳು, ಊಳಿಗಮಾನ್ಯ ವ್ಯವಸ್ಥೆಯ ಪ್ರತಿನಿಧಿಗಳು ಮತ್ತು ಶ್ರಮಶಕ್ತಿಯನ್ನು ಗರಿಷ್ಠ ಮಟ್ಟದವರೆಗೂ ಶೋಷಣೆಗೊಳಪಡಿಸಿ ತಮ್ಮ ಆರ್ಥಿಕ ಸಾಮ್ರಾಜ್ಯವನ್ನು ವಿಸ್ತರಿಸಲು ಸಜ್ಜಾಗಿರುವ ಬಂಡವಾಳಿಗರ ಒಂದು ಜಗತ್ತು ಕಾಣುತ್ತದೆ. ಇದಕ್ಕೆ ಪೂರಕವಾಧ ಆರ್ಥಿಕ ನೀತಿಗಳನ್ನು ಕಳೆದ ಹತ್ತು ವರ್ಷಗಳಲ್ಲಿ, ಸಮಾಜವಾದಿ ಸಂವಿಧಾನದ ಚೌಕಟ್ಟಿನಲ್ಲೇ ಜಾರಿಗೊಳಿಸಲಾಗುತ್ತಿದೆ. ಈ ಸಂಭಾವ್ಯ ಫಲಾನುಭವಿಗಳಿಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸಲೆಂದೇ ರಸ್ತೆ ಸಾರಿಗೆ, ಸಂಚಾರ, ವಿಮಾನಯಾನ, ಬಂದರು, ವಿಮೆ, ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ ಹಾಗೂ ಶೇಕಡಾ 60ರಷ್ಟು ಜನರು ಅವಲಂಬಿಸಿರುವ ಕೃಷಿ ವಲಯವನ್ನೂ ಕಾರ್ಪೋರೇಟೀಕರಣ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ.
ಈ ಯಾವುದೇ ನೀತಿಗಳೂ, ಕ್ರಮಗಳೂ ಸಹ ಸಂವಿಧಾನ ಬಾಹಿರ ಎನಿಸಿಕೊಳ್ಳುವುದಿಲ್ಲ. ಏಕೆಂದರೆ ಭಾರತದ ಸಂವಿಧಾನ ಈ ಹಾದಿಯಲ್ಲಿ ಸಾಗಲು ಯಾವುದೇ ರೀತಿಯಲ್ಲಿ ಆಡಳಿತಾತ್ಮಕವಾಗಿ, ಶಾಸನಾತ್ಮಕವಾಗಿ ಅಡ್ಡಿ ಮಾಡುವುದಿಲ್ಲ. ಬಹುಮತ ಪಡೆದಿರುವ ಸರ್ಕಾರಕ್ಕೆ ಇದು ಸರ್ವ ಸ್ವತಂತ್ರ ನೀಡುತ್ತದೆ. ಹಾಗಾಗಿಯೇ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ರೈಲು, ವಿಮಾನ, ಬಂದರು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಬಗೆದು ಕಟ್ಟಲಾಗುವ ಗಣಿಗಾರಿಕೆಯಂತಹ ಉದ್ಯಮಗಳನ್ನು ಕಾರ್ಪೋರೇಟ್ ಮಾರುಕಟ್ಟೆಗೆ ಪರಭಾರೆ ಮಾಡುತ್ತಿದೆ. ವಿಮಾ ಕ್ಷೇತ್ರದಲ್ಲಿ ಶೇಕಡಾ 100 ರಷ್ಟು ವಿದೇಶಿ ಬಂಡವಾಳ ಹೂಡಿಕೆ, ಅಣುಶಕ್ತಿ ಉತ್ಪಾದನೆಯ ಖಾಸಗೀಕರಣ, ಕೃಷಿ ವಲಯದ ಕಾರ್ಪೋರೇಟೀಕರಣ ಮತ್ತು ನರೇಗಾ ಉದ್ಯೋಗ ಖಾತರಿ ಯೋಜನೆಯ ರೂಪಾಂತರ ಪ್ರಕ್ರಿಯೆಯಲ್ಲಿ ಗುರುತಿಸಬಹುದು.
ಸ್ವಾವಲಂಬಿ ಭಾರತದ ಅಡಿಪಾಯವಾಗಿದ್ದ ಸಾರ್ವಜನಿಕ ಉದ್ದಿಮೆಗಳನ್ನು ಹಂತಹಂತವಾಗಿ ಕಾರ್ಪೋರೇಟ್ ಜಗತ್ತಿಗೆ ಒಪ್ಪಿಸುವ ಆರ್ಥಿಕ ನೀತಿಗಳು ಈಗಾಗಲೇ ದೇಶದಲ್ಲಿ ಉಂಟುಮಾಡಿರುವ ನಿರುದ್ಯೋಗ, ಬಡತನ ಮತ್ತು ನಿರ್ವಸತಿಯ ಸಮಸ್ಯೆಗಳು ಮತ್ತಷ್ಟು ಉಲ್ಬಣಿಸುವಂತೆ ಮಾಡುವ “ ವಿಕಸಿತ ಭಾರತ – ಗ್ರಾಮೀಣ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ ” (ವಿಬಿ-ಜಿ-ರಾಮ್-ಜಿ) ಯೋಜನೆಯನ್ನು ಶಾಸನಾತ್ಮಕವಾಗಿ ಜಾರಿಗೊಳಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ದೇಶದ ಮುಂದಿಟ್ಟಿದೆ. ಈ ಹೊಸ ಯೋಜನೆಯಲ್ಲಿ ಮಹಾತ್ಮ ಗಾಂಧಿ ಮರೆಯಾಗಿದ್ದು ಪರೋಕ್ಷವಾಗಿ ರಾಮನ ಹೆಸರನ್ನು ಸೇರಿಸಿರುವುದು ಸಾಂಸ್ಕೃತಿಕ ರಾಜಕಾರಣದ ಒಂದು ಭಾಗವಾಗಿ ನೋಡಬಹುದು. ಆದರೆ ಇದನ್ನೂ ಮೀರಿ ಗಮನಿಸಬೇಕಿರುವುದು ಉದ್ಯೋಗ ಖಾತರಿ ಯೋಜನೆಯ ಹೊಸ ರೂಪ ಮತ್ತು ಅದರಿಂದ ಉಂಟಾಗಬಹುದಾದ ಅಪಾಯಗಳನ್ನು. ಒಂದು ಜನೋಪಯೋಗಿ ಸಾಂವಿಧಾನಿಕ ಯೋಜನೆಯನ್ನು ಹಂತಹಂತವಾಗಿ ಹೇಗೆ ಕೊನೆಗೊಳಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನರೇಗಾ ಯೋಜನೆ ನಮ್ಮ ನಡುವೆ ಇತ್ತು. ಈಗ ಈ ಪ್ರಕ್ರಿಯೆಯ ಅಂತಿಮ ಹಂತವಾಗಿ ಜಿ-ರಾಮ್-ಜಿ ಯೋಜನೆ ಜಾರಿಯಾಗಲಿದೆ.
ನವ ಉದಾರವಾದದ ಆಯಾಮದಲ್ಲಿ
ಕಾರ್ಪೋರೇಟ್ ಮಾರುಕಟ್ಟೆ ಮತ್ತು ಡಿಜಿಟಲ್ ಬಂಡವಾಳಶಾಹಿಯ ಔದ್ಯಮಿಕ ವಿಕಾಸವನ್ನೇ ಪ್ರಧಾನ ಗುರಿಯಾಗಿರಿಸಿಕೊಂಡಿರುವ ನವ ಉದಾರವಾದಿ ಆರ್ಥಿಕ ನೀತಿಗಳು , ಭವಿಷ್ಯದ ಭಾರತದಲ್ಲಿ ಸೃಷ್ಟಿಸುವ ಔದ್ಯೋಗಿಕ ಸಂರಚನೆಗಳು ಹಾಗೂ ಡಿಜಿಟಲ್ ಮಾರುಕಟ್ಟೆಗೆ , ಶ್ರಮಿಕರ ಕೌಶಲವೇ ಪ್ರಧಾನ ಮಾನದಂಡವಾಗುತ್ತದೆ. ಅಗಾಧ ಸಂಖ್ಯೆಯಲ್ಲಿರುವ ಭಾರತದ ಯುವ ಸಮಾಜದಿಂದ ಈ ಕೌಶಲ್ಯವನ್ನು ಗುರುತಿಸಿ, ನಗರಗಳ ಕಡೆಗೆ ಸೆಳೆಯುವುದು ಅನಿವಾರ್ಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುತ್ತಿರುವ, ನರೇಗಾ ಯೋಜನೆಗಳ ಮೂಲ ಫಲಾನುಭವಿಗಳಾಗಿರುವ, ಯುವ ಸಮೂಹವನ್ನು ಡಿಜಿಟಲ್ ಮಾರುಕಟ್ಟೆಯ ನಗರ ಕೇಂದ್ರಗಳಿಗೆ ಆಕರ್ಷಿಸುವುದು ಸರ್ಕಾರದ ಆರ್ಥಿಕ ನೀತಿಯಾಗಲಿದೆ. ಈ ದೂರದೃಷ್ಟಿಯಿಂದಲೇ , ಗ್ರಾಮೀಣ ಭಾರತದಲ್ಲಿ ತಮ್ಮ ಕೃಷಿ-ಕೃಷಿಯೇತರ ಚಟುವಟಿಕೆಗಳೊಂದಿಗೆ ಇತರ ದುಡಿಮೆಯನ್ನೂ ನಂಬಿ ಬದುಕುತ್ತಿರುವವರನ್ನು ಮತ್ತೊಮ್ಮೆ ಅಸ್ಥಿರಗೊಳಿಸುವ ಚಿಂತನೆಯನ್ನು ವಿಬಿ-ಜಿ-ರಾಮ್-ಜಿ ಮಸೂದೆಯಲ್ಲಿ ಗುರುತಿಸಬಹುದು.
ನವ ಉದಾರವಾದ ನಗರೀಕರಣವನ್ನು ಉತ್ತೇಜಿಸಿದರೂ, ನಗರ ಜೀವನದಲ್ಲಿ ಡಿಜಿಟಲ್ ಬಂಡವಾಳದ ಬುನಾದಿಯನ್ನು ಭದ್ರಪಡಿಸಲು ಅಗತ್ಯವಾದ ಶ್ರಮಶಕ್ತಿಯನ್ನು ಅಗ್ಗದ ದರದಲ್ಲಿ ಸಂಯೋಜಿಸುವ ತಂತ್ರವನ್ನೂ ಅಳವಡಿಸಿಕೊಳ್ಳುತ್ತದೆ. ಈ ಕೌಶಲ ಯುಕ್ತ ಶ್ರಮಶಕ್ತಿಯನ್ನು ಗ್ರಾಮಗಳಿಂದ ನಗರಗಳಿಗೆ ವಲಸೆ ಬರುವ ದುಡಿಮೆಗಾರರಲ್ಲಿ, ವಿಶೇ಼ಷವಾಗಿ ಯುವ ಸಮೂಹದಲ್ಲಿ ಪಡೆಯುವುದು ಸುಲಭವಾಗುತ್ತದೆ. ಆದರೆ ಹೀಗೆ ವಲಸೆ ಬರುವ ಶ್ರಮಿಕರಿಗೆ ನಗರಾಭಿವೃದ್ಧಿಯಲ್ಲಿ ಫಲಾನುಭವಿಗಳಾಗುವ ಭಾಗ್ಯ ಲಭಿಸುವುದಿಲ್ಲ. ಬದಲಾಗಿ ಮೂಲ ಸೌಕರ್ಯಗಳ ನಿರ್ಮಾಣದಲ್ಲಿ ಹಾಗೂ ಡಿಜಿಟಲ್ ಮಾರುಕಟ್ಟೆ ಪ್ಲಾಟ್ಫಾರ್ಮ್ಗಳು ಒದಗಿಸುವ ಸೇವೆ ಮತ್ತು ಸರಕುಗಳ ವಿತರಣೆಯಲ್ಲಿ, ಡಿಜಿಟಲ್ ತಂತ್ರಜ್ಞಾನದಲ್ಲಿ ಅಗ್ಗದ ಕೂಲಿಗೆ ದುಡಿಯುವವರಾಗುತ್ತಾರೆ. ಶಾಶ್ವತ ಉದ್ಯೋಗ ಮತ್ತು ಸ್ವಂತ ದುಡಿಮೆಯ ವಾತಾವರಣದಿಂದ, ಪರಾವಲಂಬನೆಯ ವಾತಾವರಣಕ್ಕೆ ಒಂದು ತಲೆಮಾರು ವರ್ಗಾವಣೆಯಾಗುತ್ತದೆ.
ಈ ಮಾರುಕಟ್ಟೆ ತಂತ್ರದ ಒಂದು ಭಾಗವಾಗಿ ಸ್ವತಂತ್ರ ಭಾರತದ ಅತ್ಯುತಮ ಜನೋಪಯೋಗಿ ಯೋಜನೆ, ನರೇಗಾ ಈಗ ಇತಿಹಾಸದ ಪುಟಗಳನ್ನು ಸೇರಲಿದೆ. ಇಲ್ಲಿ ಮಹಾತ್ಮ ಗಾಂಧಿಯ ಹೆಸರನ್ನು ಅಳಿಸುವುದು ನಿಮಿತ್ತ ಮಾತ್ರ, ವಾಸ್ತವಿಕವಾಗಿ ಅಳಿಸಿಹೋಗುವುದು ಮಿಲೆನಿಯಂ ಸಮಾಜದ, ಯುವ ಸಮೂಹದ ಹಾಗೂ ದುಡಿಮೆಯನ್ನೇ ನಂಬಿ ಬದುಕುವ ಶ್ರಮಜೀವಿಗಳ ಭರವಸೆ , ಕನಸು ಹಾಗೂ ಆಕಾಂಕ್ಷೆಗಳು. ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಕಾರ್ಪೋರೇಟೀಕರಣ, ಸರ್ಕಾರಿ ಸ್ವಾಮ್ಯದ ಎಲ್ಲ ಉದ್ದಿಮೆ ಮತ್ತು ಸೇವೆಗಳ ಖಾಸಗೀಕರಣ, ಉನ್ನತ ಶಿಕ್ಷಣದ ವಾಣಿಜ್ಯೀಕರಣ ಮತ್ತು ಉನ್ನತ ಶಿಕ್ಷಣದಲ್ಲಿ ವಿದೇಶಿ ಸಂಸ್ಥೆಗಳ ಪ್ರವೇಶ, ಈ ಮಾರುಕಟ್ಟೆ ನೀತಿಗಳು ಭಾರತದ ಯುವ ಸಮಾಜವನ್ನು ಅಸ್ಥಿರಗೊಳಿಸುತ್ತವೆ. ಉದ್ಯೋಗ ಮರೀಚಿಕೆಯಾಗದಿದ್ದರೂ ಭವಿಷ್ಯದ ಬದುಕಿಗೆ ಸುಭದ್ರ ಅಡಿಪಾಯವನ್ನಂತೂ ಒದಗಿಸುವುದಿಲ್ಲ. ಇದು ನವ ಉದಾರವಾದದ ಕಲ್ಪನೆಯಲ್ಲಿ ಪ್ರಗತಿ-ವಿಕಾಸ-ಅಭಿವೃದ್ಧಿಯನ್ನು ನೋಡುವ ವಿಧಾನ. ಕಾಂಗ್ರೆಸ್ ಪಕ್ಷವನ್ನೂ ಒಳಗೊಂಡಂತೆ ಭಾರತದ ಬಹುತೇಕ ಬೂರ್ಷ್ವಾ ರಾಜಕೀಯ ಪಕ್ಷಗಳು ಈ ಮಾದರಿಯನ್ನು ತಾತ್ವಿಕವಾಗಿ ವಿರೋಧಿಸುವುದಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ಈ ವಿಧಾನಕ್ಕೆ ರಹದಾರಿಗಳನ್ನು ನಿರ್ಮಿಸುತ್ತಲೇ 2047ರ ವೇಳೆಗೆ ದೇಶವನ್ನು ʼ ವಿಕಸಿತ ಭಾರತ ʼ ವನ್ನಾಗಿ ಮಾಡುವ ಮಹತ್ವಾಕಾಂಕ್ಷೆಗೆ ಈಗ ಚಾಲನೆ ದೊರೆಯುತ್ತಿದೆ. ಶೇಕಡಾ 1ರಷ್ಟು ಸಿರಿವಂತರು, ದೇಶದ ಶೇಕಡಾ 40ರಷ್ಟು ಸಂಪತ್ತಿನ ಮೇಲೆ ಒಡೆತನ ಸಾಧಿಸಿರುವ ವರ್ತಮಾನದ ಸನ್ನಿವೇಶವನ್ನು ಗಮನಿಸಿದಾಗ, ಈ ಅನುಪಾತ ಇನ್ನೂ ಹಿಗ್ಗುವ ಸಾಧ್ಯತೆಗಳು ನಿಚ್ಛಳವಾಗಿ ಕಾಣುತ್ತವೆ. ಒಂದೆಡೆ ದುಡಿಮೆಗಾರರ Proletarianisation ಪ್ರಕ್ರಿಯೆ (ಆಂದರೆ ಸಾಮಾನ್ಯ ಜನತೆ ಸ್ವ ಉದ್ಯೋಗ ಕಳೆದುಕೊಂಡು, ಉದ್ಯೋಗದಾತರಾಗುವ ಅವಕಾಶಗಳಿಲ್ಲದೆ, ಆಸ್ತಿ ಅಂತಸ್ತನ್ನು ಕಳೆದುಕೊಂಡು, ಕೂಲಿಯನ್ನು ನಂಬಿ ಬದುಕುವುದನ್ನು ಅನಿವಾರ್ಯವಾಗಿಸುವ ) ತೀವ್ರತೆ ಪಡೆಯುತ್ತಿರುವಂತೆಯೇ ಮತ್ತೊಂದು ಬದಿಯಲ್ಲಿ ಭಾರತ ಆರ್ಥಿಕವಾಗಿ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ಮುಂಚೂಣಿಯಲ್ಲಿರಲಿದೆ. ಆರ್ಥಿಕ ಅಸಮಾನತೆ ಮತ್ತು ಸಾಮಾಜಿಕ ಅಂತರ ಹೆಚ್ಚಾಗುವ ಒಂದು ಸಮಾಜದಲ್ಲಿ ಭಾರತದ ಶೋಷಿತ ಜನತೆ ತಮ್ಮ ಬದುಕು ಅಥವಾ ಕನಸುಗಳನ್ನು ಕಟ್ಟಿಕೊಳ್ಳಬೇಕಿದೆ.
ಭಾಗ 2
(ಉದ್ಯೋಗ ಖಾತರಿಯೂ ಮಾರುಕಟ್ಟೆಯ ತಂತ್ರವೂ ಲೇಖನದ ಮುಂದುವರೆದ ಭಾಗ)
ಗ್ರಾಮಭಾರತದ ಜೀವನಾಡಿಗೆ ಅರಿವಳಿಕೆ ಮದ್ದು
ಸುಪ್ರೀಂಕೋರ್ಟ್ ಬಿಜೆಪಿ ಸರ್ಕಾರಗಳ ಬುಲ್ಡೋಜರ್ ನ್ಯಾಯವನ್ನು ಸಂವಿಧಾನಬಾಹಿರ ಎಂದು ವ್ಯಾಖ್ಯಾನಿಸಿದ್ದರೂ ಇಂದಿಗೂ ಕಾಂಗ್ರೆಸ್ ಆಳ್ವಿಕೆಯ ಕರ್ನಾಟಕದಲ್ಲೂ ಬಡಜನರ ಮನೆಗಳು ಬುಲ್ಡೋಜರ್ಗೆ ಬಲಿಯಾಗುತ್ತಿವೆ. ಇದೇ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೇಂದ್ರ ಸರ್ಕಾರದ ʼ ಜಿ ರಾಮ್ ಜಿ ʼ ಕಾಯ್ದೆಯನ್ನು ಕುರಿತು ವ್ಯಾಖ್ಯಾನಿಸುತ್ತಾ, ನರೇಗಾ ಯೋಜನೆಯ ಮೇಲೆ ಬುಲ್ಡೋಜರ್ ಹತ್ತಿಸಲಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶ ಬಿಜೆಪಿ ಸರ್ಕಾರದ ನೂತನ ಅವಿಷ್ಕಾರವಾದ ಈ ʼ ಬುಲ್ಡೋಜರ್ ನ್ಯಾಯ ʼದ ಕಲ್ಪನೆ ಈಗ ಸ್ಥಾವರಗಳನ್ನು ದಾಟಿ, ಭಾರತದ ತಳಸಮಾಜದ ಅಭಾಗ್ಯರಿಗೆ ನೆರವಾಗುವ ಜನಮುಖಿ ಯೋಜನೆಗಳನ್ನು ಆವರಿಸಿದೆ. ಈ ದೃಷ್ಟಿಯಿಂದ ಸೋನಿಯಾ ಅವರ ಅಭಿಪ್ರಾಯವನ್ನು ಒಪ್ಪಬಹುದು.
ಸ್ವತಂತ್ರ ಭಾರತದ ಅತ್ಯಂತ ಜನಪ್ರಿಯ ಹಾಗೂ ತಳಸಮಾಜಮುಖಿ ಯೋಜನೆ ಎಂದೇ ವಿಶ್ವಖ್ಯಾತಿ ಪಡೆದಿದ್ದ ನರೇಗಾ (MNREGA) ಈಗ ಚರಿತ್ರೆಯ ಪುಟಗಳನ್ನು ಸೇರಲಿದ್ದು, ತನ್ನ ಕಾರ್ಪೋರೇಟ್ ಮಾರುಕಟ್ಟೆ ನೀತಿಗಳಿಗನುಗುಣವಾಗಿ ಕೇಂದ್ರ ಎನ್ಡಿಎ ಸರ್ಕಾರ, ಇದರ ಜಾಗದಲ್ಲಿ “ ವಿಕಸಿತ ಭಾರತ ಜಿ-ರಾಮ್-ಜಿ “ ಯೋಜನೆಯನ್ನು ರೂಪಿಸಿದ್ದು, ಮಸೂದೆಯನ್ನು ಲೋಕಸಭೆಯಲ್ಲಿ ಅನುಮೋದಿಸಲಾಗಿದ್ದು, ರಾಷ್ಟ್ರಪತಿಗಳ ಅಂಕಿತವನ್ನೂ ಗಳಿಸಿದೆ. ಯುಪಿಎ ಸರ್ಕಾರದ ಬಹುತೇಕ ಜನಪರ ಯೋಜನೆಗಳನ್ನೇ ಮರುನಾಮಕರಣ ಮಾಡಿ ಜಾರಿಗೊಳಿಸುತ್ತಾ ಬಂದಿರುವ ನರೇಂದ್ರ ಮೋದಿ ಸರ್ಕಾರ , ಈ ಬಾರಿ ಚಾಲ್ತಿಯಲ್ಲಿದ್ದ ಯೋಜನೆಯ ಅಂತಃಸತ್ವವನ್ನೇ ಹೊಸಕಿಹಾಕಿ, ಮಾರುಕಟ್ಟೆ ಆರ್ಥಿಕತೆಗೆ ಪೂರಕವಾದ ಯೋಜನೆಯನ್ನು ರೂಪಿಸಿದೆ.
ನರೇಗಾ ಯೋಜನೆಯ ಉಗಮ
ಯೋಜನೆಯ ಹೆಸರುಗಳನ್ನು ಬದಿಗಿಟ್ಟು ನೋಡಿದಾಗ, ನರೇಗಾ ಯೋಜನೆ ಯುಪಿಎ ಸರ್ಕಾರದ ಸಾಧನೆ ಎನ್ನಬಹುದಾದರೂ, ಈ ಕಲ್ಪನೆಯ ವಾರಸುದಾರರು ರಾಜಕೀಯ ಪಕ್ಷಗಳಲ್ಲ ಎಂಬ ಸುಡು ವಾಸ್ತವವನ್ನೂ ಮನಗಾಣುವುದು ಮುಖ್ಯ. ಏಕೆಂದರೆ ʼ ನರೇಗಾ ʼ ಭಾರತದ ಸಾಮಾಜಿಕ ಚಳುವಳಿಗಳ, ಸಮಾಜಮುಖಿ ಚಿಂತಕರ, ಜಾಗತೀಕರಣ ವಿರೋಧಿ ವಿದ್ವಾಂಸರ, ಅರ್ಥಶಾಸ್ತ್ರಜ್ಞರ ಕನಸಿನ ಕೂಸು. ಭಾರತ 1980ರ ಆದಿಯಲ್ಲಿ ಜಾಗತೀಕರಣಕ್ಕೆ ಬಾಗಿಲು ತೆರೆದು, 1990ರಲ್ಲಿ ಸಮ್ಮತಿಸಿ, 21ನೆ ಶತಮಾನದಲ್ಲಿ ನವ ಉದಾರವಾದವನ್ನು ಅಧಿಕೃತವಾಗಿ, ಶಾಸನಬದ್ಧವಾಗಿ ಅಳವಡಿಸಲಾರಂಭಿಸುವ ವೇಳೆಗೆ, ತಳಸಮಾಜದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುವುದೇ ದುಸ್ತರವಾದ ಕಠಿಣ ಪರಿಸ್ಥಿತಿಗೆ ಒಳಗಾದ ಅಸಂಖ್ಯಾತ ಗ್ರಾಮೀಣ ಬಡಜನತೆಯ ಕೂಗು ಮುಗಿಲುಮುಟ್ಟಿತ್ತು.
ಈ ಕೂಗಿಗೆ ಸ್ಪಂದಿಸಿದ ʼ ಆಂದೋಲನ ಜೀವಿಗಳ ʼ ಹಕ್ಕೊತ್ತಾಯಗಳು ಮತ್ತು ತಾತ್ವಿಕ ಪ್ರತಿಪಾದನೆಗಳು ಸಾಕಾರಗೊಂಡಿದ್ದು, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ. ಈ ಹಕ್ಕೊತ್ತಾಯಗಳಿಗೆ, ಜನಾಗ್ರಹಗಳಿಗೆ ಕಾರಣವಾಗಿದ್ದು ಜಾಗತೀಕರಣದ ದುಷ್ಪರಿಣಾಮಗಳು. ಅಭಿವೃದ್ಧಿ ಮಾದರಿಯ ಕಲ್ಪನೆಯನ್ನೇ ಪಲ್ಲಟಗೊಳಿಸಿದ ನವ ಉದಾರವಾದಿ ಆರ್ಥಿಕ ಚಿಂತನೆಗೆ ಪೂರಕವಾಗಿ ಸರ್ಕಾರಗಳು ಅನುಸರಿಸಿದ ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ (Market Economy) ನಗರೀಕರಣ, ನಗರಗಳ ಆಧುನಿಕೀಕರಣ ಮತ್ತು ಇದಕ್ಕೆ ಪೂರಕವಾದ ರಸ್ತೆ ನಿರ್ಮಾಣ , ಹೆದ್ದಾರಿಗಳು, ಮೇಲ್ಸೇತುವೆಗಳು ಹಾಗು ಡಬಲ್ ರೋಡ್ ಕಲ್ಪನೆಯನ್ನು ದಾಟಿ ದಶಪಥದವರೆಗೆ ವಿಸ್ತರಿಸಿದ ಸಂಪರ್ಕ ರಸ್ತೆಗಳು ಪ್ರಧಾನ ಆದ್ಯತೆಗಳಾದವು. ನಗರೀಕರಣ ಪ್ರಕ್ರಿಯೆಯಲ್ಲೂ ಆಂತರಿಕವಾಗಿ ಬೃಹತ್ ಕಟ್ಟಡ ಸಮುಚ್ಛಯಗಳು ಹಾಗೂ ಐಷಾರಾಮಿ ವಸತಿ ಸಮುಚ್ಛಯಗಳು ಪ್ರಾಮುಖ್ಯತೆ ಪಡೆದವು.
ಈ ಬದಲಾವಣೆಗೆ ಬಲಿಯಾಗಿದ್ದು ನಗರಗಳ ಸಮೀಪದಲ್ಲಿದ್ದ ಕೃಷಿ ಭೂಮಿ, ಇದನ್ನೇ ಅವಲಂಬಿಸಿದ್ದ ಗ್ರಾಮಗಳು ಮತ್ತು ಗ್ರಾಮೀಣ ಅರ್ಥವ್ಯವಸ್ಥೆ (Rural Economy). ನಗರೀಕರಣ ಮತ್ತು ಅದಕ್ಕೆ ತಕ್ಕಂತಹ ಮೂಲ ಸೌಕರ್ಯಗಳ ಅಭಿವೃದ್ಧಿಯೇ ಸರ್ಕಾರಗಳ ಆದ್ಯತೆಯಾಗಿಯೂ ಪರಿಣಮಿಸಿತ್ತು. ಈ ನಗರೀಕರಣಕ್ಕೆ ಅಗತ್ಯವಾದ ಶ್ರಮಶಕ್ತಿಗಾಗಿ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಪ್ರಮಾಣವೂ ಹೆಚ್ಚಾಗಿದ್ದು, ಅತ್ತ ಗ್ರಾಮೀಣ ಉದ್ಯೋಗಾವಕಾಶಗಳು ಕುಸಿಯತೊಡಗಿದವು. ವಲಸೆ ಹೋಗಲು ಸಾಧ್ಯವಾಗದ ಕುಟುಂಬಗಳು ನಿರ್ಗತಿಕತೆಯೆಡೆಗೆ ಸಾಗುತ್ತಿದ್ದುದನ್ನು ತಡೆಗಟ್ಟುವ ಒಂದು ಯೋಜನೆ ಅತ್ಯವಶ್ಯವಾಗಿತ್ತು. ಗ್ರಾಮೀಣ ವಲಸೆಯನ್ನು ತಡೆಗಟ್ಟಲು ತಮ್ಮ ಸ್ವಗ್ರಾಮಗಳಲ್ಲೇ ದುಡಿದು ಬದುಕು ಕಟ್ಟಿಕೊಳ್ಳುವ ಲಕ್ಷಾಂತರ ಕುಟುಂಬಗಳಿಗೆ ಆಶ್ರಯ ಮತ್ತು ಆದಾಯ ನಿಡುವಂತಹ ಒಂದು ಯೋಜನೆ ಅತ್ಯವಶ್ಯವಾಗಿತ್ತು.
ಶಾಸನವಾಗಿ ಉದ್ಯೋಗ ಖಾತರಿ
ಈ ಹಿನ್ನೆಲೆಯಲ್ಲೇ 1980ರ ದಶಕದಿಂದಲೂ ಗ್ರಾಮೀಣ ಆರ್ಥಿಕ ಅಭಿವೃದ್ಧಿಗಾಗಿ, ಗ್ರಾಮಗಳ ಸ್ವಾವಲಂಬಿ ಬೆಳವಣಿಗೆಗಾಗಿ ತಮ್ಮದೇ ಆದ ತಾತ್ವಿಕ ಸಂಘಟನಾತ್ಮಕ ಹೋರಾಟಗಳಲ್ಲಿ ತೊಡಗಿದ್ದವರನ್ನು ಒಳಗೊಂಡ ಸಮಿತಿಯೊಂದನ್ನು 2004-05ರಲ್ಲಿ ಯುಪಿಎ ಸರ್ಕಾರ ರಚಿಸಿತ್ತು. ಈ ಸಮಿತಿಯಲ್ಲಿ ನಾಗರಿಕ ಸಮಾಜದ (Civil Society) ಪ್ರಗತಿಪರ ನಾಯಕರನ್ನು, ನಿವೃತ್ತ ನಾಗರಿಕ ಅಧಿಕಾರಿಗಳನ್ನು ಹಾಗೂ ಬುದ್ಧಿಜೀವಿಗಳನ್ನು ಒಳಗೊಳ್ಳಲಾಗಿತ್ತು. ಸೋನಿಯಾ ಗಾಂಧಿ ನೇತೃತ್ವದಲ್ಲಿ ರಚಿಸಲಾದ ರಾಷ್ಟ್ರೀಯ ಸಲಹಾ ಸಮಿತಿ (NAC) ಗ್ರಾಮೀಣ ಆರ್ಥಿಕತೆಯ ಸಮಸ್ಯೆಗಳು ಮತ್ತು ಬಡತನ ನಿವಾರಣೆಯ ಬಗ್ಗೆ ನಿರ್ದಿಷ್ಟ ಯೋಜನೆಗಳನ್ನು ಸೂಚಿಸುವ ಉದ್ದೇಶ ಹೊಂದಿತ್ತು. ಆದರೆ ಈ ಸಮಿತಿಯ ಸದಸ್ಯರಾಗಿದ್ದ ಅರುಣಾ ರಾಯ್ ಮತ್ತು ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ಈ ಸಮಿತಿಗೆ ಮಾಹಿತಿ ಹಕ್ಕು (Right to Information) ಮತ್ತು ಉದ್ಯೋಗ ಖಾತರಿಯ ಬಗ್ಗೆ ವಿಸ್ತಾರವಾದ ಯೋಜನೆಯೊಂದನ್ನು ಸಲ್ಲಿಸಿದ್ದರು.
ಈ ಸಮಿತಿಯಲ್ಲಿ ನಡೆದ ಚರ್ಚೆಗಳಿಂದ ಮೂಡಿ ಬಂದಿದ್ದು MNREGA ಯೋಜನೆಯ ಕಲ್ಪನೆ. ಆದರೆ ತದನಂತರದಲ್ಲಿ ಸಮಿತಿಯ ಶಿಫಾರಸುಗಳನ್ನು ಯಥಾವತ್ತಾಗಿ ಪರಿಗಣಿಸಲು ಸರ್ಕಾರ ಮುಂದಾಗಲಿಲ್ಲ. ಉದ್ಯೋಗ ಖಾತರಿಯನ್ನು ಮೂರು ವರ್ಷಗಳ ಒಳಗಾಗಿ, ಇಡೀ ದೇಶಕ್ಕೆ ಅನ್ವಯಿಸುವ ಸಲಹೆಯನ್ನು ಕೈಬಿಡಲಾಯಿತು. ಸರ್ಕಾರಕ್ಕೆ ಈ ಕಾಯ್ದೆಯ ಅಗತ್ಯತೆಗಳಿಂದ ಹೊರಬರುವ ಹಕ್ಕನ್ನು ನೀಡಲಾಯಿತು. ತನ್ಮೂಲಕ ಇದು ಗ್ಯಾರಂಟಿಯ ಲಕ್ಷಣವನ್ನು ಕಳೆದುಕೊಳ್ಳಬೇಕಾಯಿತು. ಯೋಜನೆಯ ಸಾರ್ವತ್ರಿಕ ಸ್ವರೂಪವನ್ನು ಬದಲಿಸಿ, ಕೇವಲ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ಅನ್ವಯಿಸಲು ನಿರ್ಧರಿಸಲಾಯಿತು. ಈ ದೌರ್ಬಲ್ಯಗಳನ್ನು ಹೊತ್ತ ಮಸೂದೆಯನ್ನು ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯ ಪರಾಮರ್ಶೆಗೆ ಸಲ್ಲಿಸಲಾಯಿತು.
ಏತನ್ಮಧ್ಯೆ ನಾಗರಿಕ ಸಮಾಜದ ಸಂಘಟನೆಗಳು ( Civil Society Organisations) ದೇಶಾದ್ಯಂತ ಪ್ರತಿಭಟನೆ, ಹೋರಾಟಗಳ ಮೂಲಕ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಲು ಆಗ್ರಹಿಸಲಾರಂಭಿಸಿದವು. “ ಆಹಾರದ ಹಕ್ಕಿಗಾಗಿ ಆಂದೋಲನ ” (Right to Food Campaign) ಹೆಸರಿನಲ್ಲಿ ಸಂಘಟಿತರಾದ ಸಾಮಾಜಿಕ ಕಾರ್ಯಕರ್ತರು ಮತ್ತು ಸಂಘಟನೆಗಳು ಹಕ್ಕು ಆಧಾರಿತ ಶಾಸನವನ್ನು ಜಾರಿಗೊಳಿಸಲು ಒತ್ತಾಯಿಸಲಾರಂಭಿಸಿದವು. ಈ ಹೋರಾಟಕ್ಕೆ ಮಣಿದ ಯುಪಿಎ ಸರ್ಕಾರ ಅಂತಿಮವಾಗಿ ಮಸೂದೆಯ ಮೂಲ ನಿಯಮಗಳನ್ನು ಉಳಿಸಿಕೊಂಡು, ನಾಗರಿಕ ಸಮಾಜದ ಸಲಹೆಗಳನ್ನು ಪರಿಗಣಿಸಿ, 2005ರಲ್ಲಿ ನರೇಗಾ ಕಾಯ್ದೆಯನ್ನು ಅಂಗೀಕರಿಸಿತ್ತು. ಈ ಸಂಘಟನಾತ್ಮಕ ಹೋರಾಟ ಮತ್ತು ಸಮಾಜ ಮುಖಿ ಚಿಂತನೆಗಳ ಫಲಶ್ರುತಿಯಾಗಿ ರೂಪುಗೊಂಡ ನರೇಗಾ ಯೋಜನೆಯ ಮಹತ್ವ ಮತ್ತು 20ಕ್ಕೂ ಹೆಚ್ಚು ವರ್ಷಗಳ ಕಾಲ ಅಭಿವೃದ್ಧಿ ಪಥದಲ್ಲಿ ಈ ರೀತಿ ವಲಸಿಗರಾಗಿ ರೂಪಾಂತರಗೊಂಡ ಶ್ರಮಿಕರ ಸಂಖ್ಯೆ ಮತ್ತು ಅವರ ಸಂಕಟ,ಸಂಕಷ್ಟಗಳು ಭಾರತದ ಅರಿವಿಗೆ ಬಂದಿದ್ದು ಕೋವಿದ್ -19 ಸಂದರ್ಭದಲ್ಲಿ.
ಶ್ರಮಿಕರ ವಲಸೆ ಮತ್ತು ಸಮಸ್ಯೆಗಳು
ಲಕ್ಷಾಂತರ ವಲಸೆ ಕಾರ್ಮಿಕರ ಮರುವಲಸೆ ಅರ್ಥಾತ್ ತವರು ಮುಖಿ ಪಯಣಕ್ಕೆ ಸಾಕ್ಷಿಯಾದ ಕೋವಿದ್ ಮತ್ತು ಲಾಕ್ಡೌನ್ ಮೊದಲಾದ ಉಪಕ್ರಮಗಳು, ಸಾವಿರಾರು ಕಾರ್ಮಿಕರ ಸಾವಿಗೂ ಕಾರಣವಾಗಿದ್ದು ದುರಂತ ಚರಿತ್ರೆಯಾಗಿ ಇಂದಿಗೂ ನಮ್ಮನ್ನು ಕಾಡುತ್ತಿದೆ. ವಿಡಂಬನೆ ಎಂದರೆ ಈ ವಲಸೆ ಕಾರ್ಮಿಕರ ನಿಖರ ಸಂಖ್ಯೆಯಾಗಲೀ, ಸಾವಿರಾರು ಕಿಲೋಮೀಟರ್ ದೂರದ ತವರಿಗೆ ಮರಳುವ ಹಾದಿಯಲ್ಲಿ ಜೀವತೆತ್ತ ಶ್ರಮಿಕರ ಸಂಖ್ಯೆಯಾಗಲೀ, ಯಾವ ಸರ್ಕಾರದ ಕಡತಗಳಲ್ಲೂ ದಾಖಲೆಯಾಗಿಲ್ಲ. ಇನ್ನೂ ದೊಡ್ಡ ವಿಪರ್ಯಾಸವೆಂದರೆ, ಈ ದುರಂತಗಳ ಮುನ್ನ ಅಥವಾ ತದನಂತರದಲ್ಲೂ ಸಹ ಯಾವುದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರಿಗಾಗಿ ಪ್ರತ್ಯೇಕ ನೀತಿಯನ್ನು ರೂಪಿಸಿಲ್ಲ.
ಹೀಗೆ ಮರುವಲಸೆ ಹೋದ ಶ್ರಮಜೀವಿಗಳಲ್ಲಿ ಕೌಶಲ ಇರುವ ಹೊಸ ತಲೆಮಾರಿನ ಶ್ರಮಿಕರನ್ನು ಮತ್ತು ಪರಿಣತಿ, ಅನುಭವ ಇರುವಂತಹ ಕಾರ್ಮಿಕರನ್ನು ಮರಳಿ ನಗರಗಳಿಗೆ ಸೆಳೆಯುವ ಒಂದು ಪ್ರಕ್ರಿಯೆಗೆ ಭಾರತ ತೆರೆದುಕೊಳ್ಳುತ್ತಿದೆ. ಡಿಜಿಟಲ್ ಯುಗದ ಬಂಡವಾಳಶಾಹಿ ಮಾರುಕಟ್ಟೆಯ ಉತ್ಪಾದನೆ, ಸೇವಾ ಸೌಲಭ್ಯಗಳು ಮತ್ತು ಉತ್ಪಾದಿತ ಸರಕು-ಸೇವೆಗಳ ಸಮರ್ಪಕ ನಿರ್ವಹಣೆ ಹಾಗೂ ವಿತರಣೆಗೆ, ಕೌಶಲಯುಕ್ತ ಕಾರ್ಮಿಕರ ಪಡೆ ಅತ್ಯವಶ್ಯವಾಗುತ್ತದೆ. ನಗರೀಕರಣಕ್ಕೊಳಗಾಗಿರುವ , ಪದವೀಧರರು ಮತ್ತು ಉನ್ನತ ಶಿಕ್ಷಣ ಪಡೆದವರು ಇಲ್ಲಿ ಮಾರುಕಟ್ಟೆ ದೃಷ್ಟಿಯಲ್ಲಿ ದುಬಾರಿಯಾಗಿ ಕಾಣುತ್ತಾರೆ. ಹಾಗಾಗಿ ಅಗ್ಗದ ದರ ಶ್ರಮವನ್ನು ಖರೀದಿಸುವ ನಿಟ್ಟಿನಲ್ಲಿ ಗ್ರಾಮೀಣ ಉದ್ಯೋಗವನ್ನು ಅವಲಂಬಿಸಿರುವ ಜನಸಂಖ್ಯೆಯ ಬಹುಭಾಗವನ್ನು ನಗರೀಕರಣಕ್ಕೊಳಪಡಿಸುವ ಆರ್ಥಿಕ ಮಾದರಿಯನ್ನು ಸರ್ಕಾರ ಅನುಸರಿಸುತ್ತದೆ. ಇದರ ಫಲವೇ ಕೇಂದ್ರ ಸರ್ಕಾರದ ನೂತನ ಯೋಜನೆ ಜಿ-ರಾಮ್-ಜಿ.
ಉದ್ಯೋಗ ಮತ್ತು ಖಾತರಿಯ ನಿರೀಕ್ಷೆ
ಕೇಂದ್ರ ಸರ್ಕಾರದ ಜಿ ರಾಮ್ ಜಿ ಯೋಜನೆ ಗ್ರಾಮೀಣ ಭಾರತದಲ್ಲಿ ಚಾಲ್ತಿಯಲ್ಲಿದ್ದ ಉದ್ಯೋಗ ಖಾತರಿಯ ಭರವಸೆಯನ್ನು ಕೊನೆಗೊಳಿಸಿ ಮತ್ತೊಮ್ಮೆ ನಿರ್ವಾತವನ್ನು ಸೃಷ್ಟಿಸುವ ಸಾಧ್ಯತೆಗಳಿವೆ. ಆಳ್ವಿಕೆಯ ಸ್ವರೂಪ ಏನೇ ಇದ್ದರೂ, ಚಾಲ್ತಿಯಲ್ಲಿರುವ ಯಾವುದೇ ಜನಪರ , ಸಮಾಜಮುಖಿ ಶಾಸನ ಮತ್ತು ಯೋಜನೆಗಳನ್ನು ಪರಿಷ್ಕರಿಸಿದಾಗ, ಅದು ಪರಿಸ್ಥಿತಿಯನ್ನು ಸುಧಾರಿಸುವ ಲಕ್ಷಣಗಳನ್ನು ಹೊಂದಿರಬೇಕು. ನರೇಗಾ ಯೋಜನೆಯನ್ನು 2014ರಲ್ಲಿ ಅಧಿಕಾರಕ್ಕೆ ಬಂದಾಗ, ಲೇವಡಿ ಮಾಡುತ್ತಿದ್ದ ಬಿಜೆಪಿ ಸರ್ಕಾರ, ಕೋವಿದ್ ಅನುಭವಕ್ಕೆ ನೇರ ಸಾಕ್ಷಿಯಾಗಿದ್ದರೂ ಸಹ, ಈ ಕ್ರಾಂತಿಕಾರಿ ಯೋಜನೆಯ ಮೂಲ ಸ್ವರೂಪವನ್ನೇ ಪರಿವರ್ತಿಸುವ ಹಿಮ್ಮುಖ ಚಲನೆಗೆ ಮುಂದಾಗಿದೆ. ವಿರೋಧ ಪಕ್ಷಗಳ ಪ್ರಬಲ ಪ್ರತಿರೋಧ, ಪ್ರತಿಭಟನೆಯ ಹೊರತಾಗಿಯೂ ಜಿ ರಾಮ್ ಜಿ ಮಸೂದೆಗೆ ಅನುಮೋದನೆ ದೊರೆತಿದ್ದು, ಡಿಜಿಟಲ್ ಭಾರತದ ಗ್ರಾಮೀಣ ಜನತೆಯ ಬದುಕನ್ನು ಮತ್ತೊಮ್ಮೆ ಪರಾವಲಂಬನೆಗೆ ದೂಡುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿದೆ.
ನರೇಗಾ ಯೋಜನೆ ಗ್ರಾಮ ಭಾರತವನ್ನು ಸ್ವರ್ಗ ಮಾಡಿತ್ತು ಎಂದು ಹೇಳಲಾಗುವುದಿಲ್ಲ. ಏಕೆಂದರೆ ಬಂಡವಾಳಶಾಹಿ ಆರ್ಥಿಕ ನೀತಿಗಳು ಬಡತನವನ್ನು ನಿವಾರಿಸುವ ದಿಕ್ಕಿನಲ್ಲಿ ಯೋಚಿಸುವುದಿಲ್ಲ. ಹೆಚ್ಚೆಂದರೆ ತಳಸಮಾಜದ ಅವಕಾಶವಂಚಿತ, ನಿರ್ಗತಿಕ ಬಡ ಜನತೆ ಸರ್ಕಾರಗಳ ವಿರುದ್ಧ ರೊಚ್ಚಿಗೇಳದ ಹಾಗೆ ನಿರ್ವಹಿಸಲು ಮಾರ್ಗೋಪಾಯಗಳನ್ನು ಅನುಸರಿಸುತ್ತವೆ. ನರೇಗಾ ಸಹ ಅಂತಹುದೇ ಒಂದು ಯೋಜನೆಯಾಗಿತ್ತು. ನರೇಗಾ ಜಾರಿಯಲ್ಲಿಲ್ಲದೆ ಹೋಗಿದ್ದರೆ ಕೋವಿದ್ ಸಂದರ್ಭದ ಭಾರತದಲ್ಲಿ ಗ್ರಾಮೀಣ ಬದುಕು ಎಂತಹ ದುಸ್ಥಿತಿಗೆ ತಲುಪಬಹುದಿತ್ತು ಎನ್ನುವುದು ಊಹಿಸಲಸಾಧ್ಯ. ಆದರೆ ವಿಕಸಿತವಾಗುವತ್ತ ಹೊರಟಿರುವ ಆತ್ಮನಿರ್ಭರ ಭಾರತದ ಕಲ್ಪನೆಗೆ ಈ ಜಟಿಲ ಪ್ರಶ್ನೆಗಳು ನಿಲುಕುವುದಿಲ್ಲ.
ಹಾಗಾಗಿಯೇ ಕೇಂದ್ರ ಸರ್ಕಾರ , ತನ್ನ ಎಂದಿನ ಶೈಲಿಯಲ್ಲಿ, ಯಾವುದೇ ರೀತಿಯ ಸಾರ್ವಜನಿಕ ಚರ್ಚೆ ಇಲ್ಲದೆ, ಪೂರ್ವಭಾವಿ ಸಮಾಲೋಚನೆ ಇಲ್ಲದೆ, ಯೋಜನೆಯ ಭಾಗಿದಾರರ (Stake holders) ಅಭಿಪ್ರಾಯ, ಅನಿಸಿಕೆ, ಆತಂಕಗಳಿಗೆ ಕಿವಿಗೊಡದೆ MNREGA – ನರೇಗಾ ಯೋಜನೆಯನ್ನು ಚರಿತ್ರೆಯ ಪುಟಗಳಿಗೆ ಸೇರಿಸಿದೆ. ಸರ್ಕಾರದ ಹೊಸ ಯೋಜನೆ ಗ್ರಾಮೀಣ ಭಾರತದ ಬಡಜನತೆಯ ಪಾಲಿಗೆ, ವಿಶೇಷವಾಗಿ ಮತ್ತೊಮ್ಮೆ ಅನಿಶ್ಚಿತತೆ ಎದುರಿಸುವ ಮಹಿಳಾ ದುಡಿಮೆಗಾರರಿಗೆ ಯಾವ ರೀತಿಯ ಸವಾಲುಗಳನ್ನು ಸೃಷ್ಟಿಸುತ್ತದೆ ಎನ್ನುವುದು ಯೋಚಿಸಬೇಕಾದ ವಿಚಾರ. ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸುವ ಪ್ರತಿಕ್ರಿಯಾತ್ಮಕ ಕಲ್ಪನೆಯನ್ನು ಮೀರಿ, ಈ ಬದಲಾವಣೆಯ ಪರಿಣಾಮಗಳನ್ನು ಜನರಿಗೆ ಮನದಟ್ಟು ಮಾಡುವುದು ಪ್ರಗತಿಪರ-ಎಡಪಂಥೀಯ ಚಿಂತನಾವಾಹಿನಿಗಳ ಆದ್ಯತೆಯಾಗಬೇಕಿದೆ.
ಮುಂದುವರೆಯುತ್ತದೆ ,,,,
( ನರೇಗಾ ಮತ್ತು ಜಿ ರಾಮ್ ಜಿ – ವ್ಯತ್ಯಾಸ ಮತ್ತು ಭವಿಷ್ಯದ ಆತಂಕಗಳು ಮುಂದಿನ ಭಾಗದಲ್ಲಿ)
-೦-೦-೦-೦-
ಗ್ರಾಮಭಾರತದ ಜೀವನಾಡಿಗೆ ಅರಿವಳಿಕೆ ಮದ್ದು
ತಳಸಮಾಜದ ನಾಡಿಮಿಡಿತವನ್ನು ಗ್ರಹಿಸದಿದ್ದರೆ ಆಳ್ವಿಕೆಗಳು ಸಾಮಾನ್ಯರಿಗೆ ವಿಮುಖವಾಗುತ್ತವೆ
ನಾ ದಿವಾಕರ
ಭಾಗ 2
(ಉದ್ಯೋಗ ಖಾತರಿಯೂ ಮಾರುಕಟ್ಟೆಯ ತಂತ್ರವೂ ಲೇಖನದ ಮುಂದುವರೆದ ಭಾಗ)
ಸುಪ್ರೀಂಕೋರ್ಟ್ ಬಿಜೆಪಿ ಸರ್ಕಾರಗಳ ಬುಲ್ಡೋಜರ್ ನ್ಯಾಯವನ್ನು ಸಂವಿಧಾನಬಾಹಿರ ಎಂದು ವ್ಯಾಖ್ಯಾನಿಸಿದ್ದರೂ ಇಂದಿಗೂ ಕಾಂಗ್ರೆಸ್ ಆಳ್ವಿಕೆಯ ಕರ್ನಾಟಕದಲ್ಲೂ ಬಡಜನರ ಮನೆಗಳು ಬುಲ್ಡೋಜರ್ಗೆ ಬಲಿಯಾಗುತ್ತಿವೆ. ಇದೇ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೇಂದ್ರ ಸರ್ಕಾರದ ʼ ಜಿ ರಾಮ್ ಜಿ ʼ ಕಾಯ್ದೆಯನ್ನು ಕುರಿತು ವ್ಯಾಖ್ಯಾನಿಸುತ್ತಾ, ನರೇಗಾ ಯೋಜನೆಯ ಮೇಲೆ ಬುಲ್ಡೋಜರ್ ಹತ್ತಿಸಲಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶ ಬಿಜೆಪಿ ಸರ್ಕಾರದ ನೂತನ ಅವಿಷ್ಕಾರವಾದ ಈ ʼ ಬುಲ್ಡೋಜರ್ ನ್ಯಾಯ ʼದ ಕಲ್ಪನೆ ಈಗ ಸ್ಥಾವರಗಳನ್ನು ದಾಟಿ, ಭಾರತದ ತಳಸಮಾಜದ ಅಭಾಗ್ಯರಿಗೆ ನೆರವಾಗುವ ಜನಮುಖಿ ಯೋಜನೆಗಳನ್ನು ಆವರಿಸಿದೆ. ಈ ದೃಷ್ಟಿಯಿಂದ ಸೋನಿಯಾ ಅವರ ಅಭಿಪ್ರಾಯವನ್ನು ಒಪ್ಪಬಹುದು.
ಸ್ವತಂತ್ರ ಭಾರತದ ಅತ್ಯಂತ ಜನಪ್ರಿಯ ಹಾಗೂ ತಳಸಮಾಜಮುಖಿ ಯೋಜನೆ ಎಂದೇ ವಿಶ್ವಖ್ಯಾತಿ ಪಡೆದಿದ್ದ ನರೇಗಾ (MNREGA) ಈಗ ಚರಿತ್ರೆಯ ಪುಟಗಳನ್ನು ಸೇರಲಿದ್ದು, ತನ್ನ ಕಾರ್ಪೋರೇಟ್ ಮಾರುಕಟ್ಟೆ ನೀತಿಗಳಿಗನುಗುಣವಾಗಿ ಕೇಂದ್ರ ಎನ್ಡಿಎ ಸರ್ಕಾರ, ಇದರ ಜಾಗದಲ್ಲಿ “ ವಿಕಸಿತ ಭಾರತ ಜಿ-ರಾಮ್-ಜಿ “ ಯೋಜನೆಯನ್ನು ರೂಪಿಸಿದ್ದು, ಮಸೂದೆಯನ್ನು ಲೋಕಸಭೆಯಲ್ಲಿ ಅನುಮೋದಿಸಲಾಗಿದ್ದು, ರಾಷ್ಟ್ರಪತಿಗಳ ಅಂಕಿತವನ್ನೂ ಗಳಿಸಿದೆ. ಯುಪಿಎ ಸರ್ಕಾರದ ಬಹುತೇಕ ಜನಪರ ಯೋಜನೆಗಳನ್ನೇ ಮರುನಾಮಕರಣ ಮಾಡಿ ಜಾರಿಗೊಳಿಸುತ್ತಾ ಬಂದಿರುವ ನರೇಂದ್ರ ಮೋದಿ ಸರ್ಕಾರ , ಈ ಬಾರಿ ಚಾಲ್ತಿಯಲ್ಲಿದ್ದ ಯೋಜನೆಯ ಅಂತಃಸತ್ವವನ್ನೇ ಹೊಸಕಿಹಾಕಿ, ಮಾರುಕಟ್ಟೆ ಆರ್ಥಿಕತೆಗೆ ಪೂರಕವಾದ ಯೋಜನೆಯನ್ನು ರೂಪಿಸಿದೆ.
ನರೇಗಾ ಯೋಜನೆಯ ಉಗಮ
ಯೋಜನೆಯ ಹೆಸರುಗಳನ್ನು ಬದಿಗಿಟ್ಟು ನೋಡಿದಾಗ, ನರೇಗಾ ಯೋಜನೆ ಯುಪಿಎ ಸರ್ಕಾರದ ಸಾಧನೆ ಎನ್ನಬಹುದಾದರೂ, ಈ ಕಲ್ಪನೆಯ ವಾರಸುದಾರರು ರಾಜಕೀಯ ಪಕ್ಷಗಳಲ್ಲ ಎಂಬ ಸುಡು ವಾಸ್ತವವನ್ನೂ ಮನಗಾಣುವುದು ಮುಖ್ಯ. ಏಕೆಂದರೆ ʼ ನರೇಗಾ ʼ ಭಾರತದ ಸಾಮಾಜಿಕ ಚಳುವಳಿಗಳ, ಸಮಾಜಮುಖಿ ಚಿಂತಕರ, ಜಾಗತೀಕರಣ ವಿರೋಧಿ ವಿದ್ವಾಂಸರ, ಅರ್ಥಶಾಸ್ತ್ರಜ್ಞರ ಕನಸಿನ ಕೂಸು. ಭಾರತ 1980ರ ಆದಿಯಲ್ಲಿ ಜಾಗತೀಕರಣಕ್ಕೆ ಬಾಗಿಲು ತೆರೆದು, 1990ರಲ್ಲಿ ಸಮ್ಮತಿಸಿ, 21ನೆ ಶತಮಾನದಲ್ಲಿ ನವ ಉದಾರವಾದವನ್ನು ಅಧಿಕೃತವಾಗಿ, ಶಾಸನಬದ್ಧವಾಗಿ ಅಳವಡಿಸಲಾರಂಭಿಸುವ ವೇಳೆಗೆ, ತಳಸಮಾಜದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುವುದೇ ದುಸ್ತರವಾದ ಕಠಿಣ ಪರಿಸ್ಥಿತಿಗೆ ಒಳಗಾದ ಅಸಂಖ್ಯಾತ ಗ್ರಾಮೀಣ ಬಡಜನತೆಯ ಕೂಗು ಮುಗಿಲುಮುಟ್ಟಿತ್ತು.
ಈ ಕೂಗಿಗೆ ಸ್ಪಂದಿಸಿದ ʼ ಆಂದೋಲನ ಜೀವಿಗಳ ʼ ಹಕ್ಕೊತ್ತಾಯಗಳು ಮತ್ತು ತಾತ್ವಿಕ ಪ್ರತಿಪಾದನೆಗಳು ಸಾಕಾರಗೊಂಡಿದ್ದು, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ. ಈ ಹಕ್ಕೊತ್ತಾಯಗಳಿಗೆ, ಜನಾಗ್ರಹಗಳಿಗೆ ಕಾರಣವಾಗಿದ್ದು ಜಾಗತೀಕರಣದ ದುಷ್ಪರಿಣಾಮಗಳು. ಅಭಿವೃದ್ಧಿ ಮಾದರಿಯ ಕಲ್ಪನೆಯನ್ನೇ ಪಲ್ಲಟಗೊಳಿಸಿದ ನವ ಉದಾರವಾದಿ ಆರ್ಥಿಕ ಚಿಂತನೆಗೆ ಪೂರಕವಾಗಿ ಸರ್ಕಾರಗಳು ಅನುಸರಿಸಿದ ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ (Market Economy) ನಗರೀಕರಣ, ನಗರಗಳ ಆಧುನಿಕೀಕರಣ ಮತ್ತು ಇದಕ್ಕೆ ಪೂರಕವಾದ ರಸ್ತೆ ನಿರ್ಮಾಣ , ಹೆದ್ದಾರಿಗಳು, ಮೇಲ್ಸೇತುವೆಗಳು ಹಾಗು ಡಬಲ್ ರೋಡ್ ಕಲ್ಪನೆಯನ್ನು ದಾಟಿ ದಶಪಥದವರೆಗೆ ವಿಸ್ತರಿಸಿದ ಸಂಪರ್ಕ ರಸ್ತೆಗಳು ಪ್ರಧಾನ ಆದ್ಯತೆಗಳಾದವು. ನಗರೀಕರಣ ಪ್ರಕ್ರಿಯೆಯಲ್ಲೂ ಆಂತರಿಕವಾಗಿ ಬೃಹತ್ ಕಟ್ಟಡ ಸಮುಚ್ಛಯಗಳು ಹಾಗೂ ಐಷಾರಾಮಿ ವಸತಿ ಸಮುಚ್ಛಯಗಳು ಪ್ರಾಮುಖ್ಯತೆ ಪಡೆದವು.
ಈ ಬದಲಾವಣೆಗೆ ಬಲಿಯಾಗಿದ್ದು ನಗರಗಳ ಸಮೀಪದಲ್ಲಿದ್ದ ಕೃಷಿ ಭೂಮಿ, ಇದನ್ನೇ ಅವಲಂಬಿಸಿದ್ದ ಗ್ರಾಮಗಳು ಮತ್ತು ಗ್ರಾಮೀಣ ಅರ್ಥವ್ಯವಸ್ಥೆ (Rural Economy). ನಗರೀಕರಣ ಮತ್ತು ಅದಕ್ಕೆ ತಕ್ಕಂತಹ ಮೂಲ ಸೌಕರ್ಯಗಳ ಅಭಿವೃದ್ಧಿಯೇ ಸರ್ಕಾರಗಳ ಆದ್ಯತೆಯಾಗಿಯೂ ಪರಿಣಮಿಸಿತ್ತು. ಈ ನಗರೀಕರಣಕ್ಕೆ ಅಗತ್ಯವಾದ ಶ್ರಮಶಕ್ತಿಗಾಗಿ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಪ್ರಮಾಣವೂ ಹೆಚ್ಚಾಗಿದ್ದು, ಅತ್ತ ಗ್ರಾಮೀಣ ಉದ್ಯೋಗಾವಕಾಶಗಳು ಕುಸಿಯತೊಡಗಿದವು. ವಲಸೆ ಹೋಗಲು ಸಾಧ್ಯವಾಗದ ಕುಟುಂಬಗಳು ನಿರ್ಗತಿಕತೆಯೆಡೆಗೆ ಸಾಗುತ್ತಿದ್ದುದನ್ನು ತಡೆಗಟ್ಟುವ ಒಂದು ಯೋಜನೆ ಅತ್ಯವಶ್ಯವಾಗಿತ್ತು. ಗ್ರಾಮೀಣ ವಲಸೆಯನ್ನು ತಡೆಗಟ್ಟಲು ತಮ್ಮ ಸ್ವಗ್ರಾಮಗಳಲ್ಲೇ ದುಡಿದು ಬದುಕು ಕಟ್ಟಿಕೊಳ್ಳುವ ಲಕ್ಷಾಂತರ ಕುಟುಂಬಗಳಿಗೆ ಆಶ್ರಯ ಮತ್ತು ಆದಾಯ ನಿಡುವಂತಹ ಒಂದು ಯೋಜನೆ ಅತ್ಯವಶ್ಯವಾಗಿತ್ತು.
ಶಾಸನವಾಗಿ ಉದ್ಯೋಗ ಖಾತರಿ
ಈ ಹಿನ್ನೆಲೆಯಲ್ಲೇ 1980ರ ದಶಕದಿಂದಲೂ ಗ್ರಾಮೀಣ ಆರ್ಥಿಕ ಅಭಿವೃದ್ಧಿಗಾಗಿ, ಗ್ರಾಮಗಳ ಸ್ವಾವಲಂಬಿ ಬೆಳವಣಿಗೆಗಾಗಿ ತಮ್ಮದೇ ಆದ ತಾತ್ವಿಕ ಸಂಘಟನಾತ್ಮಕ ಹೋರಾಟಗಳಲ್ಲಿ ತೊಡಗಿದ್ದವರನ್ನು ಒಳಗೊಂಡ ಸಮಿತಿಯೊಂದನ್ನು 2004-05ರಲ್ಲಿ ಯುಪಿಎ ಸರ್ಕಾರ ರಚಿಸಿತ್ತು. ಈ ಸಮಿತಿಯಲ್ಲಿ ನಾಗರಿಕ ಸಮಾಜದ (Civil Society) ಪ್ರಗತಿಪರ ನಾಯಕರನ್ನು, ನಿವೃತ್ತ ನಾಗರಿಕ ಅಧಿಕಾರಿಗಳನ್ನು ಹಾಗೂ ಬುದ್ಧಿಜೀವಿಗಳನ್ನು ಒಳಗೊಳ್ಳಲಾಗಿತ್ತು. ಸೋನಿಯಾ ಗಾಂಧಿ ನೇತೃತ್ವದಲ್ಲಿ ರಚಿಸಲಾದ ರಾಷ್ಟ್ರೀಯ ಸಲಹಾ ಸಮಿತಿ (NAC) ಗ್ರಾಮೀಣ ಆರ್ಥಿಕತೆಯ ಸಮಸ್ಯೆಗಳು ಮತ್ತು ಬಡತನ ನಿವಾರಣೆಯ ಬಗ್ಗೆ ನಿರ್ದಿಷ್ಟ ಯೋಜನೆಗಳನ್ನು ಸೂಚಿಸುವ ಉದ್ದೇಶ ಹೊಂದಿತ್ತು. ಆದರೆ ಈ ಸಮಿತಿಯ ಸದಸ್ಯರಾಗಿದ್ದ ಅರುಣಾ ರಾಯ್ ಮತ್ತು ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ಈ ಸಮಿತಿಗೆ ಮಾಹಿತಿ ಹಕ್ಕು (Right to Information) ಮತ್ತು ಉದ್ಯೋಗ ಖಾತರಿಯ ಬಗ್ಗೆ ವಿಸ್ತಾರವಾದ ಯೋಜನೆಯೊಂದನ್ನು ಸಲ್ಲಿಸಿದ್ದರು.
ಈ ಸಮಿತಿಯಲ್ಲಿ ನಡೆದ ಚರ್ಚೆಗಳಿಂದ ಮೂಡಿ ಬಂದಿದ್ದು MNREGA ಯೋಜನೆಯ ಕಲ್ಪನೆ. ಆದರೆ ತದನಂತರದಲ್ಲಿ ಸಮಿತಿಯ ಶಿಫಾರಸುಗಳನ್ನು ಯಥಾವತ್ತಾಗಿ ಪರಿಗಣಿಸಲು ಸರ್ಕಾರ ಮುಂದಾಗಲಿಲ್ಲ. ಉದ್ಯೋಗ ಖಾತರಿಯನ್ನು ಮೂರು ವರ್ಷಗಳ ಒಳಗಾಗಿ, ಇಡೀ ದೇಶಕ್ಕೆ ಅನ್ವಯಿಸುವ ಸಲಹೆಯನ್ನು ಕೈಬಿಡಲಾಯಿತು. ಸರ್ಕಾರಕ್ಕೆ ಈ ಕಾಯ್ದೆಯ ಅಗತ್ಯತೆಗಳಿಂದ ಹೊರಬರುವ ಹಕ್ಕನ್ನು ನೀಡಲಾಯಿತು. ತನ್ಮೂಲಕ ಇದು ಗ್ಯಾರಂಟಿಯ ಲಕ್ಷಣವನ್ನು ಕಳೆದುಕೊಳ್ಳಬೇಕಾಯಿತು. ಯೋಜನೆಯ ಸಾರ್ವತ್ರಿಕ ಸ್ವರೂಪವನ್ನು ಬದಲಿಸಿ, ಕೇವಲ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ಅನ್ವಯಿಸಲು ನಿರ್ಧರಿಸಲಾಯಿತು. ಈ ದೌರ್ಬಲ್ಯಗಳನ್ನು ಹೊತ್ತ ಮಸೂದೆಯನ್ನು ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯ ಪರಾಮರ್ಶೆಗೆ ಸಲ್ಲಿಸಲಾಯಿತು.
ಏತನ್ಮಧ್ಯೆ ನಾಗರಿಕ ಸಮಾಜದ ಸಂಘಟನೆಗಳು ( Civil Society Organisations) ದೇಶಾದ್ಯಂತ ಪ್ರತಿಭಟನೆ, ಹೋರಾಟಗಳ ಮೂಲಕ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಲು ಆಗ್ರಹಿಸಲಾರಂಭಿಸಿದವು. “ ಆಹಾರದ ಹಕ್ಕಿಗಾಗಿ ಆಂದೋಲನ ” (Right to Food Campaign) ಹೆಸರಿನಲ್ಲಿ ಸಂಘಟಿತರಾದ ಸಾಮಾಜಿಕ ಕಾರ್ಯಕರ್ತರು ಮತ್ತು ಸಂಘಟನೆಗಳು ಹಕ್ಕು ಆಧಾರಿತ ಶಾಸನವನ್ನು ಜಾರಿಗೊಳಿಸಲು ಒತ್ತಾಯಿಸಲಾರಂಭಿಸಿದವು. ಈ ಹೋರಾಟಕ್ಕೆ ಮಣಿದ ಯುಪಿಎ ಸರ್ಕಾರ ಅಂತಿಮವಾಗಿ ಮಸೂದೆಯ ಮೂಲ ನಿಯಮಗಳನ್ನು ಉಳಿಸಿಕೊಂಡು, ನಾಗರಿಕ ಸಮಾಜದ ಸಲಹೆಗಳನ್ನು ಪರಿಗಣಿಸಿ, 2005ರಲ್ಲಿ ನರೇಗಾ ಕಾಯ್ದೆಯನ್ನು ಅಂಗೀಕರಿಸಿತ್ತು. ಈ ಸಂಘಟನಾತ್ಮಕ ಹೋರಾಟ ಮತ್ತು ಸಮಾಜ ಮುಖಿ ಚಿಂತನೆಗಳ ಫಲಶ್ರುತಿಯಾಗಿ ರೂಪುಗೊಂಡ ನರೇಗಾ ಯೋಜನೆಯ ಮಹತ್ವ ಮತ್ತು 20ಕ್ಕೂ ಹೆಚ್ಚು ವರ್ಷಗಳ ಕಾಲ ಅಭಿವೃದ್ಧಿ ಪಥದಲ್ಲಿ ಈ ರೀತಿ ವಲಸಿಗರಾಗಿ ರೂಪಾಂತರಗೊಂಡ ಶ್ರಮಿಕರ ಸಂಖ್ಯೆ ಮತ್ತು ಅವರ ಸಂಕಟ,ಸಂಕಷ್ಟಗಳು ಭಾರತದ ಅರಿವಿಗೆ ಬಂದಿದ್ದು ಕೋವಿದ್ -19 ಸಂದರ್ಭದಲ್ಲಿ.
ಶ್ರಮಿಕರ ವಲಸೆ ಮತ್ತು ಸಮಸ್ಯೆಗಳು
ಲಕ್ಷಾಂತರ ವಲಸೆ ಕಾರ್ಮಿಕರ ಮರುವಲಸೆ ಅರ್ಥಾತ್ ತವರು ಮುಖಿ ಪಯಣಕ್ಕೆ ಸಾಕ್ಷಿಯಾದ ಕೋವಿದ್ ಮತ್ತು ಲಾಕ್ಡೌನ್ ಮೊದಲಾದ ಉಪಕ್ರಮಗಳು, ಸಾವಿರಾರು ಕಾರ್ಮಿಕರ ಸಾವಿಗೂ ಕಾರಣವಾಗಿದ್ದು ದುರಂತ ಚರಿತ್ರೆಯಾಗಿ ಇಂದಿಗೂ ನಮ್ಮನ್ನು ಕಾಡುತ್ತಿದೆ. ವಿಡಂಬನೆ ಎಂದರೆ ಈ ವಲಸೆ ಕಾರ್ಮಿಕರ ನಿಖರ ಸಂಖ್ಯೆಯಾಗಲೀ, ಸಾವಿರಾರು ಕಿಲೋಮೀಟರ್ ದೂರದ ತವರಿಗೆ ಮರಳುವ ಹಾದಿಯಲ್ಲಿ ಜೀವತೆತ್ತ ಶ್ರಮಿಕರ ಸಂಖ್ಯೆಯಾಗಲೀ, ಯಾವ ಸರ್ಕಾರದ ಕಡತಗಳಲ್ಲೂ ದಾಖಲೆಯಾಗಿಲ್ಲ. ಇನ್ನೂ ದೊಡ್ಡ ವಿಪರ್ಯಾಸವೆಂದರೆ, ಈ ದುರಂತಗಳ ಮುನ್ನ ಅಥವಾ ತದನಂತರದಲ್ಲೂ ಸಹ ಯಾವುದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರಿಗಾಗಿ ಪ್ರತ್ಯೇಕ ನೀತಿಯನ್ನು ರೂಪಿಸಿಲ್ಲ.
ಹೀಗೆ ಮರುವಲಸೆ ಹೋದ ಶ್ರಮಜೀವಿಗಳಲ್ಲಿ ಕೌಶಲ ಇರುವ ಹೊಸ ತಲೆಮಾರಿನ ಶ್ರಮಿಕರನ್ನು ಮತ್ತು ಪರಿಣತಿ, ಅನುಭವ ಇರುವಂತಹ ಕಾರ್ಮಿಕರನ್ನು ಮರಳಿ ನಗರಗಳಿಗೆ ಸೆಳೆಯುವ ಒಂದು ಪ್ರಕ್ರಿಯೆಗೆ ಭಾರತ ತೆರೆದುಕೊಳ್ಳುತ್ತಿದೆ. ಡಿಜಿಟಲ್ ಯುಗದ ಬಂಡವಾಳಶಾಹಿ ಮಾರುಕಟ್ಟೆಯ ಉತ್ಪಾದನೆ, ಸೇವಾ ಸೌಲಭ್ಯಗಳು ಮತ್ತು ಉತ್ಪಾದಿತ ಸರಕು-ಸೇವೆಗಳ ಸಮರ್ಪಕ ನಿರ್ವಹಣೆ ಹಾಗೂ ವಿತರಣೆಗೆ, ಕೌಶಲಯುಕ್ತ ಕಾರ್ಮಿಕರ ಪಡೆ ಅತ್ಯವಶ್ಯವಾಗುತ್ತದೆ. ನಗರೀಕರಣಕ್ಕೊಳಗಾಗಿರುವ , ಪದವೀಧರರು ಮತ್ತು ಉನ್ನತ ಶಿಕ್ಷಣ ಪಡೆದವರು ಇಲ್ಲಿ ಮಾರುಕಟ್ಟೆ ದೃಷ್ಟಿಯಲ್ಲಿ ದುಬಾರಿಯಾಗಿ ಕಾಣುತ್ತಾರೆ. ಹಾಗಾಗಿ ಅಗ್ಗದ ದರ ಶ್ರಮವನ್ನು ಖರೀದಿಸುವ ನಿಟ್ಟಿನಲ್ಲಿ ಗ್ರಾಮೀಣ ಉದ್ಯೋಗವನ್ನು ಅವಲಂಬಿಸಿರುವ ಜನಸಂಖ್ಯೆಯ ಬಹುಭಾಗವನ್ನು ನಗರೀಕರಣಕ್ಕೊಳಪಡಿಸುವ ಆರ್ಥಿಕ ಮಾದರಿಯನ್ನು ಸರ್ಕಾರ ಅನುಸರಿಸುತ್ತದೆ. ಇದರ ಫಲವೇ ಕೇಂದ್ರ ಸರ್ಕಾರದ ನೂತನ ಯೋಜನೆ ಜಿ-ರಾಮ್-ಜಿ.
ಉದ್ಯೋಗ ಮತ್ತು ಖಾತರಿಯ ನಿರೀಕ್ಷೆ
ಕೇಂದ್ರ ಸರ್ಕಾರದ ಜಿ ರಾಮ್ ಜಿ ಯೋಜನೆ ಗ್ರಾಮೀಣ ಭಾರತದಲ್ಲಿ ಚಾಲ್ತಿಯಲ್ಲಿದ್ದ ಉದ್ಯೋಗ ಖಾತರಿಯ ಭರವಸೆಯನ್ನು ಕೊನೆಗೊಳಿಸಿ ಮತ್ತೊಮ್ಮೆ ನಿರ್ವಾತವನ್ನು ಸೃಷ್ಟಿಸುವ ಸಾಧ್ಯತೆಗಳಿವೆ. ಆಳ್ವಿಕೆಯ ಸ್ವರೂಪ ಏನೇ ಇದ್ದರೂ, ಚಾಲ್ತಿಯಲ್ಲಿರುವ ಯಾವುದೇ ಜನಪರ , ಸಮಾಜಮುಖಿ ಶಾಸನ ಮತ್ತು ಯೋಜನೆಗಳನ್ನು ಪರಿಷ್ಕರಿಸಿದಾಗ, ಅದು ಪರಿಸ್ಥಿತಿಯನ್ನು ಸುಧಾರಿಸುವ ಲಕ್ಷಣಗಳನ್ನು ಹೊಂದಿರಬೇಕು. ನರೇಗಾ ಯೋಜನೆಯನ್ನು 2014ರಲ್ಲಿ ಅಧಿಕಾರಕ್ಕೆ ಬಂದಾಗ, ಲೇವಡಿ ಮಾಡುತ್ತಿದ್ದ ಬಿಜೆಪಿ ಸರ್ಕಾರ, ಕೋವಿದ್ ಅನುಭವಕ್ಕೆ ನೇರ ಸಾಕ್ಷಿಯಾಗಿದ್ದರೂ ಸಹ, ಈ ಕ್ರಾಂತಿಕಾರಿ ಯೋಜನೆಯ ಮೂಲ ಸ್ವರೂಪವನ್ನೇ ಪರಿವರ್ತಿಸುವ ಹಿಮ್ಮುಖ ಚಲನೆಗೆ ಮುಂದಾಗಿದೆ. ವಿರೋಧ ಪಕ್ಷಗಳ ಪ್ರಬಲ ಪ್ರತಿರೋಧ, ಪ್ರತಿಭಟನೆಯ ಹೊರತಾಗಿಯೂ ಜಿ ರಾಮ್ ಜಿ ಮಸೂದೆಗೆ ಅನುಮೋದನೆ ದೊರೆತಿದ್ದು, ಡಿಜಿಟಲ್ ಭಾರತದ ಗ್ರಾಮೀಣ ಜನತೆಯ ಬದುಕನ್ನು ಮತ್ತೊಮ್ಮೆ ಪರಾವಲಂಬನೆಗೆ ದೂಡುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿದೆ.
ನರೇಗಾ ಯೋಜನೆ ಗ್ರಾಮ ಭಾರತವನ್ನು ಸ್ವರ್ಗ ಮಾಡಿತ್ತು ಎಂದು ಹೇಳಲಾಗುವುದಿಲ್ಲ. ಏಕೆಂದರೆ ಬಂಡವಾಳಶಾಹಿ ಆರ್ಥಿಕ ನೀತಿಗಳು ಬಡತನವನ್ನು ನಿವಾರಿಸುವ ದಿಕ್ಕಿನಲ್ಲಿ ಯೋಚಿಸುವುದಿಲ್ಲ. ಹೆಚ್ಚೆಂದರೆ ತಳಸಮಾಜದ ಅವಕಾಶವಂಚಿತ, ನಿರ್ಗತಿಕ ಬಡ ಜನತೆ ಸರ್ಕಾರಗಳ ವಿರುದ್ಧ ರೊಚ್ಚಿಗೇಳದ ಹಾಗೆ ನಿರ್ವಹಿಸಲು ಮಾರ್ಗೋಪಾಯಗಳನ್ನು ಅನುಸರಿಸುತ್ತವೆ. ನರೇಗಾ ಸಹ ಅಂತಹುದೇ ಒಂದು ಯೋಜನೆಯಾಗಿತ್ತು. ನರೇಗಾ ಜಾರಿಯಲ್ಲಿಲ್ಲದೆ ಹೋಗಿದ್ದರೆ ಕೋವಿದ್ ಸಂದರ್ಭದ ಭಾರತದಲ್ಲಿ ಗ್ರಾಮೀಣ ಬದುಕು ಎಂತಹ ದುಸ್ಥಿತಿಗೆ ತಲುಪಬಹುದಿತ್ತು ಎನ್ನುವುದು ಊಹಿಸಲಸಾಧ್ಯ. ಆದರೆ ವಿಕಸಿತವಾಗುವತ್ತ ಹೊರಟಿರುವ ಆತ್ಮನಿರ್ಭರ ಭಾರತದ ಕಲ್ಪನೆಗೆ ಈ ಜಟಿಲ ಪ್ರಶ್ನೆಗಳು ನಿಲುಕುವುದಿಲ್ಲ.
ಹಾಗಾಗಿಯೇ ಕೇಂದ್ರ ಸರ್ಕಾರ , ತನ್ನ ಎಂದಿನ ಶೈಲಿಯಲ್ಲಿ, ಯಾವುದೇ ರೀತಿಯ ಸಾರ್ವಜನಿಕ ಚರ್ಚೆ ಇಲ್ಲದೆ, ಪೂರ್ವಭಾವಿ ಸಮಾಲೋಚನೆ ಇಲ್ಲದೆ, ಯೋಜನೆಯ ಭಾಗಿದಾರರ (Stake holders) ಅಭಿಪ್ರಾಯ, ಅನಿಸಿಕೆ, ಆತಂಕಗಳಿಗೆ ಕಿವಿಗೊಡದೆ MNREGA – ನರೇಗಾ ಯೋಜನೆಯನ್ನು ಚರಿತ್ರೆಯ ಪುಟಗಳಿಗೆ ಸೇರಿಸಿದೆ. ಸರ್ಕಾರದ ಹೊಸ ಯೋಜನೆ ಗ್ರಾಮೀಣ ಭಾರತದ ಬಡಜನತೆಯ ಪಾಲಿಗೆ, ವಿಶೇಷವಾಗಿ ಮತ್ತೊಮ್ಮೆ ಅನಿಶ್ಚಿತತೆ ಎದುರಿಸುವ ಮಹಿಳಾ ದುಡಿಮೆಗಾರರಿಗೆ ಯಾವ ರೀತಿಯ ಸವಾಲುಗಳನ್ನು ಸೃಷ್ಟಿಸುತ್ತದೆ ಎನ್ನುವುದು ಯೋಚಿಸಬೇಕಾದ ವಿಚಾರ. ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸುವ ಪ್ರತಿಕ್ರಿಯಾತ್ಮಕ ಕಲ್ಪನೆಯನ್ನು ಮೀರಿ, ಈ ಬದಲಾವಣೆಯ ಪರಿಣಾಮಗಳನ್ನು ಜನರಿಗೆ ಮನದಟ್ಟು ಮಾಡುವುದು ಪ್ರಗತಿಪರ-ಎಡಪಂಥೀಯ ಚಿಂತನಾವಾಹಿನಿಗಳ ಆದ್ಯತೆಯಾಗಬೇಕಿದೆ.
ಮುಂದುವರೆಯುತ್ತದೆ ,,,,
( ನರೇಗಾ ಮತ್ತು ಜಿ ರಾಮ್ ಜಿ – ವ್ಯತ್ಯಾಸ ಮತ್ತು ಭವಿಷ್ಯದ ಆತಂಕಗಳು ಮುಂದಿನ ಭಾಗದಲ್ಲಿ)
-೦-೦-೦-೦-
bevarahani1