ಜಾಲಪ್ಪ ನಿಧನದಿಂದ ತುಂಬಲಾರದ ನಷ್ಟ ಗಣ್ಯರ ಸಂತಾಪ

r-l-jalappa-death-condolence

ಜಾಲಪ್ಪ ನಿಧನದಿಂದ ತುಂಬಲಾರದ ನಷ್ಟ ಗಣ್ಯರ ಸಂತಾಪ

ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ. ಜಿ. ಪರಮೇಶ್ವರ್  ಸಂತಾಪ


ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವರಾದ ಆರ್.ಎಲ್. ಜಾಲಪ್ಪ ಅವರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ದೀನ, ದಲಿತರು, ಹಿಂದುಳಿದ ವರ್ಗದವರ ಕಲ್ಯಾಣಕ್ಕೆ ಅವರು ಶ್ರಮಿಸಿದ್ದರು. ಕೃಷಿ, ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅವರ ಸೇವೆ ಅನನ್ಯವಾಗಿತ್ತು. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಕುಟುಂಬ ಸದಸ್ಯರು, ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ. ಜಿ. ಪರಮೇಶ್ವರ್ ಕೋರಿದ್ದಾರೆ.

ಜಾಲಪ್ಪ ನಿಧನದಿಂದ ತುಂಬಲಾರದ ನಷ್ಟ
ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕಂಬನಿ

ಕೋಲಾರ:- ಮಾಜಿ ಕೇಂದ್ರ ಸಚಿವ ಹಿರಿಯ ಮುತ್ಸದ್ದಿ ನೇರನುಡಿಯ ಆರ್.ಎಲ್.ಜಾಲಪ್ಪ ಅವರ ನಿಧನದಿಂದ ರಾಜ್ಯ ಹಾಗೂ ಜಿಲ್ಲೆಗೆ ಅಪಾರ ನಷ್ಟವಾಗಿದ್ದ, ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕಂಬನಿ ಮಿಡಿದಿದ್ದಾರೆ.


ಈ ಕುರಿತು ಮಾತನಾಡಿರುವ ಅವರು, ಜಾಲಪ್ಪ ಅವರು ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸುವ ಮೂಲಕ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಅವರ ಪ್ರಯತ್ನ ಅಪಾರವಾಗಿದೆ ಎಂದು ತಿಳಿಸಿದ್ದಾರೆ. 


ಅವರು ಸ್ಥಾಪಿಸಿರುವ ಆಸ್ಪತ್ರೆ ಇಂದು ಜಿಲ್ಲೆ ಮಾತ್ರವಲ್ಲ ಪಕ್ಕದ ಗಡಿ ರಾಜ್ಯಗಳ ರೋಗಿಗಳಿಗೂ ಸೇವೆ ನೀಡಿದ್ದಾರೆ. ಅವರ ಜನಪರ ಕಾಳಜಿ ಇಂದು ಸಮಾಜಕ್ಕೆ ಮಾದರಿಯಾಗಿದ್ದು, ಅವರ ನಿಧನ ತುಂಬಲಾರದ ನಷ್ಟ ಎಂದು ತಿಳಿಸಿದ್ದಾರೆ.


ಗೃಹ,ಸಹಕಾರ,ಕಂದಾಯ ಸಚಿವರಾಗಿ ಅವರು ಮಾಡಿರುವ ಸೇವೆ ಮರೆಯಲಾಗದು, ಸಹಕಾರಿ ಸಚಿವರಾಗಿದ್ದಾಗ ಬಡ್ಡಿ ಮನ್ನಾ ಮೂಲಕ ಬಡ ರೈತರ ನೆರವಿಗೆ ನಿಂತವರು ಅವರು ಎಂದು ತಿಳಿಸಿದ್ದಾರೆ. 
ನೇರ ನಿಷ್ಠೂರ ನುಡಿಯ ಜಾಲಪ್ಪ ನುಡಿದಂತೆ ನಡೆದವರು, ಅವರ ಹಠ,ಛಲ ಸಮಾಜದ ಏಳ್ಗೆಗಾಗಿ ಮಾತ್ರ ಅವರ ಮಾರ್ಗದರ್ಶನವನ್ನು ನಾವು ಸದಾ ಬಯಸಿದ್ದೆವು ಅಂತಹ ದೀಮಂತ ನಾಯಕನನ್ನು ಕಳೆದುಕೊಂಡು ಜಿಲ್ಲೆಯ ರಾಜಕಾರಣ ಬಡವಾಗಿದೆ ಎಂದು ದುಃಖಿಸಿದ್ದಾರೆ.

ಜಾಲಪ್ಪ ನಿಧನಕ್ಕೆ ಅನಿಲ್‌ಕುಮಾರ್ ಕಂಬನಿ

ಕೋಲಾರ:- ಮಾಜಿ ಸಚಿವ ದೀಮಂತ ರಾಜಕಾರಣಿ, ಬಡವರ ಪಾಲಿನ ಆಶಾಕಿರಣವಾಗಿದ್ದ ಆರ್.ಎಲ್.ಜಾಲಪ್ಪ ಅವರ ನಿಧನದಿಂದ ಜಿಲ್ಲೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ದುಃಖಿಸಿದ್ದಾರೆ.


ಈ ಕುರಿತು ಮಾತನಾಡಿರುವ ಅವರು, ವೈದ್ಯಕೀಯ ಕಾಲೇಜು ಆಸ್ಪತ್ರೆ ಮೂಲಕ ಲಕ್ಷಾಂತರ ರೋಗಿಗಳ ಜೀವ ಉಳಿಸಿರುವ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.


ಜಾಲಪ್ಪ ಅವರ ನಿಧನಕ್ಕೆ ಸುದರ್ಶನ್ ಸಂತಾಪ
ಅಹಿಂದ ಅಭಿವೃದ್ದಿಗೆ ನೀಡಿದ ಕೊಡುಗೆ ಸ್ಮರಣೆ

ಕೋಲಾರ:- ರಾಜ್ಯದ ಹಿರಿಯ ರಾಜಕಾರಣಿ,ದೀರ್ಘಕಾಲದ ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡಿದ ಹಾಗೂ ಅಹಿಂದ ವರ್ಗಗಳ ಅಭಿವೃದ್ದಿಗೆ ದುಡಿದ ಮಹಾನ್ ಚೇತನ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ನಿಧನದಿಂದ ತುಂಬಲಾರದ ನಷ್ಟವುಂಟಾಗಿದೆ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ದುಃಖಿಸಿದ್ದಾರೆ.


ಜಾಲಪ್ಪ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ವಿಧಾನಪರಿಷತ್ ಸದಸ್ಯರಾಗಿ, ಶಾಸಕರಾಗಿ ವಿವಿಧ ಇಲಾಖೆಗಳ ಸಚಿವರಾಗಿ, 4 ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಅವರು ಮಾಡಿರುವ ಸೇವೆ ಸ್ಮರಣೀಯ ಎಂದು ತಿಳಿಸಿದ್ದಾರೆ.


ಹೆಗಡೆ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದಾಗ ಬಡ್ಡಿಮನ್ನಾ ಯೋಜನೆ ತಂದ ಜಾಲಪ್ಪ ಅವರ ರೈತಪರ ಕಾಳಜಿ,  ಅಹಿಂದ ವರ್ಗಗಳನ್ನು ಸಂಘಟಿಸಿ, ಕೋಲಾರದಲ್ಲಿ ಸಮ್ಮೇಳನ ಮಾಡಿ ಮಾಜಿ ಮುಖ್ಯಮಂತ್ರಿಗಳಾದ ಧರ್ಮಸಿಂಗ್, ಸಿದ್ದರಾಮಯ್ಯರಿಂದ ಉದ್ಘಾಟನೆ ಮಾಡಿಸಿ ಈ ಸಮುದಾಯಗಳಲ್ಲಿ ಚೈತನ್ಯ ತುಂಬಿದವರು ಇವರ ಅಗಲಿಕೆಯಿಂದ ರಾಜಕೀಯ ಬದುಕಿನಲ್ಲಿ ಒಂದು ರೀತಿಯ  ಅನಾಥಪ್ರಜ್ಞೆ ಕಾಡುವಂತಾಗಿದೆ ಎಂದು ತಿಳಿಸಿದ್ದಾರೆ.


ಪಿಎಲ್‌ಡಿ ಬ್ಯಾಂಕ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಸಹಕಾರ ರಂಗಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ, ಅಹಿಂದ ವರ್ಗಗಳಿಗೆ ಅವರು ಸ್ಪೂರ್ತಿಯಾಗಿದ್ದರು ಎಂದು ತಿಳಿಸಿರುವ ಅವರು, ಕಳೆದ ಹಲವು ವರ್ಷಗಳಿಂದ ಸಕ್ರಿಯ ರಾಜಕೀಯದಿಂದ ದೂರವಿದ್ದರೂ, ಅವರ ಮಾರ್ಗದರ್ಶನವನ್ನು ಅನೇಕರು ಪಡೆಯುತ್ತಿದ್ದರು ಎಂದು ತಿಳಿಸಿದ್ದಾರೆ. 


ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಮೂಲಕ ಇಲ್ಲಿನ ಅಭಿವೃದ್ದಿಗೆ ನೀಡಿರುವ ಕೊಡುಗೆ ಅಪಾರ,ವಿಶೇಷ ಸಾಧಕರಾಗಿ ವಿವಿಧ ಶಿಕ್ಷಣ,ಆರೋಗ್ಯ ಕ್ಷೇತ್ರಕ್ಕೆ ನೀಡಿರು ಕೊಡುಗೆ ಮರೆಯಲಾಗದು. ದೂರದೃಷ್ಟಿಯ ಓರ್ವ ಅತ್ಯುತ್ತಮ ನಾಯಕನನ್ನು ಕಳೆದುಕೊಂಡAತಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. 


ರ್.ಎಲ್ ಜಾಲಪ್ಪರನ್ನು ನೆನೆದ ಗಡಿ ಭಾಗದ ಜನತೆ

ಕೊಡಿಗೇನಹಳ್ಳಿ: ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಕಡಗತ್ತೂರು ಗ್ರಾಪಂ ವ್ಯಾಪ್ತಿಯ ಯಾಕರ‍್ಲಹಳ್ಳಿ ಕೆರೆಯು ಸುಮಾರು 400 ಏಕರೆ ವ್ಯಾಪ್ತಿಯಲ್ಲಿರುವ ಕೆರೆ ಈ ಬಾರಿ ಭರ್ತಿಯಾಗಿ ಕೋಡಿ ಬಿದಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ಸೀಮಾಂದ್ರ ಗಡಿ ಭಾಗದಲ್ಲಿರುವ ಯಾಕರ‍್ಲಹಳ್ಳಿ ಗ್ರಾಮದ ದೊಡ್ಡ ಕೆರೆ ಸುಮಾರು 35 ವರ್ಷಗಳ ನಂತರ ತುಂಬಿ ಕೋಡಿ ಹರಿದಿದೆ. ಈ ಹಿಂದೆ ಮಧುಗಿರಿ ತಾಲೂಕು ಚಿಕ್ಕಬಳ್ಳಾಪುರ ಲೋಕಸಭಾಕ್ಷೇತ್ರಕ್ಕೆ ಸೇರಿದ್ದಾಗ ಅಂದಿನ ಸಚಿವರಾಗಿದ್ದ ಆರ್.ಎಲ್ ಜಾಲಪ್ಪನವರು ಗೌರಿಬಿದನೂರಿನ ಬಳಿ ಕಿಂಡಿ ಅಣೆಕಟ್ಟು ನಿರ್ಮಿಸಿ ಈ ಗಡಿ ಭಾಗದ ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಿದ ಫಲವಾಗಿ ಇಂದು ಈ ಭಾಗದ ತಿಂಗಳೂರು, ಯಾಕರ‍್ಲಹಳ್ಳಿ, ಕಡಗತ್ತೂರು ಕೆರೆಗಳಿಗೆ ನೀರು ಹರಿಯುತ್ತಿದೆ.

ಗೌರಿಬಿದನೂರಿನ ಉತ್ತರಪಿನಾಕಿನ ನದಿ ಉಕ್ಕಿ ಹರಿಯುತಿದ್ದು ಚಂದನದೂರು, ಇಡಗೂರು ಮೂಲಕ ಹರಿದು ಕೋಡಿ ಬೀಳು ನೀರು ಬಹುತೇಕ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಗೆ ಅನುಕೂಲವಾಗಲಿದೆ. ಗ್ರಾಪಂ ಸದಸ್ಯ ನರಸೇಗೌಡ ಮಾತನಾಡಿ ನಾವು ಚಿಕ್ಕವರಿದ್ದಾಗ ಆರ್.ಎಲ್ ಜಾಲಪ್ಪ ಕಂಡ ಕನಸು ಇಂದು ನನಸಾಗಿದೆ ಅವರ ಅಭಿವೃದ್ಧಿ ಮತ್ತು ಮುಂದಾಲೋಚನೆಗೆ ಈ ಭಾಗದ ಚಿರಋÄಣಿಯಾಗಿರುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.


ಡೇರಿ ಅಧ್ಯಕ್ಷ ನಂಜೇಗೌಡ, ಗ್ರಾಪಂ ಸದಸ್ಯರಾದ ಲಕ್ಷಿö್ಮನಾರಾಯಣಪ್ಪ, ವಿನೋದ ರಾಮಚಂದ್ರಪ್ಪ, ನರಸೇಗೌಡ, ಮಾಜಿ ತಾಪಂ ಸದಸ್ಯ ಚಲಪತಿ ಗ್ರಾಮದ ಮುಖಂಡರಾದ ನಾರಾಯಣಸ್ವಾಮಿ, ಓಬಳೇಶಪ್ಪ, ವೈ.ಸಿ ಸುರೇಶ್. ಜಯರಾಮ ಗೌಡ ಹಾಜರಿದ್ದರು.