ಅಮೃತ ಮಹೋತ್ಸವ ಕಾರ್ಯಕ್ರಮದಡಿ ಜಿಲ್ಲೆಯ ೪೧ ಗ್ರಾಮ ಪಂಚಾಯಿತಿ ಆಯ್ಕೆ : ಮುನಿರತ್ನ

ಅಮೃತ ಮಹೋತ್ಸವ ಕಾರ್ಯಕ್ರಮದಡಿ ಜಿಲ್ಲೆಯ ೪೧ ಗ್ರಾಮ ಪಂಚಾಯಿತಿ ಆಯ್ಕೆ : ಮುನಿರತ್ನ
ಕೋಲಾರ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮುಖ್ಯಮಂತ್ರಿಗಳ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಜಿಲ್ಲೆಯ ೪೧ ಗ್ರಾಮಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ಪಂಚಾಯಿತಿಗಳನ್ನು ಸರ್ವತೋಮುಖ ಅಭಿವೃದ್ದಿ ಮಾಡಲಾಗುವುದು ಎಂದು ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ತಿಳಿಸಿದರು.
ಶನಿವಾರ ೭೫ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನೆಹರು ಯುವ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಫ್ರೀಡಂ ರನ್ ೨.೦ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಪಂಚದಲ್ಲಿಯೇ ಭಾರತೀಯರು ಪುಣ್ಯವಂತರು. ಭಾರತ ದೇಶದಲ್ಲಿ ಹುಟ್ಟಿರುವುದೇ ಹೆಮ್ಮೆ. ಭಾರತ ಬಲಿಷ್ಟವಾಗಿದೆ ಎಂದು ಪ್ರಪಂಚಕ್ಕೆ ತಿಳಿದಿದೆ. ಹಲವಾರು ಮಹನೀಯರು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಸ್ವಾತಂತ್ರö್ಯವನ್ನು ತಂದುಕೊಟ್ಟಿದ್ದಾರೆ. ಅವರ ಸ್ಮರಣಾರ್ಥವಾಗಿ ಇಂದು ಫ್ರೀಡಂ ರನ್ ೨.೦ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಜಿಲ್ಲೆಯ ಆಸ್ಪತ್ರೆಗಳಲ್ಲಿಯೇ ಎಲ್ಲಾ ರೀತಿಯ ಚಿಕತ್ಸೆಗಳು ದೊರೆಯಬೇಕು. ಚಿಕತ್ಸೆಗಾಗಿ ಯಾರೊಬ್ಬರು ಬೆಂಗಳೂರಿಗೆ ಹೋಗಬಾರದು ಎಂಬುದು ನಮ್ಮ ಉದ್ದೇಶ. ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ದರಿಸಿ ಕೊರೋನಾವನ್ನು ತಡೆಗಟ್ಟುವಲ್ಲಿ ಸಹಕರಿಸಿ ಎಂದು ತಿಳಿಸಿದರು.
ಲೋಕಸಭಾ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ ಕರೋನಾ ಬಂದ ನಂತರ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು ಎಂದು ಜನರಿಗೆ ಅರಿವಾಗಿದೆ. ಪ್ರತಿಯೊಬ್ಬರು ಪ್ರತಿದಿನ ಕನಿಷ್ಟ ಅರ್ದ ಗಂಟೆ ವ್ಯಾಯಾಮ ಯೋಗ ಮಾಡುವ ಮೂಲಕ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು. ಯುವಕರು ತಮ್ಮ ತಮ್ಮ ಗ್ರಾಮಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಎಸ್.ಪಿ. ಪಟ್ನಾಯಕ್ ಅವರು ಮಾತನಾಡಿ ಈ ಕಾರ್ಯಕ್ರಮದ ಉದ್ದೇಶ ದೇಶದ ಜನರನ್ನು ದೈಹಿಕವಾಗಿ ಮಾನಸಿಕವಾಗಿ ಸದೃಢರನ್ನಾಗಿ ಮಾಡುವುದು. ಪ್ರತಿ ದಿನ ಅರ್ದಗಂಟೆ ವ್ಯಾಯಾಮ ಮಾಡುವ ಮೂಲಕ ದೇಹವನ್ನು ದಂಡಿಸಬೇಕು. ಆಕ್ಟೋಬರ್ ೦೨ ರ ವರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶದ ಪ್ರತಿ ಪ್ರಜೆಯು ಆರೋಗ್ಯಕರವಾಗಿ ಇರಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ಫಿಟ್ ಇಂಡಿಯಾ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು, ಕುಡಾ ಪ್ರಾಧಿಕಾರದ ಅಧ್ಯಕ್ಷ ಚಲಪತಿ, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಸರಣ್ಯಾ ಇದ್ದರು.