ಪಾರ್ಕಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ-ಪಾಲಿಕೆ ದಿವ್ಯ ನಿರ್ಲಕ್ಷ್ಯ

ವೃತ್ತಿನಿರತ ಕ್ರಿಮಿನಲ್‌ಗಳಿಗಿಂತ ಸಮಾಜದಲ್ಲಿ ದೊಡ್ಡವರಂತೆ ಸೋಗು ಹಾಕಿ, ತಮ್ಮ ಉದ್ಯಮಗಳ ಪ್ರಭಾವ ಬಳಸಿಕೊಂಡು ದಂಧೆ ನಡೆಸುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂಥ ಭೂ ಕಬಳಿಕೆ ಪ್ರಕರಣಗಳನ್ನು ಪಟ್ಟಿ ಮಾಡಿದಲ್ಲಿ ಇಡೀ ರಾಜ್ಯದಲ್ಲಿ ತುಮಕೂರು ಮಹಾನಗರ ಮೊದಲ ಸ್ಥಾನ ಗಳಿಸಿಕೊಳ್ಳುತ್ತದೆ ಎನ್ನುತ್ತಾರೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೊಬ್ಬರು. ತುಮಕೂರು ನಗರದ ಇಂಥಾ ಒಂದು ತಾಜಾ ಪ್ರಕರಣ ಇಲ್ಲಿದೆ.

ಪಾರ್ಕಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ-ಪಾಲಿಕೆ ದಿವ್ಯ ನಿರ್ಲಕ್ಷ್ಯ

99% ಲೋಕಲ್

ಕುಚ್ಚಂಗಿ ಪ್ರಸನ್ನ

 

ತುಮಕೂರು: ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕ ಬಳಕೆಗೆ ಮೀಸಲಿರಿಸಿದ ಪಾರ್ಕುಗಳು ಮತ್ತು ಸಿಎ ನಿವೇಶನಗಳನ್ನು ರಿಜಿಸ್ಟರ್ ಮಾಡಿಸಿಕೊಂಡು, ಅಕ್ರಮವಾಗಿ ಲೇಔಟ್ ನಿರ್ಮಿಸಿ ಅಮಾಯಕರಿಗೆ ಮಾರಾಟ ಮಾಡಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂಥ ಅಕ್ರಮ ನಿವೇಶನಗಳನ್ನು ಖರೀದಿಸಿ ವಂಚನೆಗೆ ಒಳಗಾದವರು ನ್ಯಾಯಾಲಯದ ಮೊರೆ ಹೋಗಿದ್ದು, ತನಿಖೆ ಮಾಡಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಗಳನ್ನು (ತುಮಕೂರು 4ನೇ ಜೆಎಂಎಫ್‌ಸಿ ಹೆಚ್ಚುವರಿ ಸಿವಿಲ್ ಮತ್ತು 5ನೇ ಜೆಎಂಎಫ್‌ಸಿ ನ್ಯಾಯಾಲಯದ ಪ್ರಕರಣ ಸಂಖ್ಯೆಗಳು ಪಿಸಿಆರ್ 739, 740, 741,742/2022ರಲ್ಲಿ) ಹೊರಡಿಸಿದೆ.

ವೃತ್ತಿನಿರತ ಕ್ರಿಮಿನಲ್‌ಗಳಿಗಿಂತ ಸಮಾಜದಲ್ಲಿ ದೊಡ್ಡವರಂತೆ ಸೋಗು ಹಾಕಿ, ತಮ್ಮ ಉದ್ಯಮಗಳ ಪ್ರಭಾವ ಬಳಸಿಕೊಂಡು ದಂಧೆ ನಡೆಸುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂಥ ಭೂ ಕಬಳಿಕೆ ಪ್ರಕರಣಗಳನ್ನು ಪಟ್ಟಿ ಮಾಡಿದಲ್ಲಿ ಇಡೀ ರಾಜ್ಯದಲ್ಲಿ ತುಮಕೂರು ಮಹಾನಗರ ಮೊದಲ ಸ್ಥಾನ ಗಳಿಸಿಕೊಳ್ಳುತ್ತದೆ ಎನ್ನುತ್ತಾರೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೊಬ್ಬರು. ತುಮಕೂರು ನಗರದ ಇಂಥಾ ಒಂದು ತಾಜಾ ಪ್ರಕರಣ ಇಲ್ಲಿದೆ.

ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ( ಟೂಡಾ) ಹಾಗೂ ಮಹಾನಗರಪಾಲಿಕೆ ಪ್ರಕಾರ ನಗರದ ವಾರ್ಡ್ ನಂ 35ಕ್ಕೆ ಸೇರಿದ ರೈಲ್ವೆ ಪಟ್ಟಿ ದಕ್ಷಿಣ ಭಾಗದ (ಈಗಿನ ಸಿದ್ದರಾಮೇಶ್ವರ ಬಡಾವಣೆ) ರಿ.ಸರ್ವೆ ನಂಬರ್ 35/1ಬಿ ಎಂಬ ಸ್ವತ್ತು 0.20 ಗುಂಟೆ ಅಂದರೆ ಅರ್ಧ ಎಕರೆ ಇದೆ. ಈ ಜಾಗವು ಸಾರ್ವಜನಿಕ ಉದ್ಯಾನವನ ಅಂದರೆ ಪಾರ್ಕು ಎಂಬುದಾಗಿ ಜಿಲ್ಲಾಧಿಕಾರಿಗಳ ದಿನಾಂಕ 26.06.1982ರ ಆದೇಶ ಸಂಖ್ಯೆ ಎ.ಎಲ್.ಎನ್.ಎಸ್.ಆರ್ 44/82/83ರಲ್ಲಿ ವಾಸೋಪಯೋಗಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿದಾಗ ಆದೇಶಿಸಲಾಗಿದೆ. ಆದರೆ ಈ ಪಾರ್ಕು ಪಾರ್ಕಾಗಿಯೇ ಉಳಿದಿಲ್ಲ. ಈ ಪಾರ್ಕಿನಲ್ಲಿ ಈಗ ಮನೆ ನಿರ್ಮಿಸಲಾಗುತ್ತಿದೆ. ಮನೆ ನಿರ್ಮಾಣ ಕಾರ್ಯ ಈಗಾಗಲೇ ಅಂತಿಮ ಹಂತದಲ್ಲಿದೆ. ಹೀಗೆ ಪಾರ್ಕಿನಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದರೂ ನಾಮಕಾವಾಸ್ತೆ ನೋಟೀಸ್ ನೀಡಿ ಕಂಡೂ ಕಾಣದಂತೆ ನಮ್ಮ ಮಹಾನಗರಪಾಲಿಕೆ ದಿವ್ಯ ನಿರ್ಲಕ್ಷ್ಯ  ವಹಿಸಿದೆ.

ಬಟವಾಡಿಯ ಸಿದ್ದರಾಮೇಶ್ವರ ಬಡಾವಣೆಯ ಎರಡನೇ ಕ್ರಾಸಿಗೆ ಲಗತ್ತಾಗಿರುವ ಈ ಪಾರ್ಕಿನಲ್ಲಿ ಮನೆ ಕಟ್ಟಿಕೊಳ್ಳುತ್ತಿರುವ ವ್ಯಕ್ತಿ ಬ್ಯಾಂಕೊAದರ ವ್ಯವಸ್ಥಾಪಕರಾಗಿದ್ದಾರೆ. ಇವರ ಪ್ರಕಾರ ಅದೇನೂ ಅಕ್ರಮ ನಿರ್ಮಾಣವಲ್ಲ, ನಾನು ಆ ನಿವೇಶನವನ್ನು ಮಾರುಕಟ್ಟೆ ದರ ನೀಡಿ, ಕಾನೂನು ಪ್ರಕಾರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿದ್ದೇನೆ. ನನಗೆ ಮನೆ ಕಟ್ಟಿಕೊಳ್ಳಲು ಮಹಾನಗರಪಾಲಿಕೆಯೇ ಪರವಾನಗಿ ಕೊಟ್ಟಿದೆ ಎನ್ನುತ್ತಾರೆ. ಆದರೆ ಈ ಸ್ವತ್ತು ಪಾರ್ಕು ಎಂದು ನಗರಾಭಿವೃದ್ಧಿ ಪ್ರಾಧಿಕಾರ ತನ್ನ ಟಿಪ್ಪಣಿ ಸಂಖ್ಯೆ TUDA/CC/1876/2013-14 ರ ಟಿಪ್ಪಣಿಯಲ್ಲಿ ಹೇಳಿದೆ.

ಸರ್ವೆ ನಂಬರ್ 35/1ಬಿರ ಸ್ವತ್ತು ಪಾರ್ಕು ಎನ್ನುವುದು ಖಚಿತ ಎನ್ನುವುದಾದರೆ ಈ ಪಾರ್ಕನ್ನು ಯಾರು ಯಾರಿಗೆ ಬೇಕಾದರೂ ಮಾರಾಟ ಮಾಡಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲು ಅವಕಾಶ ನೀಡಿದ ಅಧಿಕಾರಿಗಳ ಮೇಲೆ ಇದುವರೆಗೂ ಕ್ರಮ ಜರುಗಿಸಿಲ್ಲವೇಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಮನೆಯನ್ನು ರಾತ್ರೋರಾತ್ರಿ ಯಾರ ಕಣ್ಣಿಗೂ ಕಾಣದಂತೆ ಮನೆ ಕಟ್ಟಿ ಮುಗಿಸಲಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ, ಇಲ್ಲಿ ಈ ಪಾರ್ಕಿನಲ್ಲಿ ಕಟ್ಟುತ್ತಿರುವ ಮನೆಯೂ ಹಾಗೆಯೇ, 2022ರ ನವೆಂಬರ್‌ನಲ್ಲಿ ಅಡಿಪಾಯ ಹಾಕಿ, ಪಿಲ್ಲರ್‌ಗಳ ಸಹಿತ ಮನೆಯನ್ನು ಕಟ್ಟಲಾಗುತ್ತಿದೆ. ಈ ನಿರ್ಮಾಣ ಅಕ್ರಮವೇ ಆಗಿದ್ದಲ್ಲಿ ಮಹಾನಗರಪಾಲಿಕೆಯಲ್ಲಿ ಪ್ರತಿ ವಾರ್ಡಿಗೂ ಇಂಥ ಅಕ್ರಮ ನಿರ್ಮಾಣಗಳನ್ನು ತಡೆಯಲೆಂದೇ ಕಿರಿಯ ಇಂಜಿನಿಯರ್ ಸಹಿತ ಹತ್ತಾರು ಸಿಬ್ಬಂದಿ ಇರುತ್ತಾರೆ. ಇವರ ಗಮನಕ್ಕೆ ಈ ಅಕ್ರಮ ನಿರ್ಮಾಣ ಬಂದಿಲ್ಲವೇ ಅಂತ ಕೇಳಿ ನೋಡಿ.

ಫ್ಯಾಕ್ಟ್ ಚೆಕ್:

1) ತುಮಕೂರು ತಾಲೂಕು ಕಸಬಾ ಹೋಬಳಿ ಬಟವಾಡಿ ಗ್ರಾಮದ ಸರ್ವೆ ನಂಬರ್ 35ರಲ್ಲಿನ ವಿಸ್ತೀರ್ಣ 9 ಎಕರೆ 18 ಗುಂಟೆ ಸ್ವತ್ತಿನ ಪೈಕಿ 3 ಎಕರೆ 06 ಗುಂಟೆ ಸ್ವತ್ತನ್ನು ಶ್ರೀಮತಿ ಆಯಿಷಾಬೀ ಕೋಂ ಅಬ್ದುಲ್ ಸತ್ತಾರ್ ಸಾಬ್ ಮತ್ತು ಶ್ರೀಮತಿ ರಾಯಿಯಾಬಿ ಬಿನ್ ಅಬ್ದುಲ್ ಸತ್ತಾರ್ ಸಾಬ್ ಎಂಬ ಅಮ್ಮ ಮತ್ತು ಮಗಳಿಗೆ ತುಮಕೂರು ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ದಿನಾಂಕ 21.12.1981ರಂದು ನೊಂದಣಿ ವಿಭಾಗ ಪತ್ರದ ಮುಖಾಂತರ ಬಂದಿರುತ್ತದೆ.ಅದರAತೆ ಇವರು ತಮ್ಮ ಹೆಸರಿಗೆ ಕಂದಾಯ ಕಚೇರಿಯಲ್ಲಿ ಈ ಸ್ವತ್ತಿನ ಖಾತಾ ಮತ್ತು ಪಹಣಿಯನ್ನು ಬದಲಿಸಿಕೊಂಡು ಸ್ವಾಧೀನ ಹೊಂದಿರುತ್ತಾರೆ.

2) ಈ ಶ್ರೀಮತಿ ಆಯಿಷಾಬೀ ಮತ್ತು ರಾಯಿಯಾಬೀ ಅವರು ತಮ್ಮ ಭಾಗಕ್ಕೆ ಬಂದ ಮೇಲ್ಕಂಡ ಸ್ವತ್ತಿನ ಪೈಕಿ 2-00 ಎಕರೆ ಸ್ವತ್ತನ್ನು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ವಾಸೋಪಯೋಗದ ಉದ್ದೇಶಕ್ಕಾಗಿ ದಿನಾಂಕ 26.06.1982ರಂದು ಆದೇಶ ಸಂಖ್ಯೆ ಎ.ಎಲ್.ಎನ್.ಎಸ್.ಆರ್ 44/82/83ರಲ್ಲಿ ಭೂ ಪರಿವರ್ತನೆ ಮಾಡಿಸಿಕೊಂಡಿರುತ್ತಾರೆ,

3) ಹೀಗೆ ಭೂಪರಿವರ್ತನೆ ಮಾಡಿಕೊಡುವಾಗ ಜಿಲ್ಲಾಧಿಕಾರಿಯವರು ಈ 2.00 ಎಕರೆ ಸ್ವತ್ತಿನಲ್ಲಿ 0-20 ಗುಂಟೆ ಅಂದರೆ ಅರ್ಧ ಎಕರೆ ಸ್ವತ್ತನ್ನು ಸಾರ್ವಜನಿಕ ಉದ್ಯಾನ ಅಂದರೆ ಪಾರ್ಕ್ ಎಂದು ಘೋಷಿಸಿರುತ್ತಾರೆ ಮತ್ತು ಈ 0.20 ಗುಂಟೆ ಸರ್ವೆ ನಂ. 35/1ಬಿ ಎಂಬುದಾಗಿ ರಿಪೋಡು ಆಗಿರುತ್ತದೆ.

4) ಇಲ್ಲಿಂದ ಮುಂದೆ ಇದುವರೆಗೂ ಸರ್ಕಾರದ ಸಂಬAಧಿಸಿದ ಎಲ್ಲ ಕಚೇರಿಗಳಲ್ಲೂ ಈ ಅರ್ಧ ಎಕರೆ ಪಾರ್ಕ್ ಎಂಬುದಾಗೇ ಇರಬೇಕಿತ್ತಲ್ಲವೇ, ಇಲ್ಲ ಹಾಗೆ ಅದು ಪಾರ್ಕ್ ಆಗಿ ಉಳಿದುಬಂದಿಲ್ಲ, ಹಾಗೇ ಅದು ಪಾರ್ಕ್ ಆಗಿ ಉಳಿದು ಬಂದಿದ್ದರೆ ಅಲ್ಲಿ ಯಾರೋ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಲು ಹೇಗೆ ಸಾಧ್ಯವಾಗುತ್ತಿತ್ತು ಎಂಬ ಪ್ರಶ್ನೆಗೂ ಸಂಬAಧಿಸಿದವರು ಉತ್ತರ ನೀಡಬೇಕಿದೆ.

ಸಾರ್ವಜನಿಕ ಬಳಕೆಗೆ ಮೀಸಲಾಗಿರುವ ಅರ್ಧ ಎಕರೆ ಪಾರ್ಕಿನ ಒಂದು ಭಾಗವನ್ನು ತುಮಕೂರು ಸಬ್ ರಿಜಿಸ್ಟ್ರಾರ್ ಸೈಟು ಎಂಬುದಾಗಿ ಯಾರೋ ಖಾಸಗಿ ವ್ಯಕ್ತಿಗೆ ಹೇಗೆ ರಿಜಿಸ್ಟರ್ ಮಾಡಿಕೊಟ್ಟರು ಮತ್ತು ಸರ್ಕಾರಿ ಜಾಗವನ್ನು ಯಾರು ಬರೆದುಕೊಟ್ಟರು. ಅದು ಹೇಗೆ ನಗರಾಭಿವೃದ್ಧಿ ಪ್ರಾಧಿಕಾರ ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಈ ಪಾರ್ಕಿನಲ್ಲಿ ನಿವೇಶನಗಳನ್ನು ವಿಂಗಡಿಸಿ ಮಾರಲು ಅನುಮೋದನೆ ಮಾಡಿಕೊಟ್ಟಿತು. ಮತ್ತು ಇಡೀ ನಗರದಲ್ಲಿರುವ ಎಲ್ಲ ಸಾರ್ವಜನಿಕ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿ ನೋಡಿಕೊಳ್ಳಬೇಕಾದ ಮಹಾನಗರಪಾಲಿಕೆ ಈ ರಿ.ಸ.ನಂ 35/1ಬಿರಲ್ಲಿ ಪಾರ್ಕ್ ಎಂದೇ ಘೋಷಣೆಯಾಗಿ ದಾಖಲಾಗಿರುವ ಉದ್ಯಾನವನದಲ್ಲಿ ನಿವೇಶನ ವಿಂಗಡಿಸಿದ್ದನ್ನು ಖರೀದಿಸಿದವರಿಗೆ ಹೇಗೆ ಖಾತೆ ಮಾಡಿಕೊಟ್ಟಿತು, ಜೊತೆಗೆ ಮನೆ ಕಟ್ಟಲು ಲೈಸೆನ್ಸ್ ಕೂಡಾ ಹೇಗೆ ಕೊಟ್ಟಿದೆ ಎಂಬ ಪ್ರಶ್ನೆಗಳಿಗೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಹಾನಗರಪಾಲಿಕೆ ಮುಖ್ಯಸ್ಥರೇ ಉತ್ತರ ಕೊಡಬೇಕಿದೆ. ಉತ್ತರಕ್ಕಾಗಿ ಕಾಯುತ್ತಿದ್ದೇವೆ.

01 ಪಾರ್ಕಿನಲ್ಲಿ ನಿರ್ಮಿಸುತ್ತಿರುವ ಅಂತಿಮ ಹಂತದಲ್ಲಿರುವ ವಾಸದ ಮನೆ

02 ಮುಂದುವರೆದಿರುವ ಮನೆ ನಿರ್ಮಾಣ ಕಾರ‍್ಯ ( ಕೆಲಸದ ಮಹಿಳೆ ಗಮನಿಸಿ)

03 ನವೆಂಬರ್ 2022ರಲ್ಲಿ ಮನೆಗೆ ಅಡಿಪಾಯ ಹಾಕಿದ ಸಂದರ್ಭದ ಫೋಟೋ

04 ಇಡೀ ಬಡಾವಣೆಯ ದಿಗಂತ ಚಿತ್ರ ( ಪಾರ್ಕನ್ನು ಕೆಂಪು ಬಣ್ಣದಲ್ಲಿ ಮಾರ್ಕು ಮಾಡಲಾಗಿದೆ.).